Sunday, February 8, 2026

ಬೆಳಕಿನ ಕಿಡಿ

ಕಾರ್ಮೋಡ ಮನವ ಆವರಿಸೆ,

ಧೈರ್ಯ ಅಂತರಂಗದೊಳು ಬೆಚ್ಚಗಿರೆ.

ಮುದುಡಿ ಕುಳಿತುಕೊಳ್ಳದೇ ಹೆಜ್ಜೆಯಿಡು,

ಧೈರ್ಯ ತುಂಬಿದವನಂತೆ ನಟಿಸು.

 

ನಗು, ನಿನ್ನ ಸ್ಥಿತಿಯ ಕಂಡು ಕರಗಿ,

ಭಯವೇ ಆವರಿಸಿದರೂ ನಿಂತು ತಿರುಗು.


ಬಲವಂತದಿ ನಟಿಸು ಮನದೊಳಗೆ ಭಾವತುಂಬಿ,

ಬಲವು ತುಂಬುವುದು ಮನದೊಳಗೆ.

 

ನಿರಾಸೆ ಇದ್ದರೂ ಆಸೆಯಿಂದಲೇ ಹೆಜ್ಜೆಯಿಡು,

ಕಾರ್ಯಪ್ರವೃತ್ತನಾಗು, ಬದಲಾವಣೆಗೆ ಸೆಣಸು.

ದೇಹಭಾಷೆಯ ಬದಲಿಸು, ಪರಿಸ್ಥಿತಿ ಬದಲಾದೀತು,

ಬುದ್ಧಿಯಿಂದಲಿ ಪಾತ್ರವ ಸರಿಯಾಗಿ ನಿರ್ವಹಿಸು.

 

ಪ್ರತಿಕ್ಷಣವೂ ನಾವೆಣಿಸಿದಂತೆ ಇರದು,

ಕ್ರಿಯೆಯಿಂದಲೇ ಬೆಳಕು ಹೊರಳುವುದು.

ಹುಡಿಯಾಗು,ಕಿಡಿಯಾಗು, ಬೆಳಕೇ ನೀನಾಗು,

ನಿನ್ನೊಳ ಚೈತನ್ಯಕ್ಕೆ ನೀ ಅಡಿಯಾಳಾಗು.

 

ನಿನ್ನೊಳ ಚೈತನ್ಯ ನಿನ್ನ ಗುರಿ ತಲುಪಿಸುವುದು….

Saturday, February 7, 2026

ಪುಟಗಳ ಶಕ್ತಿ

ಪುಸ್ತಕವೊಂದು ಮೌನವಾಗಿ ಕಾಯುತ್ತದೆ,

ಓದುವ ಮನಸ್ಸಿಗಾಗಿ, ಬೆಳಕ ಕಣ್ಣು ತೆರೆಯಲು.

ಕಾಣದ ಜಗವಡಗಿದೆ ಅದರ ಒಡಲೊಳಗೆ,

ಜ್ಞಾನದ ಹೊನಲು ಜೀವನ ಬೆಳಗಲು ಕಾದಿದೆ.

 

ಕಗ್ಗತ್ತಲಲ್ಲಿ ಪುಸ್ತಕ ಹೊಳೆದಿದೆ ನಕ್ಷತ್ರದಂತೆ,

ಕನಸ ಬೀಜ ಮನದಲ್ಲಿ ಬಿತ್ತಲು ಕಾದಿದೆ.

ಪ್ರಯತ್ನದ ರೆಕ್ಕೆ ತೊಡಿಸಿ ನಭಕ್ಕೆ ಹಾರಿಸಲು,

ಪುಟ ಪುಟಗಳಲ್ಲಿ ಸೃಷ್ಟಿಯ ಸೊಬಗ ತೆರೆದಿದೆ.

 

ಬಾ ಓದುಗನೇ ಪುಟಗಳಲ್ಲಿ ಕಣ್ಣ ಹಾಯಿಸು,

ಜ್ಞಾನದ ದೀವಿಗೆಯ ಹೃದಯದಲ್ಲಿ ಹಚ್ಚು.

ದೂರದೃಷ್ಟಿಯ ಬೆಳೆಸಿ ಅಜೇಯನಾಗು ಬಾ,

ಮಾನವತೆಯ ಕರುಣೆಯ ಸಾಧಕನಾಗುವೆ ಬಾ.

