Sunday, August 10, 2025

ಅವನು, ನಾನು – ಸಂಗೀತ

 ನಾನು ವೀಣೆ,

ಅವನು ವೈಣಿಕ,

ಸಂಗೀತವೇ ನಮ್ಮ ಜೀವನ||

 

ನಾನು ಜೀವ,

ಅವನು ದೈವ,

ಹೊಮ್ಮಲಿ ಗಂಧರ್ವ ಗಾನ।।

 

ನಾನು ದಾರಿ,

ಅವನೇ ಗುರಿ,

ನಡೆವ ಹಾದಿಯೇ ಸ್ವರ್ಗ||

 

ನಾನು ನಿಮಿತ್ತ,

ಅವನು ಅನಂತ,

ಅವನೇ  ಅಂತಿಮ ಗುರಿ||

 

ನಾನು ಅವನ ಇರುವಿಕೆಗೆ ಅಕ್ಷಿ,

ಅವನು ನನ್ನ ಇರುವಿಕೆಗೆ ಸಾಕ್ಷಿ||

Saturday, August 9, 2025

ಮೌನದೊಳಗಿನ ಕವಿತೆ

 ಏಕೆ ಗೊಂದಲವೋ?

ಮೌನವಾಗಿರುವಾಗ!

ಕವಿತೆ ಬರೆವಾಗಲೂ!

ಯೋಚಿಸಿದೆ ಸತತವಾಗಿ

ಎಲ್ಲಾ ಕೋನ, ಕೊನರುಗಳಿಂದ

ಸ್ಪಷ್ಟಚಿತ್ರ ಮನದಲ್ಲಿ ಮೂಡಲೆಂದು.

ದಾರಿ ಸ್ಪಷ್ಟವಾಗಿದೆಯೆಂದು

ಹೆಜ್ಜೆಯಿಟ್ಟೆ ಗುರಿಯ ಕಡೆಗೆ

ಆದರೆ ದಾರಿ ನನ್ನದಾಗಿರಲಿಲ್ಲ.

ಏನೋ ಅಂದುಕೊಂಡೆ, ಆದದ್ದೇನೋ!

ಗೊಂದಲದ ಗೂಡಾಗಿದೆ

ತಿಮಿರದ ಮನೆಯಾಗಿದೆ

ಮನ ಅಸ್ಪಷ್ಟ ಚಿತ್ರ ಕೂಟ

ಕವಿತೆಯಾಗಿದೆ ಮನದ ಭಾವವೆಲ್ಲಾ

ಬಿಡಲಾರೆ, ತೊರೆಯಲಾರೆ

ಜೊತೆಗೆ ನಡೆಯುವೆ,

ಮೌನವಾಗಿರುವಾಗಲೂ .......

ಕವಿತೆ ಬರೆವಾಗಲೂ ......

Friday, August 8, 2025

ಅವ್ಯಕ್ತ

 ಬೆಳಕನು ನುಂಗುತ್ತಾ,

ಕತ್ತಲೆಯು  ಎಲ್ಲೆ ಮೀರಿತ್ತು!,

ಕಾಡು ನಾಡೆನ್ನದೆ,

ಎಲ್ಲವ  ಬಳಸಿ ಆವರಿಸಿತ್ತು,

ಮೌನವು ಎಲ್ಲೆಡೆ

ಸಂತಸದಿ ತಾ ಮಾತನಾಡಿತ್ತು,

ಕತ್ತಲೊಳು ಎಲ್ಲವೂ  ಲಯವಾದುವು,

ಇಹ ಪರಗಳು ಎರಡೂ ಒಂದಾದುವು,

ಮನದೊಳು ಎದ್ದ ಭಾವದಲೆಗಳು,

ಧ್ಯಾನದಿ ಅವುಗಳ ನುಂಗಿತ್ತು.||  

ಛಲದ ಹೆಜ್ಜೆಗಳು

 ಏಳು, ಎದ್ದೇಳು!

