ಸಾಕಿನ್ನು ಎದ್ದೇಳು!

ಭಾರತೀಯನೇ! ಎದ್ದೇಳು ಸಾಕಿನ್ನು ಈ ಗಾಢ ನಿದ್ದೆ
ಶತಶತಮಾನಗಳ ಕುಂಭಕರ್ಣ ನಿದ್ದೆಯಿಂದೆದ್ದೇಳು!
ರಾಜ ಮಹಾರಾಜರುಗಳ ತಲೆಗಳುರುಳಿದವು ಈ ಧರೆಗೆ
ಕೋಟೆಕೊತ್ತಲಗಳು ಮಣ್ಣುಗೂಡಿದವು, ಸಾಕಿನ್ನು ಎದ್ದೇಳು ।।

ದುರುಳರು ಧಾಂಗುಡಿಯಿಟ್ಟರು ನಿನ್ನ ತಾಯ್ನಾಡಿಗೆ
ರುಧಿರ ಹರಿಯಿತು, ಶಿರಗಳುರುಳಿದವು ರಕ್ಷಣೆಗೈಯುತ್ತಾ
ಪರಂಗಿಯರು ದಾಳಿಗೈದರು ವ್ಯಾಪಾರದ ಸೋಗಿನಲಿ
ರಾಜ್ಯ ರಾಜ್ಯಗಳ ಉರುಳಿಸುತಾ ,ಸಾಕಿನ್ನು ಎದ್ದೇಳು ।।

ದೇಶಭಕ್ತರು ಪ್ರಾಣಗಳನೇ ಮುಡಿಪಾಗಿಟ್ಟರು ತಾಯಿಗೆ
ದೇಶಭಕ್ತರ ಸೋಗುಹಾಕಿದರು ಕೆಲರು ಮೊಸಳೆಕಣ್ಣೀರಿಡುತಾ
ನೂರಾರು ದೇಶಭಕ್ತರು ಕೊರಳನೊಡ್ಡಿದರು ಕುಣಿಕೆಗೆ
ಎದೆಯನೊಡ್ಡಿದರು ತುಪಾಕಿ ಗುಂಡಿಗೆ, ಸಾಕಿನ್ನು ಎದ್ದೇಳು ।।

ಮಂದಿರಗಳುರುಳಿದವು ಹಲವರ ತಣಿಸಲು ಕೆಲರಿಂದ
ದೇಶವೇ ಇಬ್ಬಾಗವಾಯಿತು ಧೂರ್ತರಿಂದ ಓಲೈಕೆಗೆ
ಇನ್ನೂ ನಿಂತಿಲ್ಲ ಓಲೈಕೆ ಸೋಗುಹಾಕುವ ರಾಜಕಾರಣಿ
ಧೂರ್ತ ನರಿಜನರ ಬೆಣ್ಣೆಮಾತುಗಳಿಂದ , ಸಾಕಿನ್ನು ಎದ್ದೇಳು ।।

ಎಲ್ಲಿರುವೆ ಹೇಳು ಕೃಷ್ಣಾ!

ನಿನ್ನ ಹುಡುಕುತಿರುವೆ ಕೃಷ್ಣಾ
ಎಲ್ಲಿರುವೆ ಹೇಳು ಕೃಷ್ಣಾ|

ಹುಡುಕದಾ ಗುಡಿಗಳಿಲ್ಲ
ಕಾಣದಾ ಗೋಪುರಗಳಿಲ್ಲ
ನಿನ್ನ ಗುರುತು ಎಲ್ಲಿಯೂ ನಾ ಕಾಣಲಿಲ್ಲ
ಕಾಲು ಸೊರಗಿದೆ ಮುಂದೇನು ಮುಂದೇನು ಕೃಷ್ಣಾ?

ಕಾಡು ಮೇಡುಗಳಲ್ಲಿ ಅಲೆದೆ
ತೀರ್ಥಕ್ಷೇತ್ರಗಳಲ್ಲಿ ಸುಳಿದೆ
ನಿನ್ನ ಹೋಲುವ ರೂಪವ ನಾ ಕಾಣಲಿಲ್ಲ
ಕಣ್ಣು ಮಂಜಾಗಿದೆ ಮುಂದೇನು ಮುಂದೇನು ಕೃಷ್ಣಾ?

ವೇದಗಳಲ್ಲಿ ಇರುವೆಯೆಂದರು
ಗೀತೆಯೇ ನೀನಾಗಿಹೆಯೆಂದರು
ಈ ಮನಸಿಗೆ ಬಾ ಎಂದು ಕರೆವೆ ನಿನ್ನ
ದಾರಿ ತೋರಿಸು ಬಾ ಕಾದಿಹೆನು ಕಾದಿಹೆನು ಕೃಷ್ಣಾ!

ಗೋಕುಲದ ಒಲವು

ಮಥುರೆಯ ರಾಜಕಾರಾಗೃಹದಲಿ ಬಂದಿಯಾಗಿಹರು ದೇವಕಿ ವಸುದೇವರು
ಸುತ್ತಮುತ್ತಲು ಹರಡಿದೆ ಕಾಡು ಕತ್ತಲು ಕಾಯುತಿದೆ ಜನತೆ ದೇವಕುಂಜರಗೆ
ಕಂಸನ ಅಟ್ಟಹಾಸ ಮುಗಿದಿಲ್ಲ ಏಳು ಕಂದಮ್ಮಗಳ ಹನನದ ನಂತರವೂ
ಕಾಯುತಿಹನು ಕೊನೆಗಾಣಿಸಲು ಎಂಟನೆಯ ಕಂದನಿಗೆ ಅಮರನಾಗುವ ಹಂಬಲದಿ||

ಮೈಮರೆಯಿತು ಮಥುರೆ ಕತ್ತಲ ಇರುಳಿನಲಿ ಬಂದಿಳಿಯಿತು ದೇವ ಕುಂಜರ
ಸದ್ದಿಲ್ಲದೇ ಮಾಯೆ ಹೊರಡಿಸಿತು ಗೋಕುಲಕೆ ವಸುದೇವನ ನಂದನನ
ಭೋರ್ಗರೆಯುವ ಯಮುನೆಯ ಹೊರಳಿನಲಿ ಹೊರಟಿತು ಗೋಕುಲಕೆ
ಮಮತಾಮಯಿ ಯಶೋಧೆಯ ತಾಯ ಮಡಿಲು ತುಂಬಿತು ವಸುದೇವನ ಕಂದನು||

ಬೆಣ್ಣೆ ಮೆದ್ದು ನಲಿಯುತ್ತಿತ್ತು ತರಲೆ ಮುದ್ದು ನಂದಗೋಪನ ಕೃಷ್ಣನು
ಗೋಪಿಕೆಯರ ಮನ ಸೆಳೆಯುತ್ತಿತ್ತು ಕೊಳಲನೂದುವ ಗೋಪಿಕೃಷ್ಣನು
ಗೋಪಿಕೆ-ರಾಧೆಯ ಸಂಗದಿಂದ ಹರಣವಾಯಿತು ಸಂಸಾರಬಂಧನವು
ಮಾಯೆ ಎನ್ನಲೋ! ಲೀಲೆ ಎನ್ನಲೋ! ನಲಿಯಿತು ಗೋಕುಲ ಅವನ ನೆರಳಲಿ||

