Saturday, February 21, 2026

ಆರಂಭ ಇಂದೇ...

'ನಾಳೆ' ಎನಬೇಡ, 'ಆರಂಭ' ಇಂದೇ,

'ಕನಸು'ಗಳು ನಾಳೆಗೆ ಕಾಯದು.

'ಕ್ಯಾಲೋರಿ' ಗಳು ಮಾತಿನಿಂದ ಕರಗದು,

'ಪ್ರಯತ್ನ'ದಿಂದ ಮಾತ್ರ ಕರಗುವುದು.


 

ನೆಪ, ‘ಕಾರಣ’ಗಳು ಬಲು 'ಸುಲಭ',

ತನು-ಮನ ಬಯಸುವುದು 'ಆರಾಮ'.

ಬೆಳವಣಿಗೆ 'ಬೆವರ' ಹನಿಯಲ್ಲಿದೆ,

ಸಣ್ಣ-ಸಣ್ಣ ಹೆಜ್ಜೆಗಳಲ್ಲಿ 'ವಿಜಯ'ವಿದೆ.

 

ಒಂದು ನಡಿಗೆ, ಯೋಗ,ವಾಯುವಿಹಾರ,

'ಆರಂಭ'ಕ್ಕೆ ಸಾಕು, ಬೆಳಕಿನ ದಾರಿಗೆ.

'ಪೂರ್ಣತೆ' ಬೇಡ, 'ಪ್ರಾರಂಭ'ವೇ ಮುಖ್ಯ,

ಚಿಕ್ಕ ಕಿಡಿ ಮುಂದೆ ದೊಡ್ಡ ಜ್ವಾಲೆ.

 

ಏಳು, ಎದ್ದೇಳು, ನಿನ್ನ ಗುರಿಯ ಹಾದಿ ಹಿಡಿ,

ನಿನ್ನ 'ಭವಿಷ್ಯ', ನಿನ್ನ ಕೈಯಲ್ಲಿ.

ಬೊಗಳೆ ಮಾತುಗಳು 'ಬದಲಾವಣೆ' ತಾರದು,

'ಕ್ರಿಯೆ','ಕಾಯಕ' ನಿನ್ನ ಬೆಳೆಸುವುದು.

Friday, February 20, 2026

ಮೌನ ರಾಗ

ಕಂಡೆನೆಂದು ನಡೆವಾಗ ಕಾನನದಲ್ಲಿ,

ನಿನ್ನ ರೂಪ ಹೃದಯದಲ್ಲಿ,


ಛಾಪು ಮೂಡಿದೆ ರೂಪ ಮನದಲ್ಲಿ,

ರೂಪ ತುಂಬಾ ಅಪರೂಪ ಇಲ್ಲಿ.

 

ಹೃದಯದ ಮೂಲೆಯಲ್ಲಿ ಧ್ವನಿಸುತ್ತಿದೆ ಮೌನ ರಾಗ,

ಬೇಡ ಬೇಡವೆಂದರೂ ನಿದಿರೆಯ ಓಡಿಸುತ್ತಿದೆ ವಿರಾಗ,

ಹಕ್ಕಿಗಳಿಂಚರ ಚಿಲಿಪಿಲಿ ಹರಡಿದೆ ಪ್ರಕೃತಿ ಗಾನ,

ಏರುತ್ತಿದೆ ಮೂಡಣದ ಸೂರ್ಯೋದಯದ ತೆರೆ.

 

ತಬ್ಬಿ ಹಿಡಿದ ಚಳಿ ಬಿಡಲೊಲ್ಲದೆ ಬಾಹುಗಳಲ್ಲಿ ಅಪ್ಪಿದೆ,

ದೇವನ ಚೈತನ್ಯದ ಕಿರಣವೊಂದು ಹೃದಯವ ತಾಕಿದೆ,

ಅಣು ಅಣುವಿನಲಿ ಹೊಕ್ಕು ವಿಶ್ವರೂಪವ ತೋರಿದೆ,

 ಶಕ್ತಿಯ ತುಂಬಿ ಹೃದಯದಲಿ ಅನಂತ ಸಾಗರವಾಗಿದೆ. 

