Saturday, April 4, 2026

ಅಹಂಕಾರದ ಯುದ್ಧ

ಏಕೆ ಆತ್ಮಗಳೇ ಬುಸುಗುಡುತ್ತಿರುವಿರಿ?,

ದ್ವೇಷದ ಆವೇಗದಲ್ಲಿ ಯುದ್ಧವ ಬೆನ್ನಟ್ಟಿರುವಿರಿ.

ನಂಬಿದ ಜನರ ಭಾವೋದ್ವೇಗ ಒಳ್ಳೆಯದೇ?

ಸಾವು ಜೀವನೋತ್ಸಾಹವಲ್ಲ ತಿಳಿಯಿರಿ.


ನಿಮ್ಮ ದ್ವೇಷಕ್ಕೆ ಬಲಿಯಾಗುತ್ತಿವೆ ಜೀವಗಳು,

ಆದರೂ ಉನ್ಮಾದ ಕಡಿಮೆಯಾಗಿಲ್ಲ.

ಸೇರಿಗೆ ಸವ್ವಾಸೇರು ಎಂಬಂತೆ ಉತ್ತರ,

ಬಾಂಬಿಗೆ ಬಾಂಬು ಉತ್ತರ ಶಿಲಾಯುಗಕ್ಕೆ ಪಯಣ.


ವಿನಾಶವ ಆಹ್ವಾನಿಸುತ್ತಿರುವಿರಿ,

ನಾಳಿನ ಪೀಳಿಗೆಗೆ ಏನ ನೀಡುವಿರಿ?.

ದ್ವೇಷವನ್ನೇ ಮುಂದುವರಿಸುವರೇ?

ಇಲ್ಲ, ಶಾಂತಿಯ ಅರಸುವರೇ?.


ಹಳೆಯ ನೆನೆಪಿನ ತೇಪೆ

ಒಂದು ಮೂಲೆಯಲ್ಲಿ ಹಳೆಯ ಕಪಾಟು, 

ಅದರಲ್ಲಿ ಹಳೆಯ ಕಾಗದಗಳ ಕಂತೆ. 

ಊಹೆಗೆ ನಿಲುಕದ ನೋವಿನ ಬೊಂತೆ,

ಮರೆತ ಹೃದಯದ ಕಂಬನಿಯ ಮೊರೆತ.


ತೆರೆದ ಕಿಟಕಿ, ಮುರಿದ ಹೆಂಚು,

ಕಿಲುಬು ಹಿಡಿದ ಬಾಗಿಲ ಬೀಗ.

ಎಂದೋ ಮರೆತ ದಾರಿಯ ಕದನ,

ದೂರಕ್ಕೆ ಓಡಿದ ಹೃದಯದ ಕರೆಗೆ.


ಮಳೆ ಗಾಳಿ ಕಾಲನ ಹೊಡೆತ,

ಸುಳಿಗೆ ಸಿಕ್ಕು ಸೂತ್ರವಿಲ್ಲದಂತೆ.

ಬದುಕ ಪಯಣ ಮೂರಾಬಟ್ಟೆ,

ಬದುಕ ಬೇಕೆಂಬ ಹಪಾಹಪಿತನ.


ಅಳಬೇಕೊ?, ನಗಬೇಕೋ?,

ಎಲ್ಲವೂ ಭ್ರಮೆಯಂತೆ ಕಂಡಿದೆ.

ಇದ್ದು ಸಾಧಿಸಿದ್ದು ಏನು?

ಜೀವನ ಪ್ರೀತಿಯೇ? ಪ್ರಶ್ನೆ ಉಳಿದಿದೆ. 

ಜನನ–ಮರಣ ತೊಳಲಾಟ

ಅವರ ಭೇಟಿ ಅಪರಿಚಿತರಂತೆ, 

ವೇಗವಾಗಿ ಚಲಿಸುತ್ತಿರುವ ಜಗತ್ತಿನಲ್ಲಿ.

