Sunday, August 2, 2026

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ ....

ಶಾಂತಿಯುತ ವಾತಾವರಣವಿರಲಿ, 

ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ,

ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ, 

ಊಟದ ಮೇಜಿನ ಬಳಿ ವಾದ ವಿವಾದ ಬೇಡ, 

ಆಹಾರವನ್ನು ನಿಧಾನವಾಗಿ ಸೇವಿಸಿ, ಧ್ಯಾನದಂತೆ 

ನಿಧಾನವಾಗಿ ಚೆನ್ನಾಗಿ ಅಗಿಯಿರಿ,

ಸದಾ ಧನಾತ್ಮಕತೆಯ ಚರ್ಚಿಸಿ, 

ತಿಂದ ಆಹಾರ ದೇಹಕ್ಕೆ ಮುದ ನೀಡುವುದು. 


ಪ್ರೇರಣೆ: ಅಸಿತ್ ಕುಮಾರ್ ಸನ್ಯಾಲ್



Saturday, July 25, 2026

ಮೂರು ದಿನದ ಸಂತೆ

ಹಲವು ವರ್ಷಗಳ ಕಠಿಣ ಪರಿಶ್ರಮ,

ಸಾಧಿಸಿದೆನೆಂಬ ಹುಸಿನಗೆಯ ಭ್ರಮೆ,

ನೀಲಿ ಆಕಾಶದಲ್ಲಿ ನೆಟ್ಟ ಕಣ್ಣುಗಳು,

ಹಿಂದೆ ಬಿಟ್ಟುಬಂದ ಅನೇಕ ನೆನಹುಗಳು.

 

ನಾನು ಇಲ್ಲಿಗೆ ಹೇಗೆ ಬಂದೆ?

ಗಳಿಸಿದ್ದು ಇಷ್ಟೊಂದು ಭ್ರಮೆ,

ಕಳೆದುಕೊಂಡದ್ದು ನೂರರಷ್ಟು,

ಬದುಕು ಮೂರು ದಿನದ ಸಂತೆ.

 

ಆದರೂ ಮನದಲ್ಲಿ ಶೂನ್ಯಭಾವ,

ಸಂತೋಷವಿಲ್ಲ, ಶಾಂತಿಯಿಲ್ಲ,

ಏಕಾಗಿ ಜೀವನ ಪ್ರಶ್ನೆ ಕಾಡಿದೆ,

ಏಕಾಗಿ ಇಲ್ಲಿಗೆ ನಾ ಬಂದೆ, ಉತ್ತರವಿಲ್ಲ.

 

ನಿನ್ನೆ, ಇಂದು, ನಾಳೆ

ಮೂರು ದಿನಗಳಲ್ಲಿ ಕಳೆದು ಹೋದೆವು,

ಮುಂದೆ ಏನು ಪ್ರಶ್ನೆಗೆ ಉತ್ತರ ಹುಡುಕುತ್ತಾ,

ಇಲ್ಲಿ ಎಲ್ಲರೂ ನಮ್ಮಂತವರೇ, ದಾರಿ ಕಾಣದವರು.


Saturday, July 18, 2026

ವಿರಾಮ

ರಾತ್ರಿ ಬೆಳಗು ಕಾಣದ ದರ್ಶನಗಳ ಅನಾವರಣ,

ಸಂತೋಷ ಬಿಟ್ಟು ಭ್ರಮೆಯ ಹಿಂದೆ ನಾವು,

ಕನಸ ಕಾಣುತ್ತಲೇ ಜೀವನ ಸವೆಸಿದವರು,

ವಾಸ್ತವವ ಅರಿಯದೆ ಕಣ್ಣೀರಿಡುವವರು.

 

ಅಲ್ಲೂ ಇಲ್ಲದೆ, ಇಲ್ಲೂ ಇಲ್ಲದೆ,

ನಡುವೆ ನರಳುವವರು ನಾವು,

ಜೀವನ, ಭ್ರಮೆಯ ನಡುವೆ ನಾವು,

ಆಯ್ಕೆ ಗೊಂದಲ ನರಕ ಯಾತನೆ.

