Saturday, April 25, 2026

ಅನಂತ ಗಾನ

ಆತ್ಮದ ಹೃದಯ 'ಭರವಸೆ',

ಕಾಣದ ರೆಕ್ಕೆಗಳು ಅನಂತದೆಡೆಗೆ,

ಕಣ್ಣು ತೆರೆದೊಡೆ ನಭವೇ 'ಅನಂತ'.

 

'ಭರವಸೆ' ಅನಂತ ಗೀತೆಯಂತೆ,

ಪದಗಳೇ ಇಲ್ಲದ ರಾಗದಂತೆ,

ಅಂತ್ಯವಿಲ್ಲದ ಅನಂತ ಗಾಯನದಂತೆ.

 

'ಭರವಸೆ' ಕಾಣದ ಕಡಲಿನಂತೆ,

ಹರಿಯುವ ನದಿಯಂತೆ,

ಕಾಲನಂತೆ ನಡೆ ಅನಂತಾದೆಡೆಗೆ.

 

'ಭರವಸೆ' ಆತ್ಮದ ಬೆಳಕಿನಂತೆ,

ತಿಮಿರವ ಕಳೆವ ದೀವಿಗೆಯಂತೆ,

ಆತ್ಮೋನ್ನತಿಯ ಅರಸುವ ಜ್ಞಾನಿಯಂತೆ.

Friday, April 24, 2026

ವ್ಯತ್ಯಾಸವಿಲ್ಲ

ಪರಮಾಣುವಿನಷ್ಟು ಚಿಕ್ಕದು,

ಗುರುಗ್ರಹದಷ್ಟು ದೊಡ್ಡದು,

ಒಳ-ಹೊರಗೆ ನಾವೆಲ್ಲರೂ ಒಂದೇ!,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ದೊಡ್ಡಣ್ಣನಂತೆ ಹಣದ ಶ್ರೀಮಂತರು,

ಬಿಕ್ಷುಕನಂತೆ ಅಲೆದಾಡುವ ಬಡವರು,

ನಾವೆಲ್ಲರೂ ಒಂದೇ ಆಗಿಬಿಡುವೆವು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಅವನು ಪರಂಗಿ ಕೆಂಪುಬಣ್ಣ,

ಇವನು ಗೋಧಿಬಣ್ಣ,

ಅವನೋ ಅಮಾವಾಸ್ಯೆ ಕಪ್ಪುಬಣ್ಣ,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಕಣ್ಣು ತೆರೆದಿದ್ದೇವಷ್ಟೇ,

ಒಳಗುರುಡು ಎಲ್ಲರಿಗೂ,

ಅವನು ಬೆಳಕು ಹರಿಸಬೇಕು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.

 

ಪ್ರೇರಣೆ:   No Difference" by Shel Silverstein

ಮುರಳಿಯ ಕರೆ

ಮುರಳಿ ಕರೆಯುತಿದೆ,

ಮರಳಿ ಬಾರೆನುತಿದೆ.

ಕರುಣೆಯ ಹೃದಯದಿ ಪ್ರೀತಿಯನಿಟ್ಟು,

ತಾಯ ಪ್ರೀತಿಯ ಹಂಬಲದಿ ಮನವನಿಟ್ಟು.


ಮುರಳಿ ನಗುತಿಹನು,

ಮರಳಿ ಬಾರೆನುತಿಹನು

ಕಳೆದು ಹೋದ ಸವಿನೆನಹುಗಳ ಹಾರಿಬಿಟ್ಟು,

ಸವಿಜೇನ ಸವಿಯುವ ಬಾ ಎಂದು ಬೊಗಸೆಯಲಿಟ್ಟು.

 

ಮುರಳಿ ಮಿಡಿಯುತಿದೆ,

ಮರಳಿ ಬಾರೆನುತಿದೆ.

ಬಾಲ್ಯದ ದಿನಗಳ ಕಾಮನಬಿಲ್ಲ ಮೂಡಿಸಿ,

ಹೃದಯದಿ ಹೂವ ಭರವಸೆಯ ತುಂಬಿಸಿ.

 

ಮುರಳಿ ಹಾಡುತಿದೆ,

ಮರಳಿ ಬಾರೆನುತಿದೆ.

ಸ್ನೇಹದ ತಂತಿಯಲ್ಲಿ ಸೌರಭವ ಸೂಸಿ,

ಜೀವನದಿ ಸಂಗೀತ ಸುಧೆಯ ಪೂಸಿ.

Thursday, April 23, 2026

ಅಸ್ತಿತ್ವದ ಪ್ರಶ್ನೆ

ದೀಪವು ಯಾರದು?,

ಗಾಳಿಯು ಯಾರದು?,

ಎರಡನ್ನೂ ಆಡಿಸುವವರು ಯಾರು?,

ಎಲ್ಲವ ನೋಡುವವರು ನಾವು ಯಾರು?.

