Wednesday, April 30, 2014

ಗುಣ ನಿಷ್ಕರ್ಷೆ (Appraisal)?

ಜೋರಾಗಿ ಕಿರುಚುತ್ತಿದ್ದೆ
"ನಾನು ಬದುಕಿದ್ದೇನೆ,
ನಾನು ಬದುಕಬೇಕು"
ಅವರಾರಿಗೂ ಕೇಳಿಸಲೇ ಇಲ್ಲ;
ಕಿವಿಯಿದ್ದೂ ಅವರು ಕಿವುಡರಾಗಿದ್ದರು.
ಒಬ್ಬರಲ್ಲ, ಹಲವು ಜನ;
ಕಣ್ಣಿಗೆ ಬಟ್ಟೆ ಕಟ್ಟಿಕೊಂಡವರಂತೆ ಇದ್ದರು;
ಮನಸ್ಸಿಗೂ ಮಸಿ ಅಂಟಿಸಿಕೊಂಡಿದ್ದಾರೆ ಎಂದೆನಿಸಿರಲಿಲ್ಲ;
ಆಕಸ್ಮಿಕವಾಗಿ ಶವಪೆಟ್ಟಿಗೆಯಲ್ಲಿ ಬಿದ್ದೆನೋ?
ಅಥವಾ ಬೀಳಿಸಿದರೋ ತಿಳಿಯಲಿಲ್ಲ;
ಆದರೂ ಬಿದ್ದಿದ್ದೆ ಅದರೊಳಗೆ ಅರಿವಿಲ್ಲದೆ;
ಸುತ್ತಲೂ ಇರುವವರ ಮನಸ್ಸು
ಕಲ್ಲಾಗಿದೆ ಎಂದು ತಿಳಿದಿರಲಿಲ್ಲ;
ದ್ವೇಷವೇ ಉಸಿರಾಗಿದೆ ಎಂದು ತಿಳಿಯಲಿಲ್ಲ;
ಮುಖದಲ್ಲಿ ಆವೇಶ, ಆಕ್ರೋಶ ಮಡುಗಟ್ಟಿತ್ತು;
ಮಾತಲ್ಲಿ ಒರಟುತನ ನರ್ತಿಸುತ್ತಿತ್ತು;
ಎಲ್ಲರ ಕೈಯಲ್ಲೂ ಸುತ್ತಿಗೆ ಹಾಗು ಮೊಳೆ
ಶವ ಪೆಟ್ಟಿಗೆಯಲ್ಲಿ ಬಿದ್ದವರನ್ನು
ಮೇಲೆತ್ತುವುದು ಅವರ ಕಾಯಕವಲ್ಲ;
ಅವರದೇನಿದ್ದರೂ ಮುಗಿಸುವುದಷ್ಟೆ!
ಪರೀಕ್ಷಿಸುವುದಕ್ಕೂ ಅವರ ಬಳಿ ಸಮಯವಿಲ್ಲ;
ಬಿದ್ದದ್ದೇ ತಡ ಮೊಳೆ ಹೊಡೆಯುವುದಕ್ಕೆ ಆರಂಭಿಸಿದರು;
ಹೃದಯಕ್ಕೆ ಮೊಳೆ ಬಡಿದರು;
ಮನಸ್ಸಿಗೆ ಮೊಳೆ ಬಡಿದರು;
ಸತ್ತವರಿಗೂ ಬಡಿದರು;
ಬದುಕಿದವರಿಗೂ ಬಡಿದರು;
ಬದುಕಿದವರು ಸಾಯುವವರೆಗೂ ಬಡಿದರು;

Monday, April 28, 2014

ಈ ಕಣ್ಣೀರಿಗೆ ವಿಷಾದ ಪಡಲಾದೀತೇ?

