Friday, June 20, 2025

"ಭಗ್ನ ಕನಸುಗಳಿಂದ ಬೆಳೆದ ಬೆಳಕು"

 

ಸತ್ತ ಕನಸುಗಳಿಗೆ ವರುಷ ಸಂದಿವೆ;

ಮತ್ತೆ ಇದೆ ದಿನ ಪ್ರತಿ ವರುಷವೂ ಪ್ರತ್ಯಕ್ಷವಾಗುವುದು;

ಗಹಗಹಿಸಿ ನಗುವುದು ' ಮೈಗಳ್ಳ ನೀನು' ನನಸಾಗಿಸಿ ನೋಡು;

ನಿದ್ದೆ ಕೆಡಿಸಿ, ನನ್ನ ಅವಲೋಕಿಸುವಂತೆ ಮಾಡುವುದು;

ಸುತ್ತಲೂ ರಕ್ಕಸರೇ ತುಂಬಿರಲು, ತೆವಳಬೇಕು ಇಲ್ಲಿ;

ಜೋರಸಗಿ ಉಸಿರಾಡುವುದೂ ಅಪರಾಧವಿಲ್ಲಿ;

ನೆನಪಿಲ್ಲ ನನಗೆ ಜೋರಾಗಿ ಕೆಮ್ಮಿದ್ದು ಯಾವಾಗ ಎಂದು;

ಎಲ್ಲವೂ ಮರೆತಿದ್ದೇನೆ, ಉಸಿರಾಡುವುದೊಂದನ್ನು ಬಿಟ್ಟು;

ಆಹಾರ, ನಿದ್ದೆ, ಮೈಥುನಗಳ ಸುಖ ಅನುಭವಿಸದೇ ವಿರಾಗಿಯಾಗಿಹೆ;

ಮುಂದುವರಿದ ಭಾಗವಾಗಿ ಭಾವನೆಗಳ ಕಳೆದುಕೊಂಡು

ಉಸಿರಾಡುತ್ತಿದ್ದೇನೆ ಜೀವಂತ ಶವವಾಗಿ, ಮತ್ತೆ ಕಾಯುತ್ತಿದ್ದೇನೆ

ಉಸಿರು ಯಾವಾಗ ನಿಲ್ಲುವುದೋ ಎಂದು - ಭಯವಿಲ್ಲ ಸಾಯಲು;

ನೋವು ಅನುಭವಿಸುತ್ತಿದ್ದೇನೆ ಯಾವ ಕಾರಣವೂ ತಿಳಿಯದೆ

ಉದ್ದೇಶವೇನೋ ಇಹುದು, ಅರ್ಥತಿಳಿಯದೆ ತೊಳಲಾಡುತ್ತಿದ್ದೇನೆ;

ಮತ್ತೆ ಹೊಡೆತ ಸಹಿಸುವ ಶಕ್ತಿಯನ್ನಾದರೂ ನೀಡೆಂದು ಬೇಡುವೆ;

ಇವೆಲ್ಲಕ್ಕೂ ಕೊನೆ ಇದೆಯೇ? ಪ್ರಶ್ನೆ ಇದೆ ಮನದಲ್ಲಿ ಉತ್ತರವಿಲ್ಲದೆ!

ಬರಲಿ ಬಿಡು ಇನ್ನೆಷ್ಟು ನೋವುಗಳು, ಸಹಿಸುವ ಶಕ್ತಿ ನನಗಿದೆ;

ಅನುಭವಿಸಿ ಪಕ್ವವಾಗುವ ತಾಳ್ಮೆಯಿದೆ; ಇಂದಲ್ಲ ನಾಳೆ ಗೆಲುವು ನನ್ನದೇ!;

ಬಾ ನೋವೇ ಬಾ ನನ್ನಾವರಿಸು , ನನ್ನ ಅನುಭವಿಸಿ ಸುಖಿಸು;

ಮುಂದೆ ಇಂತಹ ಸುಯೋಗ ನಿನಗೆ ಸಿಗದು, ಬೇರೊಬ್ಬರನ್ನು

ಈಗಲೇ ಹುಡುಕಿಕೋ, ನಾಳೆ ನಿನಗೆ ಉಳಿಗಾಲವಿಲ್ಲ ತಿಳಿ;

ಭಗ್ನವಾದ ಕನಸುಗಳ ಹೆಕ್ಕಿ ತೆಗೆದು ಮತ್ತೆ ಕಟ್ಟುವೆ ಹೊಸತೊಂದು;