 

ದೀಪವು ಹೊತ್ತಿಸ ಬೇಕು!,

ಗಾಳಿಯೂ ಬೇಕು,

ಸ್ಥಿರವೋ?, ಅನಿಶ್ಚಿತವೋ ಬಲ್ಲವರಾರು?,

ಕಣ್ಣಿದ್ದು ಕುರುಡರಾಗಿಹೆವು ನಾವು ಏಕೆ?.

 

ಒಂದು ಕ್ಷಣ ಸಂತೋಷ,

ಮತ್ತೊಂದು ಕ್ಷಣ ದುಗುಡ,

ಏರುಪೇರಿನ ಗಾಯನವ ಹಾಡುವವನಾರು?,

ತರಂಗಗಳ ಆಲಿಸುತಾ ಕಿವುಡರಾದೆವು ನಾವು!.

 

ಎಲ್ಲೊಂದ ಬಂದೆವು ನಾವು?,

ಎಲ್ಲಿಗೆ ಹೊರೆಟೆವು ನಾವು?,

ಏನನ್ನು ಹುಡುಕುತ್ತಿರುವೆವು ನಾವು,

ವ್ಯರ್ಥವೋ?, ಸಾರ್ಥಕತೆಯೋ ಹೇಳುವವರಾರು?.


ಬೆಳಕಿನ ಪಯಣ

ಏಳು ತಮ್ಮ, ಏಳು ಅಣ್ಣ, ನೋಡು ಮೂಡಣದ ಚಿನ್ನದ ಬಣ್ಣ,

ಕತ್ತಲು ಜಾರಿ, ಬೆಳಕ ಪರದೆ ಏರಿ, ಬಾನೆಲ್ಲಾ ರಂಗಿನ ಕೆಂಪು ಬಣ್ಣ.

ಹಳ್ಳಿಗಳ ಚಿಲಿಪಿಲಿ, ತಂಗಾಳಿಯ ಇಂಚರದ ಜೀವಸುಧೆಯ ಕೇಳು,

ಗುಡಿ ಗೋಪುರ, ನೇಸರನ ಮುಂಜಾನೆಯ ಸುಪ್ರಭಾತ ಹಾಡು ಹೇಳು.

 

ನಿನ್ನೆಯ ನೋವು ಜಾರಿ, ಇಂದಿನ ನವ ಭರವಸೆಗಳು ಮೂಡಿದೆ,

ಕಣ್ಣೀರ ಒರೆಸು, ಸಣ್ಣ ಹೆಜ್ಜೆಗಳನಿಡು ನವೋದಯವ ಸ್ವಾಗತಿಸು.

ಹುಡುಗರೇ ಏಳಿ, ಹುಡುಗಿಯರೇ ಏಳಿ, ಬಾಳ ಕನಸ ರಥವನೇರುವ,

ಇಂದಿನ ಜೀವ ಬೆಳಕ ಹೀರಿ, ಸೋಜಿಗದ ಭವಿತವ್ಯದ ಬದುಕ ಕಟ್ಟುವ.

 

ಭಯದ ಮುಂದೆ ಗೆಲುವಿದೆ, ಕಡಿದ ಮರದ ತುದಿಯಲ್ಲಿ ಚಿಗುರಿದೆ,

ನಭವೇ ನಮಗೆ ಮಿತಿ, ಬದುಕ ಸಂಕೋಲೆಗಳ ಕಳಚಿ ನಭಕ್ಕೆ ಹಾರುವ.

ಚಿಕ್ಕ ಹೆಜ್ಜೆಗಳನಿಡುತ ನಾಳೆಯ  ಭರವಸೆಗಳ ಕನಸ ಕಟ್ಟುವ,

ಅನುಭವಿಸಿ, ಸಂಭ್ರಮಿಸಿ, ನೋವು ನಲಿವುಗಳ ಬದುಕಲಿ ಗೆಲುವಾಗುವ. 

 


Saturday, April 18, 2026

ನನ್ನ ಪಯಣ

ನಾನು ಉಸಿರಾಡುತ್ತಿದ್ದೇನೆ,

ನನ್ನ ಜೀವನ ಪ್ರೀತಿಯಿಂದ.

ನಾನು ಮೌನವಾಗಿದ್ದೇನೆ,

ನನ್ನ ಸಮಯಕ್ಕೆ ಕಾಯುತ್ತಾ.

ನಾನು ಸಂತೋಷವಾಗಿದ್ದೇನೆ,

ನನ್ನತನವ ಉಳಿಸಿಕೊಳ್ಳುತ್ತಾ.

ನಾನು ಹೋರಾಡುತ್ತಿದ್ದೇನೆ,

ನನ್ನ ಜೀವನದ ಅರ್ಥ ಹುಡುಕುತ್ತಾ.

ನಾನು ಪ್ರಾರ್ಥಿಸುತ್ತಿದ್ದೇನೆ,

ನನ್ನ ಬದುಕ ಹಸನಾಗಿಸಲು.

ನಾನು ಹಾರಾಡುತ್ತಿದ್ದೇನೆ,

ನನ್ನ ದಿನವ ಸಂಭ್ರಮಿಸಿ ಹಾಡಲು.