 

ಬಾ ಓದುಗನೇ, ಸೋಜಿಗವ ಕಾಣು ಬಾ...

Saturday, January 31, 2026

ಮಧುರ ಯಾನ

ಹೊರಟೆವಾನಂದದಿ ಪ್ರಕೃತಿ ಮಡಿಲಿಗೆ,

ಸ್ನೇಹಿತರು, ಗೆಳೆತನದ ದೆಸೆಯಿಂದ ಮುದದಿ,

ದೂರದ ತಾಯ ಮನೆಗೆ, ತವರು ಮನೆಯಂತ ಗುಡಿಗೆ,

ಮುಗ್ದ ಮನಗಳು, ಐವತ್ತರ ಹರೆಯ ಗೆಳೆತನಕೆ,

ತಾರುಣ್ಯದ ಹರೆಯದಲ್ಲಿ ಕಂಡ ಮುಖಗಳವು,

ಜೀವನದ ಕಷ್ಟ,ಸುಖ, ನೋವು-ನಲಿವುಗಳ ಉಂಡೆವು,

ಬದುಕ ಲೀಲೆಗೆ ಬಾಗಿ ಏಳುವವರು ನಾವು,

ಕೊನೆಯ ಅರಿವಿದೆ ಇಂದಲ್ಲ, ನಾಳೆ ನಮ್ಮ ಸರದಿ,

ಮಧುರ ನೆನಪುಗಳ ಆಸರೆಯಲ್ಲಿ ಹೆಜ್ಜೆ ಇಡುವ,

ನಾಳೆಗಳು ಬರಲಿ, ನೆನಪುಗಳು ಉಳಿಯಲಿ.

Thursday, January 22, 2026

ಈ ಸಮಯ

ಸಮಯ ಅತ್ಯಮೂಲ್ಯ,

ಮುಂದೆಂದೂ ಬಾರದು ಗೆಳೆಯಾ.

 

ಸಮಯ ಹರಿಯುವ ನದಿಯಂತೆ,

ಹಿಂತಿರುಗಿ ಬಾರದು ಎಂದೂ.

 

ಹಣ ಮತ್ತೆ ಸಂಪಾದಿಸಬಹುದು,

ಸಮಯ ಮರಳಿ ಬಾರದು ಗೆಳೆಯ.

 

ಪ್ರತಿ ಕ್ಷಣ ಅಮೂಲ್ಯ ಗೆಳೆಯ,

ವ್ಯರ್ಥ ಮಾಡಬೇಡ ಗೆಳೆಯ.

 

ಅಧ್ಯಯನ, ಆರೋಗ್ಯ, ಕನಸುಗಳ ದಾರಿ,

ಸಮಯವನ್ನು ಜಾಣ್ಮೆಯಿಂದ ಬಳಸು.

 

ಕೊನೆಯ ಹೊತ್ತಿನಲ್ಲಿ ನೆನಪಿಸಿಕೋ,

ಮಾಡಿದ ಅರ್ಥಪೂರ್ಣ ಕಾರ್ಯವ.

 

ಮರುಗದಿರು ಕೊನೆಯಲ್ಲಿ,

ವ್ಯರ್ಥಮಾಡಿದೆ ಎಂದು.

ಗುರು

ಜೀವನದ ಪ್ರತಿ ಹೆಜ್ಜೆಯಲಿ ಪಾಠವಿದೆ,

ಜೀವನದ ಪ್ರತಿ ಮುಖದಲಿ ಸಂದೇಶವಿದೆ.

ಗೆಲುವು ಕಂಡವರು ಸ್ಫೂರ್ತಿಯ ದೀಪ,

ನ್ಯೂನತೆ ಹೊಂದಿರುವವರು ಎಚ್ಚರಿಕೆ.

 

ಸಂತೋಷ ಹಂಚಿದವರು ಹರ್ಷದ ದಾರಿ,

ದುಃಖ ಅನುಭವಿಸಿದವರು ಕೃತಜ್ಞತೆಯ ಪಾಠ.