 

ಎಲ್ಲವ ಬಿಟ್ಟು ನಡೆಯಲು ವ್ಯಾಮೋಹ,

ಎಲ್ಲವ ಇಟ್ಟು ನಡೆಯಲು ಸ್ವಾರ್ಥ,

ಎರಡೂ ಇರದೆ  ಬರಿಗೈ ದಾಸರು,

 ಸಾವು, ಬದುಕಿನ ನಡುವೆ ವಿರಾಮ.

ಹುಡುಕಾಟ

ನನ್ನ ನಾನು ಹುಡುಕುತ್ತಿದ್ದೇನೆ,

ನನ್ನೊಳಗೆ, ಹೊರಗೆ,

ನಾನು ಯಾರು? ಏಕಿಲ್ಲಿ?

ಭ್ರಮೆಯ ಪ್ರಪಂಚದಲ್ಲಿ ಏಕಾಂಗಿ!.


ಉದ್ದೇಶಗಳ ಮರೆತಿರುವೆ,

ದಾರಿ ಕಾಣದೆ ಅಲೆಯುತ್ತಿರುವೆ,

ನೀರ ಸುಳಿಯಲ್ಲಿ ಸಿಲುಕಿರುವೆ,

ಬಂದು ಹೋಗುವ ಆಟದಲ್ಲಿ.

 

ಎಷ್ಟು ಯುಗಗಳೋ ತಿಳಿಯೆ?,

ಜ್ಞಾನವಿಲ್ಲದೆ ಅಲೆದಿರುವೆ,

ಯಾರ ಬರುವಿಕೆಗೆ ಕಾಯುತಿಹೆ?

ಬಲ್ಲವರಿಲ್ಲ ನಾ ಏಕಾಂಗಿ.

 

ಒಳಗೊಂದು ಆಶಾಕಿರಣ,

ಜ್ಞಾನೋದಯವಾಗುವುದೆಂದು,

ಎಲ್ಲಿ?, ಯಾವಾಗ?

ಸಮಯವೇ ಉತ್ತರ ಕೊಡಬೇಕಿದೆ.

Sunday, July 12, 2026

🎶 ಎಸ್. ಜಾನಕಿ - ಭಾವಗಳ ಕೋಗಿಲೆ

ಬೆಳಗಿನ ಜಾವ ಮೌನದಿ ನಿಮ್ಮಯ ಹಾಡು ಕಣ್ಣ ತೆರೆವುದು,

ಕಾಲಾತೀತ  ಪರಿಮಳ ಹೊತ್ತ ಸೌಮ್ಯ ತಂಗಾಳಿಯಂತೆ.

ಮಲ್ಲಿಗೆಯ ಸುಗಂಧ, ಮನೋಹರ, ಶುದ್ಧ,ಕೋಮಲ,

ಆತ್ಮಗಾನ ಲಹರಿ ಹರಿಗರ್ಪಿತವದು  ಹೃದಯ ಶರಣಾಗುವುದು.


ನಿಮ್ಮ ಪ್ರೀತಿಯ ಹಾಡು, ನೋವಿನ ಹಾಡು,

ಮಧುರ ಗಾನ ನೋವ ತಣಿಸುವ ಅಮೃತಗಾನ.

ಪ್ರತಿ ಆಲಾಪನೆ  ಹೃದಯದ ಪ್ರಾರ್ಥನೆ, 

ಮನಕೆ ನೆಮ್ಮದಿ ಗಾನ ಸರಸತಿಯ ಪಿಸುಮಾತು. 


ನಿಮ್ಮ ಧ್ವನಿ ಕೋಗಿಲೆಯ ಗಾನದಂತೆ,

ಕೃಷ್ಣನ ಮಧುರ ಮುರಳಿ ನಾದದಂತೆ. 

ನಿಮ್ಮ ಹಾಡ ಕೇಳಿ ಬೆಳೆದೆವು, ಕನಸ ಕಂಡೆವು,

ನಿಮ್ಮಂತೆ ಹಾಡ ಬಲ್ಲವರು ಯಾರಿಹರು?. 


ಓ ಜಾನಕಿ, ಕೋಗಿಲೆ ಕಂಠದ ಗಾಯಕಿ, 

ನಿಮ್ಮ ಕಂಠದ ಸಂಗೀತ ಕಿವಿಯಲಿ ನಲಿಯಲಿ. 