Saturday, February 14, 2026

ಮೌನದ ದನಿ

ಮನದ ಮೌನ ದನಿಗೆ ಕೊಂಚ ಕಿವಿಗೊಡೋಣ,

ಕೃತಜ್ಞತೆಯ ನಮಸ್ಕಾರ  ಹೃದಯದಿ ಹೇಳೋಣ.

ನಮ್ಮನ್ನು ಮುನ್ನಡೆಸುವ ಸಹಯಾತ್ರಿಗೆ ನಮಿಸೋಣ,

ನಿಶಬ್ದ ಹೆಜ್ಜೆಗಳಿಗೆ ಅರ್ಥ ತುಂಬಿದಕ್ಕೆ ಕೃತಜ್ಞತೆಯ ಹೇಳೋಣ.

 

ಬರಿ ಬರಹವಿಲ್ಲವದು, ಮನಕ್ಕೆ ಸ್ಪಂದನ,

ನಿಶಬ್ದದೊಳಗಣ ಪ್ರಪಂಚದ ನಿಜದ ಧ್ವನಿ.

ಜೀವನ ಯಾನದ ಸಹಯಾತ್ರಿಗಳು ನಾವು,

ಸಾಧನ ಮಾತ್ರ, ಬದಲಾವಣೆ ಮುಖ್ಯ ಧ್ಯೇಯ.

 

ಪದಗಳು ಹರಿಯಲಿ ಮೌನ ಸರಸತಿ ನದಿಯಾಗಿ,

ಆತ್ಮವ ತೊಳೆಯಲಿ ಶುಭ್ರ ಗಂಗೆಯಾಗಿ.

ಸತ್ಯ ನೆಲೆಗೊಳ್ಳಲಿ, ಸತ್ಯಕ್ಕೆ ಗೆಲುವಾಗಲಿ,

ಮಾನವೀಯತೆ ಮುನ್ನೆಲೆಗೆ ಬರಲಿ,

ಪ್ರೀತಿ-ಪ್ರೇಮ,ವಿಶ್ವಾಸ ಅಮರವಾಗಲಿ.

Wednesday, February 11, 2026

ಜೀವನ- ವೇದಿಕೆ

ನಿಧಾನದ ಹೆಜ್ಜೆಗಳಲ್ಲಿ ನಂಬಿಕೆ ಇರಲಿ,

ನಿಂತಿದ್ದೀಯಲ್ಲ, ಅಷ್ಟೇ ಸಾಕು.

ವೇಗವಲ್ಲ, ಸರಿ ದಾರಿ ಮುಖ್ಯ,

ಸಾಧನೆ ಅದು, ಸಾಗುವ ಮನಸ್ಸು ಬೇಕು.

 

                                                        ಸ್ಥೈರ್ಯ ಅಂದರೆ ಸಹಿಸುವುದಲ್ಲ,

ತಪ್ಪಿಗೆ 'ಇಲ್ಲ' ಎನ್ನುವ ಧೈರ್ಯ.

ಒಂಟಿಯಾಗಿ ನಿಲ್ಲುವ ಶಕ್ತಿ,

ಬಲವದು, ತೀರ್ಮಾನಗಳಲ್ಲಿ ಕಾಣು.

 

ಜೀವನ ಪರೀಕ್ಷೆಯ ವೇದಿಕೆ,

ಸ್ಥಿರವಾಗಿ ನಿಂತು ಎದುರಿಸು.

ದಾರಿಯಲ್ಲಿ ಕಳೆದುಹೋಗದಿರು,

ಆತ್ಮವಿಶ್ವಾಸವೇ ನಿನ್ನ ಆಸ್ತಿ.

Sunday, February 8, 2026

ಬೆಳಕಿನ ಕಿಡಿ

ಕಾರ್ಮೋಡ ಮನವ ಆವರಿಸೆ,

ಧೈರ್ಯ ಅಂತರಂಗದೊಳು ಬೆಚ್ಚಗಿರೆ.

ಮುದುಡಿ ಕುಳಿತುಕೊಳ್ಳದೇ ಹೆಜ್ಜೆಯಿಡು,

ಧೈರ್ಯ ತುಂಬಿದವನಂತೆ ನಟಿಸು.

 

ನಗು, ನಿನ್ನ ಸ್ಥಿತಿಯ ಕಂಡು ಕರಗಿ,

ಭಯವೇ ಆವರಿಸಿದರೂ ನಿಂತು ತಿರುಗು.