ಆಗಸವ ನೋಡು,

ಕೊನೆಯಿಲ್ಲದ ಅನಂತನೆಡೆಗೆ ನೋಡು,

ಚೈತನ್ಯದ ಸೊಬಗ ತರುತ್ತಿರುವ ಆಕಾಶದೆಡೆಗೆ ನೋಡು,

ಜಗದ ನೋವುಗಳ ದಾಟಿ ನಡೆ,

ಮೌನ ಸಾಗರವನೇ ಹೊತ್ತು,

ನಿಲ್ಲದೇ ನಡೆಯುವುದ ಕಲಿ,

ಗುರಿ ಮುಟ್ಟುವವರೆಗೂ ಇರಲಿ ಛಲ,

ನಡೆದಷ್ಟೂ ಸಂತೋಷದ  ಭಾವಗಳು ಉಕ್ಕಲಿ,

ನಡೆಯಬೇಕು  ಮೈಲುಗಳ ಧಣಿವರಿಯದೆ,

ಜೊತೆಗೆ ತುಟಿಯ ಮೇಲೆ ನಗುವಿರಲು,

ಎಲ್ಲ ಗೆಲುವುಗಳು, ಎಲ್ಲ ಕದನಗಳು ನನ್ನದೇ!||

Sunday, August 3, 2025

ಕನಸಿನ ದಾರಿ

 ಮತ್ತೆ ಇಲ್ಲ, ಮತ್ತೆಂದೂ ಇಲ್ಲ,

ಮತ್ತೆಂದೂ ಹೃದಯವ ನೋಯಿಸಲಾರೆ;

ನಾನಂದು ಕೊಂಡ ಜೀವನ ನನ್ನದಾಗದೇ?

ಹಿಂಸಿಸುವ ಮಾತುಗಳ ಕೇಳಿ ರೋಸಿಹೋಗಿದ್ದೇನೆ.

ಮತ್ತೆ ಇಲ್ಲ, ಮತ್ತೆಂದೂ ಇಲ್ಲ, ಕೇಳಿಸಿಕೊಳ್ಳಲಾರೆ.

ಹೃದಯದ ಅಂತರಾತ್ಮದ ಕರೆಯ ಕೇಳಿಸಿಕೊಳ್ಳುತ್ತಿದ್ದೇನೆ.

ಎಚ್ಚೆತ್ತಿದ್ದೇನೆ, ನನ್ನ ದೈವತ್ವದ ದಾರಿಯ ಗೋಚರವಾಗಿದೆ.

ನನ್ನ ಹಳೆಯ ಸರುಕುಗಳ ಗಂಟು ಕಟ್ಟಿದ್ದೇನೆ,

ನನ್ನದೆಂದುಕೊಂಡ ಎಲ್ಲವನ್ನೂ ಹೊತ್ತಿದ್ದೇನೆ.

ಎಲ್ಲರೂ ಮಲಗಿದ್ದಾರೆ, ನಡುರಾತ್ರಿಯ ಕತ್ತಲು,

ನಾ ನಡೆವ ದಾರಿಯಲ್ಲಿ ಮಾತ್ರ ಬೆಳಕು,

ನಡೆದದ್ದು ಬಹಳ ಮೈಲಿಗಳು, ಬೇಸರವಿಲ್ಲದೆ!

ಹೊಸ ಬೆಳಕು ಕಾಣುತ್ತಿದ್ದೇನೆ - ನನ್ನ ದಾರಿಯಲ್ಲಿ.

ನಾ ಕಂಡ ಕನಸಿನ ದಾರಿಯಲ್ಲಿ.

Saturday, August 2, 2025

ಮೌನ ರಾಗ

 ಯಾವ ಕರೆಗೋ!,

ಯಾವ ಕಡೆಗೋ!

ಹೊರಳುವುದು ಮನ,

ಕೇಳಿ ಕಾಣದರಿಯದ ಗಾನಕೆ ।।

 

ಕರಗುವುದು ಮನ,

ಕೆರಳುವುದು ಮನ|

ನಿದ್ದೆಯಲ್ಲೂ ಕಾಡುವುದು,

ಕಂಡು ಕೇಳರಿಯದ ರಾಗಕೆ||

 

ಮನವ ಶೋಧಿಸುವುದು,

ದಿಕ್ಕುಗಾಣದೆ ಓಡಿಹುದು|

ಯುದ್ಧದ ಸೆರೆಯಾಳಾಗಲೇ?,

ಇಲ್ಲ, ಇನಿದನಿಗೆ ಶರಣಾಗಲೇ?।।

 

ಯಾವ ಕರೆ?, ಯಾವ ಕಡೆ?,

ಯಾವ ಗಾನ?, ಯಾವ ರಾಗ?

