Sunday, June 28, 2026

ನಾವು ಚೇತನರು

 ಕತ್ತಿಯಿಂದ ತಿವಿದರು,

ಬಂದೂಕು ಗುಂಡುಗಳಿಂದ ಸುಟ್ಟರು,

ದೇವಸ್ಥಾನಗಳ ಲೂಟಿ ಮಾಡಿದರು,

ನಮ್ಮವರ ಸಮಾಧಿಯ ಮೇಲೆ ಅವರ ವೈಭವ,

ಕಾಲ ಎಲ್ಲವ ಮರೆಯಿಸಿದೆ,

ಸೂರ್ಯ ಮತ್ತೆ ಸುಡುತ್ತಿದ್ದಾನೆ,

ನಮ್ಮ ನಾಯಕರು ಕಾಲು ನೆಕ್ಕುತ್ತಿದ್ದಾರೆ,

ಉಂಡ ಮನೆಗೆ ದ್ರೋಹ ಬಗೆವರ ಸಂಖ್ಯೆ ಹೆಚ್ಚಿದೆ,

ನಮ್ಮ ಉಧಾರತೆಗೆ ನಾವು ಬೆಲೆ ತೆರುತ್ತಿದ್ದೇವೆ,

ನಮ್ಮವರಿಂದಲೇ ನಾವು ಕಡೆಗಣಿಸ್ಪಟ್ಟಿದ್ದೇವೆ,

ನಗುವುದ ನಿಲ್ಲಿಸಿದ್ದೇವೆ,

ಪ್ರೀತಿಸುವುದ ಮರೆಯದೇ,

ಬದುಕುವುದ ಮರೆಮಾಚದೆ,

ಅವರು ದ್ರೋಹ ಬಗೆಯುತ್ತಲೇ ಇದ್ದಾರೆ,

ನಾವು ಕಾಯುತ್ತಲೇ ಇದ್ದೇವೆ,

ನಾವು ಬದುಕುವುದ ನಿಲ್ಲಿಸುವುದಿಲ್ಲ,

ನಮ್ಮ ಜೀವನ ಪ್ರೀತಿ ಸಾಯುವುದಿಲ್ಲ,

ಮೆರೆಯುವವರು ನಾಶವಾಗಲಿದ್ದಾರೆ,

ದ್ರೋಹಿಗಳು ಬಂದುಹೋಗುವರಷ್ಟೇ!,

ನಾವು ಅವಿನಾಶಿಗಳು,

ನಾವು ಚೇತನರು.....

Saturday, June 27, 2026

ಅನಂತ!

ಈ ರಾತ್ರಿ ಸುಂದರವಾಗಿದೆ,

ನನ್ನ ಜನರ ಮುಖದಂತೆ,

ರಾತ್ರಿ ತಾರೆಗಳು ಮಿನುಗುತ್ತಿವೆ,

ನನ್ನ ಜನರ ಕಣ್ಣುಗಳಂತೆ,

ಬೆಳಗಿನ ತೇಜ ಸೂರ್ಯ,

ನನ್ನ ಜನರ ಹೊಳೆವ ಆತ್ಮದಂತೆ,

ಶಕ್ತಿ ಎಂದಿಗೂ ಅವಿನಾಶಿ,

ರೂಪ ಮಾತ್ರ ಬೇರೆಬೇರೆ,

ನನ್ನ ಜನರ ಕೀರ್ತಿಯಂತೆ,

ನನಗೆ ಕೊನೆ ಎಂಬುದಿದೆ,

ನಾನು ಅನಂತದಲ್ಲಿ ಅನಂತ,

ನನ್ನೊಳಗೆ ನಾನು,

ಅನಂತದೊಳು ಶೂನ್ಯ,

ನಾನು ನಾನೇ, ಅನಂತದ ಅನಂತ...

ನಾನು ಭಾರತೀಯ!

ನಾನು ಭಾರತೀಯ!

ವಂದೇ ಮಾತರಂ ಹಾಡುತ್ತೇನೆ,

ಕನ್ನಡ ನನ್ನ ಮಾತೃಭಾಷೆ,

ನಾನು ದಕ್ಷಿಣದವನೆಂಬ ಹೆಮ್ಮೆಯಿದೆ,

ನನ್ನ ಮೈಬಣ್ಣ ಗೋಧಿಬಣ್ಣ.