ಎರಡು ಅಲೆದಾಡುವ ಆತ್ಮಗಳು,

ಎಂದಿಗೂ ಭೇಟಿಯಾಗುವ  ಉದ್ದೇಶವಿಲ್ಲ.


ಅಗಾಧ ಕಂದಕ ನಡುವಿನ ರಸ್ತೆಯಲ್ಲಿ, 

ಎದುರಿಂದ ಅವನ ವಾಹನ ಗುದ್ದಿತು.

ಪರಿಸರ ಎಂದಿಗೂ ಸೌಮ್ಯವಿರಲಿಲ್ಲ, 

ಹಾರಿದ ರಭಸಕ್ಕೆ ಪ್ರಾಣ ಹಾಂ. 


ಬಿಡುಗಡೆಗೆ ಒಂದು ಕಾರಣ,

ಅಲೆದಾಟ ಮತ್ತೆ ಹೊಸ ಪಾತ್ರ.

ಮತ್ತದೇ ಹೊಸ ಆರಂಭ,

ಜನನ, ಮರಣ ತೊಳಲಾಟ.  

ಸಾಧನೆಯ ಹೆಜ್ಜೆಗಳು

ದೂರದ ಗುರಿಯ ಮನದಲ್ಲಿ ಬಿತ್ತು,

ದಾರಿ ತೆರೆವುದು ಹೆಜ್ಜೆಗಳು ಹತ್ತು.

ಏಳು ಬೀಳುಗಳು ಸಾಮಾನ್ಯ ತಿಳಿ,

ಅಡೆತಡೆಗಳು ಎದುರಿಸುತಲಿ ನೀ ಬೆಳಿ.

 

ನಿನ್ನಲ್ಲಿ ನಿನಗೆ ನಂಬಿಕೆ ಇರಲಿ,

ಮನದಲ್ಲಿ ಬಲದ ದೀಪ ಹೆಚ್ಚು.

ಸಣ್ಣ ಹೆಜ್ಜೆಗಳ ಮೇಲಿರಲಿ ಗಮನ,

ನೋವೋ!, ನಲಿವೋ! ನಿಲ್ಲದಿರಲಿ.

 

ಸಹನೆ, ಶ್ರಮ, ಕನಸ ಸೇರಿಸು,

ಅವಸರವೇತಕೆ ತಾಳ್ಮೆ ಇರಲಿ.

ಸಂಭ್ರಮಿಸು ಹೆಜ್ಜೆಗಳ ನೋವ,

ಸಾಧಿಸುವ ಹಂಬಲ ಮನದಿ ಭಾವ.



Tuesday, March 31, 2026

ಪ್ರಾರ್ಥನೆ


ನನ್ನ ದೇವನೇ, ಕೋಪವೇತಕೆ?

ಕರೆದರೂ ಕೇಳಿಸದೇ?

ನೋವುಂಡ ಜೀವಕ್ಕೆ ಆಸರೆಯಾಗಲಾರೆಯಾ!

ಕೋಪದಿಂದ ನಾನು ನಿನ್ನ ನಿಂದಿಸುವೆನು,

ಅದಕ್ಕೆ ಕೋಪವೇ!,

ದೂರುವೆನು, ಅದಕ್ಕೆ ಸಿಟ್ಟೇ ನನ್ನ ದೇವರೇ!

ನನಗಾರು ಎನ್ನುವಾಗ,

ನೀನಿರುವೆ ಎಂದು ನಂಬಿಹೆನು,

ನಿನಗಾಗಿ ಪರಿತಪಿಸುವೆ,

ನಿನ್ನನ್ನೇ ಪ್ರೀತಿಸುವೆ,

ನಿನ್ನನ್ನೇ ಪ್ರಾರ್ಥಿಸುವೆ,

ನಿನ್ನಲ್ಲಿ ಒಂದಾಗ ಬಯಸಿಹೆ ತಂದೇ.