ಮನ ಸೋತಿಹೆ ಅನಂತ ನಾದಕೆ,

ತಲೆದೂಗುತಿಹೆ ಮೌನ ರಾಗಕೆ||

Friday, August 1, 2025

ಪರಿಸರ

ಕೆರೆಗಳೆಲ್ಲಿ?, ಗುಡ್ಡಗಳೆಲ್ಲಿ?

ಇಲ್ಲಿ ಎಲ್ಲವೂ ಬೆತ್ತಲಾಗಿವೆ|

ಯಾರದೋ ಹೊಟ್ಟೆಯ ಹಸಿವಿಗೆ

ನಿತ್ಯ ಬಲಿಪಶುಗಳಾಗಿವೆ||

 

ಮರಗಿಡಗಳೆಲ್ಲಿ?, ಪ್ರಾಣಿ-ಪಕ್ಷಿಗಳೆಲ್ಲಿ

ಕಾಣ ದೂರಿಗೆ ವಲಸೆ ಹೋಗಿವೆ|

ನಮ್ಮಯ ಸ್ವಾರ್ಥ ಸಾಧನೆಗೆ

ತಮ್ಮಯ ಬಲಿಗೊಟ್ಟಿವೆ||

 

ಮಳೆಯಿಲ್ಲ, ಬೆಳೆಯಿಲ್ಲ,

ಆರ್ತನಾದ ಮುಗಿಲು ಮುಟ್ಟಿದೆ|

ಅಜ್ಞಾನವು ಮೇಳೈಸಿರೆ

ಸರ್ವನಾಶವು ಮುಂದೆ ಕಾದಿದೆ||

 

ನೀರಿಲ್ಲ, ನೆರಳಿಲ್ಲ,

ಬಿಸಿಲ ಬೇಗೆ ಎಲ್ಲೆ ಮೀರಿದೆ|

ಪರಿಸರ ಸಂರಕ್ಷಿಸದೇ

ಮುಂದಿನ ಪೀಳಿಗೆಗೆ ಭವಿಷ್ಯವೆಲ್ಲಿದೆ?।।



ಯುದ್ಧ

 ಯುದ್ಧ ಕೊನೆಗೊಳ್ಳುವುದು,

ನಾಯಕರು ಕೈ ಕುಲುಕುವರು;

ವಯಸ್ಸಾದ ತಾಯಿ ಕಾಯುತ್ತಿರುತ್ತಾಳೆ,

ಹುತಾತ್ಮನಾದ ಮಗ ಬರುವನೆಂದು;

ಯುವತಿಯೂ ಕಾಯುತ್ತಿರುತ್ತಾಳೆ,

ಪ್ರೀತಿಯ ಗಂಡ ಮರಳಿ ಬರುವನೆಂದು;

ಒಹ್! ಮಕ್ಕಳೂ ಕಾಯುತ್ತಿರುತ್ತಾರೆ,

ತಮ್ಮ ಜೀವನದ ನಾಯಕ ಬರುವನೆಂದು;

ನಮ್ಮ ತಾಯ್ನಾಡನ್ನು ಯಾರು

ಒತ್ತೆಯಿಟ್ಟರೋ ಗೊತ್ತಿಲ್ಲ;

ಆದರೆ,

ಯಾರು ಬೆಲೆ ಕಟ್ಟಿದರೆಂದು ನಾಬಲ್ಲೆ; ||

ಅನಂತ ದಾರಿ

 ನಡೆಯುತ್ತಿದ್ದೇನೆ ನನ್ನದಲ್ಲದ ದಾರಿಯಲ್ಲಿ,

ಅನಿವಾರ್ಯತೆಗೆ ಕಟ್ಟಿದೆ ಕೈ, ಕಾಲು,

ಕಾಣದ ಬಿಗಿಯಾದ ದಾರದಲ್ಲಿ.

ಎಷ್ಟು ದೂರ ಕ್ರಮಿಸಿದ್ದೇನೋ? ಪ್ರಶ್ನಾರ್ಥಕ?

ಇನ್ನೆಷ್ಟು ದೂರ ಕ್ರಮಿಸಬೇಕೋ? ತಿಳಿದಿಲ್ಲ, ಅನಂತ!

