ಕುರುಕ್ಷೇತ್ರದಲ್ಲಿ ಗುರು-ಶಿಷ್ಯರ ಕಾಳಗ

ಅಂಬೆ ಅರುಹಿದಳು ಭೀಷ್ಮರಿಂದಾದ ಅಚಾತುರ್ಯ
ಕೇಳಿ ಕೆಂಡಮಂಡಲವಾದರು ಪರಮ ಕೋಪದಿ |
ಶಿಷ್ಯನ ಶಿಕ್ಷಿಸುವೆ ನ್ಯಾಯವ ಕೊಡಿಸುವೆನು
ನಡೆ ಕುರುಕ್ಷೇತ್ರಕೆ ಈಗಲೇ ಎಂತೆಂದರು ಅಂಬೆಗೆ ।।೧।।

ಪರಶುರಾಮರು ಬಂದರೆಂದು ಅಕೃತವ್ರಣನಿಂ ತಿಳಿದ
ಗಾಂಗೇಯನು ಸ್ವಾಗತಿಸುತ್ತಾ ಆಚಾರ್ಯರ ಪಾದಗಳಿಗೆರಗಿದನು |
ಪ್ರಿಯ ಶಿಷ್ಯನ ಹಿಡಿದೆತ್ತಿ ತೀಕ್ಷ್ಣ ನೋಟವಬೀರಿ ಧರ್ಪದಲಿ
ಅಂಬೆಯ ಕರೆತಂದುದೇಕೆಂದು ಆಗ್ರಹಿಸಿದರು ।।೨।।

ನಮಿಸುತ್ತಾ ಸೌಮ್ಯ ತನದಲೇ ಗಾಂಗೇಯನು
ಅನುಜ ವಿಚಿತ್ರವೀರ್ಯನ ವಿವಾಹಕ್ಕೆಂದನು |
ಮತ್ಯಾಕೆ ಆಕೆಯ ತ್ಯಜಿಸಿದೆ, ಅವಳಿಗೇಕಿಂತ ದುರ್ಗತಿ
ಅವಳಿಗಾದ ಅವಮಾನವ ಹೇಗೆ ಕಳೆವುದೆಂತಂದರು ।।೩।।


ಶಾಲ್ವ ರಾಜನ ಪತಿಯಾಗಿ ಸ್ವೀಕರಿಸಿರುವೆನು
ಎಂದಳಾ ಅಂಬೆ ಮಾತೆ ಸತ್ಯವತಿಗೆ ಬಿನ್ನವಿಸುತ್ತಾ|
ಆಕೆಯ ಇಚ್ಛೆಯಂತೆ ಗೌರವದಲಿ ಕಳುಹಿದೆ
ಮತ್ತೆ ಮರಳಿ ಬಂದಳೇಕೋ ಕಾಣೆ ಗುರುವರ್ಯ ।।೪।।

ಶಾಲ್ವ ರಾಜನು ಅಂಬೆಯ ನಿರಾಕರಿಸಿಹನು
ಅವಳ ಅವಮಾನಕೆ ಕಾರಣನು ನೀನು ಭೀಷ್ಮ ।
ಸ್ವಯಂವರದಿ ಕರೆತಂದು ತಪ್ಪುಮಾಡಿಹೆ ನೀನು
ವರಿಸು ಅವಳ ಬಿಡದೆ ಆಗ್ರಹಿಸಿದರು ಪರಶುರಾಮರು ।। ೫।।

ಆಜನ್ಮ ಬ್ರಹ್ಮಚರ್ಯವ ಶಪಥ ತೊಟ್ಟಿಹೆನು
ಎಂಬುದರಿತು ಆಗ್ರಹಿಸುವುದು ಸರಿಯೇ ಗುರುವರ್ಯ|
ಗುರುವಾಗಿ ಅಜ್ಜ್ಞಾಪಿಸುತಿಹೆನು ಕೇಳು ಗಾಂಗೇಯನೇ
ವರಿಸು ಅಂಬೆಯ ಮರುಮಾತನಾಡದೆ ।।೬।।