 

ಎಲ್ಲ ಭಾಷೆಗಳನ್ನು ಪ್ರೀತಿಸುತ್ತೇನೆ,

ಎಲ್ಲಾ ಜನರನ್ನು ಗೌರವಿಸುತ್ತೇನೆ,

ವೈವಿಧ್ಯ ಸಂಸ್ಕೃತಿಯ ಅರಿವಿದೆ,

ಬಹು ದೇವರ ಪೂಜಿಸುವ ನಾಡು ನನ್ನದು,

ಮಣ್ಣು,ಕಲ್ಲು, ನದಿ, ಮರ, ಗಿಡ, ಎಲ್ಲವು ದೇವರೇ.

 

ಯಾವುದು ಸತ್ಯವೋ ಅದನ್ನೇ ಪಾಲಿಸುತ್ತೇನೆ,

ಯಾವುದು ನಿತ್ಯವೋ ಅದೇ ಉಸಿರಾಗಿದೆ,

ಯಾವುದು ಅವಿನಾಶಿಯೋ ಅದೇ ನಂಬಿಕೆಯಾಗಿದೆ,

ಯಾವುದು ಶ್ರೇಷ್ಠವೋ ಅದೇ ನಾನಾಗಿಹೆ,

ಶ್ರೇಷ್ಠತೆಯ ಬೆಳಕಿನಲ್ಲಿ ನಾನು ಜ್ಯೋತಿ ಆಗಿಹೆ.

Sunday, June 21, 2026

ಜೀವನದ ಹಾದಿ

ಮಗನೇ, ನಾನು ನಿನಗೆ ಹೇಳುವೆ:

ನನ್ನ ಜೀವನವು ಹೂವಿನ ಹಾಸಿಗೆ ಆಗಿರಲಿಲ್ಲ.

ಅದರಲ್ಲಿ ನೋವಿನ ಒರತೆಗಳಿವೆ,

ಕನಸಿನ ಚೂರುಗಳಿವೆ, ಹೃದಯದಲ್ಲಿ

ಹರಿದುಹೋದ ನೆನಪುಗಳು, ಮಡುಗಟ್ಟಿವೆ

ಕಲ್ಲು ಮುಳ್ಳುಗಳ ನೆಲದ ಕಠಿಣ ನಡೆ

ಕಾಲು ನೋವಿನ ಭಾರದ ಹೊರೆಯಾಗಿವೆ.

ಎಲ್ಲಾ ಕಾಲದಲ್ಲೂ ನಾನು ಹತ್ತುತ್ತೇನೆ,

ಕಷ್ಟದ ಬೆಟ್ಟಗಳ ಹತ್ತಿ ಇಳಿದಿದ್ದೇನೆ,

ಊರಿನ ಮೂಲೆಗಳನ್ನು ತಿರುಗಿದ್ದೇನೆ,

ಕೆಲವೊಮ್ಮೆ ಅಳುತ್ತಾ ಕತ್ತಲೆಯಲ್ಲಿ ಹೋಗುತ್ತಿದ್ದೆ

ಎಲ್ಲಿ ಬೆಳಕಿನ ಕೊರತೆಯೋ ಅಲ್ಲಿ, ಹೃದಯದಲ್ಲಿ.

ಹುಡುಗ, ನೀನು ಗೆಲುವಿಗೆ ಬೆನ್ನು ತೋರಿಸಬೇಡ.

ನೋವಿಗೆ ಹೆದರಬೇಡ ದೈರ್ಯದಿಂದ ಎದುರಿಸು.

ಗೆಲುವಿಗೆ ದಯೆಯಿಲ್ಲ ಕಠಿಣ ಪರಿಶ್ರಮ ಬಯಸುವುದು.

ಬೀಳಲು ಹೆದರಬೇಡ, ದೈರ್ಯದಿಂದ ಎದ್ದು ನಿಲ್ಲು

ನನ್ನ ಹಾರೈಕೆ ನಿನಗಾಗಿ ಸದಾ ಇದೆ - ಮುಂದೆ ಸಾಗಲು

ಸಾಧಿಸು ನನ್ನ ಕನಸುಗಳ ದೋಣಿಯ ಹತ್ತಿ ಸಾಗು

ನನಸಾಗಿಸುವ ಛಲ ನಿನ್ನಲ್ಲಿರಲಿ - ಗೆಲುವಿನಲ್ಲಿ ನಾನಿರುವೆ.

 

ಪ್ರೇರಣೆ: ಲ್ಯಾಂಗ್ಸ್ಟನ್ ಹ್ಯೂಸ್

ಕನಸ ಬೆಳೆಯುತ್ತಾ...