ಬೆಣ್ಣೆ ಬಿಟ್ಟ ,ಸಂಗ ಬಿಟ್ಟ, ಬಂಧ ಬಿಟ್ಟ ಹೊರಟ ಲೋಕದ ನೆರವಿಗೆ
ಲೋಕ ಕಂಟಕ ಕಂಸನ ಸಂಹರಿಸಿ ಮಥುರೆಯ ಉದ್ಧರಿಸಿದ
ಹೊರಟನವನು ಕಾಲಕರೆದ ಕಡೆಗೆ ದ್ವಾರಕೆಯ ಸೃಜಿಸಿ ನಡೆದನು
ಪಾಂಡುನಂದನರ ಕಷ್ಟಗಳಿಗೆ ಹೆಗಲುಕೊಟ್ಟು ಉದ್ಧರಿಸಲು ನಿಂದನು।।

ಶಿಷ್ಟ ಜನರ ರಕ್ಷಿಸಿಸಲು ದುಷ್ಟ ಜನರ ಶಿಕ್ಷಿಸಲು ಶಸ್ತ್ರ ಹಿಡಿಯದೆ ನಿಂತನು
ಘೋರ ಯುದ್ಧ ಭೂಮಿಯಲ್ಲಿ ನಿಂದು ಸಖಗೆ ದೇವಗೀತೆಯ ಉಸುರಿದನು
ವೀರ ಮಹಾವೀರರ ಬಲಾಬಲಗಳು ಅವನ ಮುಂದೆ ಹುಡಿ ಪುಡಿಯಾದವು
ಯಾವುದು ಸತ್ಯವೋ! ಯಾವುದು ನಿತ್ಯವೋ! ಅವೇ ಅಲ್ಲಿ ನೆಲೆಗೊಂಡವು||

ಮನವು ಮರಳಿ ಹಾಡುತ್ತಿದೆ

ಮನವು ಮರಳಿ ನೆನಪಿಸುತಿದೆ
ಹಗಲುಗನಸನೆ ತೆರೆಯುತಿದೆ
ನೊಂದು ಬೆಂದು ಬದುಕುತಿರೆ
ಮತ್ತೆ ಬೇಕೆಂದಿದೆ।।

ತಪ್ಪಿ ಹೋದ ಭಾವಕೆ
ಮರಳಿ ಸಿಗದ ಪ್ರೀತಿಗೆ
ನರಳಿ ನರಳಿ ಬೇಯುತಿದೆ
ತನ್ನ ಭಾಗ್ಯಕೆ।।

ಸಿಗಲಾರದ ಹಣ್ಣಿಗೆ ಕೈ ಚಾಚಿ
ಎಟುಕಲಾರದೆ ತುಂಬಿರಲುನಿರಾಸೆ
ಜೀವನ ಪಯಣ ಹೇಗೋ ಸಾಗುತ್ತಿರಲು
ಮತ್ತೆ ಬಂದು ಕೆದಕಿದೆ
ಮನದಲಿ ನೂರು ಕಹಿ ನೆನೆಪುಗಳ।।

ಕಾಣುತಿದೆ ದೂರ ತೀರ
ಕಲಕುತಿದೆ ಎದೆಯನೀರ
ಏರುತ್ತಿದೆ ಹೃದಯ ಭಾರ
ತಾಳನಾದೆ ನಾ।।

ಯಾರ ಒಲವು ಯಾರ ಬಲವು
ತಾಳಬೇಕು ವಿರಹ ನೋವು
ಅರಿತು ದಂಡಿಸಲು ಮನವು
ನೋಯಬೇಕು ನಾ।।

ಶಬರಿಯ ಧನ್ಯತೆ

ಕಂಡಳು ಶಬರಿ ದೂರದಲಿ ಯಾರೋ ಬರುವುದ
ಮನದಲೇನೋ ಹರುಷ ರಾಮನಿರಬಹುದೆಂಬ ತವಕ
ತಂಗಾಳಿಯೂ ಹಿತವೆನಿಸುತಿಹುದು ಸುಗಂಧವ ಸೂಸಿ
ಮೈ ಮನಗಳೆಲ್ಲಾ ಪುಳಕಿತಗೊಂಡಿದೆ ರಾಮನ ಕಾಣ್ವನೆಂದು
ಎನ್ನ ಪೂಜೆಗೊಳ್ವನೆಂದು ಹರುಷದಿ ಮತ್ತೆಮತ್ತೆ ದಾರಿಯನೇ ನೋಡ್ವಳು।।

ಆ ಆಕೃತಿಯು ಹತ್ತಿರ ಹತ್ತಿರ ಇತ್ತಲೇ ಬರುತಿಹುದು
ಕಣ್ಣು ಆನಂದದ ಕಣ್ಣೀರಿನಲಿ ಮಂಜಾಗುತ್ತಿದೆ
ಹೃದಯ ಭಾರವಾಗುತಿದೆ ಭಾವನೆಗಳ ಭಾರದಿಂದ
ಆನಂದದ ಗಾಳಿ ಬೀಸುತಿದೆ ಕೈಗೊಳ್ವ ಕ್ಷಣದ ಭಾವದಿಂದ
ಬಾ ಬಾರೋ ದೇವನೇ! ಕಾಯುತಿಹೆನು ನಿನ್ನ ಬರುವಿಗೆ||

ಆ ಆಕೃತಿಯು ಕಣ್ಣ ಮುಂದೆಯೇ ಬಂದು ನಿಂತಿಹುದು
ಮನವರಳಿ "ಆರು ನೀನು ದೇವಾ ಪುರುಷನೇ , ನೀನು ನನ್ನ ರಾಮನೇ"
"ಅಹುದಹುದು ತಾಯೇ ,ನನ್ನ ರಾಮನೆಂಬರು"
ಕಂಡ ಕನಸ ದೈವ ಕಣ್ಣ ಮುಂದೆಯೇ ನಿಂದಿರಲು
ಕಣ್ಣ ನೀರು ಹರಿಯೇ ರಾಮನ ಪಾದಗಳ ತೊಳೆಯಿತು।।

ಕಾಲನೊರಸಿ ಕೈಯಾಪಿಡಿದು ಹಸೆಯ ಮೇಲೆ ಕುಳ್ಳರಿಸಿದಳು
ಆರಿಸಿ ತಂಡ ಹೂಗಳನೆ ಹರುಷದಿ ರಾಮಗರ್ಪಿಸಿ ಧನ್ಯಳಾದಳು
"ಬಹುದೂರದಿಂದ ಬಂದಿಹೆನು, ತುಂಬಾ ಹಸಿದಿದೆ ತಾಯೇ"
"ಇಕೋ ಬಂದೆ " ಕಿತ್ತ ಹಣ್ಣುಗಳ ರಾಮನ ಮುಂದೆ ಬುಟ್ಟಿಯ ಹಿಡಿದಳು
"ಇಕೋ ತಂದೆ" ಸಿಹಿಹಣ್ಣೆಂದೇ ಪರಿಕಿಸಿ ನಿನಗಾಗಿಯೆ ತಂದಿಹೆನು ರಾಮ ||

ತುಂಬಾ ರುಚಿ ಮತ್ತೊಂದು ಮಗದೊಂದು ರಾಮ ಎಂಜಲ ಹಣ್ಗಳ ಹರುಷದಿ ತಿಂದನು
ಭಕುತಿ -ಪ್ರೀತಿಯ ಮುಂದೆ ಬೇರೇನಿಹುದು ಭಕುತಿಯ ಪರಾಕಾಷ್ಠೆ ಸಾರ್ಥಕತೆಯ ಭಾವವು
ವರುಷಗಳ ಕಾಯ್ದಿಟ್ಟ ಪ್ರೀತಿ-ಭಕುತಿಯ ಪೂಜೆಯಲ್ಲಿ ರಾಮ ಶಬರಿ ಮಿಂದರು
ಕಣ್ಣ ಮುಂದೆಯೇ ನಿಶ್ಚಲ ನಿರ್ಮಲ ಪ್ರೀತಿ ಭಕುತಿಯ ಲಕ್ಷ್ಮಣ ಕಂಡು ಬೆರಗಾದನು
ಕಂಡ ಕಂಗಳೇ ಧನ್ಯ, ಕೇಳ್ದ ಕಿವಿಗಳೇ ಧನ್ಯ, ಜೀವನವಾಯ್ತು ಪರಮಪಾವನ ಮಾನ್ಯ||

ಗೆಲುವು ನಿನ್ನದೇ!

