Sunday, November 30, 2025

ಓಝೋನ್ ದಿನ

ರಕ್ಷಿಸುವವ ನಮ್ಮ ಮೇಲಿದ್ದಾನೆ,

ಅತಿನೀಲಿ ಕಿರಣಗಳ ರಕ್ಷಾ ಕವಚವದು,

ಭೂಮಿಗೆ ತಂಪಾದ ಬೆಳಕ ನೀಡುವುದು,

ಓಜೋನ್ ಅದರ ಹೆಸರು- ನಮ್ಮ ದೈವವದು.

 

ನಮಗೆ ಕಾಣದ ದೇವರದು,

ನಮ್ಮ ಆರೋಗ್ಯದ ರಕ್ಷಾ ಪದರವದು,

ನಮ್ಮ ಅಜ್ಞಾನದಿಂದ ಅದು ನಾಶವಾಗುತಿದೆ,

ನಮ್ಮ ರಕ್ಷಾ ಕವಚವ ನಾವೇ ಹಾನಿಮಾಡುತಿಹೆವು.

 

ಬುದ್ದಿವಂತ ಜನ ಅರಿವ ಮೂಡಿಸುತಿಹರು,

ರಾಸಾಯನಿಕಗಳೇ 'ಓಜೋನ್' ನಿನ  ಶತೃ,

ಬದಲಾವಣೆ ಬಂದಿದೆ, ನಿಧಾನ ಗತಿಯಲ್ಲಿ,

ಆಗಸದೆಡೆ ನೋಡು, ರಕ್ಷಿಸುವ ಮಾರ್ಗ ತೆರೆ.

 

ದಿನ "ಓಝೋನ್ ದಿನ" ನೆನಪಿಡೋಣ,

ಓಜೋನ್ ಪದರದ ಮಹತ್ವ ತಿಳಿಸೋಣ,

ಹೆಚ್ಚು ಮರ-ಗಿಡಗಳ ಬೆಳೆಸೋಣ,

ತ್ಯಾಜ್ಯ,ರಾಸಾಯನಿಕಗಳ ಕಡಿಮೆ ಬಳಸೋಣ,

ಮುಂದಿನ ಪೀಳಿಗೆಗೆ ಭೂಮಿಯ ರಕ್ಷಿಸೋಣ.


16th Sep - Ozone Day

Saturday, November 29, 2025

ಕರುನಾಡ ಬೆಳಕು

ಮುದ್ದೇನಹಳ್ಳಿಯಲ್ಲಿ ಹೊತ್ತಿತು ಬೆಳಕೊಂದು,

ಬೀದಿ ದೀಪದಲ್ಲಿ ಅರಳಿತು ದೇಶದ ಪ್ರತಿಭೆಯೊಂದು,

ಭಾರತದ ಅಭಿವೃದ್ಧಿಗೆ ಕೊಡುಗೆ ನೀಡಿದ ಶಕ್ತಿಯೊಂದು,

ಬುದ್ಧಿವಂತ, ಧೈರ್ಯವಂತ, ಎಲ್ಲರಿಗೂ ಮಾದರಿ,

ಸರ್ ವಿಶ್ವೇಶ್ವರಯ್ಯನಮ್ಮ ಹೆಮ್ಮೆ, ನಮ್ಮ ಗರಿ.

 

ಇಂಜನೀಯರ್ ಅಂದರೆ ಅನ್ವರ್ಥನಾಮ,

ಕೃಷ್ಣರಾಜ ಸಾಗರ ಭಾರತದ ಅಚ್ಚರಿ,

ಮಾಡಿದ ಕೆಲಸಗಳು ಹಲವಾರು- ಒಂದೇ, ಎರಡೇ,

ಹೊಲಗಳಿಗೆ ಜೀವ ತಂದವರು, ರೈತರಲ್ಲಿ ನಗು,

ಬರದಿಂದ ಬತ್ತಲಾದ ಭೂಮಿಗೆ ಹಸಿರು ತಂದವರು,

ಆದುನಿಕ ಭಗೀರಥ, ಕರುನಾಡ ಕುಲಪುತ್ರ.