ಒಮ್ಮೆ ನಕ್ಕು ಹೋಗಿಬಿಡು ಮತ್ತೆ ಬಾರದೆ;

Friday, March 29, 2024

ನನ್ನ ಭರವಸೆ

 

ಪ್ರತಿದಿನ ಒಂದೊಂದು ಹೆಜ್ಜೆ

ಅಭಿವೃದ್ಧಿಯ ಕಡೆಗೆ,

ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ

ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ ,

ನನ್ನ ಕೆಲಸದಲೆಂದು ಅವ್ಯವಸ್ಥೆಯ ಸಹಿಸಲಾರೆ.

ಕಲೆಯಂತೆ ಪೂಜಿಸುವೆನು ನಾನು,

ಮುತ್ತುಗಳ ಪೋಣಿಸುವೆ ಅಕ್ಷರದಿ

ನನ್ನ ಬರವಣಿಗೆಯಲ್ಲಿ,

ಪೂರ್ಣಗೊಳಿಸದೆ ನಾನೆಂದೂ  ವಿರಮಿಸಲಾರೆನು

ಮನೆಯಲ್ಲಿ ಸದಾ ಸಿದ್ಧತೆಯಲ್ಲಿ ತೊಡಗಿಕೊಳ್ಳುವೆ

ಪ್ರತಿದಿನ ಹೊಸತೊಂದನು ಕಲಿವೆ

ನನ್ನನ್ನು ಪ್ರತಿದಿನ ಉತ್ತಮಗೊಳಿಸಿಕೊಳ್ಳುವತ್ತ

ನೆಡುವುದು ಸದಾ ನನ್ನ ಚಿತ್ತ                                                                                                                            

 

ಪ್ರೇರಣೆ: ಶ್ರೀ ಚಿನ್ಮಯ್

Thursday, March 28, 2024

ಗದ್ದುಗೆಯ ಗದ್ದಲ

 

ಓಹ್! ಇವತ್ತು ಹೊಸ ಗದ್ದುಗೆಗೆ ನಾಯಕನ ಪಟ್ಟಾಭಿಷೇಕ
ಸಾಕಷ್ಟು ಗ್ಯಾರಂಟಿ ಭರವಸೆಗಳ ಹರಿಸಿ
ಇಪ್ಪತ್ತು ದಿನ ಬೆವರು ಹರಿಸಿ
ಎದುರಾಳಿಯನ್ನ ಪಂದ್ಯದಲ್ಲಿ ಮಣ್ಣು ಮುಕ್ಕಿಸಿಯಾಗಿದೆ
ಎಲ್ಲೆಲ್ಲೂ ವಿಜಯ ನರ್ತನವಾಗಿದೆ
ಇಲ್ಲಿಯವರೆಗೂ ಬುಸುಗುಡುತ್ತಿದ್ದ ಹಾವುಗಳು ಬಿಲ ಸೇರಿವೆ
ಇನ್ನು ಮುಂದೆ ಮುಂಗುಸಿಯದೇ ಅಧಿಕಾರದ ಕಾರುಬಾರು 
ವಿರೋಧಿಗಳ ವಿರೋಧಿಗಳು ಗುಟುರು ಹಾಕುತ್ತಿದ್ದಾರೆ
ನೆರೆಹೊರೆಯ ದೇಶದ ಧ್ವಜ - ಜಯಘೋಷ ಮುಗಿಲುಮುಟ್ಟಿದೆ
ನಾಯಕರುಗಳಲ್ಲೇ ಕುತೂಹಲ
ಯಾರು ನಮ್ಮ ಪರಮೋಚ್ಚ ನಾಯಕ ?
ಒಳ ಸುಳಿಗಳಲ್ಲಿ ಕಟ್ಟಿ ಮಸೆಯುವ ಸದ್ಧು ಕಿರಿದಾಗಿ ಕೇಳುತ್ತಿದೆ!
ಅಧಿಕಾರ ಲಾಲಸೆ , ಆಸೆ - ಅತ್ಯಾಸೆಗಳು ಬೆಲೆಗಳಂತೆ ಗಗನಕ್ಕೇರುತ್ತಿದೆ
ಮೋಡ ಚದುರಿ ಹೊಸ ಬೆಳಕು ಬರುವುದೇ?
ನೆರೆಹೊರೆಯ ರಾಜ್ಯದ ಕಥೆ ಎಲ್ಲೆಲ್ಲೂ ಹೆಸರು ಮಾಡುತ್ತಿದೆ!
ಇಲ್ಲಿಯ ಕಥೆಯೇನು?
ಮನದಲ್ಲಿ ಭಯದ ಛಾಯೆ!
ನಾಳೆಯ ಭರವಸೆಗೆ ಜೀವ ಕೊಡುವ ತಾಯಿ ಪ್ರಸವದ ನೋವು ತಿನ್ನುತ್ತಿದ್ದಾಳೆ
ನಾಳೆಯ ಅಳುವಿನ ಸದ್ದು
ಜನನದ್ದೋ ? ಮರಣದ್ದೋ ?
ತಿಳಿಯಲು ಸಮಯ ಕಾಯಬೇಕಾಗಿದೆ.......