ಹಿಂತಿರುಗಿ ನೋಡದಿರು
ಮುಂದಿಟ್ಟ ಹೆಜ್ಜೆಯನೆಂದೂ ಹಿಂದಿಡದಿರು
ಅನಂತ ತಾಳ್ಮೆ ನಿನ್ನಲಿಹುದು
ಅನಂತ ಶಕ್ತಿ ನಿನ್ನಲ್ಲೇ ಹುದಿಗಿಹುದು
ಅನಂತ ಸಾಹಸಕೆ ಕೈ ಹಾಕು
ಮಹತ್ಕಾರ್ಯಗಳ ಸಾಧಿಸಲು ಸಾಧ್ಯ
ಧೈರ್ಯದಿ ಮುನ್ನುಗ್ಗು ಯೋಧನೇ
ಗುರಿ ಮುಟ್ಟುವವರೆಗೂ ನಿಲ್ಲದಿರು ।।

ರಾಮ ಬರುವನಿಂದು!

ಇಂದೇಕೆ ಹೂವೇ
ನಿನ್ನ ನಗುವು ಉಮ್ಮಳಿಸಿದೆ
ರಾಮ ಬರುವೆನೆಂದೇ? ರಾಮ ಬರುವೆನೆಂದೇ?

ಗಾಳಿಯಲಿಂದೇಕೆ
ಸುಗಂಧ ಪಸರಿಸಿದೆ ಹೆಚ್ಚಾಗಿ
ರಾಮ ಬರುವೆನೆಂದೇ? ರಾಮ ಬರುವೆನೆಂದೇ?

ಇಂದೇಕೆ ಮನವರಳಿದೆ
ಈ ತಾಪಸಿಗಿಂದು ಆತಂಕ ಹೆಚ್ಚಾಗಿದೆ
ರಾಮ ಬರುವೆನೆಂದೇ? ರಾಮ ಬರುವೆನೆಂದೇ?

ವರುಷಗಳು ಕಾದಿಹೆನು
ಅವನ ಕಾಣ್ವ ಭರವಸೆಯು ಹೆಚ್ಚಾಗಿದೆ
ರಾಮ ಬರುವೆನೆಂದು! ರಾಮ ಬರುವೆನೆಂದು!

ಕಾದಿಹೆನು ಪೂಜೆಗೆ ಅನವರತ
ಕಾತರವಿದೆ ಅವನ ಬರುವಿಕೆಗೆ
ರಾಮ ಬರುವನಿಂದು! ರಾಮ ಬರುವನಿಂದು!

ರಾಮನಿಗೆ ಶಬರಿಯ ಕಾಣ್ವ ತವಕ

ಎಂದು ಕಾಂಬೆನೋ!
ಲಕ್ಷ್ಮಣಾ
ಆ ಮಾತೃ ಹೃದಯಿಯಾ!
ಎಂದು ಕಾಂಬೆನೋ!।।

ಅವಳ ಹೆಸರು ಶಬರಿಯಂತೆ
ಮಾತಂಗ ಮುನಿಯ ಶಿಷ್ಯಳಂತೆ
ಈ ರಾಮನ ಕಾಣ್ವ ತವಕವಂತೆ ।।

ಆಶ್ರಮದಿ ಅವಳು ತಾಪಸಿಯಂತೆ
ಮಮತೆಯಲಿ ಅವಳು ತಾಯಿಯಂತೆ
ರಾಮನಾಮವೇ ಅವಳ ಉಸಿರಂತೆ ।।

ಹಲವು ಬಗೆಯ ಹೂಗಳ ಕೊಯ್ವಳಂತೆ
ಕಚ್ಚಿ ರುಚಿ ರುಚಿ ಹಣ್ಣುಗಳ ಇಟ್ಟಿಹಳಂತೆ
ಈ ರಾಮನ ದಾರಿಯನೇ ನೋಡ್ವಳಂತೆ ।।

ಈ ರಾಮನ ನೋಡಲು ಕಾತುರವಂತೆ
ಈ ರಾಮನ ಪೂಜಿಸಲು ಕಾದಿಹಳಂತೆ
ಹನುಮನ ಕಡೆ ದಾರಿ ತೋರ್ವಳಂತೆ ।।

ಹರೆಯ

ಅವನು ಅವಳ ಕಂಡನು
ಮೊದಲ ನೋಟವದು
ಹರೆಯದ ಭ್ರಮೆಯದು ಕಂಡದ್ದೆಲ್ಲವೂ ಸಿಹಿಯೇ ||

ಪ್ರೀತಿಯೋ! ಪ್ರೇಮವೋ!
ತಿಳಿದವರಾರು ಹೇಳು
ವಸಂತವಲ್ಲವೇ! ಹರೆಯದ ಕರೆಯದು ।।

ವಸಂತಗಳು ಕಳೆದರೆ
ಭ್ರಮೆಗಳಿಳಿಯುವುದು
ವಾಸ್ತವಕ್ಕೆ ತೆರೆದುಕೊಂಡರೆ ಎಲ್ಲವೂ ಕಹಿಯೇ ।।

ಹರೆಯ ಇಳಿವುದು
ಆಕರ್ಷಣೆಯೋ! ಪ್ರೀತಿಯೋ!
ನಿಜ ಪ್ರೀತಿಯು ಹೊರಹೊಮ್ಮಿ ಲೋಕಕೆ ತಿಳಿವುದು ।।

ಚಿತ್ರದುರ್ಗದ ಕೋಟೆ

ಇನ್ನೂರು ವರುಷಗಳ ಹಿಂದೆ ಇದ್ದೊಬ್ಬ ವೀರಾಗ್ರಣಿ
ಅನುಪಮೋಪಮ ಜನಸೇವಕ ಚಿತ್ರದುರ್ಗದ ವೀರ ಮದಕರಿನಾಯಕ ।
ಚಿತ್ರದುರ್ಗವೆಂದೊಡೆ ಕಣ್ಣಸೆಳವುದು ಅನುಪಮ ಕೋಟೆ
ಏಳು ಸುತ್ತಿನ ಕೋಟೆ ಪರಾಕ್ರಮ ಪ್ರತಾಪಗಳ ಪ್ರತೀಕ ||01||

ಕಾಮಕೇತಿ ವಂಶದ ವೀರನಾಯಕರ ಪರಾಕ್ರಮದ ನೆಲೆವೀಡು
ಅಭೇದ್ಯ ಏಳುಸುತ್ತಿನಕೋಟೆಯ ಒಂದೊಂದೂ ಕಲ್ಲಿನಲ್ಲೂ ವೀರಗಾಥೆ ।
ರಂಗಯ್ಯನ ಬಾಗಿಲು ,ಸಂತೆ ಬಾಗಿಲು ಎಂಬಿವು ಕೋಟೆಯ ಮಹಾದ್ವಾರವು
ಕಡಿದಾದ ಬೆಟ್ಟಗುಡ್ಡಗಳ ಮಧ್ಯೆ ಇಹುದು ಲಾಲ್ ಬತ್ತೇರಿಯ ಬಾಗಿಲು ||02||