ನಾನು ಕಣ್ಣೀರಿಡುತ್ತಿದ್ದೇನೆ,

ನನ್ನ ದೇವನ ಋಣವ ತೀರಿಸಲು.

Friday, April 17, 2026

ಮನೋರಥ- ಪುಸ್ತಕ

ಮನೋರಥದ ಕಡಲು ಪುಸ್ತಕ,

ಶೂನ್ಯದಿಂದ ಅನಂತದೆಡೆಗೆ ಪಯಣ.

ಉಲ್ಲಾಸದ ಲಹರಿ ಕವನ,

ಕಲ್ಪನೆಯ ಸಾಗರದಿ ತೇಲಿಸುವ ಪ್ರೇರಣ,

ಬಡವ,ಬಲ್ಲಿದನಿಗೂ ಸಾಕಾರ,

ಶುಲ್ಕ,ಕರವಿಲ್ಲದಿದಕೆ ಸರಳ,

ಆತ್ಮೋನ್ನತಿಗೆ ಸುಲಭ ಸುಲಲಿತ ಹೂರಣ.

Saturday, April 11, 2026

ಅಂತರಂಗದ ಹೋರಾಟ

ಏಕೆ ಹೀಗೆ?,ಏಕೆ ಹೀಗೆ?,

ನಾನು ಬದಲಾಗಲಿಲ್ಲ.

ನನ್ನಿಂದ ಹಲವರಿಗೆ ನೋವು, ಕಷ್ಟ,

ನನ್ನಿಂದ ಅವರಿಗೆ ಅವಮಾನ.

 

ಆದರೆ ನಾನೋ!,.....


ಏನೂ ಆಗಿಲ್ಲವೆಂದು ನಿರ್ಲಿಪ್ತ,

ಅವರ ಬಗ್ಗೆ ಕಾಳಜಿ ನನಗಿಲ್ಲವೇ?,

ಅವರ ಪ್ರೀತಿ,ವಿಶ್ವಾಸ ನನಗೇನೆಂದೇ?,

ಅವರಿಗೆ ನಾ ಮಾಡುತ್ತಿರುವ ಅವಮಾನವೇ?

 

ಮನದೊಳು ಎಲ್ಲಾ ದುಗುಡಗಳು ಅಡಗಿವೆ,

ಭಯ, ಆತಂಕ, ಕತ್ತಲೆ, ಇನ್ನೇನೋ....

ಪ್ರತಿದಿನ ಹೋರಾಟ ಅವುಗಳ ಮೇಲೆ,

ಒಂದು ದಿನ ಗೆಲ್ಲುತ್ತೇನೆ, ಮತ್ತೊಮ್ಮೆ ಸೋಲುತ್ತೇನೆ.

 

ಯಾರ ಕೈ ಮೇಲಾಗುವುದೋ ನಾ ತಿಳಿಯೆ,

ಒಂದಂತೂ ಸತ್ಯ, ನಾನು ಬದಲಾಗಿಲ್ಲ.

ನನ್ನ ಹುಡುಕಾಟದಲ್ಲಿ ದಾರಿ ಕಾಣದಾಗಿದೆ,

ನನ್ನಿಂದಲೇ ನನ್ನವರಿಗೆ ಸುಖವಿಲ್ಲ, ನೆಮ್ಮದಿಯಿಲ್ಲ.

 

ಮುಂದೆ ಏನು? ನನಗೆ ತಿಳಿದಿಲ್ಲ.

Friday, April 10, 2026

ಹೇಳು ನೀನು ಯಾರು?

ಬೆಳಗಿನ ನಿಶಬ್ದ, ಮನದಲ್ಲಿ ಬಿರುಗಾಳಿ,

ಕಣ್ಣ ಮುಂದೆ ಅವ್ಯಕ್ತ ಪ್ರಶ್ನೆ.

ಹಣ, ಆಸ್ತಿ, ಹೆಸರು ಏನು ಬೇಕು?,

ನಿನ್ನ ರೂಪವೇನು?, ಹೇಳು ನೀನು ಯಾರು?

 

ಅಸ್ಪಷ್ಟ ದಾರಿ ಬರಿ ಅಲೆದಾಟ,

ಗುರಿ ಇಲ್ಲದ ಬದುಕು ಅಲ್ಲೋಲ ಕಲ್ಲೋಲ.

ಇಟ್ಟ ಹೆಜ್ಜೆಗಳಲ್ಲಿ ದೃಢತೆ ಇಲ್ಲ,

ಮನದಲ್ಲಿ ಅಂಧಕಾರ ಆವರಿಸಿದೆ.

 

ಬರುವ ಕಷ್ಟಗಳಿಗೆ ಕಲ್ಲಾಗು,

ಭಯ, ಬೆದರಿಕೆಗೆ ಸೊಪ್ಪಾಕದಿರು.

ತಿಳಿದುಕೋ ನೀನ್ಯಾರು?, ನೀನ್ಯಾರು?,

ಜಯಿಸಲು ಇಲ್ಲಿರುವೆ ಅರಿವಿರಲಿ.