ದಯೆಯ ಹೃದಯದವರು ಕರುಣೆಯ ಗೀತೆ,

ಕೊಂಕು  ಮಾತುಗಳನಾಡುವವರು ಸಹನೆಯ ಪಾಠ.

 

ಜೀವನವೇ ಒಂದು ದೊಡ್ಡ ಪಾಠಶಾಲೆ,

ಪ್ರತಿ ಜೀವಿಯೂ ಗುರುವು ಇಲ್ಲಿ.

ಕಲಿಯುವ ಒಳಮನಸ್ಸು ಕಣ್ತೆರೆದರೆ,

ಪ್ರತಿ ಕ್ಷಣವೂ ಮನ್ನೋಲ್ಲಾಸ, ಜೀವನ ಪಾಠ.

Thursday, January 15, 2026

ಮೂಲ ಪ್ರಶ್ನೆ

ಮನಸೇ, ನಿಲ್ಲು ಕ್ಷಣ,

ಪ್ರಶ್ನೆ ಕೇಳಿಕೋ ನಿನ್ನೊಳಗೆ

ಏನು ಮುಖ್ಯ? ಏಕೆ ಮುಖ್ಯ?

ಅದೇ ದಾರಿ ಬೆಳಕಾಗುವುದು.

 

ಅನಗತ್ಯದ ಗೊಂದಲ ತೊರೆ,

ಸತ್ಯದ ಅರ್ಥ ಹಿಡಿದುಕೋ,

ಸಾಧನೆಯ ಹೂವು ಅರಳಲಿ,

ಆತ್ಮಜ್ಞಾನದ ದೀಪ ಬೆಳಗಲಿ.

 

ಅಧ್ಯಯನದ ಸಾಗರದಲ್ಲಿ,

ಅಲೆಗಳೆಷ್ಟು ಎದ್ದರೂ,

ಮೂಲ ಹರಿಗೋಲ ಹಿಡಿ ಸಾಕು,

ಗುರಿಯ ನೀ ತಪ್ಪದೆ ಸೇರುವೆ.

 

ಗುರಿ ನಿಗದಿ ಮಾಡುವಾಗ,

ಕಾರಣ ಕೇಳು ಹೃದಯವ,

ಬಲವಾದ ಕಾರಣವಿರೆ,

ಪ್ರಯತ್ನದ ಫಲ ನಿನ್ನದೇ.

 

ಜೀವನದ ಪ್ರತಿಯೊಂದು ಹೆಜ್ಜೆ,

ಪ್ರಶ್ನೆಯೇ ಮಾರ್ಗದರ್ಶಿ,

ಏನು ಮುಖ್ಯ? ಏಕೆ ಮುಖ್ಯ?

ಅದೇ ನಿನ್ನ ನಿಜದ ದಾರಿದೀಪ.

Wednesday, January 14, 2026

ಗುರಿಯ ದಾರಿ

ಚಿಕ್ಕ ಚಿಂತನೆಯ ಬೀಜ ಬಿತ್ತು

ಅವಕಾಶಗಳ ಅರಣ್ಯ ಬೆಳೆವುದು.  

ಬರೆದ ಗುರಿ ಬೆಳಕಾಗುವುದು, 

ಕತ್ತಲಲ್ಲಿ ದಾರಿ ದೀಪವಾಗುವುದು.  

 

ಆಸೆಯ ನಕ್ಷತ್ರದಂತೆ ಗುರಿ ಹೊಳೆವುದು,  

ಬಯಕೆಯ ಹೆಜ್ಜೆಗಳಿಗೆ ದಾರಿ ತೋರಿವುದು.  

ಹಂಬಲದ ಕಾರಣ ಹೃದಯ ಉಳಿಸುವುದು,  

ಯಾವಕಾಲವಾದರೂ ಮನದಲ್ಲೇ ಉಳಿವುದು.  

 

ಯೋಜನೆ ನದಿಯಂತೆ ಹರಿಯಲಿ, 

ಮನಸ್ಸು ಬಾಗಿ ಆನಂದಿಸಲಿ. 

ಇಂದೇ ಆರಂಭಿಸಿದ ಕೆಲಸ, 

ನಾಳೆಯ ನನಸು ಹುಣ್ಣಿಮೆಯಂತೆ. 

