Friday, April 24, 2026

ವ್ಯತ್ಯಾಸವಿಲ್ಲ

ಪರಮಾಣುವಿನಷ್ಟು ಚಿಕ್ಕದು,

ಗುರುಗ್ರಹದಷ್ಟು ದೊಡ್ಡದು,

ಒಳ-ಹೊರಗೆ ನಾವೆಲ್ಲರೂ ಒಂದೇ!,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ದೊಡ್ಡಣ್ಣನಂತೆ ಹಣದ ಶ್ರೀಮಂತರು,

ಬಿಕ್ಷುಕನಂತೆ ಅಲೆದಾಡುವ ಬಡವರು,

ನಾವೆಲ್ಲರೂ ಒಂದೇ ಆಗಿಬಿಡುವೆವು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಅವನು ಪರಂಗಿ ಕೆಂಪುಬಣ್ಣ,

ಇವನು ಗೋಧಿಬಣ್ಣ,

ಅವನೋ ಅಮಾವಾಸ್ಯೆ ಕಪ್ಪುಬಣ್ಣ,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಕಣ್ಣು ತೆರೆದಿದ್ದೇವಷ್ಟೇ,

ಒಳಗುರುಡು ಎಲ್ಲರಿಗೂ,

ಅವನು ಬೆಳಕು ಹರಿಸಬೇಕು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.

 

ಪ್ರೇರಣೆ:   No Difference" by Shel Silverstein

ಮುರಳಿಯ ಕರೆ

ಮುರಳಿ ಕರೆಯುತಿದೆ,

ಮರಳಿ ಬಾರೆನುತಿದೆ.

ಕರುಣೆಯ ಹೃದಯದಿ ಪ್ರೀತಿಯನಿಟ್ಟು,

ತಾಯ ಪ್ರೀತಿಯ ಹಂಬಲದಿ ಮನವನಿಟ್ಟು.


ಮುರಳಿ ನಗುತಿಹನು,

ಮರಳಿ ಬಾರೆನುತಿಹನು

ಕಳೆದು ಹೋದ ಸವಿನೆನಹುಗಳ ಹಾರಿಬಿಟ್ಟು,

ಸವಿಜೇನ ಸವಿಯುವ ಬಾ ಎಂದು ಬೊಗಸೆಯಲಿಟ್ಟು.

 

ಮುರಳಿ ಮಿಡಿಯುತಿದೆ,

ಮರಳಿ ಬಾರೆನುತಿದೆ.

ಬಾಲ್ಯದ ದಿನಗಳ ಕಾಮನಬಿಲ್ಲ ಮೂಡಿಸಿ,

ಹೃದಯದಿ ಹೂವ ಭರವಸೆಯ ತುಂಬಿಸಿ.

 

ಮುರಳಿ ಹಾಡುತಿದೆ,

ಮರಳಿ ಬಾರೆನುತಿದೆ.

ಸ್ನೇಹದ ತಂತಿಯಲ್ಲಿ ಸೌರಭವ ಸೂಸಿ,

ಜೀವನದಿ ಸಂಗೀತ ಸುಧೆಯ ಪೂಸಿ.

Thursday, April 23, 2026

ಅಸ್ತಿತ್ವದ ಪ್ರಶ್ನೆ

ದೀಪವು ಯಾರದು?,

ಗಾಳಿಯು ಯಾರದು?,

ಎರಡನ್ನೂ ಆಡಿಸುವವರು ಯಾರು?,

ಎಲ್ಲವ ನೋಡುವವರು ನಾವು ಯಾರು?.

 

ದೀಪವು ಹೊತ್ತಿಸ ಬೇಕು!,

ಗಾಳಿಯೂ ಬೇಕು,

ಸ್ಥಿರವೋ?, ಅನಿಶ್ಚಿತವೋ ಬಲ್ಲವರಾರು?,

ಕಣ್ಣಿದ್ದು ಕುರುಡರಾಗಿಹೆವು ನಾವು ಏಕೆ?.