 

ನಿನ್ನ ನೀ ಅರಿತುಕೋ, ಬೆರೆತು ಕೋ!,

ಅಭ್ಯಾಸ, ಚಿಂತನೆಯ ಬೆಳಕ ಹಚ್ಚು.

ಅಂತರಾತ್ಮವ ಸ್ತುತಿಸಿ, ಎಚ್ಚರಿಸಿಕೋ!,

ಲೋಕಕೆ ನಿನ್ನ ಅವಶ್ಯಕತೆ ಇದೆ ತಿಳಿದುಕೋ!.

Saturday, April 4, 2026

ಅಹಂಕಾರದ ಯುದ್ಧ

ಏಕೆ ಆತ್ಮಗಳೇ ಬುಸುಗುಡುತ್ತಿರುವಿರಿ?,

ದ್ವೇಷದ ಆವೇಗದಲ್ಲಿ ಯುದ್ಧವ ಬೆನ್ನಟ್ಟಿರುವಿರಿ.

ನಂಬಿದ ಜನರ ಭಾವೋದ್ವೇಗ ಒಳ್ಳೆಯದೇ?

ಸಾವು ಜೀವನೋತ್ಸಾಹವಲ್ಲ ತಿಳಿಯಿರಿ.


ನಿಮ್ಮ ದ್ವೇಷಕ್ಕೆ ಬಲಿಯಾಗುತ್ತಿವೆ ಜೀವಗಳು,

ಆದರೂ ಉನ್ಮಾದ ಕಡಿಮೆಯಾಗಿಲ್ಲ.

ಸೇರಿಗೆ ಸವ್ವಾಸೇರು ಎಂಬಂತೆ ಉತ್ತರ,

ಬಾಂಬಿಗೆ ಬಾಂಬು ಉತ್ತರ ಶಿಲಾಯುಗಕ್ಕೆ ಪಯಣ.


ವಿನಾಶವ ಆಹ್ವಾನಿಸುತ್ತಿರುವಿರಿ,

ನಾಳಿನ ಪೀಳಿಗೆಗೆ ಏನ ನೀಡುವಿರಿ?.

ದ್ವೇಷವನ್ನೇ ಮುಂದುವರಿಸುವರೇ?

ಇಲ್ಲ, ಶಾಂತಿಯ ಅರಸುವರೇ?.


ಹಳೆಯ ನೆನೆಪಿನ ತೇಪೆ

ಒಂದು ಮೂಲೆಯಲ್ಲಿ ಹಳೆಯ ಕಪಾಟು, 

ಅದರಲ್ಲಿ ಹಳೆಯ ಕಾಗದಗಳ ಕಂತೆ. 

ಊಹೆಗೆ ನಿಲುಕದ ನೋವಿನ ಬೊಂತೆ,

ಮರೆತ ಹೃದಯದ ಕಂಬನಿಯ ಮೊರೆತ.


ತೆರೆದ ಕಿಟಕಿ, ಮುರಿದ ಹೆಂಚು,

ಕಿಲುಬು ಹಿಡಿದ ಬಾಗಿಲ ಬೀಗ.

ಎಂದೋ ಮರೆತ ದಾರಿಯ ಕದನ,

ದೂರಕ್ಕೆ ಓಡಿದ ಹೃದಯದ ಕರೆಗೆ.


ಮಳೆ ಗಾಳಿ ಕಾಲನ ಹೊಡೆತ,

ಸುಳಿಗೆ ಸಿಕ್ಕು ಸೂತ್ರವಿಲ್ಲದಂತೆ.

ಬದುಕ ಪಯಣ ಮೂರಾಬಟ್ಟೆ,

ಬದುಕ ಬೇಕೆಂಬ ಹಪಾಹಪಿತನ.


ಅಳಬೇಕೊ?, ನಗಬೇಕೋ?,

ಎಲ್ಲವೂ ಭ್ರಮೆಯಂತೆ ಕಂಡಿದೆ.

ಇದ್ದು ಸಾಧಿಸಿದ್ದು ಏನು?

ಜೀವನ ಪ್ರೀತಿಯೇ? ಪ್ರಶ್ನೆ ಉಳಿದಿದೆ. 

ಜನನ–ಮರಣ ತೊಳಲಾಟ

ಅವರ ಭೇಟಿ ಅಪರಿಚಿತರಂತೆ, 

ವೇಗವಾಗಿ ಚಲಿಸುತ್ತಿರುವ ಜಗತ್ತಿನಲ್ಲಿ.

ಎರಡು ಅಲೆದಾಡುವ ಆತ್ಮಗಳು,

ಎಂದಿಗೂ ಭೇಟಿಯಾಗುವ  ಉದ್ದೇಶವಿಲ್ಲ.


ಅಗಾಧ ಕಂದಕ ನಡುವಿನ ರಸ್ತೆಯಲ್ಲಿ, 

ಎದುರಿಂದ ಅವನ ವಾಹನ ಗುದ್ದಿತು.