ಗುರಿ ಯಾವುದು?, ಕೊನೆ ಯಾವುದು?

ಗುರಿಯಿಲ್ಲದ ಹಾದಿಯಲ್ಲೇ ಕಳೆದುಹೋಗಿದ್ದೇನೆ.

ಬೇಸರವಿಲ್ಲ ಆದರೆ, ಅನಾಥ ಪ್ರಜ್ಞೆಯಷ್ಟೇ

ಮನಸ್ಸೂ ಅಷ್ಟೇ , ಜಡಗಟ್ಟಿದೆ.

ಬೇಸರವಿಲ್ಲದೆ ಮುನ್ನಡೆಯಬೇಕಷ್ಟೇ .

ಅದೇ ಶಿಸ್ತು, ಕಾಣುವುದೆಲ್ಲವ ಕಾಣಬೇಕು,

ಯಾವುದರಲ್ಲಡಗಿದೆಯೋ ನನ್ನ ಗುರಿ,

ನೂರು ದಾರಿಯ ಕ್ರಮಿಸುವ ವಿಶ್ವಾಸವಿದೆ.

ಶಕ್ತಿ ಅವನೇ ನೀಡಬೇಕಷ್ಟೇ,

ಗುರಿಯಿಲ್ಲದ ಅನಂತ ದಾರಿಯ ನಡೆವ ತವಕ||

Sunday, July 27, 2025

ಬುಗುಡಿ-ಹೂವು

 ಅರೇ, ನೋಡಲ್ಲಿ, ಅಲ್ಲೊಂದು ಹೂವು.

ಪಂಚಭೂತಗಳೇ ದಳಗಳಾಗಿ,

ಸೂರ್ಯರಶ್ಮಿಯೇ ಚೈತನ್ಯವಾಗಿ,

ಸ್ವರ್ಗದಿಂದಲೇ ಜಾರಿ ಭೂಮಿಗೆ ಇಳಿದ,

ಭೂತಾಯಿಯ ನಗುವಿನ ಹೊನಲಾಗಿ

ಹರಿದು ಹೂವಾಗಿ ನೆಲೆ ನಿಂತಿದೆ, ನೀ "ಭದ್ರವಲ್ಲಿ"

ಪರಿಮಳವ ಸೂಸಿ  ಮನವ ಸೆಳೆದಿದೆ,

ಬಂಗಾರದ ಬಣ್ಣವ ಮೈಯೆಲ್ಲಾ ಹೊತ್ತು,

ಭೂತಾಯಿಯ ಸೇವೆಗೆ ನಿಂತಿದೆ,

ವಲ್ಲರಿ ಎನ್ನಲೋ!, ದೇವತೆ ಎನ್ನಲೋ!

ಬೆರಗಾದೆ ಬುಗುಡಿ, ನಿನ್ನಯ ಬೆಡಗ ಕಂಡು||

ಮಳೆಯೇ! ಓ ಮಳೆಯೇ!

ಮಳೆಯೇ! ಮಳೆಯೇ!,

ಮರೆತ ನೂರು ನೆನಪೇಕೆ ತರುತಿಹೆ?

ತುಂತುರು ನೀರ ಹನಿಯ ರೀತಿ

ತಂಪನ್ನೆರೆದು ಸವಿ ನೆನಪೇಕೆ ತರುತಿಹೆ?।।

 

ಚಿಟ-ಪಟ,ಚಿಟ-ಪಟ, ಸದ್ದಿನ ಸಪ್ಪಳ,

ಕೇಳಿದ ನೆನಪೆಲ್ಲೋ ಮತ್ತೇ ಮರುಕಳಿಸಿದೆ|

ಎಲ್ಲೋ ಬಿದ್ದ ಮಳೆಯ ವಾಸನೆ,

ಹೊತ್ತು ತಂದಿದೆ ಮಧುರ ಸವಿನೆನಪು||

 

ಹರಿವ ನೀರು ತನ್ನ ಗುರಿಯ ಹಾದಿ ಹಿಡಿದಿದೆ,

ಮನದೊಳು ಹರಿವ ಚೈತನ್ಯ ಗಂಗೆ ದಾರಿ ಮರೆತಿದೆ|

ಮರೆತುಹೋದ ನೆನಪೊಂದು ಹಾರಿ ಬಂದಿದೆ,

ಕಳೆದುಹೋದ ಸವಿ ಗಳಿಗೆಗಳು ಗರಿಗೆದರಿವೆ||

 

