ನವರಸ ನಾಟಕ

ಅರ್ಥ ಮಾಡಿಕೋ ಎಂದು ಈ ಕವಿತೆಯ ಬರೆಯಲಿಲ್ಲ;
ಓದಿ ಸಂತೋಷ ಪಡು ಎಂದೂ ಈ ಕವಿತೆಯ ಬರೆಯಲಿಲ್ಲ;
ನಾ ಬರೆವಾಗ ಮನದ ಕಡಲೊಳಗೆ ನಡೆವುದು ಸಂಘರ್ಷ,
ಕದನ,ಏರಿಳಿತ, ಕೋಲಾಹಲ,ಬೆಚ್ಚಿಬೀಳಿಸುವ ಘಟನೆಗಳು;
ನನ್ನೊಳಗೆ ನಡೆಯುವ ಘರ್ಷಣೆಯ ಪರಿಣಾಮ ಈ ಕವನ ;
ಓದುವಾಗ ಗಮನಿಸು ನಿನ್ನ ಮನದೊಳು ನಡೆವುದೇನೆಂದು?
ಉತ್ಸವವೋ? ಪ್ರಣಯವೋ? ಪ್ರಳಯವೋ? ಶವದ ಮೆರವಣಿಗೆಯೂ?
ಶೋಕವೋ? ಶೃಂಗಾರವೋ? ಭೀಭಿತ್ಸವೋ? ಆಶ್ಚರ್ಯವೋ?;
ನವರಸಗಳ ನಾಟಕದ ಅಂಕವಾಗುವುದು ನಿನ್ನ ಮನ
ಅನುಭವಿಸು, ಅನುರಣಿಸು ನಿನ್ನೊಳು ನಡೆವ ಕದನವ;
ಏನು ಭಾವಗಳ ಹುಚ್ಚು ಮಳೆಯೋ? ಹೊಳೆಯೋ?
ದುಃಖ,ಪರಿತ್ಯಕ್ತ, ಶೂನ್ಯ ಭಾವನೆಗಳ ಸೋಜಿಗವೋ?
ಆಲೋಚನೆಗಳ ಹುಚ್ಚು ಹುಚ್ಚು ಸಂತೆ ಮನದೊಳಗೆ
ಮನೆಮಾಡುವುದೋ? ನೀನಲ್ಲದೆ ಬೇರಾರೂ ತಿಳಿಯರು!
ತೆರೆಯನೆಳೆ ಕಣ್ಣುಮುಚ್ಚಿ ನಡೆವ ಕದನಕೆ, ಧ್ಯಾನಿಸು
ಅಡಿಯಿಡು ಮೊಳೆತ ಆಲೋಚನೆಯ ಸಾಕ್ಷಾತ್ಕರಿಸಿಕೊಳ್ಳಲು
ನಕ್ಕು ಬಿಡು, ನಕ್ಕು ಬಿಡು ಆ ಕವಿಯ ಮೂರ್ಖತನಕೆ ।।

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...