ಬಲವಂತದಿ ನಟಿಸು ಮನದೊಳಗೆ ಭಾವತುಂಬಿ,

ಬಲವು ತುಂಬುವುದು ಮನದೊಳಗೆ.

 

ನಿರಾಸೆ ಇದ್ದರೂ ಆಸೆಯಿಂದಲೇ ಹೆಜ್ಜೆಯಿಡು,

ಕಾರ್ಯಪ್ರವೃತ್ತನಾಗು, ಬದಲಾವಣೆಗೆ ಸೆಣಸು.

ದೇಹಭಾಷೆಯ ಬದಲಿಸು, ಪರಿಸ್ಥಿತಿ ಬದಲಾದೀತು,

ಬುದ್ಧಿಯಿಂದಲಿ ಪಾತ್ರವ ಸರಿಯಾಗಿ ನಿರ್ವಹಿಸು.

 

ಪ್ರತಿಕ್ಷಣವೂ ನಾವೆಣಿಸಿದಂತೆ ಇರದು,

ಕ್ರಿಯೆಯಿಂದಲೇ ಬೆಳಕು ಹೊರಳುವುದು.

ಹುಡಿಯಾಗು,ಕಿಡಿಯಾಗು, ಬೆಳಕೇ ನೀನಾಗು,

ನಿನ್ನೊಳ ಚೈತನ್ಯಕ್ಕೆ ನೀ ಅಡಿಯಾಳಾಗು.

 

ನಿನ್ನೊಳ ಚೈತನ್ಯ ನಿನ್ನ ಗುರಿ ತಲುಪಿಸುವುದು….

Saturday, February 7, 2026

ಪುಟಗಳ ಶಕ್ತಿ

ಪುಸ್ತಕವೊಂದು ಮೌನವಾಗಿ ಕಾಯುತ್ತದೆ,

ಓದುವ ಮನಸ್ಸಿಗಾಗಿ, ಬೆಳಕ ಕಣ್ಣು ತೆರೆಯಲು.

ಕಾಣದ ಜಗವಡಗಿದೆ ಅದರ ಒಡಲೊಳಗೆ,

ಜ್ಞಾನದ ಹೊನಲು ಜೀವನ ಬೆಳಗಲು ಕಾದಿದೆ.

 

ಕಗ್ಗತ್ತಲಲ್ಲಿ ಪುಸ್ತಕ ಹೊಳೆದಿದೆ ನಕ್ಷತ್ರದಂತೆ,

ಕನಸ ಬೀಜ ಮನದಲ್ಲಿ ಬಿತ್ತಲು ಕಾದಿದೆ.

ಪ್ರಯತ್ನದ ರೆಕ್ಕೆ ತೊಡಿಸಿ ನಭಕ್ಕೆ ಹಾರಿಸಲು,

ಪುಟ ಪುಟಗಳಲ್ಲಿ ಸೃಷ್ಟಿಯ ಸೊಬಗ ತೆರೆದಿದೆ.

 

ಬಾ ಓದುಗನೇ ಪುಟಗಳಲ್ಲಿ ಕಣ್ಣ ಹಾಯಿಸು,

ಜ್ಞಾನದ ದೀವಿಗೆಯ ಹೃದಯದಲ್ಲಿ ಹಚ್ಚು.

ದೂರದೃಷ್ಟಿಯ ಬೆಳೆಸಿ ಅಜೇಯನಾಗು ಬಾ,

ಮಾನವತೆಯ ಕರುಣೆಯ ಸಾಧಕನಾಗುವೆ ಬಾ.

 

ಬಾ ಓದುಗನೇ, ಸೋಜಿಗವ ಕಾಣು ಬಾ...