ಮಳೆಯೇ! ಬಾ ಮನದೊಳು,

ಮಳೆಯೇ!,  ಸವಿ ನೆನಪುಗಳ ತಾ|

ಮನವ ಹದಗೊಳಿಸಿ, ಸಿದ್ಧವಾಗಿಸಿ,

ಚೈತನ್ಯದ ಬೀಜವ ಬಿತ್ತಲು ಕಾಯುತಿಹೆ ಬಾ||

Saturday, July 26, 2025

ಸೋಲಿನಲ್ಲೂ ಬೆಳಕು

 ಸೋಲಿಸಬಹುದು ಸೋಲನ್ನೇ!,

ಆಹ್ವಾನಿಸು, ಆರಾಧಿಸು ಬರಲಿ ಜೊತೆಗೆ|

ಸೋಲು ಅಭ್ಯಾಸವಾಗಲಿ ಬಿಡು,

ತಿಳಿ ಸೋಲೇ ಗೆಲುವಿನ ಮೆಟ್ಟಿಲು ಬಾಳಿಗೆ||

 

ಸಹಿಸು ಅಸಡ್ಡೆ, ಅವಮಾನಗಳ,

ಸುರಿಸು ಕಣ್ಣೀರು, ಅಳು ಕತ್ತಲಲಿ|

ನಂಬಿಕೆಯನಿಡು ನಿನ್ನ ಪ್ರಯತ್ನದಲ್ಲಿ,

ಹಂಬಲದಿ ಮುನ್ನಡೆ, ನಾಳೆಗಳ ಬಾಳಲಿ||

 

ಕಿವುಡನಾಗು, ಠೀಕೆ ಟಿಪ್ಪಣಿಗಳಿಗೆ,

ಕುರುಡನಾಗು ನೋಡಿ ನಗುವವರಿಗೆ|

ಎಷ್ಟು ದಿನ ನಡೆದಿತ್ತು ಅವರಾಟ,

ನಂಬಿಕೆಯಿಡು ನಿನ್ನ ಹಾದಿ, ಕಲಿತ ಪಾಠ||

 

ಎಲ್ಲರಂತೆ ನೀನಲ್ಲ ಸಾಮಾನ್ಯನಾಗಬೇಡ,

ವಿಭಿನ್ನ ನೀನು, ಅಸಾಮಾನ್ಯ ನೀನು|

ಯೋಚಿಸು, ಪ್ರೀತಿಸು, ಕ್ರಿಯಾಶೀಲನಾಗು,

ಗಟ್ಟಿಯಾಗು, ಬದಲಾಗು, ಪ್ರತಿದಿನ ಉತ್ತಮನಾಗು||

Friday, July 25, 2025

ಅಜ್ಞಾತ ಹಾದಿಯ ಹೆಜ್ಜೆಗಳು

 ಯಾರೂ ನಡೆಯದ ಹಾದಿಯಲ್ಲಿ,

ನಡೆವುದೇ ಒಂದು ರೋಚಕ|

ಜೊತೆಗಾರೂ ಹೆಜ್ಜೆ ಹಾಕುವರಿಲ್ಲ,

ಪ್ರತಿ ಹೆಜ್ಜೆಯಲ್ಲೂ ಕೌತುಕ||

 

ಬುದ್ಧಿಯಿಲ್ಲ ಹುಚ್ಚನೆನ್ನುವರು,

ಠೀಕೆ ಟಿಪ್ಪಣಿಗಳಿಗೆ ಹೆದರದಿರು|

ಹೀಯಾಳಿಸಿ, ಅವಮಾನಿಸುವರು,

ಕಿವಿಗೆ, ಮನಸಿಗೆ ಹಾಕಿಕೊಂಡು ಬೆದರದಿರು||

 