 ಬಹಳ ವರುಷಗಳ ಹಿಂದೆ,

ನನ್ನ ಕನಸುಗಳ ಬಹುತೇಕ ಮರೆತಿದ್ದೆ.

ಅದು ನನ್ನ ಮನದಲ್ಲಿತ್ತು,

ನನ್ನ ಕಣ್ಣ ಮುಂದೆ,

ಸೂರ್ಯನಂತೆ ಪ್ರಕಾಶಮಾನ

ನನ್ನ ಕನಸು.

ಬಂಗಾರ ಬಣ್ಣದ ಕನಸು.

 

ತದನಂತರ ಮನದ ತಡೆ ಗೋಡೆ ಏರಿತು,

ನಿಧಾನವಾಗಿ ಬೆಳೆದಿತ್ತು,

ನಿಧಾನವಾಗಿ ಗೊತ್ತಾಗದೆ,

ನನಗೂ ನನ್ನ ಕನಸಿನ ನಡುವೆ.

ಆಕಾಶವನ್ನು ಮುಟ್ಟುವವರೆಗೂ ಏರಿತು

ಗೋಡೆ.

ನೆರಳು.

ಕೈ ಕಟ್ಟಿಹಾಕಿತ್ತು ಕತ್ತಲು.

ನಾನು ಕಪ್ಪು.

ನಾನು ನೆರಳಿನಲ್ಲಿ ಬೆಚ್ಚಗೆ ಮಲಗಿದೆ.

 

ಕತ್ತಲು ನನ್ನ ಸುತ್ತಲೂ,

ನನ್ನ ಕನಸಿನ ಬೆಳಕು ಮರೆಯಾಗಿತ್ತು,

ಕನಸ ಬೆಳಕು ನನ್ನ ಮುಂದೆ ಇರಲಿಲ್ಲ,

ನನ್ನ ಮನದಲ್ಲಿ ಕಾರ್ಮೋಡ.

ಕಣ್ಣಿಗೆ ಕತ್ತಲ ದಪ್ಪ ಗೋಡೆ.

ಕರಿ ನೆರಳು.

ಮನದಲ್ಲಿ ಅಳುಕು.

ಭಯ.

ಜವರಾಯನ ನೆಂಟತನ ಹತ್ತಿರ.

ಇನ್ನು ಹತ್ತಿರ.

ಭಯಾನಕ.

ಕರಿ ನೆರಳು.

 

ಕತ್ತಲ ಸಾಮ್ರಾಜ್ಯದಲ್ಲಿ

ತೂರಿ ಬಂದಿತ್ತು ಬೆಳಕಿನ ಸಣ್ಣ ಕಿರಣ.

ಹೊಸ ಭರವಸೆ.

ಹೊಸ ಕನಸಿನ ಹಂಬಲ.

ಮನದಲ್ಲಿ ಕನಸಿನ ಮೊಳಕೆ.

ಕೈ ಕಟ್ಟು ಬಿಚ್ಚಿತ್ತು ಬೆಳಕು.

ನನ್ನ ಕೈಗಳು!

ನನ್ನ ಕತ್ತಲ ಕೈಗಳು!

ಬಿಡುಗಡೆಗೆ ಕಾಯುತ್ತಿತ್ತು.

ಹಾರಲು.

ಗೋಡೆಯನ್ನು ಭೇದಿಸಲು!

ನನ್ನ ಕನಸಗಳ ರೆಕ್ಕೆ ಬಲಿತಿತ್ತು!

 

ಕತ್ತಲೆಯ ಛಿದ್ರಗೊಳಿಸಿದೆ,

ಕರಿ ನೆರಳ ನುಂಗಿ ಹಸಿವ ನೀಗಿಸಿದೆ,

ಬೆಳಕ ನೀರ ಕುಡಿದು,

ಕನಸ ನೀರಡಿಕೆ ಬಸಿದು,

ನಭಕ್ಕೆ ಹಾರಿದೆ,

ಮನದ ಅಂಕುಶಗಳ ಕುಟ್ಟಿ,

ಕನಸ ಬೆಳಕಿನ ಕಡೆಗೆ.

ಮುನ್ನುಗಿದೆ.

ದಣಿವಿಲ್ಲದೆ.

ನನ್ನ ಕನಸುಗಳ ಮಡಿಲಿಗೆ.  