 

ಕನಸುಗಾರ, ಅನ್ವೇಷಿ, 

ಭವಿಷ್ಯ ಗುರಿಗಳಲ್ಲಿ ನೆಲೆಸಿದೆ. 

ಬರೆ, ರೂಪಿಸು, ಜೀವ ತುಂಬು, 

ಹೂವಿನಂತೆ ಅರಳಿ, ಗುರಿ ತಲುಪು. 

Monday, January 12, 2026

ಕೃತಜ್ಞತೆ

ಕೃತಜ್ಞತೆ ಹೃದಯದ ಬೆಳಕು,

ಅಸಮಾಧಾನ ಕರಗಿಸುವ ಬಿಸಿ.

ದೂರುಗಳ ನೆರಳಲ್ಲಿ ನಿಂತರೂ,

ಧನ್ಯತೆಯ ನಗು ದಾರಿ ತೋರುವ ದೀವಿಗೆ.

 

ಜ್ಞಾನ, ಸ್ನೇಹ, ಆರೋಗ್ಯ, ಅವಕಾಶ

ಜೀವನದ ಅಮೂಲ್ಯ ಉಡುಗೊರೆ.

ಸಣ್ಣ ಸಂತೋಷದ ಕಿರಣ,

ಮನದೊಳಗೆ ಕಾಣದ ಅಗ್ನಿಪರ್ವತ.

 

ಸವಾಲಾದರೆ ಅದು ಪಾಠ,

ಕಷ್ಟ ಬಂದರೆ ಅದು ಶಕ್ತಿ.

ಕೃತಜ್ಞತೆಯ ಮನಸೇ ಹೇಳು:

“ಬದುಕೇ ಸೌಂದರ್ಯ, ನಾನು ಸಂಪೂರ್ಣ.”

Thursday, January 8, 2026

ಖಚಿತತೆ

ಖಚಿತವಾಗಿ ಏನು ತಿಳಿದಿದ್ದೀಯೆ?

ಸೂರ್ಯೋದಯವೇ? ನಿನ್ನ ಉಸಿರೇ?

ಮನಸ್ಸಿನ ಕನಸುಗಳೇ?, ನೋವುಗಳೇ?,

ಎಲ್ಲವೂ ಊಹೆಗಳ ನೆರಳಲ್ಲಿ ನಿಂತಿವೆ.

 

ನಂಬಿಕೆಗಳುಮನಸ್ಸಿನ ಕಟ್ಟಡ,

ಕೆಲವು ಬಲವಾದವು,

ಕೆಲವು ಮರಳಿನ ಮನೆ,

ಅವುಗಳೇ ನಮ್ಮ ದಾರಿ.

 

ಪ್ರಕೃತಿ ತತ್ವ ಹೇಳುತ್ತದೆ:

ಸರಳವಾದುದು ಸಾಮಾನ್ಯ ಸತ್ಯ.

ಅತಿಯಾದ ಊಹೆಗಳು

ನಮ್ಮ ಹೆಜ್ಜೆಗಳ ತಪ್ಪಿಸುವುವು.

 

ಗೆಳೆಯಾ!, ನಂಬಿಕೆಗಳ ಪ್ರಶ್ನಿಸಿಕೋ!,

ಪರಿಶೀಲಿಸು, ಸಹಾಯಕ್ಕಿಲ್ಲದವ ಬಿಡು,

ಶಕ್ತಿದಾಯಕವುಗಳನ್ನು ಉಳಿಸಿಕೋ!,

ಅವುಗಳೇ ಬೆಳವಣಿಗೆಯ ಬೀಜ.

 

ಖಚಿತತೆಮೃಗಜಾಲ,

ಪ್ರಶ್ನಿಸುವ ಮನಸ್ಸಿರಲಿ,

ಸರಳ ನಂಬಿಕೆಯೇ ಬೆಳಕು,

ಜೀವನ ದಾರಿದೀಪವದು.

Wednesday, January 7, 2026

ಸಂಜೆಯ ಆಕಾಶದ ನುಡಿಗಳು

ಸೂರ್ಯನು ರೆಕ್ಕೆ ಮುಚ್ಚಿ,

ನೀಲಿ  ಬಣ್ಣದ ಮೌನ ಹರಡಿ,

ಮರೆತ ಕನಸುಗಳ ಮೋಡಗಳು,

ಸಂಜೆಯ ಮಡಿಲಲ್ಲಿ ತೇಲುವುವು.

