Wednesday, May 27, 2026

ಅನಂತ ಪಯಣ

ನಾವು ಪಯಣಿಗರು,

ಎಷ್ಟು ದೂರ ಪಯಣ ತಿಳಿದವರಿಲ್ಲ,

ಪ್ರಯಾಣ ಎಂದು ಆರಂಭವಾಯಿತೋ?,

ಕೊನೆ ಎಂದೋ, ಅರಿತವರಿಲ್ಲ.


 ಇಲ್ಲಿ ಎಲ್ಲರೂ ಅಪರಿಚಿತರು,

ಎಲ್ಲರೂ ಬಂದು ಹೋಗುವವರೇ!,

ನೆಲೆ ನಿಲ್ಲುವವರು ಬಲು ವಿರಳ,

ಇಂದಲ್ಲ ನಾಳೆ ನಮ್ಮ ಪಯಣ ನಿಶ್ಚಿತ.

 

ಕೆಲವರು ಇಲ್ಲಿ ಹಿರಿಯರು,

ಕೆಲವರು ಇಲ್ಲಿ ಕಿರಿಯರು,

ಮತ್ತೆ ಕೆಲವರು ಸಮ ವಯಸ್ಕರು,

ಎಲ್ಲರೂ ಕಾಯುತ್ತಿರುವವರೇ!.

 

ನಮ್ಮ ಜೀವನದ ಉದ್ದೇಶ, ಆಶ್ಚರ್ಯ,

ಬಂದದ್ದು ಏಕೆ?, ಪ್ರಶ್ನಾರ್ಥಕ!,

ಅರಿವಿಲ್ಲದೆ ಸಂಸಾರದಲ್ಲಿ ತಲ್ಲೀನ,

ಬಾಳ ಪಯಣ ನಿರಂತರ, ಅನಂತ.


Sunday, May 24, 2026

ಜನನಿ, ಓ! ಜನನಿ

ಜನನಿ, ! ಜನನಿ,

ಭೂಮಿಗೆ ತಂದವಳು ನೀನಲ್ಲವೇ!,

ಕಂಗಳ ಬೆಳಕು ನೀನೇ ಅಲ್ಲವೇ!,

ಕಂಗಳು ಮೊದಲು ನೋಡಿದ ದೇವತೆ ನೀನಲ್ಲವೇ!,

ನೀನೇ ನನಗೆ ವಿಶ್ವವಲ್ಲವೇ!

ಹಸಿವಾದಾಗ ಉಣಿಸಿದವಳು ನೀನು,

ಬಿದ್ದು ನೋವಾದಾಗ ನೋವುಂಡವಳು ನೀನು,

ನೀನಿಲ್ಲದೆ ನಾನು ಹೇಗಿರಲಿ?,

ನಿನ್ನ ಆಸರೆಯಲ್ಲಿ ಬೆಚ್ಚಗೆ ನಿದಿರೆಯ ತರುವೆ,

ನಿನ್ನ ಕೈಯಲ್ಲಿ ತಂಗಾಳಿಯ ಕರೆತರುವೆ,

ನಿನ್ನ ಕೈ ತುತ್ತು ಅಮೃತವು ಎನಗೆ,

ನಿನ್ನ ಅಡಿಗಳಲ್ಲಿ ಅಡಗಿದೆ ಸ್ವರ್ಗ,

ಅಮ್ಮಾ,ಅಮ್ಮಾ ಎಂದರದೇ ಸ್ವರ್ಗ.

Sunday, May 17, 2026

ಸ್ಥಿರತೆ - ಚಲನೆ

ಇಲ್ಲಿ ಎಲ್ಲವೂ ಚಲಿಸುತ್ತಿದೆ, 

ನಾವು ಮಾತ್ರ ನಿಂತಿದ್ದೇವೆ.

ಆಲೋಚನೆಗಳು ಹರಿಯುತ್ತಿವೆ,

ಸಾಗರದ ಅಲೆಗಳು ಎಂದೂ ನಿಲ್ಲದು.