Thursday, December 31, 2020

ನನ್ನ ಕನಸು

 ಕನಸು ಕಾಣಬೇಕು

ನನ್ನ ಕನಸು ಕಾಣಬೇಕು

ನಾ ಬಾನಲ್ಲಿ ಹಾರಾಡಬೇಕು

ಅದಕ್ಕೆ ನನಗೆ ರೆಕ್ಕೆಗಳು ಬೇಕು

ಬಾನಲ್ಲಿ ತೇಲಾಡಬೇಕು

ತೇಲಾಡುತ್ತಾ ಮೋಡದಿಂದಿಳಿಯುವ ಮಳೆಯಾಗಬೇಕು

ಭುವಿಯ ಸೇರುವ ತವಕ ಅನುಭವಿಸಬೇಕು

ಭುವಿಗಿಳಿಯುತ್ತಾ ಪ್ರಕೃತಿ ಸೌಂದರ್ಯವ ಸವಿಯಬೇಕು

ಸೌಂದರ್ಯವ ಸವಿಯುತ್ತಾ ನಾನೇ ಪ್ರಕೃತಿಯಾಗಬೇಕು

ತೇಲುವ ಹೂವಿನ ಸುಗಂಧವಾಗಬೇಕು

ತೇಲುತ್ತಾ,ಹಾರುತ್ತಾ ಹಕ್ಕಿಗಳ ಕಲರವ ನಾನಾಗಬೇಕು

ಎಲ್ಲವೂ  ನಾನಾಗಬೇಕು

ಹೃದಯ ಹೊಮ್ಮಿಬರಬೇಕು

ನಾನು ಕನಸಾಗಬೇಕು

ಕನಸು ನನಸಾಗಿಸುತ್ತಾ ಸಾಯಬೇಕು।।

ನಿರ್ಧಾರ ನಿನ್ನದು

 ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ಬಾವಿಯೇ ನಮಗೆ ಪ್ರಪಂಚವಾಗುವುದು

ಹೇಳಲು ಪದಗಳೇ ಇಲ್ಲವಾಗುವುದು||

 

ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ನದಿಗಳು ಕೂಡ ಬಾರಿಯ ಗೆರೆಗಳಾಗುವುದು

ವರ್ಣಿಸಲು ಕವನಗಳೇ ಇಲ್ಲವಾಗುವುದು||

 

ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ನಾವಿರುವ ಜಾಗವೇ ಸೆರೆಮನೆಯಾಗುವುದು

ಇದ್ದು ಇಲ್ಲದ ಸ್ವಾತಂತ್ರ್ಯ ನಮ್ಮದಾಗುವುದು||

 

ನಮಗೆ ನಾವೇ ಪರಿಧಿಯ ಹಾಕಿಕೊಂಡರೆ

ಬದುಕಿದ್ದೂ ಜೀವಂತ ಶವದಂತಿರಬಹುದು

ಅಗಾಧ ಶಕ್ತಿಯ ಬಳಸದೆ ವ್ಯರ್ಥವಾಗಿ ಸಾಯಬಹುದು।।

 

ಪರಿಧಿಯ ಹಾಕಿಕೊಳ್ಳಲೂಬಹುದು 

ಪರಿಧಿಯ ದಾಟಲೂಬಹುದು

ನೀನೇನಾಗಬೇಕೋ ನಿರ್ಧಾರ ನಿನ್ನ ಕೈಯಲ್ಲಿದೆ।।

Monday, December 28, 2020

ನಾನು ಕರಿ ಹುಡುಗ

 ನಾನು ಕಪ್ಪು ಮಗು,

ನಾನು ಕರಿ ಹುಡುಗ

ನಾನು ವಿಶೇಷ, ಅಪಹಾಸ್ಯವೆಂದೂ ನನ್ನನ್ನು ಹಿಡಿದಿಡದು;

