Sunday, May 10, 2026

ಸಂಜೆಯ ಹೆಜ್ಜೆಗಳು

ನಾನೊಬ್ಬ ಅಜ್ಞಾತ ವ್ಯಕ್ತಿ, ಅನನುಭವಿ,

ನಾನು ದೇವನಲ್ಲ, ದೆವ್ವವಂತೂ ಅಲ್ಲವೇ ಅಲ್ಲ,

ಸ್ವರ್ಗವ ಸೃಷ್ಠಿಸಲಾರದವನು,

ಅದಿರಲಿ, ಕ್ಷಣದಲ್ಲಿ ಸಂತೋಷವನ್ನೂ ಸಹ,

ಆದರೂ, ಭರವಸೆ ಇಡು ನನ್ನಲ್ಲಿ,

ತಪ್ಪು ತಿಳುವಳಿಕೆ, ಜಗಳ, ಕದನ,

ಹಸಿವು, ಎಲ್ಲವೂ ಕಳೆದು ಹೋಗುವುವು,

ಈಗ ಸಂಜೆಯ ಸೂರ್ಯಾಸ್ತದಲ್ಲಿ,

ಕೈಹಿಡಿದು ನಡೆಯೋಣ, ಎಲ್ಲವ ಬದಿಗಿಟ್ಟು,

ನನ್ನೊಂದಿಗೆ ಹೆಜ್ಜೆ ಇಡು, ಜೊತೆಗೆ ನಗುವಿರಲಿ,

ಮನದ ಮೂಲೆಯಲ್ಲಿ ಕಷ್ಟಗಳ ಸಹಿಸುತ್ತಾ,

ಮುಂದೆ ತಲೆಗೂದಲು ಬೆಳ್ಳಗಾದಾಗ,

ನಾವು ವಯಸ್ಸಿನ ಸಂಜೆಯಲ್ಲಿದ್ದಾಗ,

ಮತ್ತೆ ಕೈ, ಕೈ ಹಿಡಿದು ನಡೆಯೋಣ,

ಸಂಜೆಯಾಗಸದ ರವಿಯ ನೋಡುತ್ತಾ,

ಆಗ ಹೇಳು ನಿನ್ನ ಮನದ ಮಾತುಗಳ,

ಎಲ್ಲಿ ಹೋದವೋ ಸುಂದರ ದಿನಗಳು...

ಮತ್ತೆ ಭರವಸೆಗಳ ಮೆಟ್ಟಿಲು ಹತ್ತೋಣ,

ಜೀವನ ಪ್ರೀತಿಯ ಹೆಜ್ಜೆಗಳ ಇಡೋಣ,

ನಗುವ ಮರೆಯದೆ ನಗುತ್ತಲೇ ಇರೋಣ.

Saturday, May 9, 2026

ಹೂವಿನ ಮೋಹ



ಮೋಸವೇಕೆ ಹೋದೆ ಹೃದಯವೇ?,

ಕೈ ಜಾರುತಿದೆ ಎಂದರೂ ಮರೆತೆ ಏಕೆ?,

ಜಾರಿಹೋದ ನೀರಿನಂತೆ ಬೆಟ್ಟದ ಹೂವು,

ಕಾಲ ನಿರಂತರ ಸತ್ಯವೆಂದು ನಿರೂಪಿಸಿತು,

ನೆನಪೊಂದೇ ಉಳಿದಿದೆ, ಮನವ ಕಾಡುತ್ತಾ,

ಹೂವು ನಮ್ಮದಲ್ಲ, ಬರಿ ಭ್ರಮೆಯಷ್ಟೇ!,

ಕಂಪು ಬೀರುವ ಮುನ್ನವೇ ಬೇಗ ಬಾಡಿದೆ.

ಕಣ್ಣಿನ ಸಾಕ್ಷಿ

ಕನ್ನಡಿಯ ಮುಂದೆ ನಾನು,

ನನ್ನ ಕಂಗಳು ದಿಟ್ಟಿಸುತ್ತಿವೆ,

ಒಮ್ಮೆ ಭಯ, ಮತ್ತೊಮ್ಮೆ ನಾಚಿಕೆ,

ಕಾಳಜಿಯೋ?, ಇಲ್ಲ ಶಿಕ್ಷೆಯೋ?