 

ಅಭಿವೃದ್ಧಿಗೆ ಟೊಂಕ ಕಟ್ಟಿ ನಿಂತ ಮೈಸೂರು ದಿವಾನರು,

ರಾಜ್ಯ, ದೇಶದ ಅಭಿವೃದ್ಧಿಗೆ ಹೊಸ ಮಾರ್ಗ ತೋರಿದವರು.

"ಉದ್ಯಮ ಬೆಳೆಸಿ, ದೇಶವನ್ನು ಮುನ್ನಡೆಸಿ"

ಅವರು ಹೇಳಿದ ಮಾತುಗಳು ನಮ್ಮಯ ಪ್ರೇರಣೆ.

 

೧೫ ಸೆಪ್ಟೆಂಬರ್,ಸರ್ ವಿಶ್ವೇಶ್ವರಯ್ಯ ಹುಟ್ಟಿದ ದಿನ,

ಭಾರತದ ಇಂಜಿನಿಯರ್ದಿನವೆಂದು ಆಚರಿಸುವೆವು,

ಅವರ ನಿಸ್ವಾರ್ಥತೆ, ಕಾರ್ಯ ನಿಷ್ಠೆ ಹೆಸರುವಾಸಿ,

ಕಾಯಕ ಯೋಗಿ, ಕರ್ಮ ಯೋಗಿ , ನಮಗೆ ಸದಾ ಸ್ಫೂರ್ತಿ,

ಅವರ ನೆನಪಿಸಿಕೊಳ್ಳುವೆವು, ಹೆಮ್ಮೆಪಡುವೆವು ಇಂದು,

ಅವರ ಹಾದಿಯಲ್ಲಿ ನಾವು ನಡೆಯೋಣ,ದುಡಿಯೋಣ,

ಕರುನಾಡ ಬೆಳೆಸೋಣ, ಭಾರತವನ್ನು ಬೆಳಗಿಸೋಣ. 

Friday, November 21, 2025

ದೂರ ಸಾಗಬೇಕಿದೆ

ಹಿಮವಂತನ ಅರಣ್ಯವಿದು- ಬಲು ಸುಂದರ,

ಶಿವನೆನ್ನುವರು ಅವನ - ಜಾಗದ ಒಡೆಯ,

ಅವನು ಅಂತರ್ಯಾಮಿ - ಎಲ್ಲವೂ ಕಾಣುವುದು,

ಮಂಜು, ಹಿಮದಿಂದ ತುಂಬಿದೆ - ಜಟಾಧಾರಿಯವನು.

 

ಎಷ್ಟು ದೂರ ನೋಡಿದರೂ ಬರೀ ಹಿಮವಷ್ಟೇ!,

ಮನೆ, ಗುಡಿಸಲು ಯಾವುದೂ ಕಾಣುವುದಿಲ್ಲ,

ಅರಣ್ಯ, ಹಿಮದ ನಡುವೆ ಶಾಂತ ಸರೋವರ,

ಕಟ್ಟಲು ಕವಿಯುತ್ತಿದೆ, ವರ್ಷದ ಕಾರ್ಗತ್ತಲಂತೆ.

 

ಒಂದು ನಿಮಿಷ ಮೌನ, ಗಾಡಿಯ ಗೆಜ್ಜೆಯ ಸದ್ದು,

ಏನನ್ನೋ ಮರೆತಿದ್ದೇನೆ - ಅಗೋಚರ, ಅನಿವಾರ್ಯ,

ತಣ್ಣನೆ ಹಿಮಗಾಳಿ, ನೆನಪ ಹೊತ್ತು ತಂದಿದೆ ನೂರಾರು,

ಮುಂದೆ ಹೋಗುವುದೋ!, ಹಿಂದೆ ತೆರಳುವುದೋ!, ದ್ವಂದ್ವ.