ಕ್ಷಮಿಸಿ,ಅಡೆತಡೆಗಳೆಂದೂ ನನ್ನನ್ನು ತಡೆಯಲು ಸಾಧ್ಯವಿಲ್ಲ;

ನನ್ನ ತಲೆ ಮೇಲಕ್ಕೇರಿಸುವೆ, ಹೆಮ್ಮೆಯಿಂದ ನನ್ನ ಅನನ್ಯತೆಯ ಸಾರುವೆ;

ಇಂತಹುದೇ ಪ್ರತಿಕೂಲ ಪರಿಸ್ಥಿಯಲ್ಲೂ ನನ್ನ ಪ್ರಯತ್ನವನ್ನು ನಿಲ್ಲಿಸಲಾರೆ;

ನನ್ನ ಸಂಸ್ಕೃತಿ ಹಾಗೂ ಪರಂಪರೆಯ ಬಗ್ಗೆ ಹೆಮ್ಮೆಯಿದೆ;

ನನ್ನ ಪ್ರತಿಯೊಂದು ಗುರಿಯನ್ನೂ ಸಾಧಿಸುವೆನೆಂಬ ಆತ್ಮವಿಶ್ವಾಸವಿದೆ;

ನಾನೇನಾಗಬೇಕೋ ಅದೆಲ್ಲವೂ ನಾನಾಗುವೆ;

ನಾನು ಕಪ್ಪು ಮಗು,

ನಾನು ಕರಿ ಹುಡುಗ,

ಆ ದೇವರ ಮಗ ನಾನು;

 

ಪ್ರೇರಣೆ: I am the black child

             By: Mychal Wynn        

ಸ್ವಾತಂತ್ರ್ಯಕ್ಕಾಗಿ ನಡೆ

 ಸ್ವಾತಂತ್ರ್ಯಕ್ಕಾಗಿ ನಡೆ :

ಕೆಲವರೆಂದರು ನಮಗದು ದೊರಕದು

ನನ್ನ ನಂಬಿಕೆ ಏನೆಂದರೆ

'ಜನರು ನಾಣ್ಯದ ಮತ್ತೊಂದು

ಮುಖವನ್ನು ಕಂಡಾಗ'

'ಎಲ್ಲೇ ಅನ್ಯಾಯವಾದಾರೂ ಅದು

ಎಲ್ಲೆಡೆಯ ನ್ಯಾಯಕ್ಕೆ ಅವಮಾನ'

ಘೋಷಣೆಗಳ ಕೂಗುವರು ,

ವಸ್ತುಗಳ ಎಸೆಯುವರು

ಆದರೆ ನನ್ನ ಹೋರಾಟವನೆಂದೂ ನಿಲ್ಲಿಸುವುದಿಲ್ಲ;

ಸ್ವಾತಂತ್ರ್ಯಕ್ಕಾಗಿ ನಿಲ್ಲದೆ ನಡೆದೆ ರಾತ್ರಿ-ಹಗಲೆನ್ನದೆ

ಪೊಲೀಸರು ಕೂಗುವರು ಹಾಗೂ

ನಮ್ಮನ್ನು ರಸ್ತೆಗಳಲ್ಲಿ ತಡೆಯುವರು

ಜನರಿಗೆ ಆಜ್ಞಾಪಿಸುವರು

'ಹಿಂದೆ ಹೋಗಿ'

ಗುಂಪು ಗುಂಪು ಜನರು ನಮ್ಮ ಮುಖದ ಮೇಲೆ

ಘೋಷಣೆಗಳ ಮೊಳಗಿಸುವರು;

ಅವರು ಹಿಡಿದ ಫಲಕಗಳು ಹೇಳುತ್ತವೆ

" ಮುನ್ನಡೆಯಿರಿ, ನಿಲ್ಲದೆ ಮುಂದುವರೆಯಿರಿ"

ಪ್ರೇರಣೆ:Freedom Walk       

           Bu Chaline F

ಸಹಜತೆ ಉಳಿಯಲಿ

 