ಏನನ್ನೋ ನಿರೀಕ್ಷಿಸುತ್ತಿದೆ,

ಭಯದಿಂದಲೋ!, ಕಾಳಜಿಯಿಂದಲೋ!,

ಹೃದಯದಲ್ಲೇನೋ ಭಯ, ಕಸಿವಿಸಿ,

ಕಂಗಳು ಸಾಕ್ಷಿಯಾಗುತ್ತಿವೆ,

ಕಣ್ಣೀರು ಧಾರಾಶಾಹಿ,

ಕಂಗಳು ದಿಟ್ಟಿಸುತ್ತಲೇ ಇದೆ,

ಹೃದಯ ತಂಪನ್ನೆರೆಯುತ್ತಿದೆ.

Saturday, May 2, 2026

ಮೌನದ ಅಸ್ತಿತ್ವ

ಮೌನವೇಕೆ?

ಏಕೆ ನಿಂತಿರುವೆ?

ಗತ ಕಾಲದ್ಲಲೇಕೆ ನರಳುವೆ?

ಕಾಲ ಮುಂದೆ ಸಾಗಿದೆ ಕಾಣದೆ.

 

ನೆನಪುಗಳು ಬೇಕು,


ತಂಗಾಳಿಯಂತೆ ಮನಸಿಗೆ.

ಬಿರುಗಾಳಿಯಂತಾಗಬಾರದು,

ಉಳಿಗಾಲವಿಲ್ಲ ನಿನಗೆ.

 

ನಾನು ಚಿರಂಜೀವಿ,

ನನಗೆ ಸಾವಿಲ್ಲ.

ಸತ್ತನೆಂಬ ಭ್ರಮೆ ಬೇಡ,

ನಿನ್ನ ಉಸಿರಲ್ಲಿ ನಾನಿರುವೆ.

 

ಉದಯಿಸುವ ಸೂರ್ಯನ ಬೆಳಕಲ್ಲಿ,

ಬೆಳಗಿನ ಬೀಸುವ ತಂಗಾಳಿಯಲ್ಲಿ.

ಮರಗಿಡಗಳ ಚಿನ್ನದ ಚಿಗುರಲ್ಲಿ,

ಆಕಾಶದಿಂದ ಧರೆಗಿಳಿವ ಮಳೆಯಲ್ಲಿ.

 

ಪಂಚಭೂತಗಳಲ್ಲಿ ಕಾಣದೆ,

ಇದ್ದೂ ಇಲ್ಲದಂತಿರುವೆ ನಾನು.

ಬರಿಗಣ್ಣಿಗೆ ಕಾಣಲಾರೆನು ನಿಜ,

ನಿನ್ನ ಕಣ ಕಣದಲ್ಲಿ ನೆಲೆಸಿರುವೆ ನಾನು.

ಅಳಿಯದ ನೆನಪು

ಮನದ ಮೂಲೆಯಲ್ಲಿ,

ಬೇಡದ ಗಂಟು ಮೂಟೆಯಿದೆ.

ಹತ್ತು ಹಲವಾರು ವರುಷಗಳಲ್ಲಿ,

ಕೂಡಿಟ್ಟ ನೋವಿನ ಕಂತೆಯಾಗಿದೆ.

 

ಯಾರಿಗೂ ತಿಳಿಯದ,

ವಿಷಯಗಳು ಅಲ್ಲಿ ಕೊಳೆಯುತ್ತಿದೆ.

ನನಗೆ ಮತ್ತೆ ನೆನಪಾದ

ಸಂಗತಿಗಳು ಸಾವಿಲ್ಲದೆ ಮಲಗಿದೆ.

 

ಹೊರಗೆ ಮಾಸಿದಂತೆ ಕಾಣುವುದು,

ಒಳಗೆ ಜೀವತೆಗೆಯುವಷ್ಟು ಮಾರಣಾಂತಿಕ.