 

ಸುಂದರ ಕಾನನ, ಸುಂದರ ಹಿಮ,

ಕತ್ತಲು ಹಬ್ಬಿದೆ, ಆಳವಾಗಿದೆ,

ನನ್ನ ಮಾತುಗಳು ನೆನಪಾಗುತ್ತಿದೆ,

ತುಂಬಾ ದೂರ ಸಾಗಬೇಕಿದೆ ನಾನು ನಿದ್ರಿಸುವ ಮುನ್ನ,

ತುಂಬಾ ದೂರ ಸಾಗಬೇಕಿದೆ ನಾನು ಮಲಗುವ ಮುನ್ನ.

Monday, November 17, 2025

ನೂರು ದಿನಗಳ ಹೆಜ್ಜೆ

ನೂರು ದಿನಗಳ  ಹೆಜ್ಜೆ, ನೂರು ಕನಸುಗಳನ್ನೆ ತಟ್ಟಿದೆ,

ಪ್ರತಿ ದಿನವೂ ಒಂದು ಕವನ, ಮನದ ಮೌನ - ರೆಕ್ಕೆ ಬಿಚ್ಚಿತು.

ಅಕ್ಷರಗಳಲಿ ಕಂಡೆ?—ಬದುಕಿನ ನಗು, ನೋವು, ವಿಶ್ವಾಸ,

ನೂರನೇ ಕವನದ ದಿನ, ಮೊದಲ ಹೆಜ್ಜೆ, ಮೊದಲ ಗುರಿ,

ಜೀವನದ ಗುರಿ ದೊಡ್ಡದಿದೆ, ಸಮಯ ಜಾರುತಿದೆ.

Sunday, November 16, 2025

ಹಣ್ಣೆಲೆ

ಹಲವು ಹೊಸ ಚಿನ್ನದ ಚಿಗುರಿನ ಬಾನೆತ್ತರದ ಮರವದು,

ಹಳೇ ಮರ ,ಹೊಸ ಚಿಗುರು, ಆಗ ತಾನೇ ಕಣ್ಣ ತೆರೆಯುತ್ತಿತ್ತು,

ಹೊಸತನ, ಹೊಸ ಹುರುಪು, ಸೂರ್ಯರಶ್ಮಿಯ ಕಾಣ್ವ ತವಕ,

ಚಿಗುರು ಮರದ ಭರವಸೆ, ಭವಿಷ್ಯದಲ್ಲಿ ಬೆಳೆಯುವ ಹಂಬಲ.

 

ಅದೇ ಮರದ ಮತ್ತೊಂದು ಕೊಂಬೆಯಲ್ಲಿ ನಗುತ್ತಿದೆ ಹಣ್ಣೆಲೆ,

ಮಳೆ, ಗಾಳಿ,  ಬಿಸಿಲ ಕಂಡಿದೆ, ಧೈರ್ಯದಿ ಗಟ್ಟಿಯಾಗಿ ನಿಂತಿದೆ,

ಬದುಕ ಪಯಣದಲ್ಲಿ ಬರ, ನೋವು, ನಲಿವು ಎಲ್ಲವ ಕಂಡಿದೆ,

ಅನುಭವದಲ್ಲಿ ಮಾಗಿದೆ, ಹೊಸ ಚಿಗುರ ಕಂಡು ನಲಿದಿದೆ.

 

ಹೂವು ಬಿಡುವ ಸಮಯ ಸಂತೋಷದಿ ಬರಮಾಡಿಕೊಂಡಿದೆ,

ಮೊಗ್ಗು ಹೂವಾಗಿ, ಕಂಪು ಬೀರುವಾಗ ಪರಿಮಳವ ಆಸ್ವಾದಿಸಿದೆ,

ಮೊಗ್ಗು ಹೂವಾಗಿ, ಹೂವು ಕಾಯಾಗಿ, ಕಾಯಿ ಹಣ್ಣಾಗಿದೆ,

ಹಣ್ಣೆಲೆ ಎಲ್ಲವ ಕಂಡು ಹಿಗ್ಗಿದೆ, ಪರಿಪೂರ್ಣತೆಯ ಪಡೆದಿದೆ.