 

ನಕ್ಷತ್ರಗಳ ಕೆಳಗೆ ನದಿ ರಾಗ ಹೊಮ್ಮುತ್ತಾ,

ಅಲೆಮಾರಿ ಮನಗಳ ಪ್ರತಿಬಿಂಬವಾಗಿ,

ಪ್ರತಿ ಅಲೆ ಕಥೆ ಹೊತ್ತು ಸಾಗುತ್ತಾ,

ಪ್ರತಿ ಮಿನುಗು ನಾಳೆಯ ಭರವಸೆ ನೀಡುತ್ತಾ.

 

ನೆರಳುಬೆಳಕಿನ ನಡುವೆ ಅಂತರಾತ್ಮ,

ಬದುಕುವ ಕಲೆಯ ಕಲಿತು,

ನಿಶ್ಶಬ್ದ ವಿರಾಮಗಳಲ್ಲಿ ಸ್ಪಷ್ಟತೆ ಕಂಡು,

ರಾತ್ರಿಯ ಲಯದಲ್ಲಿ ಧೈರ್ಯವನ್ನು ಕಂಡುಕೊಳ್ಳುತ್ತಾ.

 

ಗೀಚಿ, ಬರೆ, ಅಕ್ಷರಗಳಲ್ಲಿ ಹುಡುಕು,

ಶಾಯಿಯಿಂದ ಮನದ ದೀಪ ಬೆಳಗಲಿ,

ಏಕಾಂತದ ಲಿಪಿಯಲ್ಲಿ,

ಸಮಸ್ಯೆ ತನ್ನ ಪ್ರಭಾತವ ಕಾಣಲಿ.

Tuesday, January 6, 2026

ಏಳು ದಿನಗಳ ಕನ್ನಡಿ

ಏಳು ದಿನಗಳ ಹಾದಿ,

ಹಗಲು-ರಾತ್ರಿ ಹೆಜ್ಜೆಯ ನಾಡಿ,

ಕಾಲದ ಹೊಳೆ ಹರಿದು ಹೋದರೂ,

ಮನದ ಕನ್ನಡಿ ನಿಂತು ನೋಡಲಿ.

 

ತಪ್ಪುಗಳ ತಂತಿ ಮೀಟಿದಾಗ,

ಪಾಠಗಳ ರಾಗವು ಹೊಮ್ಮಲಿ,

ಯಶಸ್ಸಿನ ಬೆಳಕು ಹರಿಯುವಾಗ,

ಹೊಸ ಕನಸುಗಳ ಬೀಜ ಬಿತ್ತಲಿ.

 

ಪ್ರತಿ ಭಾನುವಾರದ ಮೌನ ಕ್ಷಣ,

ಮನದ ಮಾತು ಕೇಳುವ ಸಮಯ,

ಹಿಂದಿನ ತಪ್ಪು ಹೆಜ್ಜೆಗಳ ಎಣಿಸಿ,

ಮುಂದಿನ ಸರಿ ದಾರಿಯ ಕಟ್ಟುವ.

 

ಏಳು ದಿನಗಳ ಪ್ರಯತ್ನ ಪರಿಶೀಲನೆ,

ಜೀವನದ ಗೀತೆಗೆ ಲಯಬದ್ಧ ತಾಳ,

ಸಣ್ಣ ವಿರಾಮ, ದೊಡ್ಡ ಬೆಳವಣಿಗೆ,

ಮನದೊಳಗೆ ಮೂಡುವುದು ನವ ಚೈತನ್ಯ.

ಬೆಳಕಿನ ಕಿಡಿ

ಕಾರ್ಮೋಡ ಮನವ ಆವರಿಸೆ , ಧೈರ್ಯ ಅಂತರಂಗದೊಳು ಬೆಚ್ಚಗಿರೆ . ಮುದುಡಿ ಕುಳಿತುಕೊಳ್ಳದೇ ಹೆಜ್ಜೆಯಿಡು , ಧೈರ್ಯ ತುಂಬಿದವನಂತೆ ನಟಿಸು .   ನಗು , ನಿನ್...