  

- ಪ್ರೇರಣೆ: ಲ್ಯಾಂಗ್ಸ್ಟನ್ ಹ್ಯೂಸ್ 

Saturday, June 20, 2026

ಕನಸು

ಕನಸುಗಳ ಬಿಗಿದಪ್ಪಿ,

ಉಸಿರಾಗಿಸಿಕೊಳ್ಳೋಣ.

ಕನಸು ನಮ್ಮಯ ಪ್ರಾಣವೇ,

ಕನಸಿಲ್ಲದ ನಾವು ಹೆಣವೇ!

 

ರೆಕ್ಕೆಗಳು ಬೇಕು,

ಹಕ್ಕಿ ಹಾರಲು,

ಕನಸುಗಳು ಬೇಕು,

ನಾವು ಬಾಳಲು.

 

ಕನಸುಗಳ ಬಿಗಿದಪ್ಪಿ,

ನಮ್ಮದಾಗಿಸಿಕೊಳ್ಳೋಣ.

ದೊಡ್ಡ ಕನಸುಗಳ ಬೆನ್ನಹತ್ತಿ,

ಆಗಸದಲ್ಲಿ ತೇಲೋಣ.

 

ಕನಸೇ ಬಾ!, ನನ್ನನಪ್ಪು,

ನಿದ್ದೆಯ ಕೆಡಿಸಿ ನನ್ನನೊಪ್ಪು.

ತೇಲುತ ಆಗಸದಿ ಸಂತಸಬಡು,

ನನಸಾಗಿಸುತ ಜೀವಕ್ಕೆ ಸಂತಸಕೊಡು.   


ನಗುವಿನ ನದಿ

ಮನಸ್ಸು ನಿರ್ಮಲ, ನಿರಾಳ ಆಗಸದಂತೆ,

ದಿನವೂ ನಗುತ್ತೇನೆ, ಎದುರಿಗೆ ಬಂದವರ ನೋಡಿ,

ಕ್ಷಣಮಾತ್ರದ ಕ್ರಿಯೆ ಅದು, ಪ್ರತಿಕ್ರಿಯೆಗೆ ಕಾಯದೆ,

ಎದುರು ಬಂದವರಿಗಾಗಿ ನನ್ನ ಹೂ ನಗು, ಸ್ವಾಗತ,

ಕೆಲವರು ನನ್ನ ಮಂದಹಾಸಕ್ಕೆ ನಗುವರು,

ಮತ್ತೆ ಕೆಲವರು ಮುಖ ಗಂಟ್ಟಿಕ್ಕುವರು,

ಮನದಲ್ಲಿ ನೂರು ಕದನವಿದೆ ನಿಲ್ಲದೆ,

ಕದನದ ಪರಿಣಾಮ ಮುಖದಲ್ಲೇಕೆ?

ಮನದಲ್ಲಿ ಮಿಂಚು ಗುಡುಗುಗಳಿರಲಿ,

ಕಣ್ಣಲ್ಲಿ ಹೊಸತನದ ಚೈತನ್ಯವಿರಲಿ,

ತುಟಿಯಂಚಲಿ ಮಿನುಗಲಿ ತಾರೆಯ ನಗು,

ಜಾರಿ ಹೋಗುವ ಕ್ಷಣಗಳ ಆನಂದಿಸುತ್ತೇನೆ,

ಮತ್ತೆ ಅವು ಎಂದೂ ಬಾರವು, ಅವು ಕ್ಷಣಿಕ,

ಮನಸ್ಸು ಕೋಮಲ, ಮಧುರ, ಹರಿವ ನದಿಯಂತೆ,

ನಿರ್ಮಲ ಮನಸ್ಸಿನ ಗಾನ ಲಹರಿ ಹರಿಯಲಿ,

ಹರಿವ ಜಂಜಾಟದಲ್ಲಿ ಕಲರವ ಕಳೆಯದಿರಲಿ.

Saturday, June 6, 2026

ಬಾಂದಳದ ತಾರೆಗಳು

ಬಾಂದಳದಲ್ಲಿ ತಾರೆಗಳ ಹೂ ಅರಳಿದೆ,

ನಗುನಗುತ್ತಲೇ ಕಣ್ಣ ಮಿಟುಕಿಸುತ್ತಿವೆ.

ಮನದ ಬಾಂದಳದಿ ಸಾವಿರ ವಿಚಾರಗಳಿವೆ,

ಅರಳುವ ಮೊದಲೇ ಆತಂಕದಿ ಮುದುಡುತ್ತಿವೆ.