ಕಾಲವೂ ಕ್ಷಣವೂ ನಿಲ್ಲದೆ ಓಡಿದೆ,

ಭೂಮಿಯೂ ತಿರುಗುತ್ತಲೇ ಇದೆ.

ಬೆಟ್ಟ ಪರ್ವತಗಳು ನಿಂತಲ್ಲೇ ನಿಂತಿವೆ,

ಆದರೂ, ಅವು ನಿರಂತರವಾಗಿ ಕರಗುತ್ತಿವೆ.


ಮನದಲ್ಲಿ ಸ್ಥಿರತೆ ಇಲ್ಲ,

ಯೋಚನೆಗಳಲ್ಲಿ ಏಕಾಗ್ರತೆ ಇಲ್ಲ.

ಅಲೆದಾಡುವ ಮನಕ್ಕೆ ಹಿಡಿತವಿಲ್ಲ,

ಹಿಡಿತವಿಲ್ಲದೆ ಸಾಧನೆ ಶೂನ್ಯ. 


ಹಿಡಿತ ಸಾಧಿಸೆ ಮನವು ಶಾಂತ,

ಶಾಂತ ಮನಸ್ಸೇ ಬೆಳಕಿಂಡಿ.

ಬೆಳಕ ಹಾದಿಯ ಹೆಜ್ಜೆ ಹೆಜ್ಜೆಗೂಡಿ,

ಸಾಧನೆಯ ಹೆದ್ದಾರಿ ತೆರೆವುದು ಹಾಡಿ.  

Friday, May 15, 2026

ದೂರ ಹೋಗದಿರು ಗೆಳೆಯಾ!.

ದೂರ, ಬಹುದೂರ  ಹೋಗದಿರು ಪ್ರಿಯ ಗೆಳೆಯಾ,

ದೂರ ಹೋಗಬೇಕೆಂದು ಎಂದೂ ಯೋಚಿಸದಿರು,

ನಾ ನಿನ್ನ ಬಿಟ್ಟಿರಲಾರೆ, ದಿನವಲ್ಲ ಕ್ಷಣ ಮಾತ್ರವೂ,

ದಿನವಲ್ಲ, ಕ್ಷಣವೂ ದುರಾಗುವುದ ಯೋಚಿಸಲಾರೆ.


ಹೃದಯದ ಚೈತನ್ಯವೇ ನೀನು,

ನೀ ದೂರಾದರೆ ನಾ ಉಳಿಯುವೆನೇ?

ದೇಹದ ಪ್ರಾಣವೇ ನೀನಲ್ಲವೇ!,

ಉಸಿರು ನಿಂತ ಮೇಲೆ ಶವವೇ ತಾನೇ.

 

ಕಡಲು ನೀನು, ನಿನ್ನಲ್ಲಿ ಕರಗುವೆ ನಾನು,

ಕಣ್ಣು ನೀನು, ಕಣ್ಣು ರೆಪ್ಪೆ ನಾನು,

ಒಬ್ಬರನೊಬ್ಬರು ಬಿಟ್ಟಿರದವರು ನಾವು,

ದೇಹ ನಾನು, ಪ್ರಾಣ ನೀನು, ಅಂತರ್ಯಾಮಿ.

 

ದೂರ, ಬಹುದೂರ  ಹೋಗದಿರು ಗೆಳೆಯಾ!.