ನಾಯಕರ ಆರಾಧ್ಯದೈವ ಉತ್ಸವಾಂಬ ದೇವಾಲಯವಿಹುದು
ಕಣ್ಣುಸಾಲದು ಉಯ್ಯಾಲೆಕಂಬ ದೇವಾಲಯ ಗೋಪುರವ ವೀಕ್ಷಿಸಲು|
ಊಹಿಸಲಸದಳವು ಅದರ ಪ್ರಾಚೀನ ವೈಭವವ
ನೂರಾರು ದೇವಾಲಯಗಳೊಳಗೊಂಡ ಅನುಪಮ ರಸವಟ್ಟಿಗೆಯದು ||03||

ಮನವ ಸೆಳೆವ ಬಸವನ ಬುರುಜು, ಗಾರೆಯ ಬಾಗಿಲು
ಒಳಹೊಕ್ಕಷ್ಟೂ ತೆರೆದುಕೊಳ್ಳುತ್ತಿದೆ ಐತಿಹಾಸಿಕ ಕೋಟೆಯ ಅದ್ಭುತವು।
ಕಾಮನ ಬಾಗಿಲ ಬಳಿಯಿಹುದು ಕಾಮನ ಬಾವಿ ನೀರಿನಾಗರ
ಹೆಬ್ಬಂಡೆಗಳ ನೋಡಿದವರ ಎದೆ ಝಲ್ಲೆನಿಸುವುದು ರೋಮಾಂಚಕವು ||04||

ಅಚ್ಚುಕಟ್ಟಾಗಿ ಜೋಡಿಸಿರುವ ಹೆಬ್ಬಂಡೆಗಳವರ ಸಾಹಸವೂ
ನೂರು ಕದನಗಳ ಕಂಡಿವೆ ಈಗಲೂ ನಿಂತಿವೆ ಅಂಜದೆ ಅಳುಕದೆ|
ಬೆರಗಾಗುವೆವು ಅಂದಿನವರ ತಂತ್ರಜ್ಞಾನ,ವಾಸ್ತುಶಿಲ್ಪಕೆ
ಉಕ್ಕಿನ ಗೋಡೆಯದು ಸಾಕ್ಷಿಯಾಗಿ ನಿಂತಿದೆ ನಮ್ಮವರ ಹಿರಿಮೆಯಂತೆ ||05||

ಹುಲಿಮುಖದ್ವಾರ, ನಾಲ್ಕು ಬೃಹದಾಕಾರದ ಬೀಸುವ ಕಲ್ಲುಗಳು
ಶಸ್ತ್ರಾಗಾರ,ಗುಪ್ತವಾಗಿಹ ಬನಶಂಕರಿ ನೋಟಕೆ ಕುತೂಹಲ ಮಿಡಿಯುವುದು|
ಎಣ್ಣೆಯಕೊಳ, ಬೊಂಬೆಯ ಚಾವಡಿ,ಗರಡಿ ಮನೆ
ನಮ್ಮಯ ಸೊಗಸಿನ ನಗರವು ಆತ್ಮೀಯ ಹೃದಯವ ತೆರೆಯುವುದು ||06||

ಮುಂದೆ ಸಾಗುತಲಿರೆ ಕೋಟೆಯ ಹೃದಯಭಾಗವು
ಏಕನಾಥೇಶ್ವರಿ ದೇವಸ್ಥಾನ,ದೀಪಸ್ಥಂಭ ನೋಡಲೆರಡು ಕಣ್ಣು ಸಾಲವು|
ಈ ದೀಪಸ್ಥಂಭಕೆ ಪ್ರಾಣಕೊಟ್ಟ ಕಂಬದಮ್ಮನ ಚಿತ್ರವಿಹುದು
ಜೀವತ್ಯಾಗ ದ್ಯೋತಕವೆಂಬಂತೆ ಅವಳ ಹಿರಿಮೆಯ ಸಾರುತಿಹುದು ||07||

ಹಿಡಿಂಬೇಶ್ವರ ದೇವಾಲಯ, ಗಾಳಿಮಂಟಪ ಸಾಗಿದರೆ
ಮುರುಘರಾಜೇಂದ್ರ ಮಠವು, ಸಂಪಿಗೆ ಸಿದ್ಧೇಶ್ವರ ಆಯಲವು|
ಹಿರಿದಾದ ಸಂಪಿಗೆಯ ಮರ, ಸುತ್ತಲಿನ ಸಭಾಂಗಣ
ಪಾಳೇಗಾರರ ಪಟ್ಟಾಭಿಷೇಕ ಸ್ಥಾನ, ಗವಿಗಳಲ್ಲಿ ರಸಸಿದ್ಧರ ತಾಣ ||08||

ಗಿರಿದುರ್ಗದ ಹರವಿನಲ್ಲಿಹುದು ಗೋಪಾಲಕೃಷ್ಣದೇವರ ಗುಡಿಯು
ದೇವರ ಹೊಂಡ ,ತುಪ್ಪದ ಕೊಳ ಚಿನ್ಮೂಲಾದ್ರಿಯ ಬೆಟ್ಟದ ಮಡಿಲಲ್ಲಿ|
ಲಾಲ್ ಬತ್ತೇರಿ, ಝoಡಾ ಬತ್ತೇರಿ, ಕಹಳೆ ಬತ್ತೇರಿ ಕೋಟೆಯ
ಧುರ್ಗಮ ರಚನೆಯ ಅರಿವಾಗುವುದು ಅಭೇದ್ಯವೆನಿಸದಿರದು ||09||

ಅಭೇದ್ಯವಾದರೂ ಕಾಲನ ಮುನಿಸಿಗೆ ಭಗ್ನವಾಗಿದೆ ಎಲ್ಲವೂ
ಅಕ್ಕ-ತಂಗಿಯರ ಹೊಂಡ ಇತಿಹಾಸದ ವೈಭವವ ಚಿತ್ರಿಸಿಹುದು|
ಕೋಟೆಯೆಂದೊಡೆ ಕಳ್ಳದಾರಿಯಿರಲೇಬೇಕು ಅದುವೇ
ಸುಪ್ರಸಿದ್ಧವಾದ "ಒನಕೆ ಓಬ್ಬವ್ವನ ಕಿಂಡಿ" ಎಂದು ಜನಜನಿತವು ||10||

ಮತ್ತಿ ತಿಮ್ಮಣ್ಣನಾಯಕ ,ಬಿಚ್ಚುಗತ್ತಿ ಭರಮಪ್ಪ ನಾಯಕ ,
ವೀರ ಮಧಕರಿ ನಾಯಕ ಚಿತ್ರದುರ್ಗದ ಕೋಟೆ ಕಂಡ ವೀರಾಗ್ರಣಿಗಳು।
ಮರಾಠರ ಕಾಟ ,ಹೈದರಾಲಿಯ ಕಾಟ ಗಳ ಎದೆಗುಂಧದೇ
ಅಳುಕದೆ ಹಿಮ್ಮೆಟ್ಟಿಸಿ ಧರೆಗುರುಳದೇ ಅಚಲವಾಗಿಹುದಿಕೋಟೆ ||11||