ಆ ತಾರೆಗಳು ಸ್ವತಂತ್ರದಿ ನಗುತ್ತಿವೆ,

ಈ ತಾರೆಗಳು ಬಿಡುಗಡೆಗೆ ಹಪಹಪಿಸುತ್ತಿವೆ.

ಆ ತಾರೆಗಳ ನಿಯಂತ್ರಿಸುವವನಾರೊ?,

ಈ ತಾರೆಗಳ ಬಳಸುತ್ತಿರುವವನಾನೇ!.


ದಾಟಿ ಪರಿಧಿಗಳ ಬಾಂದಳದಿ ನಗುತ್ತಿವೆ,

ದಾಟಲಾರದೆ ಅಂಕೆಶಂಕೆಯಲಿ ನಲುಗುತ್ತಿವೆ.

ಪ್ರಕೃತಿ ತತ್ವಗಳ ಎಲ್ಲೇ ಮೀರುವುದೇ?,

ಅಂಕೇಶಂಕೆಯಲ್ಲಿ ಮಿಂದು ನರಳುವುದೇ?.


ಯಾವ ದಾರಿ ಹುಡುಕುವುದೋ?,

ಯಾರು ದಾರಿ ತೋರುವರೋ?.

ಸಾಧನೆಯ ಹಠಹಿಡಿದು ಹೊರಡುವುದೋ?,

ಅಂಕೇಶಂಕೆಯಲ್ಲಿ ನೊಂದು ಬೇಯುವುದೋ?.


ದಾರಿ ತೋರಬೇಕು, ಬೆಳಕು ಹಾಯಬೇಕು,

ಆ ಕಾಲಕ್ಕೆ ಹಂಬಲದಿ ಕಾಯಬೇಕು.

ಅರಿತು ಪ್ರಕೃತಿ ತತ್ವಕ್ಕೆ ತಲೆಬಾಗಬೇಕು,

ಅಲ್ಲಿಯವರೆಗೂ ಪ್ರಯತ್ನಿಸುತ್ತಲೇ ಇರಬೇಕು. 

ಸಿಹಿಮಾತು - ಬಿರುಗಾಳಿ

ಸಿಹಿಮಾತು, ಸಿಹಿಮಾತು,

ಎದೆಯು ಬಯಸುತಿದೆ.

ಬಿರುಗಾಳಿ, ಬಿರುಗಾಳಿ,

ಎದೆಯ ನಡುಗಿಸುತಿದೆ.

 

ಸಿಹಿಮಾತು, ಸಿಹಿಮಾತು,

ಕರುಣೆಯ ಕಡಲ ಸೇರುವುದು.

ಬಿರುಗಾಳಿ, ಬಿರುಗಾಳಿ,

ಮರಣದ ಭಯವ ತರುವುದು.

 

ಸಿಹಿಮಾತು, ಸಿಹಿಮಾತು,

ಹೃದಯದ ಹೂವು ಅರಳುವುದು.

ಬಿರುಗಾಳಿ, ಬಿರುಗಾಳಿ,

ಭರವಸೆಯ ದೀಪವ ಆರಿಸುವುದು.

 

ಸಿಹಿಮಾತು, ಸಿಹಿಮಾತು,

ಜೀವನದ ದಾರಿದೀಪವಾಗುವುದು.

ಬಿರುಗಾಳಿ, ಬಿರುಗಾಳಿ,

ಜೀವನ ಅಲ್ಲೋಲಕಲ್ಲೋಲವಾಗುವುದು.

 

07.06.2026

Sunday, May 31, 2026

ಇರುಳ ನೆರಳಿನ ಪಯಣ

ಇರುಳ ಕತ್ತಲಿನಲ್ಲಿ ಬಯಕೆಗಳ ಕನಸ ನೆರಳ ಹೆಣೆದೆ,

ರಾತ್ರಿಯ ಪ್ರಶಾಂತ ಕತ್ತಲೆಯ ನೆಲಹಾಸಿನ ಮೇಲೆ,

ಅಸ್ಪಷ್ಟ, ಅಗೋಚರ, ಅಲೆದಾಟ, ತೀರದ ದಾಹ,

ಇರುಳ ಕತ್ತಲೆಯಲ್ಲಿ ನಡೆವ ದಾರಿ ಕಾಣದಾಯಿತು.


