ಕೃಪೆ ತೋರು, ಸಂತೈಸು ಬಾ

ಈ ನೋವು ಯಾರಿಗೂ ಅರ್ಥವಾಗದು
ಪ್ರೀತಿಯ ಬೇಗೆಗೆ ಪರಿಹಾರವುಂಟೇ !
ಈ ನೋವು ಕೊಟ್ಟವಗೇ ತಿಳಿಯುವುದು
ಈ ಹೃದಯದ ಬೇಗೆ ಏನೆಂದು
ಈ ವಿರಹಾಗ್ನಿ ಮನವೆಲ್ಲ ಸುಡುತಿರಲು
ನಿನ್ನಿಂದ ಮಾತ್ರ ಸಾಧ್ಯ ಕೃಷ್ಣಾ,ಕೃಷ್ಣಾ
ಕೃಪೆ ತೋರು, ಸಂತೈಸು ಬಾ ,ಬಳಿ ಬಾ ದೇವಾ.....

ಕೃಷ್ಣಾ,ಕೃಷ್ಣಾ

ನನಗೇನಾಗಿದೆ? ಮಾಯೆಯೋ? ಭ್ರಮೆಯೋ?
ಈ ನನ್ನ ಕಂಗಳಿಗೆ ಏನು ಕಾಣದಾಗಿದೆ;
ಕೃಷ್ಣಾ,ಕೃಷ್ಣಾ ನೀನಲ್ಲದೆ ನನಗಾರು ಕಾಣರು
ಇದು ಮತಿಭ್ರಮಣೆಯೋ! ಅವ್ಯಕ್ತ ಪ್ರೀತಿಯೋ!
ನಿರ್ಮಲ ಪ್ರೀತಿಯೋ! ಈ ಜೀವಕೆ ನೀ ಜೊತೆಯಿರಲು....।।

ನಡೆಯುತ್ತಲೇ ಇದ್ದೇನೆ, ನೀ ಜೊತೆಗಿರಲು
ದಣಿವಿಲ್ಲ,ದಾಹವಿಲ್ಲ ಇದೆಂತಹ ಸುಖ?
ದೂರ ದೂರ ನಡೆದರೂ ಈ ಕಾಲ್ಗಳಿಗೆ ನೋವಿಲ್ಲ
ಪ್ರಶಾಂತವಾದ ಇಂತಹ ಮನಸ್ಸು ಹಿಂದೆಂದೂ ಕಂಡಿರಲಿಲ್ಲ
ಭಯವಿಲ್ಲ, ಸಂದೇಹವಿಲ್ಲ ಈ ಜೀವಕೆ ನೀ ಜೊತೆಯಿರಲು....||

ಯಾವುದೂ ನೆನಪಿಲ್ಲ ಕಾಲ, ದೇಶ, ಕಾಲಾತೀತ
ಏನಿದು ಯೋಚನೆಗೆ, ಮನಸ್ಸಿಗೂ ನಿಲುಕುತ್ತಿಲ್ಲ
ತನು-ಮನ ಕುಣಿಯುವುದು ನೀ ಜೊತೆಯಿರಲು
ರಾತ್ರಿ-ಹಗಲೆನ್ನದೆ ನಿನ್ನೊಡನೆಯೇ ಅಲೆಯುವಾಸೆ
ಎಲ್ಲವೂ ನಿನ್ನ ಲೀಲೆ, ಸ್ವರ್ಗ ಈ ಜೀವಕೆ ನೀ ಜೊತೆಯಿರಲು.....||

ಸೋಜಿಗ

ನಗೆಯು ಬರುವುದೆನಗೆ
ಹಿಂತಿರುಗಿ ನೋಡಲು;
ಕ್ಷಣಿಕ ಲಾಲೆಸೆಗೆ ಬೀಳುವ
ಇಂತಹವರ ಕಂಡು ಸೋಜಿಗವೆನಿಸುವುದು
ನನ್ನ ನಾನೇ ನಂಬದಾದೆ
ಇದು ಭ್ರಮೆಯೋ?, ಮತ್ತೇನೋ ತಿಳಿಯದಾಗಿದೆ!
ಎಷ್ಟು ಬದಲಾಗಿದೆ, ಅರಿವಿಗೆ ಬಾರದೆ
ಎಲ್ಲವು ಕೆಟ್ಟ ಕನಸುಗಳಂತೆ ಭಾಸವಾಗುತ್ತಿದೆ।।