ನನ್ನ ಕಣ್ಣೀರಿನ ಹನಿಯಲ್ಲಿ
ನಿನ್ನ ಮೇಲಿನ ಪ್ರೀತಿ ಇಮ್ಮಡಿಯಾಗಿದೆ
ನಾನು ಈ ಕೋಣೆಯೊಳಗೆ ಕಳೆದುಹೋಗಿದ್ದೇನೆ
ನಿನ್ನನ್ನು ಪ್ರೀತಿಸುತ್ತಾ ಈ ಎಲ್ಲಾ ವರುಷಗಳು||

ನನ್ನ ಕಣ್ಣೀರು ನೋವ ತುಂಬಿಕೊಂಡಿಲ್ಲ
ಸಂತೋಷವನೆಲ್ಲಾ ವ್ಯಾಪಿಸಿಕೊಂಡಿದೆ
ನನ್ನೊಳಗಿನ ಪುಟ್ಟ ಮಗುವಿಗೆ
ನೀನು ಸಹಾಯ ಮಾಡಿದೆ ಅರಿವು ಮೂಡಲು||

ನನ್ನ ಹೃದಯದೊಳಗಿನ ಗೂಡಿನಲ್ಲಿ
ನನ್ನ ನಿಜವಾದ ಅರಿವು ಹೊರಹೊಮ್ಮಿದೆ
ನನ್ನೊಳಗಿನ ಮನದ ನೋವಿನ ಗಾಯಗಳೆಲ್ಲಾ
ಮಾಯದೇ ಇರುವುದೇ ಈ ದೇವತೆ ಜೊತೆ ಇರುವಾಗ?||

ನಮ್ಮ ನೆನಹುಗಳ ಜೊತೆಯಲ್ಲಿ ಮೈಮರೆಯುವೆ
ಬಯಕೆಯ ಗರಿಯೊಡೆದು ಮತ್ತೊಮ್ಮೆ
ನೀನೇ ಆಕರ ಈ ಸಂತೋಷದ ಕಣ್ಣೀರಿಗೆ
ಈ ಕಣ್ಣೀರಿಗೆ ವಿಷಾದ ಪಡಲಾದೀತೇ?||

ಪ್ರೇರಣೆ: 'My Tears' By Richard Lamoureux.

ಹೇಳಲಾರದ ಮಾತು

ನಾನು ಗೀಚುತ್ತೇನೆ ಮಣ್ಣಿನ ಮೇಲೆ ಅವಾಗವಾಗ
ಪದಗಳನ್ನು ಹುಡುಕಲು ಕಷ್ಟಪಡುತ್ತೇನೆ
ಆಶಿಸುತ್ತೇನೆ ಗಾಳಿ ಬರಲಿ ಇತ್ತಲೇ..
ಬೀಸಿ ಹೊತ್ತು ತರಲಿ ಎಲ್ಲವನ್ನೂ ನಿಮ್ಮ ಬಳಿಗೆ||

ಪ್ರೇರಣೆ: "unspoken words" by Paul Callus.

Thursday, April 24, 2014

ಯಾವುದೀ ವಿರಹ?

ಯಾವುದೀ ತಂಗಾಳಿ
ಬೆಂಗದಿರನನ್ನೇ ನಾಚಿಸಿದೆ?
ಮನವು ತೆರೆದು ಹಾಡುವಂತೆ ಮಾಡಿದೆ||

ಯಾವುದೀ ಹೊಸರಾಗ
ಎದೆಯ ಭಾವವನೆ ಕೆಣಕಿದೆ?
ಮನದ ಭಾವ ಹೊನಲಾಗಿ ಹರಿವಂತೆ ಮಾಡಿದೆ||

ಯಾವುದೀ ನಾದ
ಮನವನೆ ಸೆರೆಹಿಡಿದಿದೆ?
ನೂರು ನೆನಹುಗಳು ಮನದಲ್ಲಿ ತೇಲುವಂತೆ ಮಾಡಿದೆ||

ಯಾವುದೀ ವಿರಹ
ಮನವನೆ ನರಳಿಸಿದೆ?
ಮನದ ಬೇಗುದಿಯ ಕಂಗೆಡಿಸಿ ನುಲಿಯುವಂತೆ ಮಾಡಿದೆ||

Wednesday, April 23, 2014

ಕಳೆದುಕೊಳ್ಳುವುದೇನಿದೆ?