ಒಮ್ಮೆ ಕೋಟೆಯ ಗೆಲ್ಲುವೆನೆಂದು ಬಂದಿಳಿದನು ಹೈದರಾಲಿ
ಜಿದ್ದಿಗೆ ಬಿದ್ದವನಂತೆ ಕೋಟೆಯ ಹೊರಗೆ ಹೂಡಿದ ಠಿಕಾಣಿ।
ದಿನಗಳು ಉರುಳಿದವು, ತಿಂಗಳುಗಳುರುಳಿದವು ನಾಯಕರ
ಪರಾಕ್ರಮಕೆ ಎಣೆಯಿಲ್ಲ, ಹೈದರಾಲಿ ಸೋಲೊಪ್ಪಲು ತಯಾರಿಲ್ಲ ||12||

ಕೋಟೆಯ ಮುತ್ತಿದರು ಸಾವಿರ ಸಾವಿರ ಸೈನಿಕರು
ಕಳ್ಳಗಿಂಡಿಯ ಹುಡುಕಹೊರಟರು ಗುಪ್ತಚಾರರು।
ಕೊನೆಗೊಂದು ಕಳ್ಳಗಿಂಡಿಯ ಕಂಡರೂ, ಸಂತೋಷಗೊಂಡರು
ಇಕ್ಕಟ್ಟಾದ,ಕಿರಿದಾದ ಜಾಗದಲ್ಲಿ ಹೈದರನ ಸೈನಿಕರು ಹೊಕ್ಕರು ||13||

ಕಾವಲುಗಾರನ ಹೆಂಡತಿ ಓಬ್ಬವ್ವ ಊಟಕೆ ಬಂದಿಹ ಗಂಡನಿಗೆ
ನೀರುತರಲು ಹೊಂಡದ ಬಳಿ ಬಂದಿರಲು ಕಳ್ಳಗಿಂಡಿಯ ಬಳಿ ದನಿ ಕೇಳಿದಳು।
ಶತ್ರು ಸೈನಿಕರು ಕಳ್ಳಗಿಂಡಿಯಿಂದ ಒಳಬರುತ್ತಿರುವರು ಕೋಟೆಗೆ
ಅಪಾಯವು ಬಂದೊದಗಿದೆಯೆಂದು ಒಳಗೋಡಿ ಒನಕೆಯ ಹಿಡಿದು ಕಿಂಡಿಯ ಬಳಿ ನಿಂದಳು ||14||

ದುರ್ಗೆಯ ನೆನೆಯುತ್ತಾ ವೀರಗಚ್ಚೆಯಲಿ ರಣಚಂಡಿಯಂತೆ ಕಾಯುತ್ತಾ
ಶತ್ರು ಒಳಬರಲೆಂದು ಒನಕೆಯ ಹಿಡಿದು ಬಳಿಗೆ ಕಾದಳು।
ಒಬ್ಬೊಬ್ಬನೇ ತೆವಳುತ್ತಾ ಬರುವ ಸೈನಿಕರ ತಲೆಗಳ ತೆಂಗಿನಕಾಯಿ
ಗಳ ಒಡೆದಂತೆ ತಲೆಗಳ ತರಿದಳು, ಹೆಣಗಳ ರಾಶಿಯನೆ ಮಾಡಿದಳು ||15||

ಹೊತ್ತಾದರೂ ಬಾರದ ಹೆಂಡತಿಯ ಹುಡುಕುತ್ತಾ ಕಳ್ಳಗಿಂಡಿಯ ಬಳಿ
ಬಂದು ಹೆಣಗಳ ರಾಶಿಯ ನಡುವೆ ನಿಂತಿಹ ರಣಚಂಡಿಯ ನೋಡಿದನು।
ಕೋಟೆಯ ರಕ್ಷಿಪ ದುರ್ಗೆಗೆ ನಮಿಸುತ್ತಾ ಸೈನಿಕರರಿಗೆ ಅಪಾಯದ ಸೂಚನೆ
ನೀಡಿದನು, ಸಾಗರದಂತೆ ಸೈನಿಕರು ಹರಿದು ಬಂದು ಶತ್ರು ಸೈನ್ಯವ ಸದೆಬಡಿದರು ||16||

ಚಿತ್ರದುರ್ಗದ ಕೋಟೆ ಕೊನೆಗೂ ಶತ್ರುಗಳಿಗೆ ಅಭೇದ್ಯವಾಗೇ ಉಳಿಯಿತು
ಓಬ್ಬವ್ವನ ಸಮಯಪ್ರಜ್ಞೆ ಯಿಂದ ಕೋಟೆಯು ಅಜೇಯವಾಯಿತು।
ಹೈದರನ ಕೋಟೆ ಕೈವಶ ಮಾಡಿಕೊಳ್ಳುವ ಕನಸು ಕನಸಾಗೇ
ಉಳಿಯಿತು, ಕೋಟೆಯ ರಕ್ಷಿಸಿದ ಓಬ್ಬವ್ವ ಇತಿಹಾಸದಲ್ಲಿ ಅಮರಳಾದಳು ||17||

ಸಹಬಾಳ್ವೆಗೆ ಸಮರಸ ಭಾವ


ಅಶಾಂತಿ ಅಜ್ಞಾನವು ಜಗದಲಿ ಪಸರಿಸೆ ಅಂಧಕಾರವು
ದೈವೀಗುಣಂಗಳ ವೈಭವವೇ ಶಾಂತಿ,ಜ್ಞಾನದ ಸಂಕೇತವು।
ಹಗಲು-ರಾತ್ರಿ ಸಮತೋಲನದಲ್ಲಿರೆ ಶ್ರೇಯಸ್ಸು ಜೀವಿಗಳಿಗೆ
ಅರಿವು-ಆಚಾರಗಳು ನಡೆ-ನುಡಿಯಲ್ಲಿ ಬೆರೆತಿರಲದುವುವೆ ಪ್ರಗತಿಯು||

ಸತ್ಯ-ಧರ್ಮ ಗಳು ಮೇಲೈಸೆ ಜಯದ ಹಾದಿ ಸುಗಮವು
ದಿನನಿತ್ಯದಲಿ ಆದರ್ಶಗಳು ಅಡಕವಾಗಿರಡುವೆ ಸಾರ್ಥಕ್ಯವು।
ಸುಖವನ್ನೊಂದೇ ಬೆನ್ನತಿಹ ನಾವು ಕಂಡೆವು ಬರೀ ನೋವುಗಳೇ
ಸುಖ-ದುಃಖ ಸಮರಸ ತತ್ವಗಳ ಮರೆತಾಗಿದೆ ಬಾಳು ಬರೀ ಬರಡು||

ನಮ್ಮ-ನಮ್ಮ ನಡುವಿನ ಮುಕ್ತ ಮನಗಳ ಮುಚ್ಚಿಹೆವು
ಸ್ವಾರ್ಥತನದಲಿ ಅಹಂಮಿಕೆಯ ಆಡಂಬರ ಹೆಚ್ಚಾದವು|
ನಮ್ಮ-ನಾವು ಅರಿಯದೇ ಹೇಗೆ ತಾನೇ ನಮ್ಮ ಉದ್ಧಾರವಾಗುವುದು
ನಿಲ್ಲದ ಕಾಲಕೆ ಸಮನಾಗಿ ನಾವು ಬದಲಾಗಬೇಕು ಮನವ ತೆರೆದು||