 

ಹಣ್ಣೆಲೆ ನಕ್ಕಿದೆ, ಹೊಸ ಚಿಗುರ ಸ್ವಾಗತಿಸಿದೆ, ಶಾಂತಿ ನೆಲೆಸಿದೆ, 

ಹಕ್ಕಿಗಳು ಗೂಡು ಕಟ್ಟುತ್ತವೆ, ಹಕ್ಕಿಯ ಹಾಡಿಗೆ ಸಾಕ್ಷಿಯಾಗಿದೆ,

ಸಂಘರ್ಷದ ಜೀವನ ಹಣ್ಣೆಲೆಯದು, ಬದುಕಿನ ಆಟ, ಪಾಠ,  

ಬದುಕಿನ ಹಂತಗಳ ಸಾಕ್ಷಿಯಾಗಿ ಮರವು ನಿಂತಿದೆ ಮೌನದಿ.

Saturday, November 15, 2025

ಪ್ರಕೃತಿ ರಹಸ್ಯ

ಸೂರ್ಯ ಕೆಲ ಸಮಯ  ಮರೆಯಾಗುವನು, 

ಆಕಾಶದಲ್ಲಿ ಛಾಯೆಯ ನೃತ್ಯ ನರ್ತನ. 

ತಿಮಿರೋದಯ ಲೋಕ ಕ್ಷಣಮಾತ್ರ ಸ್ಥಬ್ದ,

ನೈಸರ್ಗಿಕ ಕ್ರಿಯೆಗೆ ರೋಮಾಂಚನ, 

ಒಂದು ಕ್ಷಣ, ಪ್ರಕೃತಿ ನಿಶ್ಶಬ್ದವಾಗುತ್ತದೆ. 

ಆಗಸದಲ್ಲಿ ಒಂದು ರಹಸ್ಯ ಸಂಕೇತ-ಚಿನ್ನದುಂಗುರ,

ವಿಜ್ಞಾನಿಗಳಿಗೆ ಪ್ರಕೃತಿಯ ರಹಸ್ಯ ಭೇದಿಸುವ ಸಮಯ, 

ಸೂರ್ಯನ ಕಣ್ಣು ಮುಚ್ಚಾಲೆಯಾಟ ಅದ್ಭುತ ಕ್ಷಣ- ಸೂರ್ಯ ಗ್ರಹಣ.

 

ಹುಣ್ಣಿಮೆಯ ಚಂದ್ರನ ಅಂದ ಬಲು ಸೊಗಸು, 

ಸಮಯವೇ ಹಾಗೆ ಕಾಲೆಳೆಯುವುದು ಕರಿಯ ಛಾಯೆ. 

ರಾತ್ರಿ ನಿಶ್ಶಬ್ದ, ಚಂದ್ರನು ಕಣ್ಮರೆಯಾಗುವನು, 

ಭೂಮಿಯ ಛಾಯೆಗೆ ಮರೆಯಾಗುವನು. 

ವಿಜ್ಞಾನಿಗಳಿಗೆ ಕೌತುಕ - ಶೋಧನೆಗೆ ಹಾದಿ,

ಮತ್ತೆ ಬೆಳಗುವ ನಿರೀಕ್ಷೆಯ ಅದ್ಬುತ ಕ್ಷಣಕ್ಕೆ ಹಾತೊರೆಯುವ,

ಚಂದ್ರಮುಖಿಯ ಒಸಗೆ ರಹಸ್ಯಮಯ - ಚಂದ್ರ ಗ್ರಹಣ.

 

ಎರಡು ಹೃದಯಗಳು ಒಂದಾಗುವ ಕಾಲ, 

ಇದು ಮದುವೆಯ ಪವಿತ್ರ ಕ್ಷಣ.