ಕೊರತೆ ಯಾರಲಿಲ್ಲ ಹೇಳು!,

ಇದ್ದದ್ದೇ ಅದು, ಮುಂದೆ ಹೆಜ್ಜೆಯಿಡು।

ಅವಮಾನಿಸುವವರು ಮಾಡುತ್ತಲೇ ಇರಲಿ,

ಪ್ರಯತ್ನದಲ್ಲಿ ಮಾತ್ರ ನಿನ್ನ ನಂಬಿಕೆಯಿಡು||

 

ಯಾರೂ ನಡೆಯದ ಹಾದಿಯಲ್ಲಿ,

ನಡೆವುದೇ ಕತ್ತಲಲಿ ನಡೆವಂತೆ|

ನಂಬಿಕೆಯೇ ಕತ್ತಲ ಹಾದಿಯ ಕಂದೀಲು

ಧೈರ್ಯದಿ ಹೆಜ್ಜೆ ಹಾಕುತಿರೆ ತೆರೆವುದು ಹೊಂಬಿಸಿಲು|| 

ನೋವಿನ ಅಲೆಗಳು

 ಏಕೆ ಬರುವಿ ನೋವೇ?

ಕಾರಣ ಹೇಳಿ ಬಾ...,

ಕಾರಣವಿಲ್ಲದೆ ಬಂದು

ನರಳುವಂತೆ ಮಾಡಿ ಹೋಗುವೇ!।।

 

ಎಂದೋ ಆಗಿ ಹೋದ ಕನಸದು,

ಕಡಲ ಅಲೆಗಳು ದಡಕೆ,

ಬಂದು ಬಂದು ಅಪ್ಪಳಿಸುವುವು,

ಕನಸುಗಳನೆಲ್ಲಾ ನುಚ್ಚುನೂರು ಮಾಡುತ್ತಾ...||

 

ಎಂದೋ ಆದ ನೋವದು,

ಮನದಲಿ ಅಳಿಯದೆ ಹಸಿರಾಗಿದೆ,

ನೋವ ಕಡಲಲಿ ಕೈ ತೊಳೆಯುತ್ತಾ,

ಮನದ ದಡಕೆ ಅಪ್ಪಳಿಸುವುದು ದಿನವೂ ||

 

ಉಸಿರೇ ಸುಡುವ ಜ್ವಾಲಾಗ್ನಿಯಾಗಿ,

ಸುಡುತಿದೆ ಒಳಒಳಗೆ,

ಕೊನೆಯಿಲ್ಲದ ನೋವಿಗೆ,

ಆರಂಭವಿದ್ದುದು ದಿಟ, ಅಂತ್ಯವಿರುವುದೇ?

Sunday, July 20, 2025

ಹರಿವ ನದಿಯ ಕಣ್ಣೀರು

 ಸಂಜೆಯಾಗಸದಲಿ ಹೊಸತೇನೂ ಇಲ್ಲ,

ಆಗಸವೂ ಬರಿದಾಗಿದೆ ಮೋಡಗಳೇ ಇಲ್ಲ!

ಬಿಸಿಲ ಬೇಗೆಗೆ ಬಾಯಾರಿವೆ ತರುಲತೆಗಳು,

ಬಿಸಿಲ ಧಗೆಯೊಂದೇ ಗ್ಯಾರಂಟೀ ಖಚಿತವಿಲ್ಲಿ।।

 

ಮಳೆ ಇಲ್ಲ, ಅಂತರ್ಜಲ ಪಾತಾಳಕ್ಕಿಳಿದಿದೆಯಲ್ಲಾ!,

ಕೆರೆ, ಕೊಳ್ಳಗಳು ಖಾಲಿ,ಖಾಲಿ, ನಮ್ಮಲ್ಲಿ ನೀರಿಲ್ಲ।

ಟ್ಯಾನ್ಕರ್ ಯಜಮಾನರದೇ ಕಾರುಬಾರು ಇಲ್ಲಿ,

ಸರ್ಕಾರಕ್ಕೂ ಸಿಗುತ್ತಿಲ್ಲ ಒಂದು ಹನಿ ನೀರು||

 

ಕಾವೇರಿ ಕಣ್ಣೀರು ಹಾಕುತ್ತಾ ತಮಿಳುನಾಡಿಗೆ ಹರಿದಳು,

ಕೊಡಗಿನ ಕಾವೇರಿ ಹೆಸರಿಗೆ ನಮ್ಮ ಹೆಮ್ಮೆ|

ತವರು ಮನೆ ಬಿಟ್ಟು ತೆರಳುವ ಮಗಳು ಅವಳು,

ಕೊಟ್ಟ ಹೆಣ್ಣು ಕುಲದಿಂದ ಹೊರಗೆ, ಕಾವೇರಿ ನಮ್ಮವಳಲ್ಲ||

 

ಮಂಡ್ಯದ ಜನರ ಜೀವನಾಡಿ ಕಾವೇರಿ ಆದರೇನು?