 

ಒಂದು ಕ್ಷಣ ಸಂತೋಷ,

ಮತ್ತೊಂದು ಕ್ಷಣ ದುಗುಡ,

ಏರುಪೇರಿನ ಗಾಯನವ ಹಾಡುವವನಾರು?,

ತರಂಗಗಳ ಆಲಿಸುತಾ ಕಿವುಡರಾದೆವು ನಾವು!.

 

ಎಲ್ಲೊಂದ ಬಂದೆವು ನಾವು?,

ಎಲ್ಲಿಗೆ ಹೊರೆಟೆವು ನಾವು?,

ಏನನ್ನು ಹುಡುಕುತ್ತಿರುವೆವು ನಾವು,

ವ್ಯರ್ಥವೋ?, ಸಾರ್ಥಕತೆಯೋ ಹೇಳುವವರಾರು?.


ಬೆಳಕಿನ ಪಯಣ

ಏಳು ತಮ್ಮ, ಏಳು ಅಣ್ಣ, ನೋಡು ಮೂಡಣದ ಚಿನ್ನದ ಬಣ್ಣ,

ಕತ್ತಲು ಜಾರಿ, ಬೆಳಕ ಪರದೆ ಏರಿ, ಬಾನೆಲ್ಲಾ ರಂಗಿನ ಕೆಂಪು ಬಣ್ಣ.

ಹಳ್ಳಿಗಳ ಚಿಲಿಪಿಲಿ, ತಂಗಾಳಿಯ ಇಂಚರದ ಜೀವಸುಧೆಯ ಕೇಳು,

ಗುಡಿ ಗೋಪುರ, ನೇಸರನ ಮುಂಜಾನೆಯ ಸುಪ್ರಭಾತ ಹಾಡು ಹೇಳು.

 

ನಿನ್ನೆಯ ನೋವು ಜಾರಿ, ಇಂದಿನ ನವ ಭರವಸೆಗಳು ಮೂಡಿದೆ,

ಕಣ್ಣೀರ ಒರೆಸು, ಸಣ್ಣ ಹೆಜ್ಜೆಗಳನಿಡು ನವೋದಯವ ಸ್ವಾಗತಿಸು.

ಹುಡುಗರೇ ಏಳಿ, ಹುಡುಗಿಯರೇ ಏಳಿ, ಬಾಳ ಕನಸ ರಥವನೇರುವ,

ಇಂದಿನ ಜೀವ ಬೆಳಕ ಹೀರಿ, ಸೋಜಿಗದ ಭವಿತವ್ಯದ ಬದುಕ ಕಟ್ಟುವ.

 

ಭಯದ ಮುಂದೆ ಗೆಲುವಿದೆ, ಕಡಿದ ಮರದ ತುದಿಯಲ್ಲಿ ಚಿಗುರಿದೆ,

ನಭವೇ ನಮಗೆ ಮಿತಿ, ಬದುಕ ಸಂಕೋಲೆಗಳ ಕಳಚಿ ನಭಕ್ಕೆ ಹಾರುವ.

ಚಿಕ್ಕ ಹೆಜ್ಜೆಗಳನಿಡುತ ನಾಳೆಯ  ಭರವಸೆಗಳ ಕನಸ ಕಟ್ಟುವ,

ಅನುಭವಿಸಿ, ಸಂಭ್ರಮಿಸಿ, ನೋವು ನಲಿವುಗಳ ಬದುಕಲಿ ಗೆಲುವಾಗುವ. 

 


Saturday, April 18, 2026

ನನ್ನ ಪಯಣ

ನಾನು ಉಸಿರಾಡುತ್ತಿದ್ದೇನೆ,

ನನ್ನ ಜೀವನ ಪ್ರೀತಿಯಿಂದ.

ನಾನು ಮೌನವಾಗಿದ್ದೇನೆ,

ನನ್ನ ಸಮಯಕ್ಕೆ ಕಾಯುತ್ತಾ.