Sunday, May 10, 2026

ಸಂಜೆಯ ಹೆಜ್ಜೆಗಳು

ನಾನೊಬ್ಬ ಅಜ್ಞಾತ ವ್ಯಕ್ತಿ, ಅನನುಭವಿ,

ನಾನು ದೇವನಲ್ಲ, ದೆವ್ವವಂತೂ ಅಲ್ಲವೇ ಅಲ್ಲ,

ಸ್ವರ್ಗವ ಸೃಷ್ಠಿಸಲಾರದವನು,

ಅದಿರಲಿ, ಕ್ಷಣದಲ್ಲಿ ಸಂತೋಷವನ್ನೂ ಸಹ,

ಆದರೂ, ಭರವಸೆ ಇಡು ನನ್ನಲ್ಲಿ,

ತಪ್ಪು ತಿಳುವಳಿಕೆ, ಜಗಳ, ಕದನ,

ಹಸಿವು, ಎಲ್ಲವೂ ಕಳೆದು ಹೋಗುವುವು,

ಈಗ ಸಂಜೆಯ ಸೂರ್ಯಾಸ್ತದಲ್ಲಿ,

ಕೈಹಿಡಿದು ನಡೆಯೋಣ, ಎಲ್ಲವ ಬದಿಗಿಟ್ಟು,

ನನ್ನೊಂದಿಗೆ ಹೆಜ್ಜೆ ಇಡು, ಜೊತೆಗೆ ನಗುವಿರಲಿ,

ಮನದ ಮೂಲೆಯಲ್ಲಿ ಕಷ್ಟಗಳ ಸಹಿಸುತ್ತಾ,

ಮುಂದೆ ತಲೆಗೂದಲು ಬೆಳ್ಳಗಾದಾಗ,

ನಾವು ವಯಸ್ಸಿನ ಸಂಜೆಯಲ್ಲಿದ್ದಾಗ,

ಮತ್ತೆ ಕೈ, ಕೈ ಹಿಡಿದು ನಡೆಯೋಣ,

ಸಂಜೆಯಾಗಸದ ರವಿಯ ನೋಡುತ್ತಾ,

ಆಗ ಹೇಳು ನಿನ್ನ ಮನದ ಮಾತುಗಳ,

ಎಲ್ಲಿ ಹೋದವೋ ಸುಂದರ ದಿನಗಳು...

ಮತ್ತೆ ಭರವಸೆಗಳ ಮೆಟ್ಟಿಲು ಹತ್ತೋಣ,

ಜೀವನ ಪ್ರೀತಿಯ ಹೆಜ್ಜೆಗಳ ಇಡೋಣ,

ನಗುವ ಮರೆಯದೆ ನಗುತ್ತಲೇ ಇರೋಣ.

Saturday, May 9, 2026

ಹೂವಿನ ಮೋಹ



ಮೋಸವೇಕೆ ಹೋದೆ ಹೃದಯವೇ?,

ಕೈ ಜಾರುತಿದೆ ಎಂದರೂ ಮರೆತೆ ಏಕೆ?,

ಜಾರಿಹೋದ ನೀರಿನಂತೆ ಬೆಟ್ಟದ ಹೂವು,

ಕಾಲ ನಿರಂತರ ಸತ್ಯವೆಂದು ನಿರೂಪಿಸಿತು,

ನೆನಪೊಂದೇ ಉಳಿದಿದೆ, ಮನವ ಕಾಡುತ್ತಾ,

ಹೂವು ನಮ್ಮದಲ್ಲ, ಬರಿ ಭ್ರಮೆಯಷ್ಟೇ!,

ಕಂಪು ಬೀರುವ ಮುನ್ನವೇ ಬೇಗ ಬಾಡಿದೆ.

ಕಣ್ಣಿನ ಸಾಕ್ಷಿ

ಕನ್ನಡಿಯ ಮುಂದೆ ನಾನು,

ನನ್ನ ಕಂಗಳು ದಿಟ್ಟಿಸುತ್ತಿವೆ,

ಒಮ್ಮೆ ಭಯ, ಮತ್ತೊಮ್ಮೆ ನಾಚಿಕೆ,

ಕಾಳಜಿಯೋ?, ಇಲ್ಲ ಶಿಕ್ಷೆಯೋ?