ಪ್ರಯಾಣದ ದಾಹ, ಬಾಯಾರಿಕೆ, ಹತಾಶೆ,


ಬಳಲಿಕೆ,ದಾಹ ತಣಿಸುವರೆಂದು ಕಾಯುವಿಕೆ,

ಕಣ್ಣರಳಿಸಿ ನೋಡಿದರೂ ಸುತ್ತಲೂ ಬರೀ ಕತ್ತಲೆ,

ಭಯ ಕತ್ತಲ ಆವರಿಸಿ ದೇಹ ಬೆವೆತಿದೆ ದಾರಿ ಕಾಣದೆ.


ಮುಂದೆ ಹೆಜ್ಜೆ ಇಡುವುದೋ!, ದ್ವಂದ್ವ,

ಮುಂದೆ ದಾರಿ ಕಾಣುವುದೇ!, ಪ್ರಶ್ನಾರ್ಥಕ,

ಮರದ ಬುಡದಲ್ಲಿ ಬೆವೆತು ಮಲಗಿದೆ,

ನಾಳೆಯ ಕರಾಳ ಚಿತ್ರವ ನೆನೆದು ಬೆದರಿದೆ.


ದಾಹ, ಬಳಲಿಕೆ, ತಂಪಾದ ಗಾಳಿಗೆ ನಿದ್ದೆಯ ನಶೆ,

ಕನಸ ಪಯಣದಲ್ಲೂ ಬಯಕೆ ನೆರಳು ಹೆಣೆದಿದೆ,

ಹಕ್ಕಿಗಳಿಂಚರ, ಬೆಳಗಿನ ಮಂಜು ಎಚ್ಚರಿಸಿತು,

ಭಯ ಕರಗಿತು, ಸೂರ್ಯೋದಯ ತೆರೆ ಎಳೆದಿತ್ತು.

Saturday, May 30, 2026

ಮೌನ - ಮಾತು

ಪ್ರೀತಿಯ ಭಾವವ ವ್ಯಕ್ತಪಡಿಸು,

ಮೌನ ಪ್ರೀತಿಯ ಭಾಷೆಯಲ್ಲ,

ಸಮಯಕ್ಕೆ ಮಾತುಗಳ ಜೋಡಿಸು,

ಸಾಂತ್ವನದ ಮಾತುಗಳು ಹೃದಯ ತಟ್ಟುವುವು.


ಹೃದಯ ತೆರೆದು ಮಾತನಾಡು,

ಮಾತುಗಳು ಮಧುರ ಪುಷ್ಪಗಳ ಅರ್ಪಿಸು,

ಮೌನ ಬೇಡ, ಮೌನರಾಗ ಬೇಡ,

ಪದಗಳು ಸಂಗೀತವಾಗಿ ರಾಗ ಮಾಲಿಕೆಯಾಗಲಿ.


ಹೇಳಿಬಿಡು, ಮಧುರ ಮಾತುಗಳಲ್ಲಿ,

ಒಪ್ಪುವುದೋ!, ಇಲ್ಲವೋ!, ಗೊಂದಲಬೇಡ,

ಹೃದಯ ನಿನ್ನದಾದರೆ ಜೊತೆಗೂಡುವುದು,

ಇಲ್ಲವಾದರೆ ಅದೊಂದು ಮರೀಚಿಕೆಯಷ್ಟೇ!.


ನಿನ್ನದೆಂದು ಬರೆದಿರುವುದು ಕಾದಿದೆ ನಿನಗಾಗಿ,

ನಿನ್ನದಲ್ಲದ ಹೃದಯ ನಿನಗೇಕೆ ಹೇಳು!,

ಪ್ರಶ್ನಿಸು, ಹೇಳು, ಕೇಳು, ಬಿಡುಗಡೆಗಾಗಿ,

ಮೌನವಾಗು, ಜೊತೆಗೂಡು ನಿನ್ನದಾದಂತೆ. 

ನಾವು ಚೇತನರು

 ಕತ್ತಿಯಿಂದ ತಿವಿದರು, ಬಂದೂಕು ಗುಂಡುಗಳಿಂದ ಸುಟ್ಟರು, ದೇವಸ್ಥಾನಗಳ ಲೂಟಿ ಮಾಡಿದರು, ನಮ್ಮವರ ಸಮಾಧಿಯ ಮೇಲೆ ಅವರ ವೈಭವ, ಕಾಲ ಎಲ್ಲವ ಮರೆಯಿಸಿದೆ, ಸೂರ್ಯ ಮತ್ತೆ ಸುಡುತ್...