Saturday, January 31, 2026

ಮಧುರ ಯಾನ

ಹೊರಟೆವಾನಂದದಿ ಪ್ರಕೃತಿ ಮಡಿಲಿಗೆ,

ಸ್ನೇಹಿತರು, ಗೆಳೆತನದ ದೆಸೆಯಿಂದ ಮುದದಿ,

ದೂರದ ತಾಯ ಮನೆಗೆ, ತವರು ಮನೆಯಂತ ಗುಡಿಗೆ,

ಮುಗ್ದ ಮನಗಳು, ಐವತ್ತರ ಹರೆಯ ಗೆಳೆತನಕೆ,

ತಾರುಣ್ಯದ ಹರೆಯದಲ್ಲಿ ಕಂಡ ಮುಖಗಳವು,

ಜೀವನದ ಕಷ್ಟ,ಸುಖ, ನೋವು-ನಲಿವುಗಳ ಉಂಡೆವು,

ಬದುಕ ಲೀಲೆಗೆ ಬಾಗಿ ಏಳುವವರು ನಾವು,

ಕೊನೆಯ ಅರಿವಿದೆ ಇಂದಲ್ಲ, ನಾಳೆ ನಮ್ಮ ಸರದಿ,

ಮಧುರ ನೆನಪುಗಳ ಆಸರೆಯಲ್ಲಿ ಹೆಜ್ಜೆ ಇಡುವ,

ನಾಳೆಗಳು ಬರಲಿ, ನೆನಪುಗಳು ಉಳಿಯಲಿ.

Thursday, January 22, 2026

ಈ ಸಮಯ

ಸಮಯ ಅತ್ಯಮೂಲ್ಯ,

ಮುಂದೆಂದೂ ಬಾರದು ಗೆಳೆಯಾ.

 

ಸಮಯ ಹರಿಯುವ ನದಿಯಂತೆ,

ಹಿಂತಿರುಗಿ ಬಾರದು ಎಂದೂ.

 

ಹಣ ಮತ್ತೆ ಸಂಪಾದಿಸಬಹುದು,

ಸಮಯ ಮರಳಿ ಬಾರದು ಗೆಳೆಯ.

 

ಪ್ರತಿ ಕ್ಷಣ ಅಮೂಲ್ಯ ಗೆಳೆಯ,

ವ್ಯರ್ಥ ಮಾಡಬೇಡ ಗೆಳೆಯ.

 

ಅಧ್ಯಯನ, ಆರೋಗ್ಯ, ಕನಸುಗಳ ದಾರಿ,

ಸಮಯವನ್ನು ಜಾಣ್ಮೆಯಿಂದ ಬಳಸು.

 

ಕೊನೆಯ ಹೊತ್ತಿನಲ್ಲಿ ನೆನಪಿಸಿಕೋ,

ಮಾಡಿದ ಅರ್ಥಪೂರ್ಣ ಕಾರ್ಯವ.

 

ಮರುಗದಿರು ಕೊನೆಯಲ್ಲಿ,

ವ್ಯರ್ಥಮಾಡಿದೆ ಎಂದು.

ಗುರು

ಜೀವನದ ಪ್ರತಿ ಹೆಜ್ಜೆಯಲಿ ಪಾಠವಿದೆ,

ಜೀವನದ ಪ್ರತಿ ಮುಖದಲಿ ಸಂದೇಶವಿದೆ.

ಗೆಲುವು ಕಂಡವರು ಸ್ಫೂರ್ತಿಯ ದೀಪ,

ನ್ಯೂನತೆ ಹೊಂದಿರುವವರು ಎಚ್ಚರಿಕೆ.

 

ಸಂತೋಷ ಹಂಚಿದವರು ಹರ್ಷದ ದಾರಿ,

ದುಃಖ ಅನುಭವಿಸಿದವರು ಕೃತಜ್ಞತೆಯ ಪಾಠ.

ದಯೆಯ ಹೃದಯದವರು ಕರುಣೆಯ ಗೀತೆ,

ಕೊಂಕು  ಮಾತುಗಳನಾಡುವವರು ಸಹನೆಯ ಪಾಠ.

 

ಜೀವನವೇ ಒಂದು ದೊಡ್ಡ ಪಾಠಶಾಲೆ,

ಪ್ರತಿ ಜೀವಿಯೂ ಗುರುವು ಇಲ್ಲಿ.

ಕಲಿಯುವ ಒಳಮನಸ್ಸು ಕಣ್ತೆರೆದರೆ,

ಪ್ರತಿ ಕ್ಷಣವೂ ಮನ್ನೋಲ್ಲಾಸ, ಜೀವನ ಪಾಠ.