ಕನಸು

ನನ್ನೊಳ ಬುದ್ಧಿ ಕೆಡಿಸಿದೆ
ಕನಸುಗಳ ಬೇಗೆಗೆ।।

ನನ್ನ ಹೃದಯ ಜಾರಿದೆ
ಕನಸುಗಳ ಒಸಗೆಗೆ।।

ನನ್ನಾತ್ಮ ನರಳಿದೆ, ಹಂಬಲಿಸಿದೆ
ಕನಸುಗಳ ಬೆಸುಗೆಗೆ।।

ಕನಸರಾತ್ರಿ

ಒಮ್ಮೆ ಕನಸರಾತ್ರಿಯಲ್ಲಿ ಏಕಾಂಗಿ ಸಂಚಾರಿ
ರೆಕ್ಕೆಬಿಚ್ಚಿ ಕನಸತೇರನೇರಿ ಹೊರಟೆ ಇರುಳಲ್ಲಿ
ಮಿನುಗುವ ನಕ್ಷತ್ರ ಗಳ ಕಂಡು ಬೆರಗಾದೆ
ಮುಗುಳ್ನಗುವ ಚಂದಿರನ ಕಂಡು ಪ್ರೀತಿಯಲ್ಲಿ ತೇಲಿದೆ
ಅಗೋಚರ ನರಳಾಟದ ಭೂತ-ಪ್ರೇತಗಳ ಹಾಡ ಆಲಿಸಿದೆ
ಸಾಗರನ ತಿಳಿ ಅಲೆಯ ಸೊಬಗಿನ ಗಾಣಕ್ಕೆ ಮನಸೋತೆ
ಕಂಪಸೂಸಿ ಬಿರಿಯುವ ಹೂವುಗಳ ಬಿಂಕವ ಕಂಡೆ
ಸಪ್ತಸಾಗದಲೆಗಳ ಸುಮಧುರ ಸಂಗೀತಕ್ಕೆ ಶರಣಾದೆ
ಒಮ್ಮೆ ಕನಸಾರಾತ್ರಿಯಲ್ಲಿ ಏಕಾಂಗಿ ಸಂಚಾರಿ ನಾನು ....

ಜಾರು ಕನಸಿಗೆ

ಬೇಗ ಜಾರು ಕನಸಿಗೆ
ಸಂವಹಿಸು ಚೈತನ್ಯವಿಹುದಲ್ಲಿ
ಹೃದಯವ ಮೀಟು ಹಾರುವ ತೆರದಿ
ಸತ್ತವರಿಗಷ್ಟೇ ಕನಸ ಕಾಣಲಾಗದು
ಜೀವಂತ ಶವವಾಗಬೇಡ ಕನಸ ದೂರತಳ್ಳಿ

ಹೃದಯ ಬಯಕೆಯಿಂದ ಬಾಯ್ತೆರೆಯುವ ಮುನ್ನ
ಬೇಗ ಜಾರು ಕನಸಿಗೆ ಚೈತನ್ಯವಿಹುದಲ್ಲಿ
ಬಾಯಾರಿಸು ಕನಸರೆಕ್ಕೆಯ ತೆರೆದು ಹಾರಾಡಿ
ಬಂಜರು ಭೂಮಿಯಲ್ಲವೀ ನಿನ್ನ ಹೃದಯ
ಪ್ರೀತಿ ಬಿತ್ತಿ ಕನಸ ರೆಕ್ಕೆ ಬಿಚ್ಚು ಹಾರಾಡು ಮನವೇ

ಎಲ್ಲಿ ಹೋದವೋ?

ಎಲ್ಲಿ ಹೋದವೋ? ನನ್ನ ಕನಸುಗಳು
ಆಗಾಗ ಬಂದು ಮನವ ಕೆಡಿಸುವ ಹುನ್ನಾರಗಳು
ಬಹಳ ದಿನಗಳಾದವು ಮನಸು ಮುದುಡಿ
ನೀವು ಬರದೇ ಬೇಸರಿಸಿದೆ ಮನ, ಕಾತರಿಸಿದೆ
ಬಂದು ಹೋಗುವ ನೀವು ತರುವಿರಿ ಹೊಸತನವ
ಬನ್ನಿ,ಬನ್ನಿ ನನ್ನೆದೆಗೆ ಹೊನಲ ಹರಿಸ ಬನ್ನಿ....
ಕಾಣದ ಚೈತನ್ಯ ಮನದ ಮುಗಿಲಿಗೆ ತನ್ನಿ....
ಎಂದೂ ಬಾರನೆನ್ನದಿರಿ ಮನವು ಬಳಲುವುದು
ತಾರನೆನ್ನದಿರಿ ಕಠಿಣ ದಿನಗಳ ಎಣಿಸಲಾರೆನು ಬೇಗುದಿ
ಇಂದೋ !, ನಾಳೆಯೋ ಬಂದೇ ಬರುವಿರೆಂದು
ಕಾಯುತಿಹೆನು ಹಗಲು-ರಾತ್ರಿ ಎನ್ನದೇ....
ಬನ್ನಿ,ಬನ್ನಿ ಮರೆಯದೇ ಬಾಗಿಲ ತೆರೆದು ಕಾಯುತಿಹೆನು
ತಳಿರು ತೋರಣಗಳ ಕಟ್ಟಿ ಸಿಂಗರಿಸಿ
ವರುಷ ವರುಷಗಳ ಕೊಳೆಯ ತೊಳೆದು ನಿಂತಿಹೆನು
ಬನ್ನಿ,ಬನ್ನಿ ನನ್ನ ಕನಸುಗಳೇ
ತನ್ನಿ,ತನ್ನಿ ಹೊಸತನವ ನನ್ನೆದೆಗೆ ....... ।।