ಮನದಲಿ ನಿಮ್ಮ ಮಧುರ ಗಾನ ಅಮರವಾಗಲಿ, 

ನಾವು ಧನ್ಯ, ನೀವು ಅಮರ, ನಿಮ್ಮ ಹಾಡು ಅಮರ. 

Friday, July 10, 2026

ಜೀವನ ನಾಟಕ

ಬೆಳ್ಳಂ ಬೆಳ್ಳಿಗೆ ಕಣ್ಣು ತೆರೆವುದು,

ಹಳ್ಳಿಗಳಿಂದ ಬರುವ ತರಕಾರಿ, 

ಹಣ್ಣು, ಹೂವು ಮಾರಾಟದ ಮಳಿಗೆ,

ಜೀವನದ ಹಾದಿಯ ಪಯಣ ನಿರಂತರ.


ಕೆಲವರಿಗೆ ದಿನದ ಹೊಟ್ಟೆಪಾಡು,

ಮತ್ತೆ ಕೆಲವರಿಗೆ ಹಣ ಮಾಡುವ ದಂಧೆ,

ಮತ್ತೆ ಕೆಲವರಿಗೆ ಜೀವನ ಪ್ರೀತಿ,

ಮತ್ತೆ ಕೆಲವರಿಗೆ ಮೋಸ ಮಾಡುವ ಚಾಕರಿ.


ನಗರದ ಅಂಗಡಿ ಬೀದಿಗಳು,

ಬೀದಿ ದೀಪಗಳು, ಕಟ್ಟಡಗಳು,

ದಿನವೂ ನಾಟಕ ನೋಡಿ ನೋಡಿ,

ನಗುತ್ತಿವೆ ಮಾನವನ ಪಾಡು ಕಂಡು.  


ಕೆಲವು ಮುಖಗಳಲ್ಲಿ ರಾಕ್ಷಸತನ,

ಕೆಲವು ಮುಖಗಳು ಹಸುಳೆಗಳು,

ಮತ್ತೆ ಕೆಲವು ಕಾಡು ಮೃಗಗಳು,

ಮತ್ತೆ ಕೆಲವು ನರಿಗಳೇ ಸರಿ. 

Sunday, July 5, 2026

ಮಳೆಯೇ! ಓ ಮಳೆಯೇ!

 ಮಳೆಯೇ! ಮಳೆಯೇ!

ಎಲ್ಲಿ ಹೋದೆ ನಾ ನಿನ್ನ ಅರಸುತಿಹೆ,

ಬಂದೆ ಎಂದು ಓಡಿ ಬರುವೆ,

ಮನೆಯ ಆವರಣ 'ಹನಿ'ಸದೆ ಓಡುವೆ,

ಮನೆಯ ಬಾಗಿಲ ತೆರೆದು ಕಾದಿಹೆ,

ಗಾಳಿ ಗೆಳೆಯನ ಕೂಡಿ ಮಾಯವಾಗುವೆ,

ಏಕಿನಂತ ಸಿಟ್ಟು, ಸೊಡರು,

ನಿನ್ನ 'ಗುಟುರು' ಕೇಳಿ ವರ್ಷವಾಗಿದೆ,

ಬರುವೆ ಎಂಬ ಭರವಸೆ ಹಸಿರಾಗಿದೆ,

ಬಾ ಗೆಳೆಯನೇ ಬಾ, ತಂಪಾಗಿಸು ಬಾ,

ಭೂ ತಾಯಿಯ ಮಡಿಲ ಹಸಿರಾಗಿಸು ಬಾ.