ಆಕಾಶ ಕಾಯಗಳ ಗ್ರಹಣವಲ್ಲ,

ಭೂಗ್ರಹದ ಕಾಯಗಳ ಗ್ರಹಣ,

ನಕ್ಷತ್ರಗಳಲ್ಲ, ಮನಸ್ಸು, ಹೃದಯಗಳ ಸಂಗಮ. 

ಅಗ್ನಿಯ ಸಾಕ್ಷಿಯಾಗಿ, ಮಂತ್ರಗಳ ನಡುವೆ, 

ಜೀವಿತದ ಒಡಂಬಡಿಕೆಗೆ ಶುಭಾರಂಭ.

ಮನೆ ಮಂದಿ, ಬಂಧುಗಳಿಗೆ ಕೌತುಕ,

ಹೊಸ ಸಾಧನೆಯ ರಹದಾರಿಗೆ ಪಯಣ 

ಪ್ರೀತಿಯ ಬಂಧನ, ಜೀವನದ ಹೊಸ ಹಾದಿ- ಪಾಣೀ ಗ್ರಹಣ.

Friday, November 14, 2025

ಗಣೇಶ ಬಪ್ಪಾ ಮೋರೆಯಾ!

ಮಳೆ ಜೋರಾಗಿದೆ, ನಿಲ್ಲುವ ಸೂಚನೆಯಿಲ್ಲದೆ,

ಮಳೆಯ ತಂಪು ಗಾಳಿ ಮಂದವಾಗಿ ಬೀಸುತ್ತಿದೆ.

ರಸ್ತೆಗಳಲ್ಲಿ ಜನವೋ ಜನ ಮೆರವಣಿಗೆಯಲ್ಲಿ,

ಗಲ್ಲಿಗಳಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ.

 

ಗಣಪನ ವಿಧಾಯಕ್ಕೆ ತಮಟೆಯ ನಾದ ನರ್ತಿಸುತ್ತಿದೆ,

ಮಳೆಯಲ್ಲಿ ನಾದಕ್ಕೆ ಮಕ್ಕಳ ನೃತ್ಯ- ಅಮೋಘ.

ಮಳೆಯ ಲೆಕ್ಕಿಸದೆ ಹುಡುಗ, ಹುಡುಗಿಯರ ಹುಲಿ ಕುಣಿತ,

ಭಾವ ಬಂಧನ ಬಡಾವಣೆಯ ಜನರಲ್ಲಿ ಸಂತೃಪ್ತ ನಗೆ.

 

ಮನೆ ಮೇಲ್ಮಹಡಿಗಳಿಂದ ಜನ ಕಣ್ಣು ಹಾಯಿಸುತ್ತಿದ್ದಾರೆ,

ಗಲ್ಲಿಗಳಲ್ಲಿ ಗಣೇಶನ ಮೆರವಣಿಗೆ ವೈಭವದಿಂದ ಸಾಗುತ್ತಿದೆ.

"ಗಣೇಶ ಬಪ್ಪಾ ಮೋರೆಯಾ!" ಘೋಷಣೆ ಮೊಳಗುತ್ತಿದೆ,

ಜನರ ಘೋಷಣೆ  ಆಕಾಶವ ನಡುಗಿಸುತ್ತಿದೆ.

 

ಆಕಾಶದಲ್ಲಿ ಬಣ್ಣದ ಪಟಾಕಿಗಳು ಹಾರುತ್ತಿವೆ,

ರಾತ್ರಿಯ ಕತ್ತಲಲ್ಲಿ ಬಣ್ಣದ ಚಿತ್ತಾರವ ಬೆಳಗಿಸುತ್ತಿವೆ.