ನಾನು ಸಂತೋಷವಾಗಿದ್ದೇನೆ,

ನನ್ನತನವ ಉಳಿಸಿಕೊಳ್ಳುತ್ತಾ.

ನಾನು ಹೋರಾಡುತ್ತಿದ್ದೇನೆ,

ನನ್ನ ಜೀವನದ ಅರ್ಥ ಹುಡುಕುತ್ತಾ.

ನಾನು ಪ್ರಾರ್ಥಿಸುತ್ತಿದ್ದೇನೆ,

ನನ್ನ ಬದುಕ ಹಸನಾಗಿಸಲು.

ನಾನು ಹಾರಾಡುತ್ತಿದ್ದೇನೆ,

ನನ್ನ ದಿನವ ಸಂಭ್ರಮಿಸಿ ಹಾಡಲು.

ನಾನು ಕಣ್ಣೀರಿಡುತ್ತಿದ್ದೇನೆ,

ನನ್ನ ದೇವನ ಋಣವ ತೀರಿಸಲು.

Friday, April 17, 2026

ಮನೋರಥ- ಪುಸ್ತಕ

ಮನೋರಥದ ಕಡಲು ಪುಸ್ತಕ,

ಶೂನ್ಯದಿಂದ ಅನಂತದೆಡೆಗೆ ಪಯಣ.

ಉಲ್ಲಾಸದ ಲಹರಿ ಕವನ,

ಕಲ್ಪನೆಯ ಸಾಗರದಿ ತೇಲಿಸುವ ಪ್ರೇರಣ,

ಬಡವ,ಬಲ್ಲಿದನಿಗೂ ಸಾಕಾರ,

ಶುಲ್ಕ,ಕರವಿಲ್ಲದಿದಕೆ ಸರಳ,

ಆತ್ಮೋನ್ನತಿಗೆ ಸುಲಭ ಸುಲಲಿತ ಹೂರಣ.

Saturday, April 11, 2026

ಅಂತರಂಗದ ಹೋರಾಟ

ಏಕೆ ಹೀಗೆ?,ಏಕೆ ಹೀಗೆ?,

ನಾನು ಬದಲಾಗಲಿಲ್ಲ.

ನನ್ನಿಂದ ಹಲವರಿಗೆ ನೋವು, ಕಷ್ಟ,

ನನ್ನಿಂದ ಅವರಿಗೆ ಅವಮಾನ.

 

ಆದರೆ ನಾನೋ!,.....


ಏನೂ ಆಗಿಲ್ಲವೆಂದು ನಿರ್ಲಿಪ್ತ,

ಅವರ ಬಗ್ಗೆ ಕಾಳಜಿ ನನಗಿಲ್ಲವೇ?,

ಅವರ ಪ್ರೀತಿ,ವಿಶ್ವಾಸ ನನಗೇನೆಂದೇ?,

ಅವರಿಗೆ ನಾ ಮಾಡುತ್ತಿರುವ ಅವಮಾನವೇ?

 

ಮನದೊಳು ಎಲ್ಲಾ ದುಗುಡಗಳು ಅಡಗಿವೆ,

ಭಯ, ಆತಂಕ, ಕತ್ತಲೆ, ಇನ್ನೇನೋ....

ಪ್ರತಿದಿನ ಹೋರಾಟ ಅವುಗಳ ಮೇಲೆ,

ಒಂದು ದಿನ ಗೆಲ್ಲುತ್ತೇನೆ, ಮತ್ತೊಮ್ಮೆ ಸೋಲುತ್ತೇನೆ.

 

ಯಾರ ಕೈ ಮೇಲಾಗುವುದೋ ನಾ ತಿಳಿಯೆ,

ಒಂದಂತೂ ಸತ್ಯ, ನಾನು ಬದಲಾಗಿಲ್ಲ.

ನನ್ನ ಹುಡುಕಾಟದಲ್ಲಿ ದಾರಿ ಕಾಣದಾಗಿದೆ,

ನನ್ನಿಂದಲೇ ನನ್ನವರಿಗೆ ಸುಖವಿಲ್ಲ, ನೆಮ್ಮದಿಯಿಲ್ಲ.