ಎಲ್ಲವೂ ತಿಳಿದಿದೆ ಸಮಯ ಕಾಯುವುದು,

ಒಳಗೆ ಜ್ವಾಲಾಮುಖಿಯ ಸಾಂಕೇತಿಕ.

 

ಮಾಸಿದ ಕಾಗದದಲ್ಲಿ, 

ಅಕ್ಷರಗಳು ಕಾಣದೇ ಕ್ಷೀಣಿಸಿವೆ.

ಮನದ ಪಟಿಲದಲ್ಲಿ,

ಗಾಯಗಳು ಮಾಸದೇ ಉಳಿದಿವೆ.  

 

ಮೌನದ ಮಡಿಲಲ್ಲಿ ಬೆಳಕು ಕಾದಿದೆ,

ಗಂಟುಗಳ ಹಿಂದೆ ಹೊಸ ದಾರಿ ನಿಂತಿದೆ.

ಮನದ ಗಾಯಗಳಲಿ ಆಶೆಯ ಕಿರಣ,

ಜೀವನದ ಪಟದಲ್ಲಿ ಪುನರುಜ್ಜೀವನ.

 

03.05.2026

Friday, May 1, 2026

ಪ್ರಕೃತಿ ತತ್ವ

 ಪ್ರಕೃತಿಯಲ್ಲಿ ಅಣು ನಾನು,

ನಾನೇ ಪ್ರಕೃತಿ,

ನನಗಳಿವುಂಟು, ಜಂಗಮ ನಾನಲ್ಲ,

ಇದೇ ಪ್ರಕೃತಿ ತತ್ವ.


ಅಣು ಅಣುವಾಗಿ ವಿಭಜಿಸು,

ನಿನ್ನ ಅಂಕೆಗೆ ಗೆಲುವಿದೆ,

ಪರಮಾಣುವಿನಲ್ಲೂ ಅಗಾಧ ಶಕ್ತಿಯಿದೆ,

ನಾನು ಶಕ್ತಿ, ಕೊನೆಯೆಂಬುದಿದೆ.


ಒಗ್ಗಟ್ಟು, ವಿಭಜನೆ,

ಎರಡೂ ಪ್ರಕೃತಿಯ ತತ್ವಗಳೇ,

ಪ್ರಕೃತಿಯ ಕೈಯಲ್ಲಿ ನಮ್ಮ ನಡೆ,

ಸಮತೋಲನವಿದ್ದರೆ ಎಲ್ಲವೂ ಸುಲಲಿತ. 

Saturday, April 25, 2026

ಅನಂತ ಗಾನ

ಆತ್ಮದ ಹೃದಯ 'ಭರವಸೆ',

ಕಾಣದ ರೆಕ್ಕೆಗಳು ಅನಂತದೆಡೆಗೆ,

ಕಣ್ಣು ತೆರೆದೊಡೆ ನಭವೇ 'ಅನಂತ'.

 

'ಭರವಸೆ' ಅನಂತ ಗೀತೆಯಂತೆ,

ಪದಗಳೇ ಇಲ್ಲದ ರಾಗದಂತೆ,

ಅಂತ್ಯವಿಲ್ಲದ ಅನಂತ ಗಾಯನದಂತೆ.

 

'ಭರವಸೆ' ಕಾಣದ ಕಡಲಿನಂತೆ,

ಹರಿಯುವ ನದಿಯಂತೆ,

ಕಾಲನಂತೆ ನಡೆ ಅನಂತಾದೆಡೆಗೆ.

 

'ಭರವಸೆ' ಆತ್ಮದ ಬೆಳಕಿನಂತೆ,

ತಿಮಿರವ ಕಳೆವ ದೀವಿಗೆಯಂತೆ,

ಆತ್ಮೋನ್ನತಿಯ ಅರಸುವ ಜ್ಞಾನಿಯಂತೆ.