ಪರಿಸರ ಎಂದಿಗೂ ಸೌಮ್ಯವಿರಲಿಲ್ಲ, 

ಹಾರಿದ ರಭಸಕ್ಕೆ ಪ್ರಾಣ ಹಾಂ. 


ಬಿಡುಗಡೆಗೆ ಒಂದು ಕಾರಣ,

ಅಲೆದಾಟ ಮತ್ತೆ ಹೊಸ ಪಾತ್ರ.

ಮತ್ತದೇ ಹೊಸ ಆರಂಭ,

ಜನನ, ಮರಣ ತೊಳಲಾಟ.  

ಸಾಧನೆಯ ಹೆಜ್ಜೆಗಳು

ದೂರದ ಗುರಿಯ ಮನದಲ್ಲಿ ಬಿತ್ತು,

ದಾರಿ ತೆರೆವುದು ಹೆಜ್ಜೆಗಳು ಹತ್ತು.

ಏಳು ಬೀಳುಗಳು ಸಾಮಾನ್ಯ ತಿಳಿ,

ಅಡೆತಡೆಗಳು ಎದುರಿಸುತಲಿ ನೀ ಬೆಳಿ.

 

ನಿನ್ನಲ್ಲಿ ನಿನಗೆ ನಂಬಿಕೆ ಇರಲಿ,

ಮನದಲ್ಲಿ ಬಲದ ದೀಪ ಹೆಚ್ಚು.

ಸಣ್ಣ ಹೆಜ್ಜೆಗಳ ಮೇಲಿರಲಿ ಗಮನ,

ನೋವೋ!, ನಲಿವೋ! ನಿಲ್ಲದಿರಲಿ.

 

ಸಹನೆ, ಶ್ರಮ, ಕನಸ ಸೇರಿಸು,

ಅವಸರವೇತಕೆ ತಾಳ್ಮೆ ಇರಲಿ.

ಸಂಭ್ರಮಿಸು ಹೆಜ್ಜೆಗಳ ನೋವ,

ಸಾಧಿಸುವ ಹಂಬಲ ಮನದಿ ಭಾವ.



Tuesday, March 31, 2026

ಪ್ರಾರ್ಥನೆ


ನನ್ನ ದೇವನೇ, ಕೋಪವೇತಕೆ?

ಕರೆದರೂ ಕೇಳಿಸದೇ?

ನೋವುಂಡ ಜೀವಕ್ಕೆ ಆಸರೆಯಾಗಲಾರೆಯಾ!

ಕೋಪದಿಂದ ನಾನು ನಿನ್ನ ನಿಂದಿಸುವೆನು,

ಅದಕ್ಕೆ ಕೋಪವೇ!,

ದೂರುವೆನು, ಅದಕ್ಕೆ ಸಿಟ್ಟೇ ನನ್ನ ದೇವರೇ!

ನನಗಾರು ಎನ್ನುವಾಗ,

ನೀನಿರುವೆ ಎಂದು ನಂಬಿಹೆನು,

ನಿನಗಾಗಿ ಪರಿತಪಿಸುವೆ,

ನಿನ್ನನ್ನೇ ಪ್ರೀತಿಸುವೆ,

ನಿನ್ನನ್ನೇ ಪ್ರಾರ್ಥಿಸುವೆ,

ನಿನ್ನಲ್ಲಿ ಒಂದಾಗ ಬಯಸಿಹೆ ತಂದೇ.

Wednesday, March 18, 2026

ಕಾಲ, ಶಕ್ತಿ, ಹಣ

ಕಾಲ ನಿಲ್ಲದು ನದಿಯಂತೆ ಹರಿವುದು,

ಕ್ಷಣಗಳಂತೆ ಮಾಯ ಮರಳಿ ಬಾರದು.

ವ್ಯರ್ಥ ಮಾಡದೆ, ಸಮಯ ಕಾಪಾಡಿಕೋ,

ಕಾಲನ ಜೊತೆ ಹೆಜ್ಜೆಹಾಕುವುದ ಕಲಿತುಕೋ.

 

ನಿನ್ನೊಳಗಿನ ಶಕ್ತಿ ಅಖಂಡ ಸೂರ್ಯನಂತೆ,

ತನು ಮನಗಳ ಆರೋಗ್ಯದಿ ಬೆಳೆಸುವುದು.

ತನು ಮನವ ಸಂತೋಷದಿ ಹುರಿಗೊಳಿಸು,

ವಿಶ್ರಾಂತಿಯ ಆಶ್ರಯಿಸಿ ಬಲವ ಇಮ್ಮಡಿಸು.

 

ಹಣವು ನಮ್ಮ ಸಾಧನೆಯ ಸಲಕರಣೆ,

ವೆಚ್ಚ ಮಾಡದೆ ಸಮಯೋಚಿತವಾಗಿ ಬಳಸು.