ಕೊನೆಗೆ ವಿದಾಯ, ಕಣ್ಣೀರು, ಸಂತೋಷದ ಕೂಗು

ಗಣೇಶನು ಹೊರಟ, ಆದರೆ ಹೃದಯದಲ್ಲಿ ಉಳಿದ,

ಪ್ರತಿ ವರುಷ ಬರುವನು, ಶತಶತಮಾನಗಳಿಂದ.

Saturday, November 8, 2025

ಗುರು ನಮನ

ನಿಮ್ಮ ಮಾತುಗಳು ನಮ್ಮೊಳಗಿನ ಹಣತೆಯ ಹೊತ್ತಿಸಿದವು,

ನಿಮ್ಮ ಕರುಣೆಯ ನೋಟ ಧೈರ್ಯವನ್ನು ತುಂಬಿದವು.

ನಿಮ್ಮ ತಾಳ್ಮೆಯಿಂದ ನಮ್ಮ ಮನಸ್ಸು ಗಟ್ಟಿಯಾಯಿತು,

ನಮ್ಮ ಕನಸುಗಳಿಗೆ ಬಲವಾದ ಅಡಿಪಾಯವಾಯಿತು.

 

ಪುಸ್ತಕಗಳಿಗಿಂತ ಹೆಚ್ಚು ನೀವು ಕಲಿಸಿದಿರಿ,

ದಯೆ, ಧೈರ್ಯ, ಮಾನವೀಯತೆ ತುಂಬಿದಿರಿ.

ಮಾತು, ಮೌನ, ಕರಿ ಹಲಗೆಯಷ್ಟೇ ಪರಿಶುದ್ಧ,

ನಮ್ಮ ಭವಿಷ್ಯದ ದಾರಿಯನ್ನು ತೋರಿಸಿದಿರಿ.

 

ನೀವು ನಮ್ಮ ಬೆಳಕುನಮ್ಮ ಮಾರ್ಗದರ್ಶಕರು,

ತಪ್ಪುಗಳನ್ನು ಸರಿಪಡಿಸಿ, ನಿಜದ ದಾರಿಯ ತೋರಿದವರು.

ಈ ದಿನ, ಹೆಮ್ಮೆಯಿಂದ ನೆನೆವೆವು,  ನಮಸ್ಕರಿಸುವೆವು,

ನೀವು ನೀಡಿದ ಅಕ್ಷರ ಭಿಕ್ಷೆಗೆ  ಸದಾ ಕೃತಜ್ಞರಾಗಿರುವೆವು.

Friday, November 7, 2025

ಇನ್ನೂ ಇದೆ!

ಮನದ ಚೌಕಟ್ಟಿನಲ್ಲಿ

ಸದಾ ಗಿಜಿಗುಟ್ಟುವ ವಾಹನಗಳ ಗದ್ದಲ,

ಶಬ್ದ, ಹೊಗೆಮನಸ್ಸಿನಲ್ಲಿ ತಳಮಳ.

ಗುರಿಯ ಕಡೆ ತದೇಕ ಚಿತ್ತ,

ಶಾಂತ ಮನದ ಚೌಕಟ್ಟಿನಲ್ಲಿ

ಕಲ್ಪನೆಗಳು ಗರಿಗೆದರುತ್ತವೆ.

 

ನೋವು, ಅಜ್ಞಾತವಾಸ, ಭ್ರಮೆಯ ಬದುಕು,

ಬಿಡದ ಛಲಬದುಕಿನ ಬಂಡಿ ಎಳೆಯಲೇಬೇಕು.

ಶಕ್ತಿಯಿದೆ, ಸರಿಯಾದ ದಾರಿಯ ಹುಡುಕಾಟದಲ್ಲಿ,

ಹಸಿವಿದ್ದರೆ ಮನದಲ್ಲಿ ಕನಸ ರೆಕ್ಕೆ ಬಿಚ್ಚುವುದು,

ಮಹಲ್ಲುಗಳ ನೆರಳಲ್ಲಿ ಅರಿವಿನ ಕಿಡಿ ಹೊಳೆವುದು.