Thursday, January 15, 2026

ಮೂಲ ಪ್ರಶ್ನೆ

ಮನಸೇ, ನಿಲ್ಲು ಕ್ಷಣ,

ಪ್ರಶ್ನೆ ಕೇಳಿಕೋ ನಿನ್ನೊಳಗೆ

ಏನು ಮುಖ್ಯ? ಏಕೆ ಮುಖ್ಯ?

ಅದೇ ದಾರಿ ಬೆಳಕಾಗುವುದು.

 

ಅನಗತ್ಯದ ಗೊಂದಲ ತೊರೆ,

ಸತ್ಯದ ಅರ್ಥ ಹಿಡಿದುಕೋ,

ಸಾಧನೆಯ ಹೂವು ಅರಳಲಿ,

ಆತ್ಮಜ್ಞಾನದ ದೀಪ ಬೆಳಗಲಿ.

 

ಅಧ್ಯಯನದ ಸಾಗರದಲ್ಲಿ,

ಅಲೆಗಳೆಷ್ಟು ಎದ್ದರೂ,

ಮೂಲ ಹರಿಗೋಲ ಹಿಡಿ ಸಾಕು,

ಗುರಿಯ ನೀ ತಪ್ಪದೆ ಸೇರುವೆ.

 

ಗುರಿ ನಿಗದಿ ಮಾಡುವಾಗ,

ಕಾರಣ ಕೇಳು ಹೃದಯವ,

ಬಲವಾದ ಕಾರಣವಿರೆ,

ಪ್ರಯತ್ನದ ಫಲ ನಿನ್ನದೇ.

 

ಜೀವನದ ಪ್ರತಿಯೊಂದು ಹೆಜ್ಜೆ,

ಪ್ರಶ್ನೆಯೇ ಮಾರ್ಗದರ್ಶಿ,

ಏನು ಮುಖ್ಯ? ಏಕೆ ಮುಖ್ಯ?

ಅದೇ ನಿನ್ನ ನಿಜದ ದಾರಿದೀಪ.

Wednesday, January 14, 2026

ಗುರಿಯ ದಾರಿ

ಚಿಕ್ಕ ಚಿಂತನೆಯ ಬೀಜ ಬಿತ್ತು

ಅವಕಾಶಗಳ ಅರಣ್ಯ ಬೆಳೆವುದು.  

ಬರೆದ ಗುರಿ ಬೆಳಕಾಗುವುದು, 

ಕತ್ತಲಲ್ಲಿ ದಾರಿ ದೀಪವಾಗುವುದು.  

 

ಆಸೆಯ ನಕ್ಷತ್ರದಂತೆ ಗುರಿ ಹೊಳೆವುದು,  

ಬಯಕೆಯ ಹೆಜ್ಜೆಗಳಿಗೆ ದಾರಿ ತೋರಿವುದು.  

ಹಂಬಲದ ಕಾರಣ ಹೃದಯ ಉಳಿಸುವುದು,  

ಯಾವಕಾಲವಾದರೂ ಮನದಲ್ಲೇ ಉಳಿವುದು.  

 

ಯೋಜನೆ ನದಿಯಂತೆ ಹರಿಯಲಿ, 

ಮನಸ್ಸು ಬಾಗಿ ಆನಂದಿಸಲಿ. 

ಇಂದೇ ಆರಂಭಿಸಿದ ಕೆಲಸ, 

ನಾಳೆಯ ನನಸು ಹುಣ್ಣಿಮೆಯಂತೆ. 

 

ಕನಸುಗಾರ, ಅನ್ವೇಷಿ, 

ಭವಿಷ್ಯ ಗುರಿಗಳಲ್ಲಿ ನೆಲೆಸಿದೆ. 

ಬರೆ, ರೂಪಿಸು, ಜೀವ ತುಂಬು, 

ಹೂವಿನಂತೆ ಅರಳಿ, ಗುರಿ ತಲುಪು. 

ಆರಂಭ ಇಂದೇ...

' ನಾಳೆ ' ಎನಬೇಡ , ' ಆರಂಭ ' ಇಂದೇ , ' ಕನಸು ' ಗಳು ನಾಳೆಗೆ ಕಾಯದು . ' ಕ್ಯಾಲೋರಿ ' ಗಳು ಮಾತಿನಿಂದ ಕರಗದು , ...