Wednesday, March 18, 2026

ಕಾಲ, ಶಕ್ತಿ, ಹಣ

ಕಾಲ ನಿಲ್ಲದು ನದಿಯಂತೆ ಹರಿವುದು,

ಕ್ಷಣಗಳಂತೆ ಮಾಯ ಮರಳಿ ಬಾರದು.

ವ್ಯರ್ಥ ಮಾಡದೆ, ಸಮಯ ಕಾಪಾಡಿಕೋ,

ಕಾಲನ ಜೊತೆ ಹೆಜ್ಜೆಹಾಕುವುದ ಕಲಿತುಕೋ.

 

ನಿನ್ನೊಳಗಿನ ಶಕ್ತಿ ಅಖಂಡ ಸೂರ್ಯನಂತೆ,

ತನು ಮನಗಳ ಆರೋಗ್ಯದಿ ಬೆಳೆಸುವುದು.

ತನು ಮನವ ಸಂತೋಷದಿ ಹುರಿಗೊಳಿಸು,

ವಿಶ್ರಾಂತಿಯ ಆಶ್ರಯಿಸಿ ಬಲವ ಇಮ್ಮಡಿಸು.

 

ಹಣವು ನಮ್ಮ ಸಾಧನೆಯ ಸಲಕರಣೆ,

ವೆಚ್ಚ ಮಾಡದೆ ಸಮಯೋಚಿತವಾಗಿ ಬಳಸು.

ಜಾಣ್ಮೆಯಲಿ ವೆಚ್ಚಮಾಡು, ಜತನದಿ ಹೂಡು,

ಚಲನಶೀಲತೆಯಲ್ಲಿ ಅಭಿವೃದ್ಧಿ ಮಾಣು.

 

ಮೂರೂ ಸಂಪತ್ತು, ಸರಳ ಅಮೂಲ್ಯ,

ನಮ್ಮ ಬೆಳವಣಿಗೆಯ ಬೀಜಮಂತ್ರಗಳು.

ಮನ ಹೃದಯದಿ ಬೆಳವಣಿಗೆಗೆ ಬಳಸು,

ಗೆಲುವಿನ ಅನಂತ ಹೆದ್ದಾರಿಯ ಕಾಣು.

Saturday, March 14, 2026

ಸಣ್ಣ ಹೆಜ್ಜೆಗಳ ಶಕ್ತಿ

ಪ್ರತಿ ಮುಂಜಾನೆ ಹೊಸತನದ ಕರೆ,

ಹೊಸ ದಿನಕ್ಕೆ ಹೊಸ ಮುನ್ನುಡಿ ಬರೆ.

ನಿಲ್ಲ ಬೇಡ, ಬೆವರ ಹನಿ ಹರಿಸಿ ಚಲಿಸು,

ಸಣ್ಣ ಹೆಜ್ಜೆಗಳಿಡುತ್ತಾ ಶ್ರೇಷ್ಠತೆಯ ಸಾಧಿಸು.  

 

ಬೆವರ ಹರಿಸು, ಮನವು ಅರಳುವುದು,

ಹಾರ ಬೇಡ, ಸಣ್ಣ ಹೆಜ್ಜೆಗಳನಿಡು.

ವ್ಯಾಯಾಮ, ನಡಿಗೆ, ಉಸಿರಾಟ,

ಆರೋಗ್ಯವ ಸುಧಾರಿಸುವುದು.

 

ನೆಪಗಳು ಓಡುವುದು, ಚೈತನ್ಯ ಬೆಳಗುವುದು,

ಸಮಯ ನಿನಗೆ ದಾರಿ ಮಾಡಿಕೊಡುವುದು.

ಕಷ್ಟಗಳಲ್ಲೇ ಆನಂದ ಅಡಗಿದೆ,

ಮನದೊಳಗಿನ ಕಿಡಿ ಬೆಳಕ ಚೆಲ್ಲುವುದು.