ಏನನ್ನೋ ನಿರೀಕ್ಷಿಸುತ್ತಿದೆ,

ಭಯದಿಂದಲೋ!, ಕಾಳಜಿಯಿಂದಲೋ!,

ಹೃದಯದಲ್ಲೇನೋ ಭಯ, ಕಸಿವಿಸಿ,

ಕಂಗಳು ಸಾಕ್ಷಿಯಾಗುತ್ತಿವೆ,

ಕಣ್ಣೀರು ಧಾರಾಶಾಹಿ,

ಕಂಗಳು ದಿಟ್ಟಿಸುತ್ತಲೇ ಇದೆ,

ಹೃದಯ ತಂಪನ್ನೆರೆಯುತ್ತಿದೆ.

Saturday, May 2, 2026

ಮೌನದ ಅಸ್ತಿತ್ವ

ಮೌನವೇಕೆ?

ಏಕೆ ನಿಂತಿರುವೆ?

ಗತ ಕಾಲದ್ಲಲೇಕೆ ನರಳುವೆ?

ಕಾಲ ಮುಂದೆ ಸಾಗಿದೆ ಕಾಣದೆ.

 

ನೆನಪುಗಳು ಬೇಕು,


ತಂಗಾಳಿಯಂತೆ ಮನಸಿಗೆ.

ಬಿರುಗಾಳಿಯಂತಾಗಬಾರದು,

ಉಳಿಗಾಲವಿಲ್ಲ ನಿನಗೆ.

 

ನಾನು ಚಿರಂಜೀವಿ,

ನನಗೆ ಸಾವಿಲ್ಲ.

ಸತ್ತನೆಂಬ ಭ್ರಮೆ ಬೇಡ,

ನಿನ್ನ ಉಸಿರಲ್ಲಿ ನಾನಿರುವೆ.

 

ಉದಯಿಸುವ ಸೂರ್ಯನ ಬೆಳಕಲ್ಲಿ,

ಬೆಳಗಿನ ಬೀಸುವ ತಂಗಾಳಿಯಲ್ಲಿ.

ಮರಗಿಡಗಳ ಚಿನ್ನದ ಚಿಗುರಲ್ಲಿ,

ಆಕಾಶದಿಂದ ಧರೆಗಿಳಿವ ಮಳೆಯಲ್ಲಿ.

 

ಪಂಚಭೂತಗಳಲ್ಲಿ ಕಾಣದೆ,

ಇದ್ದೂ ಇಲ್ಲದಂತಿರುವೆ ನಾನು.

ಬರಿಗಣ್ಣಿಗೆ ಕಾಣಲಾರೆನು ನಿಜ,

ನಿನ್ನ ಕಣ ಕಣದಲ್ಲಿ ನೆಲೆಸಿರುವೆ ನಾನು.

ಅಳಿಯದ ನೆನಪು

ಮನದ ಮೂಲೆಯಲ್ಲಿ,

ಬೇಡದ ಗಂಟು ಮೂಟೆಯಿದೆ.

ಹತ್ತು ಹಲವಾರು ವರುಷಗಳಲ್ಲಿ,

ಕೂಡಿಟ್ಟ ನೋವಿನ ಕಂತೆಯಾಗಿದೆ.

 

ಯಾರಿಗೂ ತಿಳಿಯದ,

ವಿಷಯಗಳು ಅಲ್ಲಿ ಕೊಳೆಯುತ್ತಿದೆ.

ನನಗೆ ಮತ್ತೆ ನೆನಪಾದ

ಸಂಗತಿಗಳು ಸಾವಿಲ್ಲದೆ ಮಲಗಿದೆ.

 

ಹೊರಗೆ ಮಾಸಿದಂತೆ ಕಾಣುವುದು,

ಒಳಗೆ ಜೀವತೆಗೆಯುವಷ್ಟು ಮಾರಣಾಂತಿಕ.

ಎಲ್ಲವೂ ತಿಳಿದಿದೆ ಸಮಯ ಕಾಯುವುದು,

ಒಳಗೆ ಜ್ವಾಲಾಮುಖಿಯ ಸಾಂಕೇತಿಕ.

 

ಮಾಸಿದ ಕಾಗದದಲ್ಲಿ, 

ಅಕ್ಷರಗಳು ಕಾಣದೇ ಕ್ಷೀಣಿಸಿವೆ.