ಜಾಣ್ಮೆಯಲಿ ವೆಚ್ಚಮಾಡು, ಜತನದಿ ಹೂಡು,

ಚಲನಶೀಲತೆಯಲ್ಲಿ ಅಭಿವೃದ್ಧಿ ಮಾಣು.

 

ಮೂರೂ ಸಂಪತ್ತು, ಸರಳ ಅಮೂಲ್ಯ,

ನಮ್ಮ ಬೆಳವಣಿಗೆಯ ಬೀಜಮಂತ್ರಗಳು.

ಮನ ಹೃದಯದಿ ಬೆಳವಣಿಗೆಗೆ ಬಳಸು,

ಗೆಲುವಿನ ಅನಂತ ಹೆದ್ದಾರಿಯ ಕಾಣು.

Saturday, March 14, 2026

ಸಣ್ಣ ಹೆಜ್ಜೆಗಳ ಶಕ್ತಿ

ಪ್ರತಿ ಮುಂಜಾನೆ ಹೊಸತನದ ಕರೆ,

ಹೊಸ ದಿನಕ್ಕೆ ಹೊಸ ಮುನ್ನುಡಿ ಬರೆ.

ನಿಲ್ಲ ಬೇಡ, ಬೆವರ ಹನಿ ಹರಿಸಿ ಚಲಿಸು,

ಸಣ್ಣ ಹೆಜ್ಜೆಗಳಿಡುತ್ತಾ ಶ್ರೇಷ್ಠತೆಯ ಸಾಧಿಸು.  

 

ಬೆವರ ಹರಿಸು, ಮನವು ಅರಳುವುದು,

ಹಾರ ಬೇಡ, ಸಣ್ಣ ಹೆಜ್ಜೆಗಳನಿಡು.

ವ್ಯಾಯಾಮ, ನಡಿಗೆ, ಉಸಿರಾಟ,

ಆರೋಗ್ಯವ ಸುಧಾರಿಸುವುದು.

 

ನೆಪಗಳು ಓಡುವುದು, ಚೈತನ್ಯ ಬೆಳಗುವುದು,

ಸಮಯ ನಿನಗೆ ದಾರಿ ಮಾಡಿಕೊಡುವುದು.

ಕಷ್ಟಗಳಲ್ಲೇ ಆನಂದ ಅಡಗಿದೆ,

ಮನದೊಳಗಿನ ಕಿಡಿ ಬೆಳಕ ಚೆಲ್ಲುವುದು.

 

ಬೆವರು, ಸಣ್ಣ ಹೆಜ್ಜೆಗಳು ತೆರೆವುದು ಹೆದ್ದಾರಿ,

ಪ್ರತಿಕ್ಷಣ, ಪ್ರತಿದಿನ ಮನ ಅರಳುವುದು.

ಸಂತಸ ಬಾಳ್ಗೆ ನಿರಂತರ ಹರಿವುದು,

ಸಾಧನೆಯ ಹಾದಿಯಲ್ಲಿ ಬೆಳದಿಂಗಳು ಜಾರುವುದು.

ಸತ್ಯದ ಕನ್ನಡಿ

ಪ್ರತಿದಿನ ಕನ್ನಡಿಯ ಮುಂದೆ ನಿಲ್ಲು,

ಮುಖವಾಡ ಕಳಚುವುದು ದಿಟ.

ನಿನ್ನದಲ್ಲದ ಭಾವಗಳು ನರ್ತಿಸುವುದು,

ಸತ್ಯದ ಅನಾವರಣ ಕಣ್ಣಮುಂದಾಗುವುದು.


'ಅಹಂ' ನ ಪೊರೆ ಕಳಚುವುದು,

ನಿಜದ ಮೌಲ್ಯವ ನೀ ಅರಿತು ಕೋ.

ನಕ್ಕುಬಿಡು ನಿನ್ನ ಮೂರ್ಖತನಕೆ,

ಬದಲಾಗು, ನಡೆ ಸತ್ಯದ ಹಾದಿಯಲ್ಲಿ.


ಸೋಲು ಮಳೆಯಂತೆ,

ಮನದ ನೋವ ತೊಳೆವುದು.

ಕಣ್ಣ ಪೊರೆ ಕಳಚಿ,

ಸತ್ಯ ದರ್ಶನ ಮಾಡಿಸುವುದು.


ಧೈರ್ಯದಿಂದ ನಡೆ,

ಪ್ರಾಮಾಣಿಕತೆಯಿಂದ ನಡೆ.

ಮನದ ಕನ್ನಡಿಯಲ್ಲಿ ನೋಡು,

ನಿನ್ನ ನೀ ಅರಿವ ಹಿರಿಮೆಯ ಕಾಣು.

Friday, March 13, 2026

ಪ್ರತಿದಿನದ ಬೆಳಕು

ನಿನ್ನೊಳಗೆ ಇದೆ ಅಖಂಡ ಬೆಳಕು,

ಅರಿತು ಕಂದೀಲ ಹಚ್ಚಬೇಕು.