ನಾನು ನಾನೆಂಬ ಅಹಂಭಾವದಿಂದಲೇ ಕುರುಡು
ಅರ್ಥವಿಲ್ಲದ ಮಾತಿಗಳಿಗಿಂತ ಮೌನವ ತಬ್ಬುವುದೇ ಲೇಸು|
ಉರಿಯುವ ದೀಪ ತಾನುರಿದು ಪರರ ಬಾಳ ಬೆಳಗುವ ತೆರದಿ
ಉರಿಯದ ದೀಪ ಬೇರೊಂದು ದೀಪವ ಬೆಳಗಬಲ್ಲುದೇ -ಬರಿ ವ್ಯರ್ಥ ಪ್ರಲಾಪ||

|| ಕುರುವಂಶಕ್ಕಾಗಿ ಸತ್ಯವತಿಯ ಚಿಂತೆ ||

ಹಸ್ತಿನಾಪುರಾಧೀಶ ವಿಚಿತ್ರವೀರ್ಯನು ದೇಹಾಲಸ್ಯದಿಂ
ಇಹಲೋಕವಂ ಗೈದನು ಶೂನ್ಯವಾಗಿಹ ಸಿಂಹಾಸನವು।
ರಾಜಾಸ್ಥಾನ, ಅರಮನೆಯಲ್ಲಿ ಮೌನವು ಮನೆಮಾಡಿತು
ಯಾರು ಮುಂದೆ ಕುರುಸಿಂಹಾಸನಾಧೀಶರಾಗುವರೆಂದು ||1||

ಚಿಂತೆ ಅವರಿಸಿಹುದು ಸತ್ಯವತಿಯ ಮನದಲ್ಲಿ
ಒಡನೆಯೇ ಭೀಷ್ಮನ ಕರೆಸೆಂದಳು ದಾಸಿಗೆ।
ಭೀಷ್ಮ ಮಾತೆಯ ಬಳಿಬಂದು ನಮಿಸುತ್ತಾ
ತಾಯಿ ಕರೆದೇಕಿಂದು ವಿಷಮ ಸ್ಥಿತಿಯಲ್ಲಿ ನಿನ್ನಆದೇಶವೇನು ||2||

ಗುಣವಂತ,ಅತಿರಥ ಪರಾಕ್ರಮಿ, ವಿವೇಕ,ವಿದ್ವಾಂಸ
ಕುರುವಂಶ ಕುಲೋತ್ತುಂಗ,ಅಜಾತಶತ್ರುವಾಗಿಹ ಭೀಷ್ಮ
ಸಕಲ ಗೌರವಾದರ ಪಾತ್ರಧಾರಿ , ನಿಷ್ಠೆ, ದೃಢತೆಗೆ ಮತ್ತೊಂದು
ಹೆಸರಾಗಿಹ ಗಾಂಗೇಯನೇ ಮಾತುಕೇಳೆಂದಳು ಸತ್ಯವತಿ ||3||

ಕುರುವಂಶದ ಉತ್ಥಾನ ಮುಂದೇನೆಂಬುದೇ ಯಕ್ಷಪ್ರಶ್ನೆಯಾಗಿದೆ
ಬೇಡಿಕೊಂಬೆನು ಹಸ್ತಿನಾವತಿಯ ಸಿಂಹಾಸನವೆರೆಂದಳು ।
ಮಾತೆ ಎನ್ನ ಪರಿಕಿಸಲೇ ಈ ಮಾತನ್ನು ಹೇಳುತಿರುವಿರೇನ್
ಸಿಂಹಾಸನ ತ್ಯಾಗ, ಆಜನ್ಮ ಬ್ರಹ್ಮಚರ್ಯದ ಶಪಥವ ಮರತಿರೇನು ||4||

ಮಾತಿಗೆ ತಪ್ಪಲಾರೆ, ಮುಂದಿರುವ ದಾರಿಯಾದರೂ ಏನು
ಈ ಸಂಕಷ್ಟ ಪರಿಸ್ಥಿತಿಯಿಂದೊಮ್ಮೆ ಹೊರ ಬರುವ ಮಾರ್ಗವದಾವುದು ।
ಕೇಳು ತಾಯೇ ನನ್ನ ಹೊರತಾಗಿ ಕುರುವಂಶದುತ್ಥಾನ
ಸಾಧ್ಯ ಕ್ಷತ್ರಿಯರಲ್ಲಿ ನಿಯೋಗವೆಂಬಾಚಾರ ಪದ್ಧತಿಯುಂಟು ||5||

ಕುಲನಾಶದಿಂ ಹೊರಬರಲು ಸಂಸಾರ ಕ್ಲೇಷವಿಲ್ಲದ ಬ್ರಹ್ಮಾರಿವು
ಪೊಂದಿದಾ ಋಷಿಗಳಿಂ ಸುತರ ಪಡೆವುದು ಶಾಸ್ತ್ರ ಸಮ್ಮತವು|
ಪೂರ್ವದಲ್ಲಿಯೇ ಹಲವು ಸೋದಾಹರಣೆಗಳ ಮುಂದಿಟ್ಟನಾ
ಭೀಷ್ಮನು ತಾಯೇ ಯೋಚಿಸಿದೊಂದೇ ಮಾರ್ಗವಿರುವುದೆಂದನು ||6||

ಭೀಷ್ಮ ಸೂಚಿಸಿದುಪಾಯವು ಯೋಗ್ಯವೆನಿಸಿತಾ
ಸತ್ಯವತಿಗೆ ಬ್ರಹ್ಮಾರಿವಿರುವ ಮಹಾಋಷಿಯ ಹುಡುಕಾಟದಲ್ಲಿ|
ನಮ್ಮ ಸಂಕಷ್ಟದಲ್ಲೂಪಕರಿಸುವರಾರಿಹರೆಂದು ಮನದಲ್ಲೇ
ಯೋಚಿಸುತಿರಲು ವೇದವ್ಯಾಸನ ನೆನಪಾಯಿತು ಸತ್ಯವಂತೆಗೆ ||7||

ಕೇಳು ಭೀಷ್ಮನೇ ಪೂರ್ವದಲ್ಲಿ ನಡೆದ ಯಾರಿಗೂ ತಿಳಿಯದ
ಈ ಘಟನೆ ನಿನಗೇಳುತಿಹೆನು ಕೇಳುವಂತವನಾಗು|
ಹಿಂದೆ ನನ್ನ ಪೂರ್ವಕಾಯಕದಲ್ಲಿ ತೊಡಗಿರುವಾಗೆ ಪರಾಶರರೊಮ್ಮೆ
ನದಿ ದಾಟಿಸುವ ಹೊತ್ತಿನಲಿ ನನ್ನ ಮೋಹಕೊಳಗಾದರು ||8||

ನಮ್ಮಿರ್ವರ ಪ್ರೇಮದ್ಯೋತಕವೆಂಬಂತೆ ವ್ಯಾಸರು ಜನಿಸಿದರ್
ಬ್ರಹ್ಮಜ್ಞಾನವೀಯುವೆನೆಂದು ಪರಾಶರರು ಆಶೀರ್ವದಿಸಿದರು ।
ನನ್ನ ಮಗನೇ ಅಗಿಹ ವೇದವ್ಯಾಸನು ವಚನವಿತ್ತಿಹನು
ನಾನ್ ಕರೆದಾಗ ಬರುವೆನೆಂದು ಅವನ ಸಹಾಯಬೇಡುವೆನೆಂದಳು ||9||

ಭೀಷ್ಮನಿಗಿದು ಸಮಂಜಸವೆನಿಸಿತು, ತಾಯೇ
ಅಂಬಿಕೆ, ಅಂಬಾಲಿಕೆಯರ ಮನಸ ಸಿದ್ಧಗೊಳಿಸೆಂದನು|
ಮನದಲ್ಲೇ ವ್ಯಾಸನ ನೆನೆದಳ್ ಬಾ ಮಗನೇ
ನಿನ್ನಿಂದುಪಕಾರವಾಗಲೇಬೇಕು ಕುರುವಂಶವುದ್ಧರಿಸು ಬಾಯೆಂದಳು ||10||