ಮನದ ಪಟಿಲದಲ್ಲಿ,

ಗಾಯಗಳು ಮಾಸದೇ ಉಳಿದಿವೆ.  

 

ಮೌನದ ಮಡಿಲಲ್ಲಿ ಬೆಳಕು ಕಾದಿದೆ,

ಗಂಟುಗಳ ಹಿಂದೆ ಹೊಸ ದಾರಿ ನಿಂತಿದೆ.

ಮನದ ಗಾಯಗಳಲಿ ಆಶೆಯ ಕಿರಣ,

ಜೀವನದ ಪಟದಲ್ಲಿ ಪುನರುಜ್ಜೀವನ.

 

03.05.2026

Friday, May 1, 2026

ಪ್ರಕೃತಿ ತತ್ವ

 ಪ್ರಕೃತಿಯಲ್ಲಿ ಅಣು ನಾನು,

ನಾನೇ ಪ್ರಕೃತಿ,

ನನಗಳಿವುಂಟು, ಜಂಗಮ ನಾನಲ್ಲ,

ಇದೇ ಪ್ರಕೃತಿ ತತ್ವ.


ಅಣು ಅಣುವಾಗಿ ವಿಭಜಿಸು,

ನಿನ್ನ ಅಂಕೆಗೆ ಗೆಲುವಿದೆ,

ಪರಮಾಣುವಿನಲ್ಲೂ ಅಗಾಧ ಶಕ್ತಿಯಿದೆ,

ನಾನು ಶಕ್ತಿ, ಕೊನೆಯೆಂಬುದಿದೆ.


ಒಗ್ಗಟ್ಟು, ವಿಭಜನೆ,

ಎರಡೂ ಪ್ರಕೃತಿಯ ತತ್ವಗಳೇ,

ಪ್ರಕೃತಿಯ ಕೈಯಲ್ಲಿ ನಮ್ಮ ನಡೆ,

ಸಮತೋಲನವಿದ್ದರೆ ಎಲ್ಲವೂ ಸುಲಲಿತ. 

Saturday, April 25, 2026

ಅನಂತ ಗಾನ

ಆತ್ಮದ ಹೃದಯ 'ಭರವಸೆ',

ಕಾಣದ ರೆಕ್ಕೆಗಳು ಅನಂತದೆಡೆಗೆ,

ಕಣ್ಣು ತೆರೆದೊಡೆ ನಭವೇ 'ಅನಂತ'.

 

'ಭರವಸೆ' ಅನಂತ ಗೀತೆಯಂತೆ,

ಪದಗಳೇ ಇಲ್ಲದ ರಾಗದಂತೆ,

ಅಂತ್ಯವಿಲ್ಲದ ಅನಂತ ಗಾಯನದಂತೆ.

 

'ಭರವಸೆ' ಕಾಣದ ಕಡಲಿನಂತೆ,

ಹರಿಯುವ ನದಿಯಂತೆ,

ಕಾಲನಂತೆ ನಡೆ ಅನಂತಾದೆಡೆಗೆ.

 

'ಭರವಸೆ' ಆತ್ಮದ ಬೆಳಕಿನಂತೆ,

ತಿಮಿರವ ಕಳೆವ ದೀವಿಗೆಯಂತೆ,

ಆತ್ಮೋನ್ನತಿಯ ಅರಸುವ ಜ್ಞಾನಿಯಂತೆ.

ಅನಂತ ಪಯಣ

ನಾವು ಪಯಣಿಗರು , ಎಷ್ಟು ದೂರ ಪಯಣ ತಿಳಿದವರಿಲ್ಲ , ಈ ಪ್ರಯಾಣ ಎಂದು ಆರಂಭವಾಯಿತೋ ?, ಕೊನೆ ಎಂದೋ , ಅರಿತವರಿಲ್ಲ .   ಇಲ್ಲಿ ಎಲ್ಲರೂ ಅಪರಿಚಿತರು ,...