ದೀಪವಿದೆ, ಬತ್ತಿಯಿದೆ ಮನಸ್ಸು ಬೇಕು,

ಜೀವನದ ಪ್ರತಿಹೆಜ್ಜೆಯ ಸೊಬಗ ಸವಿಯಬೇಕು.

 

ಭಯವ ಕಂಡು ಒಮ್ಮೆ ನಕ್ಕುಬಿಡು,

ಸೋಲು ಬಂದರೆ ನಮಿಸಿ ಪಾಠಕಲಿ.

ಪ್ರತಿದಿನದ ಚಿಕ್ಕ ಹೆಜ್ಜೆಗಳ ಇಡುತಿರು,

ಉಜ್ವಲ ಭವಿತವ್ಯದ ಗುರಿಯ ಸಾಧಿಸು.

 

ಸಂತೋಷ ನಾವಿಡುವ ಹೆಜ್ಜೆಗಳ ಸವಿ,

ಪ್ರತಿದಿನದ ಬೆಳವಣಿಗೆಯಲ್ಲಿದೆ ಅದರ ಮೂಲ.

ನಿನ್ನ ಬೆಳವಣಿಗೆಯ ಹೆಜ್ಜೆಗಳು ಆಗುವುದು,

ಪ್ರೇರಣೆ, ಉದಾಹರಣೆ ನಿನ್ನ ನೋಡುವವರಿಗೆ.

 

ಅರಿತು ಕೋ ನಿನ್ನ ಶಕ್ತಿಯ,

ಜಗವು ನಿನ್ನ ಕೈಯಲ್ಲಿ.

ಜೀವನದ ಜಯದ ಮಂತ್ರ,

ಪ್ರತಿದಿನದ ಹೆಜ್ಜೆಗಳಲ್ಲಿ.

Sunday, March 8, 2026

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ, 

ಪ್ರಶಾಂತ ಧ್ವನಿ.

ಕನಸೇ ಕಂಗಳು,

ಅಭಯವೇ ರಕ್ಷಣೆ.


ಬಿರುಗಾಳಿಯೂ ಅವಳೇ,

ಬೆಂಕಿಯ ಕೆನ್ನಾಲಿಗೆಯೂ ಅವಳೇ.

ಶಾಂತ ಸಮುದ್ರವೂ ಅವಳೇ,

ಕರುಣೆಯ ಕಡಲೂ ಅವಳೇ.


ನಮ್ಮೊಳಗಿನ ಶಕ್ತಿ ಆಕೆ,

ನಮ್ಮ ಕಂಗಳ ಜ್ಯೋತಿ ಆಕೆ.

ನಮ್ಮ ಕಾರಣೀಭೂತಳು ಆಕೆ,

ನಮ್ಮ ಪ್ರಪಂಚವೇ ಆಕೆ.


ಅವಳ ರಕ್ಷಣೆ, ನಮ್ಮ ಕರ್ತವ್ಯ,

ಅವಳ ಗೌರವ, ನಮ್ಮ ಉಸಿರು.

ಅವಳ ನಗು, ನಮ್ಮ ಸಂತೋಷ,

ಅವಳ ನೋವು, ನಮ್ಮ ನೋವು. 

ಹೊಸ ಪಯಣ

ವರುಷಗಳ ಪಯಣ ವ್ಯರ್ಥವಾಗಿದೆ,

ಗುರಿ ಇಲ್ಲ, ಗುರುವೂ ಇಲ್ಲ.

ಬಾಳಿನ ಪಯಣದ ಉದ್ದೇಶವೇನು?,

ಗಾಣದ ಎತ್ತಿನಂತೆ ನಡೆಯುತ್ತಿದೆ ನಿಲ್ಲದೆ.


 ಗುರಿ ಇಲ್ಲದೆ ಮನ ಭ್ರಮೆಯಲ್ಲಿದೆ,

ನೊಣದಂತೆ ಮನ ಪರಿಭ್ರಮಿಸಿದೆ.

ಗುರು ಇಲ್ಲದೆ ಮನ ಸೊರಗಿದೆ,

ಜೀವನ ಕುರುಡಾಗಿದೆ ದಾರಿ ಕಾಣದೆ.

 

ತಿಮಿರಾಂಧಕಾರ ಕಳೆಯಲು ಬೇಕು,

ಜ್ಞಾನದ ಸಣ್ಣ ದೀವಿಗೆ ಹಚ್ಚಬೇಕು.

ಜೀವನದ ಗುರಿಯ ಸಾಕ್ಷಾತ್ಕಾರವಾಯಿತು,

ಬದಲಾಯಿತು ದಿಕ್ಕು ಹೊಸ ಪಯಣಕ್ಕೆ. 

Friday, March 6, 2026

ಸಹನೆ – ಜಯದ ದಾರಿ

ಬಿತ್ತಿದ ಬೀಜ ಮೊಳಕೆಯೊಡೆಯಲು ಸಮಯ ಬೇಕು,
ಅವಸರದಲ್ಲಿ ಗೆಲುವು ಸಿಗುವುದಿಲ್ಲ ಗೆಳೆಯಾ.
ಎಲ್ಲವೂ ಸಮಯದ ನಿಯಮ,
ಸಹನೆ ಇಲ್ಲದೆ ಫಲವಿಲ್ಲ.