Sunday, June 28, 2026

ನಾವು ಚೇತನರು

 ಕತ್ತಿಯಿಂದ ತಿವಿದರು,

ಬಂದೂಕು ಗುಂಡುಗಳಿಂದ ಸುಟ್ಟರು,

ದೇವಸ್ಥಾನಗಳ ಲೂಟಿ ಮಾಡಿದರು,

ನಮ್ಮವರ ಸಮಾಧಿಯ ಮೇಲೆ ಅವರ ವೈಭವ,

ಕಾಲ ಎಲ್ಲವ ಮರೆಯಿಸಿದೆ,

ಸೂರ್ಯ ಮತ್ತೆ ಸುಡುತ್ತಿದ್ದಾನೆ,

ನಮ್ಮ ನಾಯಕರು ಕಾಲು ನೆಕ್ಕುತ್ತಿದ್ದಾರೆ,

ಉಂಡ ಮನೆಗೆ ದ್ರೋಹ ಬಗೆವರ ಸಂಖ್ಯೆ ಹೆಚ್ಚಿದೆ,

ನಮ್ಮ ಉಧಾರತೆಗೆ ನಾವು ಬೆಲೆ ತೆರುತ್ತಿದ್ದೇವೆ,

ನಮ್ಮವರಿಂದಲೇ ನಾವು ಕಡೆಗಣಿಸ್ಪಟ್ಟಿದ್ದೇವೆ,

ನಗುವುದ ನಿಲ್ಲಿಸಿದ್ದೇವೆ,

ಪ್ರೀತಿಸುವುದ ಮರೆಯದೇ,

ಬದುಕುವುದ ಮರೆಮಾಚದೆ,

ಅವರು ದ್ರೋಹ ಬಗೆಯುತ್ತಲೇ ಇದ್ದಾರೆ,

ನಾವು ಕಾಯುತ್ತಲೇ ಇದ್ದೇವೆ,

ನಾವು ಬದುಕುವುದ ನಿಲ್ಲಿಸುವುದಿಲ್ಲ,

ನಮ್ಮ ಜೀವನ ಪ್ರೀತಿ ಸಾಯುವುದಿಲ್ಲ,

ಮೆರೆಯುವವರು ನಾಶವಾಗಲಿದ್ದಾರೆ,

ದ್ರೋಹಿಗಳು ಬಂದುಹೋಗುವರಷ್ಟೇ!,

ನಾವು ಅವಿನಾಶಿಗಳು,

ನಾವು ಚೇತನರು.....

Saturday, June 27, 2026

ಅನಂತ!

ಈ ರಾತ್ರಿ ಸುಂದರವಾಗಿದೆ,

ನನ್ನ ಜನರ ಮುಖದಂತೆ,

ರಾತ್ರಿ ತಾರೆಗಳು ಮಿನುಗುತ್ತಿವೆ,

ನನ್ನ ಜನರ ಕಣ್ಣುಗಳಂತೆ,

ಬೆಳಗಿನ ತೇಜ ಸೂರ್ಯ,

ನನ್ನ ಜನರ ಹೊಳೆವ ಆತ್ಮದಂತೆ,

ಶಕ್ತಿ ಎಂದಿಗೂ ಅವಿನಾಶಿ,

ರೂಪ ಮಾತ್ರ ಬೇರೆಬೇರೆ,

ನನ್ನ ಜನರ ಕೀರ್ತಿಯಂತೆ,

ನನಗೆ ಕೊನೆ ಎಂಬುದಿದೆ,

ನಾನು ಅನಂತದಲ್ಲಿ ಅನಂತ,

ನನ್ನೊಳಗೆ ನಾನು,

ಅನಂತದೊಳು ಶೂನ್ಯ,

ನಾನು ನಾನೇ, ಅನಂತದ ಅನಂತ...

ನಾನು ಭಾರತೀಯ!

ನಾನು ಭಾರತೀಯ!

ವಂದೇ ಮಾತರಂ ಹಾಡುತ್ತೇನೆ,

ಕನ್ನಡ ನನ್ನ ಮಾತೃಭಾಷೆ,

ನಾನು ದಕ್ಷಿಣದವನೆಂಬ ಹೆಮ್ಮೆಯಿದೆ,

ನನ್ನ ಮೈಬಣ್ಣ ಗೋಧಿಬಣ್ಣ.

 

ಎಲ್ಲ ಭಾಷೆಗಳನ್ನು ಪ್ರೀತಿಸುತ್ತೇನೆ,

ಎಲ್ಲಾ ಜನರನ್ನು ಗೌರವಿಸುತ್ತೇನೆ,

ವೈವಿಧ್ಯ ಸಂಸ್ಕೃತಿಯ ಅರಿವಿದೆ,

ಬಹು ದೇವರ ಪೂಜಿಸುವ ನಾಡು ನನ್ನದು,

ಮಣ್ಣು,ಕಲ್ಲು, ನದಿ, ಮರ, ಗಿಡ, ಎಲ್ಲವು ದೇವರೇ.