ಇಲ್ಲವೆಂದಾದರೇನು? ಇರಲಿಬಿಡು
ಕಳೆದುಕೊಳ್ಳುವುದೇನಿದೆ?
ನರಕವೇನೂ ಸಿಗದು
ಸ್ವರ್ಗವೇನೂ ಧರೆಗಿಳಿಯದು||

ಹೌದೆಂದಾದರೇನು? ಇರಲಿಬಿಡು
ಸಂತಸಪಡುವುದೇನಿದೆ?
ದುಗುಡವೇನೂ ನರಳದು
ಸಂತಸವೇನೂ ಜೀವನವ ಸಂತೈಸದು||

ಸುಳ್ಳೆಂದಾದರೇನು? ಇರಲಿಬಿಡು
ಆಕಾಶ ಕಳಚಿ ಬೀಳದು!
ಕ್ಷಣ ಕಾಲದ ಸುಖವದು
ಜೀವನವನೇ ಕಾಡುವುದು||

ಸತ್ಯವೆಂದಾದರೇನು? ಇರಲಿಬಿಡು
ಸಿಗುವುದಾದರೂ ಏನು?
ನಿರ್ಮಲ ಮನದ ಗೆಲುವು
ಜೀವನವನೇ ಸಂತೈಸುವುದು||

Monday, April 21, 2014

ಈ ಬೆಳಕ ಹಣತೆಯ ಹಚ್ಚಿದವರಾರು?

ಈ ಬೆಳಕ ಹಣತೆಯ ಹಚ್ಚಿದವರಾರು?
ಯಾರ ಕೇಳಿ ಈ ಹಣತೆಯ ಹಚ್ಚಿದರೋ?
ಬೆಳಕ ಹಣತೆಯ ಹಚ್ಚಿದ್ದು ಏಕೋ?
ಕತ್ತಲನ್ನೇ ಇಷ್ಟಪಡುವವರಿಗೆ ಈ ಬಗೆಯ ಹಿಂಸೆ ಏಕೋ?||

ಬೆಳಕೆಂದರೆ ಬೆಚ್ಚಿ ಬೀಳುವವರು ನಾವು
ಸದಾ ಕೊರಗುತಾ, ಏಳಲಾಗದೆ ಸೊರಗುವವರು ನಾವು
ಯಾರೂ ಕೈಹಿಡಿದು ಮೇಲೆತ್ತಲಿಲ್ಲ,
ನಮ್ಮ ಮನದ ನೋವಿಗೆ ಸ್ಪಂದಿಸಲಿಲ್ಲ||

ಕತ್ತಲ ಪ್ರೀತಿಗೆ ಮನ ಸೋತವರು ನಾವು
ಕತ್ತಲೇ ನಾವಾಗಿ,ನಾವೇ ಕತ್ತಲಾದವರು ನಾವು
ನಮ್ಮ ಏಕತಾನತೆಯ ರಾಗಕ್ಕೆ ಹಚ್ಚುವವರಾರು ಕಿಚ್ಚು?
ಕತ್ತಲ ಕೂಪದಿಂದ ಮೇಲಕ್ಕೆತ್ತುವವರು ಯಾರು ಬೆಳಕ ಹಣತೆಯ ಹಚ್ಚಿ?||

ಕೇಳಿಸದೇ ಅದರ ಆರ್ತನಾದ?

ನನ್ನೊಳ ದನಿಯೊಂದು ಆರನೋ ಕೂಗುತಿದೆ
ಕೇಳಿಸದೇ ಅದರ ಆರ್ತನಾದ?
ನೋವಿನ ಚೀತ್ಕಾರ ಎದೆಯೊಳದಿಂದೆದ್ದು
ನೀಲಿ ನಭಕ್ಕೇರುತ್ತಿದೆ,ಕೇಳಿಸದೆ ಅದರ ಪೂತ್ಕಾರ?
ಕೇಳಿಸದೇ ಅದರ ಮೌನರಾಗ?
ಮನದ ನೋವೆಲ್ಲಾ ಆತ್ಮವೇ ಹೀರಿ
ದನಿಯಡಗಿಸಿ ಕೂಗುತಿದೆ ಯಾರಿಗೂ ಕೇಳದ ಹಾಗೆ;
ಕಿವಿಗಳಿದ್ದೂ ಕಿವುಡರಿಹರು,
ಯಾರಿಗೂ ಕೇಳದು ಈ ನೋವರಾಗ!
ಅವರಿಗೆ ಅವರದೇ ಚಿಂತೆ!
ನೂರಾರಿದೆ ಲೋಕದ ಕಂತೆ!
ಹೇಗೆ ಕೇಳುವುದು ನೋವುಂಡವರ ಆರ್ತನಾದ?
ಲಾಭ-ನಷ್ಟದ ಲೆಕ್ಕವೇ ನೂರಿರಲು
ನೋವಿನ ನಷ್ಟದ ಲೆಕ್ಕಚಾರ ಯಾರಿಗೂ ಬೇಡ;
ದಮನಿತರ ನೋವಿನ ಆತ್ಮನಾದ,
ನೋವುಂಡವರ ನೋವಿನ ಆರ್ತನಾದ
ಯಾರಿಗೂ ಕೇಳುವುದು ಬೇಡ;
ನೋವೆಲ್ಲವೂ ನೋವುಂಡವರಿಗೇ ಇರಲಿ,
ಲೋಕ ಸಂತಸದಿಂದರಲಿ....