ಸಣ್ಣ ಹೆಜ್ಜೆಗಳ ನಿರಂತರ ಪ್ರಯತ್ನ,

ಸಹನೆಯ ಕೈ ಹಿಡಿದು ನಡೆಯಬೇಕು.

ಹಾದಿಯಲಿ ಸಣ್ಣ ಜಯಗಳನ್ನು ಸಂಭ್ರಮಿಸಬೇಕು,
ನಂಬಿಕೆಯಿಂದ ಮುಂದುವರಿಯಬೇಕು.

 

ತಾಳ್ಮೆಯೇ ತಪಸ್ಸು,
ಕಾಲವೇ ಜಯ ತಂದುಕೊಡುವುದು.
ನಿರಂತರ ಪ್ರಯತ್ನದ ಹಾದಿಯಲ್ಲಿ,
ಬಾಳೆಲ್ಲಾ ಸಂಭ್ರಮ ನಿನ್ನದಾಗುವುದು.


Tuesday, March 3, 2026

ತಾಳ್ಮೆಯ ಪಯಣ

ಮನವು ಬಯಸಿದೆ,

ಶಾಂತ ಕ್ಷಣಗಳ,


ತಂಗಾಳಿಯ ಸುಂದರ ಕ್ಷಣಗಳ.

ಭಯ,ಆತಂಕ, ಅವಸರಗಳಿಂದ ಬಲು ದೂರ,

ಜನ ವಿಚಿತ್ರವಾಗಿ ನೋಡುವರು ನನ್ನ.

 

ಜಗತ್ತು ಆತುರದಲ್ಲಿದೆ,

ಎಲ್ಲವೂ ಕ್ಷಣಗಳಲ್ಲಿ ಆಗಬೇಕೆನ್ನುವರು,

ಸೃಷ್ಟಿಯ ನಿಯಮಗಳನ್ನೂ ಬದಲಿಸಬೇಕೆನ್ನುವರು,

ರಾಕೆಟ್ ಯುಗದಲ್ಲಿ ರಾಕೆಟ್ ಮೇಲೇ ಪಯಣಿಸುವರು,

ನಾನು ತಣ್ಣಗಿದ್ದೇನೆ, ತಾಳ್ಮೆಯನ್ನೇ ಆಯ್ದುಕೊಂಡೆನು. 


Monday, March 2, 2026

ಮುಂದಿನ ಹಾದಿ

ನೂರು ಆಗಿ ಹೋಗಿದೆ,

ಏನು ಕಲಿತೆ ಅದರಿಂದ?.

ನೂರು ಆಗುವುದಿದೆ ಮುಂದೆ,

ಏನು ಮಾಡುವೆ ಕಲಿತದ್ದರಿಂದ?

ಬೇಡದ ವಿಷಯಗಳ ಹೊರೆ ಹೊರಬೇಡ,

ಬಾರವಿರೆ ಕಷ್ಟ ಮುಂದೆ ಸಾಗಲು.

ಹಗುರಾಗಿಸಿಕೊ!,

ಬೇಡದ್ದನ್ನು ತೊಳೆದುಕೋ!,

ಬೇಕು, ಬೇಡಗಳ ವಿವೇಚಿಸು,

ಮನವ ತಿಳಿಯಾಗಿಸು,

ಶಾಂತಿಯ ಕಡಲಾಗಿಸು.


Saturday, February 28, 2026

ನನ್ನ ಊರು! ನನ್ನ ಮನೆ!

 ನನ್ನ ಊರು,ನನ್ನ ಮನೆ,

ಮೈದಾನದಲ್ಲಿ ನಾ ಆಡುತ್ತಿದ್ದೆ,

ಇಲ್ಲಿ ಬಿದ್ದು ಗಾಯ ಮಾಡಿಕೊಂಡೆ,

ಇಲ್ಲಿ ಗೆಳೆಯರೊಡನೆ ಸಂಭ್ರಮಿಸಿದ್ದೆ,

ಇಲ್ಲಿ ಏಕಾಂಗಿಯಾಗಿ ಅತ್ತಿದ್ದೆ,

ಮನದ ಮೂಲೆಯಲ್ಲಿ ನೆನಪುಗಳ ಬಿತ್ತಿದ್ದೆ,

ನನ್ನ ಊರು, ನನ್ನ ಮನೆ,

ಸ್ವರ್ಗಕ್ಕೆ ಮೂರೇ ಗೇಣು.

ಅನಂತ ಗಾನ

ಆತ್ಮದ ಹೃದಯ ' ಭರವಸೆ ', ಕಾಣದ ರೆಕ್ಕೆಗಳು ಅನಂತದೆಡೆಗೆ , ಕಣ್ಣು ತೆರೆದೊಡೆ ನಭವೇ ' ಅನಂತ '.   ' ಭರವಸೆ ' ಅನಂತ ಗೀತ...