 

ಬೆವರು, ಸಣ್ಣ ಹೆಜ್ಜೆಗಳು ತೆರೆವುದು ಹೆದ್ದಾರಿ,

ಪ್ರತಿಕ್ಷಣ, ಪ್ರತಿದಿನ ಮನ ಅರಳುವುದು.

ಸಂತಸ ಬಾಳ್ಗೆ ನಿರಂತರ ಹರಿವುದು,

ಸಾಧನೆಯ ಹಾದಿಯಲ್ಲಿ ಬೆಳದಿಂಗಳು ಜಾರುವುದು.

ಸತ್ಯದ ಕನ್ನಡಿ

ಪ್ರತಿದಿನ ಕನ್ನಡಿಯ ಮುಂದೆ ನಿಲ್ಲು,

ಮುಖವಾಡ ಕಳಚುವುದು ದಿಟ.

ನಿನ್ನದಲ್ಲದ ಭಾವಗಳು ನರ್ತಿಸುವುದು,

ಸತ್ಯದ ಅನಾವರಣ ಕಣ್ಣಮುಂದಾಗುವುದು.


'ಅಹಂ' ನ ಪೊರೆ ಕಳಚುವುದು,

ನಿಜದ ಮೌಲ್ಯವ ನೀ ಅರಿತು ಕೋ.

ನಕ್ಕುಬಿಡು ನಿನ್ನ ಮೂರ್ಖತನಕೆ,

ಬದಲಾಗು, ನಡೆ ಸತ್ಯದ ಹಾದಿಯಲ್ಲಿ.


ಸೋಲು ಮಳೆಯಂತೆ,

ಮನದ ನೋವ ತೊಳೆವುದು.

ಕಣ್ಣ ಪೊರೆ ಕಳಚಿ,

ಸತ್ಯ ದರ್ಶನ ಮಾಡಿಸುವುದು.


ಧೈರ್ಯದಿಂದ ನಡೆ,

ಪ್ರಾಮಾಣಿಕತೆಯಿಂದ ನಡೆ.

ಮನದ ಕನ್ನಡಿಯಲ್ಲಿ ನೋಡು,

ನಿನ್ನ ನೀ ಅರಿವ ಹಿರಿಮೆಯ ಕಾಣು.

Friday, March 13, 2026

ಪ್ರತಿದಿನದ ಬೆಳಕು

ನಿನ್ನೊಳಗೆ ಇದೆ ಅಖಂಡ ಬೆಳಕು,

ಅರಿತು ಕಂದೀಲ ಹಚ್ಚಬೇಕು.

ದೀಪವಿದೆ, ಬತ್ತಿಯಿದೆ ಮನಸ್ಸು ಬೇಕು,

ಜೀವನದ ಪ್ರತಿಹೆಜ್ಜೆಯ ಸೊಬಗ ಸವಿಯಬೇಕು.

 

ಭಯವ ಕಂಡು ಒಮ್ಮೆ ನಕ್ಕುಬಿಡು,

ಸೋಲು ಬಂದರೆ ನಮಿಸಿ ಪಾಠಕಲಿ.

ಪ್ರತಿದಿನದ ಚಿಕ್ಕ ಹೆಜ್ಜೆಗಳ ಇಡುತಿರು,

ಉಜ್ವಲ ಭವಿತವ್ಯದ ಗುರಿಯ ಸಾಧಿಸು.

 

ಸಂತೋಷ ನಾವಿಡುವ ಹೆಜ್ಜೆಗಳ ಸವಿ,

ಪ್ರತಿದಿನದ ಬೆಳವಣಿಗೆಯಲ್ಲಿದೆ ಅದರ ಮೂಲ.

ನಿನ್ನ ಬೆಳವಣಿಗೆಯ ಹೆಜ್ಜೆಗಳು ಆಗುವುದು,

ಪ್ರೇರಣೆ, ಉದಾಹರಣೆ ನಿನ್ನ ನೋಡುವವರಿಗೆ.