Sunday, April 20, 2014

ಕನಸು ನನಸಾಗುವುದೇ?

ಇಂದು, ನಾಳೆ ಕಾಯುತಿಹೆವು ನಾವು,
ನಮ್ಮಯ ದಿನ ಬರುವುದೆಂದು;
ಹಗಲು,ಇರುಳು ಕನಸೊಂದ ಕಂಡು,
ಕಂಡದ್ದು ನನಸಾಗುವುದೆಂದು;

ಬಿಸಿಲ ಬೇಗೆಯೆ ಬೇಸಿಗೆಯಲ್ಲಿ
ತಂಗಾಳಿಯ ತಂಪನ್ನು ಅರಸಿದಂತೆ;
ಮೋಡಗಳಿಂದ ತಂಪು ಮಳೆಯ ಬಯಸಿದಂತೆ
ಕಾಯುತಿಹೆವು ನಾವು ನಮ್ಮಯ ದಿನ ಬರುವುದೆಂದು;

ಬಯಸಿದೆವು ಮನಸಿನಿಂದೆ ನನಸಾಗುವುದೆಂದು
ಬಯಸಿ ಬಯಸಿ ಬೆಂಡಾಗಿಹೆವು;
ಕನಸು ನಮ್ಮದಾಗುವುದೆಂದು,ಕನಸು ನನಸಾಗುವುದೆಂದು;
ಕಾಯುತಿಹೆವು ನಾವು ನಮ್ಮಯ ದಿನ ಬರುವುದೆಂದು;

Thursday, April 17, 2014

ಏಕಿಂತ ದ್ವೇಷವೋ ನಾನರಿಯೇ?

ಮನುಷ್ಯ-ಮನುಷ್ಯರ ನಡುವೆ
ಮನಸ್ಸು-ಮನಸ್ಸುಗಳ ನಡುವೆ
ಸಂಬಂಧ-ಸಂಬಂಧಗಳ ನಡುವೆ
ಬಿರುಕು ಮೂಡಿಸುವ ಈ ಬಗೆ ಸರಿಯೇ?||

ಪಕ್ಕದ ಗಲ್ಲಿಗೆ ದೂರದೂರಿಂದ ಬರಬಹುದು
ಹತ್ತಿರವೇ ಇರುವ ಮನೆಗೆ ಬರಲಾಗದು
ಕಾಣದ ಸಮಯದ ಅಭಾವದ
ನೆವ ಹೂಡುವುದು ಸುಲಭ ಮಾರ್ಗ||

ಮನದಲ್ಲಿ ದ್ವೇಷ ನೆಲೆಗೊಂಡಿರಲು
ಹಾಲೂ ಹಾಲಾಹಲವಾಗುವುದು
ತೆರೆದ ಹೃದಯವು ಹೇಗೆ ಕಾಣುವುದು,
ದ್ವೇಷದ ಕರಿನೆರಳು ಕಣ್ಣು ಮುಚ್ಚಿರುವಾಗ?||