 

"ಇನ್ನೂ ಇದೆ" ಎನ್ನುವ ಪ್ರತಿ ಕ್ಷಣದ ಧ್ಯಾನ,

ಜೀವನಪ್ರೀತಿಹೃದಯದ ಉಸಿರಿನ ಸ್ಪಂದನೆ.

ಯಾವುದೋ ಲಹರಿ ಮುನ್ನಡೆಸುವುದು ಮುಂದೆ,

ಮಾಡುವ ಕೆಲಸವೊಂದು ಆನಂದದ ನಡಿಗೆಯ ಹಾದಿ,

ನಡೆವ ಹಾದಿಯ ಬೇಸರ ಹಗುರಾಗಿಸುವುದು ಇಂದು.

 

Sunday, November 2, 2025

ಆಹಾ! ಈ ಮಣ್ಣು,

ಆಹಾ! ಈ ಮಣ್ಣು,

ನಾನು ಆಡಿ ಬೆಳೆದ ಮಣ್ಣು.
ನಾನು ಬಿದ್ದಾಗಲೂ,
ಬರಿಗಾಲಿಗೆ ಮುಳ್ಳು ಚುಚ್ಚಿ ರಕ್ತ ಸುರಿಸಿದಾಗಲೂ,
ನನ್ನೊಡನೆ ಸಹನೆಯಿಂದ ಇದ್ದದ್ದು – ಇದೇ ಮಣ್ಣು.

 

ಎಲ್ಲೋ ಮಳೆ ಹನಿಯುವಾಗ,
ಈ ಮಣ್ಣಿನ ಸುಗಂಧ ಆಪ್ಯಾಯಮಾನ.
ತಿಂದು ಬಿಸಾಡಿದ ಮಾವಿನ ವಾಟೆಯಿಂದ
ಮಾವಿನ ಗಿಡ ಚಿಗುರಿದ ದಿನ – ಅದ್ಭುತ, ರೋಮಾಂಚನ.

 

ನಾನೇ ಭೂಮಿಯನ್ನು ಅಗೆದು ಗುಂಡಿ ತೆಗೆದು,
ಮಲ್ಲಿಗೆ, ದಾಸವಾಳದ ಗಿಡ ನೆಟ್ಟು,
ಕೆಲ ವಾರಗಳಲ್ಲಿ ನಗುತ್ತಾ ಚಿಗುರೊಡೆವುದನ್ನು
ನೋಡುವುದೇ ಸಂತೋಷ , ಸ್ವರ್ಗ ಸಿಕ್ಕಹಾಗೆ-ಅದೇ ಈ ಮಣ್ಣಿನ ಗುಣ.

 

ಇದೇ ಮರಳಿನಲ್ಲಿ ಮಳೆ ಬಂದಾಗ,
ದಿನವೆಲ್ಲಾ ಆಡಿ, ಅಪ್ಪನ ಕೋಪಕ್ಕೆ ಗುರಿಯಾದದ್ದು.
ಇದೇ ಜೇಡಿಮಣ್ಣಿನಿಂದ ಮೊದಲ ಗಣಪನನ್ನು
ಮಾಡಿದಾಗ,
ನೆರೆಹೊರೆಯವರೆಲ್ಲಾ ಹೊಗಳಿದ್ದು,
ಅಪ್ಪ ಮಾತ್ರ ಬೈದಿದ್ದು,
ಶಾಸ್ತ್ರ ಪದ್ದತಿಯಂತೆ ಇಲ್ಲವೆಂದದ್ದು,
ನೋವು, ನಲಿವು ಎರಡೂ ಕೊಟ್ಟದ್ದು – ಇದೇ ಮಣ್ಣು.

 

ಮಣ್ಣು – ಎಂಥ ಅದ್ಭುತ ಆಧ್ಯಾತ್ಮಿಕತೆ,
ರಹಸ್ಯ ಬಿಟ್ಟುಕೊಡದ ವಿಚಿತ್ರ ಸತ್ಯ.

