Friday, August 22, 2025

ಸಾಂತ್ವನದ ಬೆಳಕು

ಬಾ ಎಂದು ಕರೆದರೂ ಬಳಿ ಬರಲಾರೆಯಾ,

ಬಂದೊಮ್ಮೆ ಮನವ ಸಂತೈಸಲಾರೆಯಾ|

ಭಾವಗಳ ಭಾರದಿ ಮನದಲ್ಲಿ ಹೊರೆ ಹೆಚ್ಚಿರಲು,

ಬಂದೊಮ್ಮೆ ಬೆನ್ನು ತಟ್ಟಿ ಚೈತನ್ಯ ತುಂಬಲಾರೆಯಾ||

 

ಚಿಂತೆಗಳು ಮನವನ್ನೇ ಆಕ್ರಮಿಸಿ ಹಿಂಸಿಸುತ್ತಿರಲು,

ಸಾಂತ್ವನವ ಹೇಳುವ ಹೃದಯವೊಂದು ಬೇಕೆನೆಗೆ|

ಜೀವನದ ಜಂಜಾಟದಲ್ಲಿ ಎಡವಿ ಬೀಳುತಿರಲು,

ಕೈ ನೀಡಿ ಸಹಕಾರ ನೀಡಬಯಸುವವ ಬೇಕೆನಗೆ||

 

ವಿರಹದಿ ಬಾಯಾರಿ ಚಿಂತೆಯಲಿ ಬೆಂದಿರಲು,

ಹಾಯೆನಿಸುವ ಕರುಣಾರಸವ ಹರಿಸು ಬಾ||

ಎದೆಯ ಮೇಲೆ ನೋವಿನ ಭಾರವ ಎಳೆದುಕೊಂಡಿರಲು,

ಸಾಂತ್ವನದ ನುಡಿಗಳ ಮೂಲಕ ಬೆಳಕ ಚೆಲ್ಲಿ ಕತ್ತಲ ಓಡಿಸು ಬಾ ।।

 

ಕಣ್ಣು ತೆರೆದಿದ್ದರೂ ಕತ್ತಲ ಪಟ್ಟಿ ಬಿಗಿದಿರಲು,

ಜ್ಞಾನ ದೀವಿಗೆಯ ತಂದು ಕೈ ಹಿಡಿದು ನಡೆಸು ಬಾ||

ಹೃದಯದಲಿ ಭಯದ ತೆರೆಯು ಮುಸುಕಿರಲು,

ಧೈರ್ಯ ತುಂಬಿ ಅಧೀರತೆಯ ಕಳೆಯೆ ಬಾ||

No comments:

Post a Comment

ಅಜೇಯ

ಕಾಳ ರಾತ್ರಿಯ ಕತ್ತಲು ನನ್ನ ಆವರಿಸಿ ಕಾಡಿದೆ , ಕಪ್ಪು ಕತ್ತಲು ಅಡಿಯಿಂದ ಮುಡಿಯವರೆಗೂ ಕಟ್ಟಿಹಾಕಿ . ಎಲ್ಲಾ ದೇವರುಗಳಿಗೂ ನನ್ನ ಅನಂತಾನಂತ ಧನ್ಯವಾದಗ...