ವಂದಿಸುವೆ ತಾಯಿಗೆ

ವಂದಿಸುವೆ ತಾಯಿಗೆ
ಗುರು ಹಿರಿಯರಿಗೆ ಗೌರವಿಸುವೆ||

ಕಲಿಯುವೆ ಅನವರತ
ಸತ್ಯನುಡಿಯ ಪರಿಪಾಲಿಸುವೆ||

ಒಳ್ಳೆಯದನ್ನೇ ಬಯಸುವೆ
ಒಳ್ಳೆಯದನ್ನೇ ಮಾಡುವೆ ಎಂದೆಂದಿಗೂ||

ಸಂಸ್ಕೃತಿಯ ಹಿರಿಮೆಯ ಸಾರುವೆ
ದೇಶಭಕ್ತಿಯ ಹೃದಯದಿ ಬಿತ್ತುವೆ||

ಎಲ್ಲರಲ್ಲೂ ಆ ದೇವನ ಕಾಣುವೆ
ಹೃದಯದಿ ಕರುಣೆಯ ಹಣತೆಯ ಹಚ್ಚುವೆ||

ಪ್ರಭುವೇ! ನಿನಗೆ ನನ್ನ ಸಮರ್ಪಣೆ
ಗುರು ಹಿರಿಯರ ತಾಯ್ನೆಲದ ಸೇವೆಗೆ ಈ ಜೀವ ಅರ್ಪಣೆ||

ಆಸ್ಫೋಟವಿದು

ಶೋಷಿತಳು ನಾನು.....
ಶೋಷಿತನು ನಾನು....
ಶತಶತಮಾನಗಳ ಒಳಬೇಗುದಿ!
ಅಲ್ಲಿ-ಇಲ್ಲಿ ಆಗೊಂದು-ಈಗೊಂದು ಪ್ರಕರಣಗಳು ಹೊರಬರುತ್ತಿತ್ತು
ಅಸಹಾಯಕರ ನೋವಿನ ಆಸ್ಫೋಟವಿದು
ಸೋಗು, ಮುಖವಾಡ ಹಾಕಿಕೊಂಡವರ ನಡತೆ ಬೆತ್ತಲಾಗಿದೆ ಇಂದು
ಚಳುವಳಿಯೆನ್ನಲೋ?
ಅಭಿಯಾನವೆನ್ನಲೋ?
ರಂಗನಾಟಕ ಮುಗಿದ ಮೇಲೆ
ಬಣ್ಣ ತೊಳೆಯುವ ತೆರದಿ
ಸಭ್ಯರ ಮುಖವಾಡ ಕಳಚುತ್ತಿದೆ
ಇದು ಇಂದು ನೆನ್ನೆಯ ಕಥೆಯಲ್ಲ
ಹೆಣ್ಣೊಬ್ಬಳ ಅಥವಾ ಗಂಡೊಬ್ಬನ
ಕಥೆಯಂತೂ ಅಲ್ಲವೇ ಅಲ್ಲ
ಬಲಾಢ್ಯ ರೆನಿಸಿಕೊಂಡವರು ತಮ್ಮ ಬಳಿ ಬಂದವರ ನಡೆಸಿಕೊಂಡ ಪರಿಯಿದು
ಅಂದು ಅಸಹಾಯಕತೆ ,ಅವಮಾನಗಳು ಮಡುಗಟ್ಟಿದ್ದವು
ಆದರೆ ಇಂದಲ್ಲ, ಆದದ್ದು ಆಯಿತು ಎಂದು ಸುಮ್ಮನಾಗಲು
ಕಾಲಗರ್ಭದೊಳ ಅಡಗಿಹ ನೋವು ತುಮುಲಗಳೆಲ್ಲಾ
ಇಂದು ದುತ್ತನೇ ಗೋರಿಯಿಂದೆದ್ದಿವೆ ಸಹನೆಯ ಕಟ್ಟೆಯೊಡೆದು
ಹೊರಬರಲಿ ಅಸಹಾಯಕ ನೋವುಗಳೆಲ್ಲಾ
ಭಸ್ಮಾಸುರನಂತಾಗಲಿ....
ಅಂದು ರಣಹದ್ದುಗಳಾಗಿ ಕಾಡಿದವರೆಲ್ಲಾ ಇಂದು
ಕಣ್ಣೀರು ಹರಿಸುವಂತಾಗಲಿ
ಕಟಕಟೆಗೆ ಬರಲಿ ಕಂಬಿಯ ಎಣಿಸಿ ಅವಮಾನದಿಂದ ಬೇಯಲಿ||

