ನಿದ್ದೆಯ ಅಣ್ಣ

ಸಾವು ನಿದ್ದೆಯ ಅಣ್ಣ
ನಿದ್ದೆಯೇ ನೀನೆಷ್ಟು ಕರುಣಾಳು
ದಿನದ ನೋವೆಲ್ಲಾ ನಿನ್ನ ಕಂಡರೆ ಓಡುವುದು
ನಿನ್ನ ಅಣ್ಣನು ಬಲು ಕರುಣಾಳೆಂದು ಕೇಳಿದ್ದೇನೆ
ಅವನು ಬರುವುದೇ ಅಪರೂಪವೆಂದು ತಿಳಿದಿದ್ದೇನೆ
ನೀನಾದರೂ ದಿನವೂ ಬರುವೆ ಅನೇಕ ಪರಿಹಾರಗಳೊಂದಿಗೆ
ಆದರೆ ದಿನಬೆಳಗಾದರೆ ಮತ್ತೆ ಒಕ್ಕರಿಸುವುವು ಅವೇ ಸಮಸ್ಯೆಗಳು
ಅವನೆಂದರೆ ಎಲ್ಲರಿಗೂ ಹೆದರಿಕೆ ಏಕೋ?
ಆವನಾದರೂ ಬಾಳಲಿ ಬಂದರೆ ಎಲ್ಲವೂ ಶಾಶ್ವತವಾಗಿ ಮಾಯವಾಗುವುದು
ಸಮಸ್ಯೆಗಳೆಲ್ಲವೂ ಪರರ ಹೆಗಲೇರುವುದು ಖಂಡಿತ .....

ಗಾನ ಗಂಧರ್ವ

ನನ್ನೊಳು ಕನಸೊಂದು ಆವರಿಸುತ್ತಿದೆ
ಎನ್ನೆಂದು ಹೇಳಲಿ, ಅದ್ಬುತವೆನ್ನಲೇ? ಚಮತ್ಕಾರವೆನ್ನಲೇ?
ಮಾತುಗಳಂತೂ ಬಣ್ಣಿಸಲಾರೆ ಈ ಅನುಭವವ
ಮನವು ತೇಲುತಿದೆ
ಹೃದಯದ ಮಾತು ಕೇಳದೆ
ಆ ಗಾನ ತೇಲಿಬಂದ ಕಡೆಗೆ ಹಾರುತಿದೆ
ಎಂದು ಕೇಳದ ಅನಾದಿಗಾನವದು
ಭಾವನೆಗಳ ಹೊನಲೆನ್ನಲೋ?
ಮಧುರ ಭಾವಗಳ ವರ್ಷವೆನ್ನಲೋ?
ಹೀಗೆ ತೇಲಲಿ ಮನ ಅನಂತಾದೆಡೆಗೆ ಸಾಗಲಿ
ಸ್ವರ್ಗವೆಂದರೆ ಇದೆ
ಅನಂತಸುಖವೆಂದರೆ ಇದೆ
ಸಂಗೀತಸುಧೆಯಲ್ಲಿ ತೇಲಿಹೋಯಿತು
ಓ ವೈಣಿಕನೇ ನಿನಗೆ ನಮನ
ನೀನು ಗಾನ ಗಂಧರ್ವನೇ ಸರಿ
ನಿನಗೆ ಸರಿ ಸಮನಾರು ಹೇಳು

ಒಳಗೊಂದು ಕದನ

ಒಳಗೊಂದು ಕದನ ನಡೆಯುತಿದೆ
ಸೋಲು ಗೆಲುವಿನೊಡನೆ ಹಗ್ಗ ಜಗ್ಗಾಟ
ಕಾಣದ ದಾರಿ ಸೆಳೆಯುತಿಹುದು
ಗುರಿಯ ದಿಕ್ಕು ಬದಲಿಸಿ ಹಿಂಸಿಸಿದೆ||

ಒಂಟಿ ಜೀವ, ಸುತ್ತಲೂ ನಿಂತಿಹರು ನೂರಾರು
ಈಟಿ ,ಭರ್ಜಿಯ ಹಿಡಿದಿಹರು
ಕಣ್ಣು ಮಂಜಾಗಿದೆ,
ತಿವಿದ ನೋವು ಸಹಿಸದಾಗಿದೆ||

ಕತ್ತಲು ನನ್ನನ್ನೇ ನುಂಗುವಂತೆ ಭಾಸವಾಗಿದೆ
ನನ್ನೊಳ ಶಕ್ತಿಯ ಹೀರುವಂತೆ ತೋರುತಿದೆ
ಧೈತ್ಯರೂ ,ವೀರಾಧಿವೀರರೂ ,ಸಾವಿನ ಸರಧಾರರು
ಮರಣವನ್ನೇ ಕೈಯಲ್ಲಿ ಹಿಡಿದವರು||