 

ಅರಿತು ಕೋ ನಿನ್ನ ಶಕ್ತಿಯ,

ಜಗವು ನಿನ್ನ ಕೈಯಲ್ಲಿ.

ಜೀವನದ ಜಯದ ಮಂತ್ರ,

ಪ್ರತಿದಿನದ ಹೆಜ್ಜೆಗಳಲ್ಲಿ.

Sunday, March 8, 2026

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ, 

ಪ್ರಶಾಂತ ಧ್ವನಿ.

ಕನಸೇ ಕಂಗಳು,

ಅಭಯವೇ ರಕ್ಷಣೆ.


ಬಿರುಗಾಳಿಯೂ ಅವಳೇ,

ಬೆಂಕಿಯ ಕೆನ್ನಾಲಿಗೆಯೂ ಅವಳೇ.

ಶಾಂತ ಸಮುದ್ರವೂ ಅವಳೇ,

ಕರುಣೆಯ ಕಡಲೂ ಅವಳೇ.


ನಮ್ಮೊಳಗಿನ ಶಕ್ತಿ ಆಕೆ,

ನಮ್ಮ ಕಂಗಳ ಜ್ಯೋತಿ ಆಕೆ.

ನಮ್ಮ ಕಾರಣೀಭೂತಳು ಆಕೆ,

ನಮ್ಮ ಪ್ರಪಂಚವೇ ಆಕೆ.


ಅವಳ ರಕ್ಷಣೆ, ನಮ್ಮ ಕರ್ತವ್ಯ,

ಅವಳ ಗೌರವ, ನಮ್ಮ ಉಸಿರು.

ಅವಳ ನಗು, ನಮ್ಮ ಸಂತೋಷ,

ಅವಳ ನೋವು, ನಮ್ಮ ನೋವು. 

ಹೊಸ ಪಯಣ

ವರುಷಗಳ ಪಯಣ ವ್ಯರ್ಥವಾಗಿದೆ,

ಗುರಿ ಇಲ್ಲ, ಗುರುವೂ ಇಲ್ಲ.

ಬಾಳಿನ ಪಯಣದ ಉದ್ದೇಶವೇನು?,

ಗಾಣದ ಎತ್ತಿನಂತೆ ನಡೆಯುತ್ತಿದೆ ನಿಲ್ಲದೆ.


 ಗುರಿ ಇಲ್ಲದೆ ಮನ ಭ್ರಮೆಯಲ್ಲಿದೆ,

ನೊಣದಂತೆ ಮನ ಪರಿಭ್ರಮಿಸಿದೆ.

ಗುರು ಇಲ್ಲದೆ ಮನ ಸೊರಗಿದೆ,

ಜೀವನ ಕುರುಡಾಗಿದೆ ದಾರಿ ಕಾಣದೆ.

 

ತಿಮಿರಾಂಧಕಾರ ಕಳೆಯಲು ಬೇಕು,

ಜ್ಞಾನದ ಸಣ್ಣ ದೀವಿಗೆ ಹಚ್ಚಬೇಕು.

ಜೀವನದ ಗುರಿಯ ಸಾಕ್ಷಾತ್ಕಾರವಾಯಿತು,

ಬದಲಾಯಿತು ದಿಕ್ಕು ಹೊಸ ಪಯಣಕ್ಕೆ. 

ಅಹಂಕಾರದ ಯುದ್ಧ

ಏಕೆ ಆತ್ಮಗಳೇ ಬುಸುಗುಡುತ್ತಿರುವಿರಿ?, ದ್ವೇಷದ ಆವೇಗದಲ್ಲಿ ಯುದ್ಧವ ಬೆನ್ನಟ್ಟಿರುವಿರಿ. ನಂಬಿದ ಜನರ ಭಾವೋದ್ವೇಗ ಒಳ್ಳೆಯದೇ? ಸಾವು ಜೀವನೋತ್ಸಾಹವಲ್ಲ ತಿಳಿಯಿರಿ. ನಿಮ್ಮ ...