Friday, April 24, 2026

ವ್ಯತ್ಯಾಸವಿಲ್ಲ

ಪರಮಾಣುವಿನಷ್ಟು ಚಿಕ್ಕದು,

ಗುರುಗ್ರಹದಷ್ಟು ದೊಡ್ಡದು,

ಒಳ-ಹೊರಗೆ ನಾವೆಲ್ಲರೂ ಒಂದೇ!,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ದೊಡ್ಡಣ್ಣನಂತೆ ಹಣದ ಶ್ರೀಮಂತರು,

ಬಿಕ್ಷುಕನಂತೆ ಅಲೆದಾಡುವ ಬಡವರು,

ನಾವೆಲ್ಲರೂ ಒಂದೇ ಆಗಿಬಿಡುವೆವು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಅವನು ಪರಂಗಿ ಕೆಂಪುಬಣ್ಣ,

ಇವನು ಗೋಧಿಬಣ್ಣ,

ಅವನೋ ಅಮಾವಾಸ್ಯೆ ಕಪ್ಪುಬಣ್ಣ,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.


ಕಣ್ಣು ತೆರೆದಿದ್ದೇವಷ್ಟೇ,

ಒಳಗುರುಡು ಎಲ್ಲರಿಗೂ,

ಅವನು ಬೆಳಕು ಹರಿಸಬೇಕು,

ಬೆಳಕು ಹರಿದರೆ ಎಲ್ಲರೂ ಒಂದೇ, ಶೂನ್ಯ.

 

ಪ್ರೇರಣೆ:   No Difference" by Shel Silverstein

ಮುರಳಿಯ ಕರೆ

ಮುರಳಿ ಕರೆಯುತಿದೆ,

ಮರಳಿ ಬಾರೆನುತಿದೆ.

ಕರುಣೆಯ ಹೃದಯದಿ ಪ್ರೀತಿಯನಿಟ್ಟು,

ತಾಯ ಪ್ರೀತಿಯ ಹಂಬಲದಿ ಮನವನಿಟ್ಟು.


ಮುರಳಿ ನಗುತಿಹನು,

ಮರಳಿ ಬಾರೆನುತಿಹನು

ಕಳೆದು ಹೋದ ಸವಿನೆನಹುಗಳ ಹಾರಿಬಿಟ್ಟು,

ಸವಿಜೇನ ಸವಿಯುವ ಬಾ ಎಂದು ಬೊಗಸೆಯಲಿಟ್ಟು.

 

ಮುರಳಿ ಮಿಡಿಯುತಿದೆ,

ಮರಳಿ ಬಾರೆನುತಿದೆ.

ಬಾಲ್ಯದ ದಿನಗಳ ಕಾಮನಬಿಲ್ಲ ಮೂಡಿಸಿ,

ಹೃದಯದಿ ಹೂವ ಭರವಸೆಯ ತುಂಬಿಸಿ.

 

ಮುರಳಿ ಹಾಡುತಿದೆ,

ಮರಳಿ ಬಾರೆನುತಿದೆ.

ಸ್ನೇಹದ ತಂತಿಯಲ್ಲಿ ಸೌರಭವ ಸೂಸಿ,

ಜೀವನದಿ ಸಂಗೀತ ಸುಧೆಯ ಪೂಸಿ.

Thursday, April 23, 2026

ಅಸ್ತಿತ್ವದ ಪ್ರಶ್ನೆ

ದೀಪವು ಯಾರದು?,

ಗಾಳಿಯು ಯಾರದು?,

ಎರಡನ್ನೂ ಆಡಿಸುವವರು ಯಾರು?,

ಎಲ್ಲವ ನೋಡುವವರು ನಾವು ಯಾರು?.

 

ದೀಪವು ಹೊತ್ತಿಸ ಬೇಕು!,

ಗಾಳಿಯೂ ಬೇಕು,

ಸ್ಥಿರವೋ?, ಅನಿಶ್ಚಿತವೋ ಬಲ್ಲವರಾರು?,

ಕಣ್ಣಿದ್ದು ಕುರುಡರಾಗಿಹೆವು ನಾವು ಏಕೆ?.