ಶಕ್ತಿಯಾಯಿತು ಶೂನ್ಯ
ಧರೆಗುರುಳುತಿದೆ ದೇಹ
ನೆತ್ತರು ಹರಿಯುತಿದೆ ಭುವಿಯ ತಂಪಾಗಿಸಲು
ಶತ್ರುಗಳ ಸಂತೈಸುತಿಹುದು ಧರೆಗುರುಳಿ।।

ಮೌನ ತಬ್ಬಿದೆ

ಮೌನ ತಬ್ಬಿದೆ ಬೆತ್ತಲಾದ ಮಾನವನು
ನೊಂದು,ಬೆಂದ ಮನಕೆ ಸ್ವಾಂತನ ಬೇಕಾಗಿದೆ||

ಎಲ್ಲಿಂದಲೋ ಬಂದವರು ನಮ್ಮನಾಳುತಿಹರು
ನಮ್ಮ ಮನೆಯಲ್ಲೇ ನಾವು ಪರಕೀಯರಾಗಿಹೆವು।।

ಬಣ್ಣದ ಮಾತುಗಳು ತೆರೆಯ ಮೇಲೆ
ಕತ್ತಿ ಮಸೆಯುತಿಹರು ತೆರೆಯ ಹಿಂದೆ।।

ನಂಬಿಕೆ, ಮೌಲ್ಯಗಳು ಮೂಲೆ ಗುಂಪಾಗಿವೆ
ಕಾಲು ನೆಕ್ಕುವರೇ ಗೆಳೆಯರು ನೈತಿಕತೆ ಹಿಂದೆ ಸರಿದಿದೆ।।

ಬೇಕಂತಲೇ ನಮ್ಮ ಕೆಳಗೆದೂಡಿದರು
ಕೈಗೆಲ್ಲಾ ಎಣ್ಣೆ, ಚಾಚಿಹರು ಮುಂದೆ
ಕೈಲಾಗದವರೆಂದು ಕುಟುಕುತಿಹರು।।

ನಮ್ಮವರು ಸ್ವಾರ್ಥಿಗಳು, ಸಮಯ ಸಾಧಕರು
ತಮ್ಮ ಜೋಳಿಗೆ ತುಂಬಿಸಿಕೊಂಡರು
ತಮ್ಮ ಕುಹಕದಿಂದ ನಮ್ಮೆದೆಯ ಇರಿದರು।।

ಮೌನ ತಬ್ಬಿದೆ ಬೆತ್ತಲಾದ ಮನವನು
ನಂಬಿಕೆಯ ಕೊಂದರು,
ನಮ್ಮಯ ಸ್ಥಿತಿಯ ಕಂಡು ನಕ್ಕರು।।

ಮೌನ ತಬ್ಬಿದೆ, ಮನವು ನರಳಿದೆ,ಬಿಕ್ಕಿದೆ
ಕಾಲಕ್ಕೆ ನಮಿಸುತ್ತಾ,ತೊಳಲುತ್ತಾ...

ಹಂಬಲ

ನಿನ್ನ ಪ್ರೀತಿಯಿಂದಲೇ
ನೋವೆಲ್ಲಾ ಮಾಯವಾಗಿದೆ;
ಈ ತನು-ಮನ ನಿನ್ನದೇ
ಶರಣಾಗತಿಯಿಂದ ಮನವು ಹಾಯಾಗಿದೆ;

ಹಸಿವಿಲ್ಲ, ದಣಿವಿಲ್ಲ
ನಿನ್ನ ನೆನೆದರೆ;
ನಿನ್ನ ಸೇರುವ ಬಯಕೆಯೊಂದೇ
ಮನದಲಿ ತೀರದ ದಾಹವಾಗಿದೆ;

ಎಷ್ಟು ಕೂಗಿದರು ಕೇಳಿಸದೇ ನಿನಗೆ
ನಿನ್ನ ಪ್ರೀತಿಯ ಬಯಸಿಹೆನು;
ಇಂದೋ! ನಾಳೆಯೋ ! ಬರುವಿಯೆಂಬ
ಹಂಬಲವೊಂದೆ ಈ ಜೀವಕೆ;

ಬಾ,ಬಾ ನಿನ್ನ ಕಾಣಬೇಕೆಂಬ ಹಂಬಲವೊಂದೆ
ಒಮ್ಮೆ ಮುಖತೋರು ಬಾ ...
ಇಷ್ಟುಕಾಲ ಸತಾಯಿಸಿದ್ದು ಸಾಕು;
ಈ ಜೀವ ಹೋಗುವ ಮುನ್ನ
ಒಮ್ಮೆ ನನ್ನ ಸಂತೈಸು,
ಈ ಸಂಘರ್ಷವ ಕೊನೆಗೊಳಿಸು ಬಾ ....