ಕೋಮಲ

ಕೋಮಲ ಹಾಗೂ ಮೃಧುವಾಗಿರು
ಸತ್ತವರು ಬಹು ಗಟ್ಟಿ ಹಾಗು ಗಡಸು।।

ಗಿಡ ಮರಗಳು ಕೋಮಲ ಹಾಗೂ ಮೃಧು
ಗಟ್ಟಿಯಾಗಿ ಒರಟಾಗುತ್ತವೆ ಜೀವ ಹೋದ ನಂತರ||

ಯಾರು ಗಟ್ಟಿ ಹಾಗೂ ಒರಟಾಗಿರುವರೋ
ಹೃದಯ ಹೀನರು ಇಲ್ಲವೇ ಸತ್ತವರು;
ಯಾರು ಕೋಮಲ ಹಾಗೂ ಮೃಧುವಾಗಿರುವರೋ
ಚೈತನ್ಯದ ಅಥವಾ ಜೀವಂತಿಕೆಯ ಗುರುತು||

ಗಟ್ಟಿ ಹಾಗೂ ಗಡಸುತನ ಮುರಿಯುತ್ತದೆ
ಕೋಮಲ ಹಾಗೂ ಮೃಧುತನ ಬಾಳುತ್ತದೆ ।।

ಪ್ರೇರಣೆ: ಲವೋ ತ್ಝು

ನಿನ್ನ ಒಲುಮೆ

ದೇವಾ!, ನಿನ್ನ ಒಲುಮೆ ಎಷ್ಟು ಸಿಹಿಯಾಗಿದೆ!
ಕತ್ತಲು ಹಗಲೆನ್ನದೆ ಸರ್ವದಾ ಕಾಯುತ್ತಿರುವೆ ನಮ್ಮನು;
ನಾವು ಎಲ್ಲೇ ಹೋದರು ಬಿಡದೆ ಹಿಂಬಾಲಿಸುವೆ ರಕ್ಷಕನಂತೆ;
ಎಷ್ಟೇ ತಲೆಹರಟೆ,ಕಿತಾಪತಿ ಮಾಡಿದರೂ ತಾಯಿಯಂತೆ ಸಲಹುವೇ;\\

ನಮ್ಮ ಎಷ್ಟೊಂದು ವ್ಯರ್ಥ ಆಲಾಪಗಳನ್ನೆಲ್ಲಾ ಆಲಿಸುವೆ;
ಎಲ್ಲಕ್ಕೂ ನಗುವಿನಲ್ಲೇ ನೀ ಉತ್ತರವೀಯುವೆ;
ಇಲ್ಲಿಯವರೆವಿಗೂ ನಮ್ಮ ತೊಂದರೆಗಳನ್ನೆಲ್ಲಾ ಸಹಿಸಿರುವೆ;
ಆದರೂ ಜೊತೆಗಿದ್ದು ದಾರಿ ತೋರುತ್ತಿರುವೆ ಸಿಹಿ ಮಾತಿಂದ;\\

ಮನವ ಕದ್ದ ಚೋರ

ನನ್ನೊಳಗಿನ ಮುಗ್ಧ ಮಗು ಎಲ್ಲಿ ಕಾಣೆಯಾಯಿತೋ?
ನಾನೂ ಹುಡುಕಾಡುತ್ತಿದ್ದೇನೆ, ಎಲ್ಲಿ ಹುಡುಕಲಿ?
ಇಲ್ಲೇ ಎಲ್ಲೋ ಈಗಲೇ ಬರುವನೆಂದು ಹೋದವನು,
ಮರಳಿ ಬರಲೇ ಇಲ್ಲ ಬಹುದಿನಗಳಾದವು ಅವನ ಕಂಡು\\