 

ಮುಂದೆ ಏನು? ನನಗೆ ತಿಳಿದಿಲ್ಲ.

Friday, April 10, 2026

ಹೇಳು ನೀನು ಯಾರು?

ಬೆಳಗಿನ ನಿಶಬ್ದ, ಮನದಲ್ಲಿ ಬಿರುಗಾಳಿ,

ಕಣ್ಣ ಮುಂದೆ ಅವ್ಯಕ್ತ ಪ್ರಶ್ನೆ.

ಹಣ, ಆಸ್ತಿ, ಹೆಸರು ಏನು ಬೇಕು?,

ನಿನ್ನ ರೂಪವೇನು?, ಹೇಳು ನೀನು ಯಾರು?

 

ಅಸ್ಪಷ್ಟ ದಾರಿ ಬರಿ ಅಲೆದಾಟ,

ಗುರಿ ಇಲ್ಲದ ಬದುಕು ಅಲ್ಲೋಲ ಕಲ್ಲೋಲ.

ಇಟ್ಟ ಹೆಜ್ಜೆಗಳಲ್ಲಿ ದೃಢತೆ ಇಲ್ಲ,

ಮನದಲ್ಲಿ ಅಂಧಕಾರ ಆವರಿಸಿದೆ.

 

ಬರುವ ಕಷ್ಟಗಳಿಗೆ ಕಲ್ಲಾಗು,

ಭಯ, ಬೆದರಿಕೆಗೆ ಸೊಪ್ಪಾಕದಿರು.

ತಿಳಿದುಕೋ ನೀನ್ಯಾರು?, ನೀನ್ಯಾರು?,

ಜಯಿಸಲು ಇಲ್ಲಿರುವೆ ಅರಿವಿರಲಿ.

 

ನಿನ್ನ ನೀ ಅರಿತುಕೋ, ಬೆರೆತು ಕೋ!,

ಅಭ್ಯಾಸ, ಚಿಂತನೆಯ ಬೆಳಕ ಹಚ್ಚು.

ಅಂತರಾತ್ಮವ ಸ್ತುತಿಸಿ, ಎಚ್ಚರಿಸಿಕೋ!,

ಲೋಕಕೆ ನಿನ್ನ ಅವಶ್ಯಕತೆ ಇದೆ ತಿಳಿದುಕೋ!.

Saturday, April 4, 2026

ಅಹಂಕಾರದ ಯುದ್ಧ

ಏಕೆ ಆತ್ಮಗಳೇ ಬುಸುಗುಡುತ್ತಿರುವಿರಿ?,

ದ್ವೇಷದ ಆವೇಗದಲ್ಲಿ ಯುದ್ಧವ ಬೆನ್ನಟ್ಟಿರುವಿರಿ.

ನಂಬಿದ ಜನರ ಭಾವೋದ್ವೇಗ ಒಳ್ಳೆಯದೇ?

ಸಾವು ಜೀವನೋತ್ಸಾಹವಲ್ಲ ತಿಳಿಯಿರಿ.


ನಿಮ್ಮ ದ್ವೇಷಕ್ಕೆ ಬಲಿಯಾಗುತ್ತಿವೆ ಜೀವಗಳು,

ಆದರೂ ಉನ್ಮಾದ ಕಡಿಮೆಯಾಗಿಲ್ಲ.

ಸೇರಿಗೆ ಸವ್ವಾಸೇರು ಎಂಬಂತೆ ಉತ್ತರ,

ಬಾಂಬಿಗೆ ಬಾಂಬು ಉತ್ತರ ಶಿಲಾಯುಗಕ್ಕೆ ಪಯಣ.


ವಿನಾಶವ ಆಹ್ವಾನಿಸುತ್ತಿರುವಿರಿ,

ನಾಳಿನ ಪೀಳಿಗೆಗೆ ಏನ ನೀಡುವಿರಿ?.

ದ್ವೇಷವನ್ನೇ ಮುಂದುವರಿಸುವರೇ?