ಅಮರ ಸ್ಫೂರ್ತಿ

ಮೌನ, ಮೌನದಾಳದೊಳಗಿಂದ
ಎದ್ದೇಳು! ಎದ್ದೇಳು! ಓ ಅಮರ ಸ್ಫೂರ್ತಿಯೇ,
ಕಾಲಚಕ್ರದ ಮಾಯಾಜಾಲಕ್ಕೆ ಸಿಲುಕದೆ
ಏರೂ,ಏಕಾಂಗಿಯಾಗಿ ಅಮರತ್ವದೆಡೆಗೆ;
ಕತ್ತಲದೊಳಗಣ ಪಿಸುಮಾತುಗಳ ಕಡೆಗಣಿಸು
ನೋವು,ಆಕ್ರಂದನ, ದುಗುಡ,ಸಂಘರ್ಷಗಳ ತೊರೆ
ಮೌನದೊಳಗಡೆ ಎಲ್ಲವನ್ನು ತೂರು ।।

ಎಲ್ಲವನ್ನು ನೋಡು ಒಳಗಣ್ಣಿನಿಂದ
ಬೆರಗುಗಣ್ಣಿನಿಂದ ಮೌನವಾಗಿ ಅವಲೋಕಿಸು
ಮಾತುಗಳ ಕೇಳಿಸಿಕೋ! ನಸುನಗು ಒಳಗೊಳಗೇ
ಇಂದು ನಾಳೆಗಳ ಅಳೆದು ನೋಡು
ಉತ್ತರವಿಲ್ಲದ ಪ್ರಶ್ನೆ ಯಾವುದಿದೆ? ಆಲೋಚಿಸು
ವಿಶ್ರಾಂತಿಯ ಬಿಡು, ಏಕಾಂಗಿಯಾಗಿ ನಡೆ
ಪ್ರಕೃತಿಯೊಳಗಡಗಿದೆ ಸಮಸ್ಯೆಗಳಿಗೆ ಉತ್ತರ
ನೋಡು, ಆಳಕ್ಕಿಳಿ, ಚಿಂತಿಸು,ಆಲೋಚಿಸು
ಶಾಶ್ವತವಾಗಿರಲಿ,ಶಾಂತಿಯಿಂದಿರಲಿ, ತಾಳ್ಮೆಯೊಂದಿರಲಿ
ಏಕಾತ್ಮತಾ ಸೂತ್ರ ಒಂದೇ ಮೌನ, ಶಾಂತಿ
ಅನುಭವಿಸು ,ಪರಿಗ್ರಹಿಸು ಅಮರ ಸ್ಫೂರ್ತಿಯ ।।

ಮೌನ ಹೃದಯ

ಎತ್ತರೆತ್ತರದ ಸೌಧಗಳು ಏನನೋ ಸಾರುತಿವೆ
ಎಣಿಸಲಾರದೆ ಸೋತೆವು ನಿಲುಕದು ಈ ಮನಸಿಗೆ
ವಿಜಯದ ಸಂಕೇತವೋ?
ನಾಶಪಡಿಸಿದ ಅಹಮ್ಮೋ?
ತಿಳಿಸುವವರಾರು ಈ ಮೂಡ ಮನಸಿಗೆ !
ಸಾವಿರ ಸಾವಿರ ನೋಡುವರು ಬರಿಗಣ್ಣಿನಿಂದ
ಒಳಗಣ್ಣ ತೆರೆಯದೇ ನೋಡಣ್ಣ
ಬೆರಗುಪಡುವರು ,ಹೌಹಾರುವರು
ಮನದೊಳಗೆ ನೋವುಂಡವರು ಕೆಲವರು
ನಮ್ಮ ಸಮಾಧಿಯ ಮೇಲೆ ಸೌಧವಕಟ್ಟಿದವರ
ಬೆನ್ನುತಟ್ಟಬೇಕೇ ?
ಅದ್ಭುತವೆಂದು ಹಾಡಿ ಹೊಗಳಬೇಕೆ?
ನಮ್ಮ ಸಂಸ್ಕೃತಿಯ ಮೇಲಾದ ದೌರ್ಜನ್ಯದ ಪ್ರತೀಕಗಳು......
ಒಳಗೊಳಗೇ ಹೃದಯ ನರಳುವುದು
ಮೌನವಾಗಿ ಹಾಡುತಿರುವ ಸೌಧಗಳ ಕಂಡು
ಅಡಿಪಾಯದಲ್ಲಿ ಸಿಲುಕಿ ನರಳುತ್ತಿರುವ ನಮ್ಮತನವ ಕಂಡು।।

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...