ಇಲ್ಲಸಲ್ಲದ ನೆವವೊಡ್ಡಿ ದೂರುವುದು
ಸಲ್ಲದ ಮನಗಳ ಕಡೆಗಣನೆ ಸರಿಯೇ?
ಕೇಳಿಕೊಳ್ಳಲಿ ಮನವ ದ್ವೇಷಸುವುದು ಯಾಕಾಗಿ?
ದ್ವೇಷದಿಂದೇನು ಅವರಿಗೆ ಲಾಭ?||

ಇಂಥ ನಡುವಳಿಕೆಗಳ ಕಡೆಗಣಿಸಬೇಕು
ದ್ವೇಷವ ಗೆಲ್ಲುವ ಮಾರ್ಗವ ಹುಡುಕಬೇಕು
ಸಾಗಿ ಬಂದಿಹೆವು ಬಲುದೂರ ಸಾಕಾಗಿದೆ,
ಇನ್ನೇಷ್ಟು ದಿನ, ದೂರ ಸಾಗಬಲ್ಲೆವು ನಾವು?||

ಇದ್ದಾಗ ದ್ವೇಷದಿಂದಲೆ ಕಾಲಕಳೆದು
ಮುಗಿದು ಹೋದ ಮೇಲೆ ಅಳುವುದೇಕೆ?
ದ್ವೇಷ ಸಾಧಿಸಿದ್ದಕ್ಕಲ್ಲ ಅಳುವುದು,
ಸೊರಗಿದ ಗೆಳೆತನದ ನೆಳಲಿಗೆ ಮನ ಬಿಕ್ಕುವುದು||

ನನ್ನ ದನಿಯ ಗುರುತಿಸುವುದೆಂತೋ?

ನನ್ನ ದನಿ ಆವುದೆಂದು ಹುಡುಕಿ ಹುಡುಕಿ ಬಳಲಿದೆ;
ನನ್ನದಲ್ಲದ ದನಿಯ ಮೋಹಿಸಿ ಪರವಶನಾದೆ;
ನನ್ನದಲ್ಲದ ದನಿಗೆ ನಾ ಕಂಠವಾದೆ;
ನನ್ನ ದನಿಯಲ್ಲವೆಂಬ ಭ್ರಮೆ ಕಳಚಿರಲು,
ಮತ್ತೆ ಅದೇ ಹುಡುಕಾಟ;
ನನ್ನ ದನಿಯಾವುದೆಂದು?
ಹುಡುಕಾಟ ನಡೆಯುತ್ತಿದೆ ಕೊನೆ ಮೊದಲಿಲ್ಲದೆ
ಆವ ದನಿ ನನ್ನದೋ?
ಆವ ದನಿ ಹೃದಯವ ತಟ್ಟುವುದೋ?
ನನ್ನ ದನಿಯ ಗುರುತಿಸುವುದೆಂತೋ?
ಅಳತೆಗೋಲಿಲ್ಲದೆ ತಳಮಳ ಹೆಚ್ಚಾಗಿದೆ;
ಹುಡುಕಾಟ ನಡೆಯುತ್ತಿದೆ ನಿಲ್ಲದೆ,ವಿಧಿಯಿಲ್ಲದೆ....

Wednesday, April 16, 2014

ಏಕೆ ಗೆಳೆಯ ಹೀಗೆ ಮಾಡಿದೆ?

ಏಕೆ ಗೆಳೆಯ ಹೀಗೆ ಮಾಡಿದೆ?
ಈ ನಿನ್ನ ನಿರ್ಧಾರ ಆಶ್ಚರ್ಯ ತಂದಿದೆ
ಮನದಲ್ಲೆಂದೂ ಎಣಿಸಿರಲಿಲ್ಲ ನೀ ಹೇಡಿಯಾಗುವೆಯೆಂದು||

ಎಲ್ಲವನ್ನೂ ಗೆದ್ದವನೆಂದು ತಿಳಿದಿದ್ದೆ;
ಪರಿಶ್ರಮದ ಪ್ರತೀಕವಾಗಿದ್ದೆ;
ನೋಡನೋಡುತ್ತಿದ್ದಂತೆ ಎಷ್ಟು ಎತ್ತರ ಏರಿದ್ದೆ;
ನನ್ನ ಜೀವನದ ನಾಯಕ ಆಗಿಹೋಗಿದ್ದೆ;
ಎಷ್ಟು ಹೆಮ್ಮೆ ಇತ್ತು ನಿನ್ನ ಬಗ್ಗೆ;
ನಿನ್ನ ಸಾವು ನನ್ನಲ್ಲಿ ಒಂದು ಭಯವನ್ನೇ ತಂದಿದೆ
ಎಲ್ಲವೂ ಮರೀಚಿಕೆ ಎನಿಸುತ್ತಿದೆ||