ತಾಯೇ! ನನ್ನ ನೆನೆದೇಕಿಂದು ಮುಂದೆ ನಿಂತಿಹೆನ್
ಏನಪ್ಪಣೆಯಾಗಲಿ ಹೇಳುವಂತವಳಾಗೆಂದನು ವ್ಯಾಸನು|
ಕುರುವಂಶದಲ್ಲೊದಗಿದ ಸಂಕಷ್ಟಪರಿಸ್ಥಿತಿಯ ವರದಿ
ಯೊಪ್ಪಿಸಿದಳ್ ರಾಣಿಯರಲಿ ಕುಲೋದ್ಭವ ಸುತರಂ ಕರುಣಿಸೆಂದಳು ||11||

ತಾಯೇ! ಇಲ್ಲವೆನ್ನಲಾರೆ ನಿನ್ನ ಬಿನ್ನಹಕೆ
ರಾಣಿಯರ ಸಜ್ಜುಗೊಳಿಸು ,ನಿಯೋಗಕೆ ಸಿದ್ಧಗೊಳಿಸು।
ನನ್ನ ತಪೋತೇಜಸ್ಸಿನ ಪ್ರಖರತೆಗೆ ಹೆದರುವರವರು
ತಿಳಿಯಹೇಳೊಪ್ಪಿಸು ಸಿದ್ಧರಾಗಿರುವಂತೆ ತಿಳಿಸೆಂದನು ||12||

ಅಂಬಿಕೆಯ ಮನವೊಪ್ಪಿಸಲ್ ಸತ್ಯವತಿ ಮುಂದಾದಳ್
ವ್ಯಾಸರವೊಪ್ಪಿಸುವುದಕ್ಕಿಂತಲೂ ಅಂಬಿಕೆಯನೊಪ್ಪಿಸಲು ದಣಿದಳವಳು।
ಕಡೆಗೂ ಒಪ್ಪಿಅಂಬಿಕೆ ವ್ಯಾಸರವಿರುಪವಮ್ ಕಂಡು ಬೆದರಿ
ಕಣ್ಣು ಮುಚ್ಚಿದಳ್ ಫಲವಾಗಿ ಕುರುಡುಮಗುವಿಗೆ ತಾಯಾದಳು ||13||

ನಡೆದುದೆಲ್ಲವ ತಾಯಿ ಸತ್ಯವತಿಗೆ ನುಡಿದರ್
ಮಗು ದೃಢಕಾಯ ,ಬಲವಂತನಾದರೂ ಕುರುಡನಾಗಿರುವೆನೆಂದರು।
ಬೆಚ್ಚಿದ ಸತ್ಯವತಿ ಅಂಬಾಲಿಕೆಯೊಡಗೂಡುವಂತೆ
ವ್ಯಾಸರಲಿ ಬಿನ್ನಹವಿತ್ತು ಕೈಗೂಡುವಂತೆ ಮನವಿಯನ್ನಿತ್ತಳು ||14||

ಅಂಬಾಲಿಕೆಯ ಮನವೊಲಿಸಿ ಧೈರ್ಯತುಂಬಿದಳು
ವ್ಯಾಸರೇಕಾಂತ ಸ್ಥಲಕೆ ಕಳುಹಿಸಲ್ಪಟ್ಟಳವಳು ।
ತಾನು ಬಂದಿಹೆನೆಂದು ಬಿನ್ನವಿಸಿದಳವಳು
ವ್ಯಾಸರ ವಿರೂಪವೊಮ್ಮೆ ನೋಡಿ ಬೆದರಿಬೆವೆತಳವಳು ||15||

ಅಂಬಾಲಿಕೆಯ ಸಂಗವನ್ನು ವಿವರಿಸುತ್ತಾ
ಮಗುವಿನಾರೋಗ್ಯವಿಹೀನನಾಗಿರುವನೆಂದರು ।
ತಾಯಿ ಸತ್ಯವತಿ ಚಿಂತಾಕ್ರಾಂತಳಾದಳು ಮಗದೊಮ್ಮೆ
ಅವರ ಮನವನ್ನೊಪ್ಪಿಸುವೆ ಒಂದಾವಕಾಶ ನೀಡಬೇಕೆಂದಳು ||16||

ತಾಯ ಮನವಿಗೆ ಆಯಿತೆಂದರು ಇದೇ ಕೊನೆಯವಕಾಶ
ಈರ್ವರಲಿ ಯಾರಾದರೂ ಆಗಲಿ ಕಳುಹಿಸೆಂದರು ವ್ಯಾಸರು।
ಭಯ ವಿಚಲಿತರಾದ ಅಂಬಿಕೆ ಅಂಬಾಲಿಕೆ ದುಗುಡದಿ
ದಾಸಿಯ ಮನವೊಲಿಸಿ ವ್ಯಾಸರ ಬಳಿಗೆ ಕಳುಹಿದರವಳ ||17||

ದಾಸಿ ದೃಢಚಿತ್ತದಿ ದೈವೇಚ್ಛೆ ಯಂತಾಗಲೆಂದು
ವ್ಯಾಸರ ಬಳಿ ಬಂದು ತಾನು ಬಂದಿಹೆನೆಂದು ಬಿನೈಸಿದಳು।
ಅವಳ ಮಾತಕೇಳಿ ವ್ಯಾಸರು ತಿರುಗಿ ಅವಳ ವೀಕ್ಷಿಸಿದರು
ದೃಢಚಿತ್ತದಿ ದಾಸಿಯು ಅವರ ನೋಡಿ ವಿಚಲಿತಳಾಗಲಿಲ್ಲ ||18||

ನಡೆದುದೆಲ್ಲವ ಸವಿಸ್ತಾರವಾಗಿ ಸತ್ಯವತಿಗೆ ಹೇಳಿದರು
ದೃಢ ಆರೋಗ್ಯವಂತನಾದ ಸುತನು ಜನಿಸುವನೆಂದರು।
ಬಂದ ಕೆಲಸವಾಯ್ತು ತಾಯೇ ಇನ್ನು ಬೀಳ್ಕೊಡು ಹೊರಡುವೆ
ತಾಯ ಚರಣಗಳಿಗೆರಗಿ ನಮಿಸುತ್ತಾ ಹೊರಡಲನುವಾದರು ||19||

ಈ ಸಂಕಷ್ಟವ ಪರಿಹರಿಸಿದ ಸುತನಿಗೆ ಅಭಿನಂದಿಸಿದರು
ಮುಂದಿನ ಹೊಸಚಿಗುರಿನ ಗುಣವನಾಗೆ ಅರಿತಾಗಿದೆ
ಧರೆಗಿಳಿದು ಬರುವುದ ಕಾಯುವುದೊಂದೇ ದಾರಿಯುಳಿದಿದೆ
ಅಂಬಿಕೆ ಅಂಬಾಲಿಕೆ ದಾಸಿ ಸುತರ ಆಹ್ವಾನಿಸಲನುವಾದರು ||20||