 

ಯಾವುದು ಸತ್ಯವೋ ಅದನ್ನೇ ಪಾಲಿಸುತ್ತೇನೆ,

ಯಾವುದು ನಿತ್ಯವೋ ಅದೇ ಉಸಿರಾಗಿದೆ,

ಯಾವುದು ಅವಿನಾಶಿಯೋ ಅದೇ ನಂಬಿಕೆಯಾಗಿದೆ,

ಯಾವುದು ಶ್ರೇಷ್ಠವೋ ಅದೇ ನಾನಾಗಿಹೆ,

ಶ್ರೇಷ್ಠತೆಯ ಬೆಳಕಿನಲ್ಲಿ ನಾನು ಜ್ಯೋತಿ ಆಗಿಹೆ.

Sunday, June 21, 2026

ಜೀವನದ ಹಾದಿ

ಮಗನೇ, ನಾನು ನಿನಗೆ ಹೇಳುವೆ:

ನನ್ನ ಜೀವನವು ಹೂವಿನ ಹಾಸಿಗೆ ಆಗಿರಲಿಲ್ಲ.

ಅದರಲ್ಲಿ ನೋವಿನ ಒರತೆಗಳಿವೆ,

ಕನಸಿನ ಚೂರುಗಳಿವೆ, ಹೃದಯದಲ್ಲಿ

ಹರಿದುಹೋದ ನೆನಪುಗಳು, ಮಡುಗಟ್ಟಿವೆ

ಕಲ್ಲು ಮುಳ್ಳುಗಳ ನೆಲದ ಕಠಿಣ ನಡೆ

ಕಾಲು ನೋವಿನ ಭಾರದ ಹೊರೆಯಾಗಿವೆ.

ಎಲ್ಲಾ ಕಾಲದಲ್ಲೂ ನಾನು ಹತ್ತುತ್ತೇನೆ,

ಕಷ್ಟದ ಬೆಟ್ಟಗಳ ಹತ್ತಿ ಇಳಿದಿದ್ದೇನೆ,

ಊರಿನ ಮೂಲೆಗಳನ್ನು ತಿರುಗಿದ್ದೇನೆ,

ಕೆಲವೊಮ್ಮೆ ಅಳುತ್ತಾ ಕತ್ತಲೆಯಲ್ಲಿ ಹೋಗುತ್ತಿದ್ದೆ

ಎಲ್ಲಿ ಬೆಳಕಿನ ಕೊರತೆಯೋ ಅಲ್ಲಿ, ಹೃದಯದಲ್ಲಿ.

ಹುಡುಗ, ನೀನು ಗೆಲುವಿಗೆ ಬೆನ್ನು ತೋರಿಸಬೇಡ.

ನೋವಿಗೆ ಹೆದರಬೇಡ ದೈರ್ಯದಿಂದ ಎದುರಿಸು.

ಗೆಲುವಿಗೆ ದಯೆಯಿಲ್ಲ ಕಠಿಣ ಪರಿಶ್ರಮ ಬಯಸುವುದು.

ಬೀಳಲು ಹೆದರಬೇಡ, ದೈರ್ಯದಿಂದ ಎದ್ದು ನಿಲ್ಲು

ನನ್ನ ಹಾರೈಕೆ ನಿನಗಾಗಿ ಸದಾ ಇದೆ - ಮುಂದೆ ಸಾಗಲು

ಸಾಧಿಸು ನನ್ನ ಕನಸುಗಳ ದೋಣಿಯ ಹತ್ತಿ ಸಾಗು

ನನಸಾಗಿಸುವ ಛಲ ನಿನ್ನಲ್ಲಿರಲಿ - ಗೆಲುವಿನಲ್ಲಿ ನಾನಿರುವೆ.

 

ಪ್ರೇರಣೆ: ಲ್ಯಾಂಗ್ಸ್ಟನ್ ಹ್ಯೂಸ್

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...