ಎಲ್ಲವೂ ನಿನ್ನಲ್ಲಿ ಇತ್ತೆಂದು ನಂಬಿದ್ದೆ;
ಎಲ್ಲವನ್ನೂ ಜಯಿಸುವ ಶಕ್ತಿ ನಿನ್ನಲ್ಲಿ ಇತ್ತು;
ನಿನ್ನ ಆತ್ಮಹತ್ಯೆಯಿಂದ ತಿಳಿದಿದ್ದು,
ನಿನ್ನಲ್ಲಿ ಜೀವನ ಪ್ರೀತಿ ಇರಲಿಲ್ಲವೆಂದು;
ಹೇಡಿಗಳೇ ಸಾವಿನ ಬಗ್ಗೆ ಯೋಚಿಸುವರು
ನೀನೂ ಅವರುಗಳ ಸಾಲಿನಲ್ಲಿ ಸೇರಿಹೋದೆ
ಅದೇ ನನ್ನ ಮನದಲ್ಲಿ ಬೇಸರ ತಂದಿದೆ||

ಆದರೂ ಆದರೂ....
ಸಾವಿನ ನಿರ್ಧಾರ ತೆಗೆದುಕೊಳ್ಳುವಾಗ
ನಿನ್ನ ಮನದಲ್ಲಿ ಅದೆಷ್ಟು ನೋವಿತ್ತೋ
ಅದನ್ನು ಕಲ್ಪಿಸಿಕೊಳ್ಳಲೂ ಆಗುತ್ತಿಲ್ಲ...
ಒಂದು ಕ್ಷಣ ಯೋಚಿಸಬಹುದಿತ್ತು;
ಯಾವ ನೋವಿದೆ ಈ ಪ್ರಪಂಚದಲ್ಲಿ ಸಂತೈಸಲಾಗದ್ದು?
ಶಾಂತಿ,ಸಮಾಧಾನ,ಪ್ರೀತಿ,ಆತ್ಮೀಯತೆ,ಮಮತೆ,
ಆರೈಕೆ,ವೈರಾಗ್ಯ ಗಳಿಂದೆಲ್ಲಾ ಸಾಧ್ಯವೆಂಬ ಅರಿವಿರಬೇಕಿತ್ತು;
ನಾ ತಿಳಿಯೇ? ಏನು ಹೇಳಲಿ?
ಆದರೂ ಗೆಳೆಯ,
ನೋವಿನಿಂದಲೇ ಪ್ರಾರ್ಥಿಸುವೆ
"ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ"