ಇಲ್ಲ, ಶಾಂತಿಯ ಅರಸುವರೇ?.


ಹಳೆಯ ನೆನೆಪಿನ ತೇಪೆ

ಒಂದು ಮೂಲೆಯಲ್ಲಿ ಹಳೆಯ ಕಪಾಟು, 

ಅದರಲ್ಲಿ ಹಳೆಯ ಕಾಗದಗಳ ಕಂತೆ. 

ಊಹೆಗೆ ನಿಲುಕದ ನೋವಿನ ಬೊಂತೆ,

ಮರೆತ ಹೃದಯದ ಕಂಬನಿಯ ಮೊರೆತ.


ತೆರೆದ ಕಿಟಕಿ, ಮುರಿದ ಹೆಂಚು,

ಕಿಲುಬು ಹಿಡಿದ ಬಾಗಿಲ ಬೀಗ.

ಎಂದೋ ಮರೆತ ದಾರಿಯ ಕದನ,

ದೂರಕ್ಕೆ ಓಡಿದ ಹೃದಯದ ಕರೆಗೆ.


ಮಳೆ ಗಾಳಿ ಕಾಲನ ಹೊಡೆತ,

ಸುಳಿಗೆ ಸಿಕ್ಕು ಸೂತ್ರವಿಲ್ಲದಂತೆ.

ಬದುಕ ಪಯಣ ಮೂರಾಬಟ್ಟೆ,

ಬದುಕ ಬೇಕೆಂಬ ಹಪಾಹಪಿತನ.


ಅಳಬೇಕೊ?, ನಗಬೇಕೋ?,

ಎಲ್ಲವೂ ಭ್ರಮೆಯಂತೆ ಕಂಡಿದೆ.

ಇದ್ದು ಸಾಧಿಸಿದ್ದು ಏನು?

ಜೀವನ ಪ್ರೀತಿಯೇ? ಪ್ರಶ್ನೆ ಉಳಿದಿದೆ. 

ಜನನ–ಮರಣ ತೊಳಲಾಟ

ಅವರ ಭೇಟಿ ಅಪರಿಚಿತರಂತೆ, 

ವೇಗವಾಗಿ ಚಲಿಸುತ್ತಿರುವ ಜಗತ್ತಿನಲ್ಲಿ.

ಎರಡು ಅಲೆದಾಡುವ ಆತ್ಮಗಳು,

ಎಂದಿಗೂ ಭೇಟಿಯಾಗುವ  ಉದ್ದೇಶವಿಲ್ಲ.


ಅಗಾಧ ಕಂದಕ ನಡುವಿನ ರಸ್ತೆಯಲ್ಲಿ, 

ಎದುರಿಂದ ಅವನ ವಾಹನ ಗುದ್ದಿತು.

ಪರಿಸರ ಎಂದಿಗೂ ಸೌಮ್ಯವಿರಲಿಲ್ಲ, 

ಹಾರಿದ ರಭಸಕ್ಕೆ ಪ್ರಾಣ ಹಾಂ. 


ಬಿಡುಗಡೆಗೆ ಒಂದು ಕಾರಣ,

ಅಲೆದಾಟ ಮತ್ತೆ ಹೊಸ ಪಾತ್ರ.

ಮತ್ತದೇ ಹೊಸ ಆರಂಭ,

ಜನನ, ಮರಣ ತೊಳಲಾಟ.  

ವ್ಯತ್ಯಾಸವಿಲ್ಲ

ಪರಮಾಣುವಿನಷ್ಟು ಚಿಕ್ಕದು , ಗುರುಗ್ರಹದಷ್ಟು ದೊಡ್ಡದು , ಒಳ - ಹೊರಗೆ ನಾವೆಲ್ಲರೂ ಒಂದೇ !, ಬೆಳಕು ಹರಿದರೆ ಎಲ್ಲರೂ ಒಂದೇ , ಶೂನ್ಯ . ದೊಡ್ಡಣ್ಣನಂತೆ ಹ...