 

ಒಂದು ಕ್ಷಣ ಸಂತೋಷ,

ಮತ್ತೊಂದು ಕ್ಷಣ ದುಗುಡ,

ಏರುಪೇರಿನ ಗಾಯನವ ಹಾಡುವವನಾರು?,

ತರಂಗಗಳ ಆಲಿಸುತಾ ಕಿವುಡರಾದೆವು ನಾವು!.

 

ಎಲ್ಲೊಂದ ಬಂದೆವು ನಾವು?,

ಎಲ್ಲಿಗೆ ಹೊರೆಟೆವು ನಾವು?,

ಏನನ್ನು ಹುಡುಕುತ್ತಿರುವೆವು ನಾವು,

ವ್ಯರ್ಥವೋ?, ಸಾರ್ಥಕತೆಯೋ ಹೇಳುವವರಾರು?.


ಬೆಳಕಿನ ಪಯಣ

ಏಳು ತಮ್ಮ, ಏಳು ಅಣ್ಣ, ನೋಡು ಮೂಡಣದ ಚಿನ್ನದ ಬಣ್ಣ,

ಕತ್ತಲು ಜಾರಿ, ಬೆಳಕ ಪರದೆ ಏರಿ, ಬಾನೆಲ್ಲಾ ರಂಗಿನ ಕೆಂಪು ಬಣ್ಣ.

ಹಳ್ಳಿಗಳ ಚಿಲಿಪಿಲಿ, ತಂಗಾಳಿಯ ಇಂಚರದ ಜೀವಸುಧೆಯ ಕೇಳು,

ಗುಡಿ ಗೋಪುರ, ನೇಸರನ ಮುಂಜಾನೆಯ ಸುಪ್ರಭಾತ ಹಾಡು ಹೇಳು.

 

ನಿನ್ನೆಯ ನೋವು ಜಾರಿ, ಇಂದಿನ ನವ ಭರವಸೆಗಳು ಮೂಡಿದೆ,

ಕಣ್ಣೀರ ಒರೆಸು, ಸಣ್ಣ ಹೆಜ್ಜೆಗಳನಿಡು ನವೋದಯವ ಸ್ವಾಗತಿಸು.

ಹುಡುಗರೇ ಏಳಿ, ಹುಡುಗಿಯರೇ ಏಳಿ, ಬಾಳ ಕನಸ ರಥವನೇರುವ,

ಇಂದಿನ ಜೀವ ಬೆಳಕ ಹೀರಿ, ಸೋಜಿಗದ ಭವಿತವ್ಯದ ಬದುಕ ಕಟ್ಟುವ.

 

ಭಯದ ಮುಂದೆ ಗೆಲುವಿದೆ, ಕಡಿದ ಮರದ ತುದಿಯಲ್ಲಿ ಚಿಗುರಿದೆ,

ನಭವೇ ನಮಗೆ ಮಿತಿ, ಬದುಕ ಸಂಕೋಲೆಗಳ ಕಳಚಿ ನಭಕ್ಕೆ ಹಾರುವ.

ಚಿಕ್ಕ ಹೆಜ್ಜೆಗಳನಿಡುತ ನಾಳೆಯ  ಭರವಸೆಗಳ ಕನಸ ಕಟ್ಟುವ,

ಅನುಭವಿಸಿ, ಸಂಭ್ರಮಿಸಿ, ನೋವು ನಲಿವುಗಳ ಬದುಕಲಿ ಗೆಲುವಾಗುವ. 

 


ಸಂಜೆಯ ಹೆಜ್ಜೆಗಳು

ನಾನೊಬ್ಬ ಅಜ್ಞಾತ ವ್ಯಕ್ತಿ , ಅನನುಭವಿ , ನಾನು ದೇವನಲ್ಲ , ದೆವ್ವವಂತೂ ಅಲ್ಲವೇ ಅಲ್ಲ , ಸ್ವರ್ಗವ ಸೃಷ್ಠಿಸಲಾರದವನು , ಅದಿರಲಿ , ಈ ಕ್ಷಣದಲ್ಲಿ ಸಂತೋಷವನ್...