Monday, April 7, 2014

ಉಳಿದಿರುವುದು ಪ್ರಾರ್ಥನೆಯೊಂದೇ,

ಹತ್ತು ವರುಷಗಳ ನಂತರವೂ ಹುಡುಕುತ್ತಿದ್ದೇನೆ
ನನ್ನ ಮನದಾಳದ ನೂರು ಪ್ರಶ್ನೆಗಳಿಗೆ ಉತ್ತರ!
ನನ್ನ ಪ್ರಶ್ನೆಗಳು ದೊಡ್ಡವೇನಲ್ಲ;
ಉತ್ತರವೂ ದೊಡ್ಡದು ಬೇಕಾಗಿಲ್ಲ;
ಕಾಲೇಜಿನ ಪರೀಕ್ಷೆಯಲ್ಲಿ ಪುಟ ಪುಟಗಳು ಗೀಚಿದ ನೆನಪು;
ಇರುವ ಹತ್ತು ಪ್ರಶ್ನೆಗಳಿಗೆ, ಉತ್ತರವೂ ಹತ್ತೇ ಸಾಲುಗಳು ಸಾಕು;
ಪರೀಕ್ಷೆ ಬರೆಯುತ್ತಿರುವವನು ನಾನೇ,
ಪರೀಕ್ಷೆ ಆರಂಭವಾಗಿ ಹತ್ತು ವರುಷಗಳೇ ಕಳೆದಿವೆ
ಪರೀಕ್ಷೆಯ ಸಮಯವೂ ಇನ್ನೂ ಮುಗಿದಿಲ್ಲ;
ಸಧ್ಯಕ್ಕೆ ಮುಗಿಯುವ ಲಕ್ಷಣವೂ ಕಾಣುತ್ತಿಲ್ಲ;
ನನ್ನ ಉತ್ತರ ಬರೆಯುವುದೂ ಇನ್ನೂ ಆರಂಭವಾಗಿಲ್ಲ;
ಉತ್ತರವೂ ಸರಿಯಾಗಿ ಹೊಳೆಯುತ್ತಿಲ್ಲ;
ಭಯ ಮಾತ್ರ ಮನವ ಆವರಿಸಿದೆ
ಕನಸುಗಳು ಸಾಯುವುದೆಂದು;
ಉಳಿದಿರುವುದು ಪ್ರಾರ್ಥನೆಯೊಂದೇ,
ಪ್ರಾಮಾಣಿಕತೆಯ ಪ್ರಮಾಣವೊಂದೇ.....
ಬರೆಯುವೆನೇ ನನ್ನ ಉತ್ತರ?

Tuesday, April 1, 2014

ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ

ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ
ನೂರು ಚಿಂತೆಗಳು ಮನದಲ್ಲಿ
ನಿಂದು ಚೈತನ್ಯ ಹರಣಗೈದಿವೆ
ನೂರು ಕನಸುಗಳು ಮನದಲ್ಲಿ
ಮೂಡಿ ನಿದಿರೆಯ ಹರಣಗೈದಿವೆ
ಹೊಸ ಆಸೆ ಮೂಡಿ;
ಹೊಸ ಕನಸ ಕಂಡು;
ಹೊಸ ಚೈತನ್ಯದ ನವಪಲ್ಲವ ಹಾಡಿ
ಹೊಸ ಹಾದಿ ತೆರೆದಿದೆ ನೋಡಲ್ಲಿ;
ವಸಂತನಲ್ಲಿ ಚೈತ್ರೆಯು ಜೊತೆಗೂಡಿ
"ಜಯ"ವನ್ನೇ ನಮಗಾಗಿ ತಂದಿಹರು;
ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ

ಜೀವನದಲ್ಲಿ ಪೂರ್ತಿಸಿಹಿಯೂ ಬೇಡ;
ಜೀವನದಲ್ಲಿ ಪೂರ್ತಿ ಕಹಿಯೂ ಬೇಡ;
ಬೇವು-ಬೆಲ್ಲ ಸಮರಸ ಜೀವನದ ಸಂಕೇತ
ನಾಳೆಯ ಜಯ ಇಂದೇ ನಮಗಾಗಿ ಬಂದಿದೆ
ಹೃದಯ ತೆರೆದು ನಗುವ ತೋರಣವ ಕಟ್ಟಿ
ಅಶಾಂತಿ,ರಾಗ-ದ್ವೇಷ, ಅಸಮಾನತೆ
ಬಡತನ,ಸ್ವಾರ್ಥ ಎಲ್ಲವನ್ನೂ ಹೆಡೆಮುರಿ ಕಟ್ಟಿ
ಚಿಂತೆಯ ಕಸವನ್ನೆಲ್ಲಾ ಗೂಡಿಸಿ ಸ್ವಾಗತಿಸೋಣ ಬನ್ನಿ
ಹೊಸ ವರ್ಷವಿದೆಂದು ಹರುಷವಿದೆ ಮನದಲ್ಲಿ

ದಾರಿದೀಪ

  ಆಳವಿಲ್ಲದ ಭಾವ , ಮುಗಿಲೆತ್ತರದ ಭಾವ , ನಗುವೊಮ್ಮೆ , ಅಳುವೊಮ್ಮೆ , ಬಳಲುವೆನು , ಬದಲಾಗುವೆನು , ಪ್ರೀತಿಸುವೆನು , ದೂರ ತಳ್ಳುವೆನು , ಸವಿಯುವೆನು , ದ...