ಬದುಕ ಪಯಣದಲ್ಲಿ,
ಜೀವನ ಪ್ರೀತಿ ಬಿಟ್ಟು ಕೊಡದೆ,
ಮನಸ್ಸು ಬಯಸುವುದು –
ಇದೇ ಮಣ್ಣಲ್ಲಿ ಮಣ್ಣಾಗುವುದ.

ಧೂಳಿನ ಕಣ ಕಣವಾಗಿ ಮಣ್ಣಲ್ಲೇ ಮಣ್ಣಾಗುವ ಆಸೆ.

ಗೆಲುವಿನ ಮಾರ್ಗ

ಸದಾ ಶ್ರದ್ದೆಯಿಂದ ಶ್ರಮೆ ಇರಲಿ,

ಅನುಮಾನ ಬೇಡ ನಿನ್ನ ಪರಿಶ್ರಮದಲ್ಲಿ,

ನಿನ್ನ ಒಟ್ಟು ಶಕ್ತಿ ಹರಿವುದೇ ಪ್ರಶ್ನೆ ಇರಲಿ,

ಮನಸ್ಸು ಸಂತೋಷದ ಕಡಲು - ಪರಿಕ್ರಮ.

 

ಶ್ರೇಷ್ಠತೆಯತ್ತ ನಡುಗೆಯಷ್ಟೇ ನಮ್ಮ ಕಾಯಕ,

ಅನುಮಾನ ಬೇಡ  ನೀ ನಡೆವ ಹಾದಿಯಲ್ಲಿ.

ಪರಿಪೂರ್ಣ ಶ್ರಮದ ಮೇಲಷ್ಟೇ ನಿನ್ನ ಹಕ್ಕು,

ಸಮಯ, ಶ್ರಮ, ತಾಳ್ಮೆ, ಇವೇ ಶ್ರೇಷ್ಠತೆಯ ಲಕ್ಷಣ,

 

ನೀನು ಅನನ್ಯ, ನಿನ್ನ ದಾರಿಯ ಕಂಡುಕೋ!,

ತೆರೆವುದು ಹೊಸ ಹಾದಿ, ಮನದ ಇಂಗಿತವ ಅರಿತುಕೋ!,

ನಿನ್ನವೇ ಕನಸುಗಳು ನುರಿವೆ, ರೆಕ್ಕೆಗಳ ಕಟ್ಟಿಕೋ!,

ಹೊರಗೆ ಕತ್ತಲೆ ಇರಲಿ ಬಿಡು, ಒಳಕಿಡಿ ದಾರಿ ತೋರುವುದು.

 

ಹೆಜ್ಜೆ ಹೆಜ್ಜೆಗಳಲ್ಲಿ ಶ್ರದ್ಧೆಯ ಬೆಳಕು ಚೆಲ್ಲು,

ಸಾಧನೆಯ ಹಾದಿ ಸುಲಭವಲ್ಲ - ಕಠಿಣವಿದೆ ನಿಜ,

ಹೃದಯದಲ್ಲಿ ಧೃಡತೆ, ಶ್ರಮದ ಉತ್ಸುಕತೆ ಇರಲಿ ಸಾಕು,

ನಂಬಿಕೆ, ತುಟಿಯಲ್ಲಿ ನಗು, ಗೆಲುವಿಗೆ ಬೇರೆ ಮಾರ್ಗ ಬೇಕೇ?

ಓಝೋನ್ ದಿನ

ರಕ್ಷಿಸುವವ ನಮ್ಮ ಮೇಲಿದ್ದಾನೆ , ಅತಿನೀಲಿ ಕಿರಣಗಳ ರಕ್ಷಾ ಕವಚವದು , ಭೂಮಿಗೆ ತಂಪಾದ ಬೆಳಕ ನೀಡುವುದು , ಓಜೋನ್ ಅದರ ಹೆಸರು - ನಮ್ಮ ದೈವವದು .   ...