ಕುರುಕ್ಷೇತ್ರದಲ್ಲಿ ಗುರು-ಶಿಷ್ಯರ ಕಾಳಗ

ಅಂಬೆ ಅರುಹಿದಳು ಭೀಷ್ಮರಿಂದಾದ ಅಚಾತುರ್ಯ
ಕೇಳಿ ಕೆಂಡಮಂಡಲವಾದರು ಪರಮ ಕೋಪದಿ |
ಶಿಷ್ಯನ ಶಿಕ್ಷಿಸುವೆ ನ್ಯಾಯವ ಕೊಡಿಸುವೆನು
ನಡೆ ಕುರುಕ್ಷೇತ್ರಕೆ ಈಗಲೇ ಎಂತೆಂದರು ಅಂಬೆಗೆ ।।೧।।

ಪರಶುರಾಮರು ಬಂದರೆಂದು ಅಕೃತವ್ರಣನಿಂ ತಿಳಿದ
ಗಾಂಗೇಯನು ಸ್ವಾಗತಿಸುತ್ತಾ ಆಚಾರ್ಯರ ಪಾದಗಳಿಗೆರಗಿದನು |
ಪ್ರಿಯ ಶಿಷ್ಯನ ಹಿಡಿದೆತ್ತಿ ತೀಕ್ಷ್ಣ ನೋಟವಬೀರಿ ಧರ್ಪದಲಿ
ಅಂಬೆಯ ಕರೆತಂದುದೇಕೆಂದು ಆಗ್ರಹಿಸಿದರು ।।೨।।

ನಮಿಸುತ್ತಾ ಸೌಮ್ಯ ತನದಲೇ ಗಾಂಗೇಯನು
ಅನುಜ ವಿಚಿತ್ರವೀರ್ಯನ ವಿವಾಹಕ್ಕೆಂದನು |
ಮತ್ಯಾಕೆ ಆಕೆಯ ತ್ಯಜಿಸಿದೆ, ಅವಳಿಗೇಕಿಂತ ದುರ್ಗತಿ
ಅವಳಿಗಾದ ಅವಮಾನವ ಹೇಗೆ ಕಳೆವುದೆಂತಂದರು ।।೩।।


ಶಾಲ್ವ ರಾಜನ ಪತಿಯಾಗಿ ಸ್ವೀಕರಿಸಿರುವೆನು
ಎಂದಳಾ ಅಂಬೆ ಮಾತೆ ಸತ್ಯವತಿಗೆ ಬಿನ್ನವಿಸುತ್ತಾ|
ಆಕೆಯ ಇಚ್ಛೆಯಂತೆ ಗೌರವದಲಿ ಕಳುಹಿದೆ
ಮತ್ತೆ ಮರಳಿ ಬಂದಳೇಕೋ ಕಾಣೆ ಗುರುವರ್ಯ ।।೪।।

ಶಾಲ್ವ ರಾಜನು ಅಂಬೆಯ ನಿರಾಕರಿಸಿಹನು
ಅವಳ ಅವಮಾನಕೆ ಕಾರಣನು ನೀನು ಭೀಷ್ಮ ।
ಸ್ವಯಂವರದಿ ಕರೆತಂದು ತಪ್ಪುಮಾಡಿಹೆ ನೀನು
ವರಿಸು ಅವಳ ಬಿಡದೆ ಆಗ್ರಹಿಸಿದರು ಪರಶುರಾಮರು ।। ೫।।

ಆಜನ್ಮ ಬ್ರಹ್ಮಚರ್ಯವ ಶಪಥ ತೊಟ್ಟಿಹೆನು
ಎಂಬುದರಿತು ಆಗ್ರಹಿಸುವುದು ಸರಿಯೇ ಗುರುವರ್ಯ|
ಗುರುವಾಗಿ ಅಜ್ಜ್ಞಾಪಿಸುತಿಹೆನು ಕೇಳು ಗಾಂಗೇಯನೇ
ವರಿಸು ಅಂಬೆಯ ಮರುಮಾತನಾಡದೆ ।।೬।।

ಗುರುವೇ ಧರ್ಮ ಮಾರ್ಗದರ್ಶಿಯಾಗಿಹ ನೀನು
ಅನುಚಿತವಾಗಿಹ ಮಾರ್ಗದಲಿ ನಡೆಯೆನ್ನುವುದು ಉಚಿತವೇ ।
ಈ ಅಧರ್ಮ ವಾಕ್ಯವನು ಉಲ್ಲಂಘಿಸಿ ತಿರಸ್ಕರಿಸುವ ಹಕ್ಕು
ಈ ನಿಮ್ಮ ಪ್ರಿಯ ಶಿಷ್ಯನಿಗಿದೆ ಅನ್ಯಥಾ ವ್ಯರ್ಥವಾಗಿ ಆಜ್ಞಾಪಿಸಬಾರದು ಗುರುದೇವ ।।೭।।

ಕೋಪಾವಿಷ್ಟರಾದ ಭಾರ್ಗವರು ಅತಿಯಾಯಿತು
ದೇವವ್ರತ ಕಾಳಗಕೆ ಸಿದ್ಧನಾಗು ಇಕೋ ।
ಸೋತೆಯಾದರೆ ನಾ ಆಜ್ಞಾಪಿಸಿದಂತೆ ಈ ಅಂಬೆಯ ವರಿಸು
ಇಲ್ಲವಾದೊಡೆ ನಿನ್ನ ಧರ್ಮ ನಡೆಗೆ ಜಯವಾಗಲೆಂತೆಂದರು ।।೮।।

ಘನಘೋರ ಯುದ್ಧವಾಯಿತು ಕುರುಕ್ಷೇತ್ರದಿ
ಗುರು-ಶಿಷ್ಯರ ಕಾಳಗ ಬಹುದಿನಗಳು ಎಡಬಿಡದೆ ।
ಆಚಾರ್ಯ ಪರಶುರಾಮರು ಬಳಲಿದರು, ವಿಚಲಿತರಾದರು
ಶಿಷ್ಯೋತ್ತಮನ ಸತ್ವತೇಜಸ್ಸಿಗೆ ಮನಸೋತರು ।।೯।।


ಮೆಚ್ಚಿದರು ಪ್ರಿಯಶಿಷ್ಯನ ಸತ್ಯನಿಷ್ಠೆಗೆ
ಹರಸಿದರು ಮನಪೂರ್ವಕ ತೆರಳುವ ಮುನ್ನ ।
ಕನಲಿ ಕ್ಷುದ್ರಳಾದಳು ಅಂಬೆ ಕತ್ತಿ ಹಿಡಿದು
ಭೀಷ್ಮನ ಮಣಿಸಲು ಅನುವಾದಳು ವೀರಾಗ್ರಣಿಯಂತೆ ।।೧೦।।


ಭೀಷ್ಮರು ವಿರೋಧಿಸಲಿಲ್ಲ ಮೌನವ ತಬ್ಬಿದರು
ಅಂಬೆ ಕೋಪಾಗ್ನಿಯಲಿ ಭೀಷ್ಮರ ನೋಡುತ್ತಾ ।
ಮುಂದಿನ ಜನ್ಮದಲಿ ಗಂಡಾಗಿ ನಿಮ್ಮ
ಸಾವಿಗೆ ನಾನೇ ಹೊಣೆಯಾಗುವೆನೆಂದಳು ।।೧೧।।

ಅವಮಾನದಿ ನರಳಿದ್ದಳಾ ಅಂಬೆ
ಬೇರೆ ದಾರಿ ಕಾಣದೆ ಅಗ್ನಿಗಾಹುತಿಯಾದಳು ।
ಕಾಲದಾಟಕೆ ಭೀಷ್ಮರು ವಂದಿಸುತಲಿ
ಬಂದದ್ದು ಬರಲಿ ಕಾಲವೇ ನಿನಗೆ ನಮಿಸುವೆನೆಂದರು ।।೧೨।।

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...