ಗುರುವೇ ಧರ್ಮ ಮಾರ್ಗದರ್ಶಿಯಾಗಿಹ ನೀನು
ಅನುಚಿತವಾಗಿಹ ಮಾರ್ಗದಲಿ ನಡೆಯೆನ್ನುವುದು ಉಚಿತವೇ ।
ಈ ಅಧರ್ಮ ವಾಕ್ಯವನು ಉಲ್ಲಂಘಿಸಿ ತಿರಸ್ಕರಿಸುವ ಹಕ್ಕು
ಈ ನಿಮ್ಮ ಪ್ರಿಯ ಶಿಷ್ಯನಿಗಿದೆ ಅನ್ಯಥಾ ವ್ಯರ್ಥವಾಗಿ ಆಜ್ಞಾಪಿಸಬಾರದು ಗುರುದೇವ ।।೭।।

ಕೋಪಾವಿಷ್ಟರಾದ ಭಾರ್ಗವರು ಅತಿಯಾಯಿತು
ದೇವವ್ರತ ಕಾಳಗಕೆ ಸಿದ್ಧನಾಗು ಇಕೋ ।
ಸೋತೆಯಾದರೆ ನಾ ಆಜ್ಞಾಪಿಸಿದಂತೆ ಈ ಅಂಬೆಯ ವರಿಸು
ಇಲ್ಲವಾದೊಡೆ ನಿನ್ನ ಧರ್ಮ ನಡೆಗೆ ಜಯವಾಗಲೆಂತೆಂದರು ।।೮।।

ಘನಘೋರ ಯುದ್ಧವಾಯಿತು ಕುರುಕ್ಷೇತ್ರದಿ
ಗುರು-ಶಿಷ್ಯರ ಕಾಳಗ ಬಹುದಿನಗಳು ಎಡಬಿಡದೆ ।
ಆಚಾರ್ಯ ಪರಶುರಾಮರು ಬಳಲಿದರು, ವಿಚಲಿತರಾದರು
ಶಿಷ್ಯೋತ್ತಮನ ಸತ್ವತೇಜಸ್ಸಿಗೆ ಮನಸೋತರು ।।೯।।


ಮೆಚ್ಚಿದರು ಪ್ರಿಯಶಿಷ್ಯನ ಸತ್ಯನಿಷ್ಠೆಗೆ
ಹರಸಿದರು ಮನಪೂರ್ವಕ ತೆರಳುವ ಮುನ್ನ ।
ಕನಲಿ ಕ್ಷುದ್ರಳಾದಳು ಅಂಬೆ ಕತ್ತಿ ಹಿಡಿದು
ಭೀಷ್ಮನ ಮಣಿಸಲು ಅನುವಾದಳು ವೀರಾಗ್ರಣಿಯಂತೆ ।।೧೦।।


ಭೀಷ್ಮರು ವಿರೋಧಿಸಲಿಲ್ಲ ಮೌನವ ತಬ್ಬಿದರು
ಅಂಬೆ ಕೋಪಾಗ್ನಿಯಲಿ ಭೀಷ್ಮರ ನೋಡುತ್ತಾ ।
ಮುಂದಿನ ಜನ್ಮದಲಿ ಗಂಡಾಗಿ ನಿಮ್ಮ
ಸಾವಿಗೆ ನಾನೇ ಹೊಣೆಯಾಗುವೆನೆಂದಳು ।।೧೧।।

ಅವಮಾನದಿ ನರಳಿದ್ದಳಾ ಅಂಬೆ
ಬೇರೆ ದಾರಿ ಕಾಣದೆ ಅಗ್ನಿಗಾಹುತಿಯಾದಳು ।
ಕಾಲದಾಟಕೆ ಭೀಷ್ಮರು ವಂದಿಸುತಲಿ
ಬಂದದ್ದು ಬರಲಿ ಕಾಲವೇ ನಿನಗೆ ನಮಿಸುವೆನೆಂದರು ।।೧೨।।

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...