ನೀನು ಹುಟ್ಟಿನಿಂದಲೇ ಕಲ್ಲಿನಿಂದ ಕಡೆದ ಪ್ರತಿಮೆಯಲ್ಲ

ಅಥವಾ ಭೂಮಿಯೊಳಗೆ ಬೇರು ಬಿಟ್ಟು ಬೆಳೆದ ಮರವಲ್ಲ

ಹುಟ್ಟಿದಾಗಿನಿಂದಲೇ ನಿನ್ನಲ್ಲಿದೆ ಸಹಜತೆ

ಅದು ಶುದ್ಧ ಹಾಗೂ ಪರಿಪೂರ್ಣವಾದುದು।।

 

ಯಾವ ಪಂಜರವೂ ನಿನ್ನ ಹಿಡಿದಿಡಲಾಗದು

ಯಾವ ತಲೆಬರಹವೂ ನಿನ್ನ ವರ್ಣಿಸಲಾಗದ್ದು

ನೀನು ಚೈತನ್ಯಪೂರ್ಣನೂ

ದ್ರವದಂತೆ ಬದಲಾಗುವವನು||

 

ನೀನು ಕಲ್ಲಲ್ಲ , ಬಂಡೆಯಂತೂ ಅಲ್ಲವೇ ಅಲ್ಲ

ಎಷ್ಟೊಂದಿದೆ ಈ ಪ್ರಪಂಚದಲ್ಲಿ ಶೋಧಿಸಲು

ಅಲೆದಾಡು ಸಹಸ್ರ ದಾರಿಗಳಲ್ಲಿ

ತಟ್ಟು ಕಂಡ ಕಂಡ ಬಾಗಿಲುಗಳನ್ನು||

 

ನಿನ್ನ ಸಾಹಸಗಳನ್ನು ಇಂದಿಗೂ ನಿಲ್ಲಿಸದಿರು

ನಿನ್ನೊಳಗಿನ ಚಿಕ್ಕ ತರಲೆ ಮಗುವ ಆಲಂಗಿಸಿಕೋ

ಭಯರಹಿತನಾಗು, ಕುತೂಹಲವನೆಂದೂ ಉಳಿಸಿಕೋ

ಯಾವಾಗಲೂ ಸಕಾರಾತ್ಮಕವಾಗಿರು, ಸಹಜತೆಯ ಉಳಿಸಿಕೋ।।

 

ಪ್ರೇರಣೆ:  Stay Wild

                 By MS Moem         

ಸಂತೋಷ

 ಸಂಕಟ ಹಾಗು ಸಂತೋಷ

ಎರಡೂ ಜೀವನದ ಜೋಡೆತ್ತುಗಳು

ಎರಡೂ ಬೆಸೆದಿದೆ ಬಿಡಿಸಲಾಗದ ನಂಟು

ಈ ಮನುಷ್ಯ ಜೀವಕೆ

ದೇವಾ ಹೊದಿಸಿದ ಬಟ್ಟೆ

ಪ್ರತಿಯೊಂದು ಸಂತೋಷ ಹಾಗೂ ಸಂಕಟ

ಜೀವನದೊಂದಿಗೆ ಸೂಕ್ಷ್ಮ ದಾರದಿಂದ ಬೆಸೆದಿದೆ

ಅದು ಹಾಗಿದ್ದರೇನೇ ಚಂದ

ಮನುಷ್ಯ ಭೂಮಿಗೆ ಬಂದುದೇ

ಸಂತೋಷ ಹಾಗೂ ಸಂಕಟ ಎರಡನ್ನೂ ಅನುಭವಿಸಲು

ಇದನ್ನು ತಿಳಿದಾಗ ಮಾತ್ರ

ಜೀವನ ಸುಗಮ ಹಾದಿಯಲ್ಲಿ ಸಾಗುವುದು\\

 

ಪ್ರೇರಣೆ: Joy

              By William Blake  

ರಾತ್ರಿ ಊಟ: ಧ್ಯಾನ

ರಾತ್ರಿ ಊಟ ಮಾಡುವಾಗ .... ಶಾಂತಿಯುತ ವಾತಾವರಣವಿರಲಿ,  ಸಂಜೆ ದೇವರ ಬಳಿ ದೀಪಗಳ ಬೆಳಗಿಸಿ, ಹಿತವಾದ ಸಂಗೀತ ಮನಸ್ಸಿಗೆ ಕೇಳಲಿ,  ಊಟದ ಮೇಜಿನ ಬಳಿ ವಾದ ವಿವಾದ ಬೇಡ,  ಆಹಾರ...