ಓ ಶಾಂತಲೇ!

ಓ ಶಾಂತಲೇ! ಓ ಶಾಂತಲೇ!
ನೀನೇಕೆ ಆತ್ಮಹತ್ಯೆ ಮಾಡಿಕೊಂಡೆ?
ಹೊಯ್ಸಳೇಶ್ವರನ ಪಟ್ಟದರಾಣಿ ನೀನು
ನಿನಗೆ ಕಷ್ಟವದಾವುದು ಕಾಡಿತು?
ಶಿವಗಂಗೆ ರಮಣೀಯ, ಮನೋಹರ
ನಿನಗೆ ಮನಸ್ಸಾದರೂ ಹೇಗೆ ಬಂತು ಸಾವನ್ನು ಅಪ್ಪಲು?
ಬೆಟ್ಟವನ್ನು ಹತ್ತುವುದೇ ಒಂದು ಸವಾಲು!
ಜೀವನವೂ ಒಂದು ಸವಾಲೆಂದು ನಿನಗೆ ಅನಿಸಲಿಲ್ಲವೇ?
ಸಾವೇ ಎಲ್ಲದಕ್ಕೂ ಉತ್ತರವೆಂದು ನೀನೇಕೆ ತಿಳಿದೆ?
ಸತ್ತು ಯಾವ ಸಮಸ್ಯೆಗೆ ಉತ್ತರ ಕಂಡುಕೊಂಡೆ ಹೇಳು?
ನೂರು ಸಮಸ್ಯೆಗಳಿವೆ ಪರಿಹಾರ ಕಾಣಲು
ನಿನ್ನಂತಹ ಧೀರ ವನಿತೆಯರು ಬೇಕು ದಾರಿ ತೋರಲು
ದೇವರು ಕೊಟ್ಟ ಪ್ರಾಣ, ತ್ಯಾಗಮಾಡಲಿ ನಿನಗೇನಿದೆ ಹಕ್ಕು
ಸಾಧಿಸಿ ತೋರಿಸಬೇಕಾದದ್ದು ಬಹಳಷ್ಟಿತ್ತು, ಪೂರ್ಣಗೊಳಿಸದೇ ನೀನೇಕೆ ಹೋದೆ?
ಬೆಟ್ಟದ ಮೇಲೆ ಬಂದವರಿಗೆ ವಿಶಿಷ್ಟ ಅನುಭವವಾಗುತ್ತೆ
ದಣಿದ ದೇಹ,ಮನಸ್ಸಿಗೆ ಮುದನೀಡುತ್ತೆ
ಹೊಸ ಯೋಚನೆಗಳಿಗೆ ಹುಟ್ಟುನೀಡುತ್ತೆ
ಈ ಅನುಭವ ನಿನಗಾಗಲಿಲ್ಲವೇ?
ಜೀವನದಲ್ಲಿ ಮೇಲೇರುವುದು ಬಹಳ ಕಷ್ಟ
ಬೆಟ್ಟವನ್ನು ಹತ್ತಿದರೆ ಸತ್ಯಾಸತ್ಯತೆಯ ಪ್ರತ್ಯಕ್ಷ ದರ್ಶನವಾಗುತ್ತೆ
ನಿನಗೆ ಈ ದರ್ಶನವಾಗಲಿಲ್ಲವೇ?
ನನಗೆ ಈ ಪ್ರಶ್ನೆ ಇಂದಿಗೂ ಕಾಡುತ್ತಿದೆ
ಉತ್ತರ ನಿನ್ನಂದ ಮಾತ್ರ ಸಿಗುವಂತಹುದು
ನಾಟ್ಯವಿಶಾರದೆ ನೀನು
ಹೊಯ್ಸಳೇಶ್ವರನ ಪಟ್ಟದ ರಾಣಿ ನೀನು
ಅನೇಕ ಶಿಲ್ಪಿಗಳಿಗೆ ಸ್ಪೂರ್ತಿ ದೇವತೆ ನೀನು
ನಿನ್ನ ಸಾವು ನಮಗೆ ತುಂಬಲಾರದ ನಷ್ಟ
ನಿನ್ನ ಸಾವು ನಮ್ಮಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ
ನಿನ್ನ ಪೂರ್ಣತೆಗೆ ಯಾವುದು ಸವಾಲಾಗಿತ್ತು, ತಿಳಿಯದಾಗಿದೆ
ಆ ಸ್ಥಳವ ಕಂಡು ಒಮ್ಮೆಲೆ ಮನಸ್ಸು ಕಳೆಗುಂದಿತು
ನೂರು ಪ್ರಶ್ನೆಗಳು ದಾಳಿಮಾಡಿತು
ನಿನಗೆ ನೂರು ನಮನ
ನಿನ್ನ ಆ ಕೋಮಲ ಹೃದಯ ಅದೆಷ್ಟು ಸಂಕಟಪಡುತ್ತಿತ್ತೋ?
ಯಾರೂ ಅರಿಯರು
ಹೆಣ್ಣಿನ ಮನಸ್ಸು’ ಅಂದೂ ಹಾಗೆಯೇ ಇದೆ,ಇಂದೂ ಹಾಗೆಯೇ ಇದೆ’
ಅರಿಯುವ ಮನಸ್ಸುಗಳ ಬೇಡಿಕೆಯಿದೆ
ಹೆಣ್ಣಿನ ಶೋಷಣೆಗೆ ಕೊನೆಯೆಲ್ಲಿ
ಸಾವಿನಲ್ಲಂತೂ ಅಲ್ಲ ಎಂಬ ನಂಬಿಕೆ ನನ್ನದು
ವಿಜ್ಘಾನ, ತಂತ್ರಜ್ಘಾನ ಬೆಳೆದರೆಷ್ಟು?
ಶೋಷಣೆ ಮಾತ್ರ ಮುಗಿಯಲಾರದು
ಶಾಂತಲೇ ನೀನು ಶೋಷಿತರ ಪ್ರತೀಕ
ಸಾವಿರಾರು ಅಭಲೆಯರಿಗೆ ನೀನು ಮಾರ್ಗದರ್ಶಿಯಾಗಬಹುದಿತ್ತು ಗುಣಾತ್ಮಕವಾಗಿ
ಆದರೂ ಈಗಲೂ ಮಾರ್ಗದರ್ಶಿಯಾಗಿರುವೆ ಋಣಾತ್ಮಕವಾಗಿ
ನಿನ್ನಂತೆ ಅಸಹಾಯಕರು,ಶೋಷಣೆಗೆ ಬಲಿಪಶುವಾದವರು ನಿನ್ನಂತೆಯೇ ಆತ್ಮಹತ್ಯೆಯ ದಾರಿಹಿಡಿಯುತ್ತಾರೆ,
ಈಗಲೂ ಹಿಡಿಯುತ್ತಾರೆ,ಮುಂದೆಯೊ.........
ಓ ಶಾಂತಲೇ! ಓ ಶಾಂತಲೇ!

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...