ಕಾವೇರಿ ಹರಿದು ಹೋದ ಮೇಲೆ ಕಣ್ಣೀರ ಕಥೆಯೇ!

ಮಂಡ್ಯದ ಹೈಕಳು ನಡೆಸುವರು ಜೋರು ಹೋರಾಟಾ,

ಮಾಡಿದರು ಸರ್ಕಾರದ ತಿಥಿ, ಶ್ರಾಧ್ದದ ಊಟ।।

 

ಹರಿದು ಹೋಗುವವಳ ತಡೆವವರಾರು?

ಕಾವೇರಿ  ನಮ್ಮವಳಲ್ಲ,ನಮ್ಮವಳಲ್ಲ...  

ಎದೆಯೊಳಗಿನ ಮೌನ

 ಎದೆಯಲಿಂದೇಕೋ ಮೋಡ ಮುಸುಕಿದೆ,

ಭಾವಭಾರ ಹೆಚ್ಚಾಗಿ ಕಣ್ಣ ನೀರು ಉಕ್ಕಿದೆ।

ಬೇಡದ ನೆನಪುಗಳು ಮತ್ತೆ ಮತ್ತೆ ಮನವ ಕಾಡಿದೆ,

ಎದೆಯ ತುಂತುರು ಹನಿ ಹೃದಯವ ತೊಯ್ಯಿಸಿದೆ||

 

ಎದೆಯಲಿಂದೇಕೋ ಬೆವರಿ ಬಾಯಾರಿ ಬಿಕ್ಕುತ್ತಿದೆ,

ಯಾರದೋ ನೆನಪು ಹಾರಿ ಬಂದು ಕೆದಕುತ್ತಿದೆ||

ಉಸಿರೇ ನಿಂತಂತೆ ಭಯವು ಮನದಲ್ಲಿ ನೆಲೆಸಿದೆ,

ಇಂದೇಕೋ ನೆನಪು ತಂದು ಮನವು ರಚ್ಚೆ ಹಿಡಿದಿದೆ||

 

ಎದೆಯು ಪ್ರೀತಿಗೆ ಬಾಯಾರಿ ಬಾಯಿ ಬಿಡುತ್ತಿದೆ,

ಬಾಯಾರಿಕೆಯೋ!, ಹಸಿವೋ! ತಿಳಿಯದೆ ಒದ್ದಾಡಿದೆ|

ಕುಳಿತಲ್ಲೇ ಕುಳಿತಿರುವೆ ಏನೂ ಮಾಡಲಾಗದೆ,

ಎದೆ ಕಿವುಚಿ, ಹೃದಯ ಹಿಂಡಿ ಕಣ್ಣೀರು ಕೋಡಿಯಾಗಿದೆ||

 

ಎದೆಯ ಹಗುರಾಗಿಸಿ ಹರವಿ ಮಲಗಿರುವೆ,

ಎಲ್ಲವನ್ನೂ ಮರೆತು ಕಣ್ಣೀರ ಒರೆಸಿರುವೆ|

ಮಳೆನಿಂತ ಮೇಲೆ ಮತ್ತೆ ಹರಿಷದಿ ನಿಂತಿರುವೆ,

ಎದೆಯ ಗಟ್ಟಿ ಮಾಡಿ ನಾಳೆಗೆ ಭರವಸೆಯಾಗಿರುವೆ||

ಅವನು, ನಾನು – ಸಂಗೀತ

  ನಾನು ವೀಣೆ, ಅವನು ವೈಣಿಕ, ಸಂಗೀತವೇ ನಮ್ಮ ಜೀವನ ||   ನಾನು ಜೀವ, ಅವನು ದೈವ , ಹೊಮ್ಮಲಿ ಗಂಧರ್ವ ಗಾನ।।   ನಾನು ದಾರಿ, ಅವನೇ ಗ...