ಮುಗ್ದ ಹುಡುಗ ,ವಾಚಾಳಿ;
ಕೆನ್ನೆಯ ಮೇಲೆ ಚಂದದ ಚಂದ್ರಕುಳಿ ಮಾತನಾಡಿದರೆ;
ಕಣ್ಣುಗಳಲ್ಲಿ ಮಿಂಚು, ಅದೇನೋ ಸೆಳೆತವಿತ್ತು;
ಚೈತನ್ಯದ ಚಿಲುಮೆ,ಎಲ್ಲರ ಕಣ್ಮಣಿಯಾಗಿದ್ದ;\\

ಒಮ್ಮೆ ಅಳುತ್ತಿದ್ದ, ಕಂಗಳಲ್ಲಿ ನೀರು;
ಅವನ ಇತಿಹಾಸ ನನಗೇನು ತಿಳಿದಿಲ್ಲ;
ಬೆಳ್ಳಂಬೆಳಗ್ಗೆ ಬೆಳಕು ಮೂಡುತ್ತಿದ್ದಂತೆ ರವಿಯಂತೆ ಬರುತ್ತಿದ್ದ;
ಸಂಜೆ ತಿಳಿಕತ್ತಲಲ್ಲೇ ಕಾಣದಂತೆ ಜಾರಿಹೋಗುತ್ತಿದ್ದ;\\

ಅವನ ಹೆಸರು ನನಗೆ ತಿಳಿದಿಲ್ಲ, ಅನಾಮಧೇಯನೆ?
ಕಣ್ಣಮುಂದೆಯೇ ನಗುತ್ತಿದ್ದ ಜಾಣನಂತೆ;
ಕಾಲ ಚಕ್ರ ಉರುಳುವುದೇ ಗೊತ್ತಾಗಲಿಲ್ಲ;
ಯಾವಾಗ ಮಾಯವಾದನೋ ತಿಳಿದಿಲ್ಲ, ಮನವ ಕದ್ದ ಚೋರ;\\

ನಾನು ಬದಲಾಗಿದ್ದೇನೆ

ಮನದ ಮೂಲೆಯಲ್ಲಿ ಹಳೆಯ ಕತೆಗಳ ಮೂಟೆ;
ವರುಷಗಳ ನೋವು ನಲಿವುಗಳ ಕಂತೆಗಳು;
ಮೊನ್ನೆ ಏನನ್ನೋ ಹುಡುಕುವಾಗ ಗಾಳಿ ಸರಿಸಿತು ;
ಮನಸ್ಸು ದಗ್ಧವಾಯಿತು ಹಳೆಯದನ್ನು ನೆನೆದು;

ಕಠೋರತೆಯ ಮನಸ್ಸು ಬೇಡವೆಂದು ಬಿಸುಟಿತ್ತು;
ಕಣ್ಣಿಗೆ ಕಾಣದಂತೆ ಮೂಲೆಯಲ್ಲಿ ಅಡಗಿಸಿಟ್ಟಿದ್ದೆ;
ವರುಷಗಳ ನಂತರ ಮತ್ತೆ ಕಾಡುತ್ತಿದೆ ಅದ ಕಂಡು ;
ನಾನು ಮಾಗಿದ್ದೇನೆ ,ನಿನ್ನ ದಾಳಿಯ ಎದುರಿಸಬಲ್ಲೆ;

ವರುಷಗಳ ಹಿಂದೆ ನಿನ್ನ ದಾಳಿಗೆ ಹೆದರಿದ್ದೆ;
ಮನದ ನೆಮ್ಮದಿಯ ಹಾಳು ಮಾಡಿಕೊಂಡಿದ್ದೆ;
ನಿನ್ನಿಂದ ಬಹಳಷ್ಟು ಕಳೆದುಕೊಂಡೆ ಹಿಂದೆ;
ಆದರೆ ಹಿಂದಿನ ನಾನು ಬದಲಾಗಿದ್ದೇನೆ;

ನಿನ್ನ ದಾಳಿಯ ಕಂಡು ನಗು ಬರುತ್ತಿದೆ ;
ಇಂದು ಹೆದರುವವ ನಾನಲ್ಲ;
ನಾನು ಬದಲಾಗಿದ್ದೇನೆ ,ನೋವನುಂಡು;
ನಾನು ಬದಲಾಯಿಸುತ್ತೇನೆ ಎದೆಗುಂದದೆ;

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...