Thursday, January 22, 2026

ಈ ಸಮಯ

ಸಮಯ ಅತ್ಯಮೂಲ್ಯ,

ಮುಂದೆಂದೂ ಬಾರದು ಗೆಳೆಯಾ.

 

ಸಮಯ ಹರಿಯುವ ನದಿಯಂತೆ,

ಹಿಂತಿರುಗಿ ಬಾರದು ಎಂದೂ.

 

ಹಣ ಮತ್ತೆ ಸಂಪಾದಿಸಬಹುದು,

ಸಮಯ ಮರಳಿ ಬಾರದು ಗೆಳೆಯ.

 

ಪ್ರತಿ ಕ್ಷಣ ಅಮೂಲ್ಯ ಗೆಳೆಯ,

ವ್ಯರ್ಥ ಮಾಡಬೇಡ ಗೆಳೆಯ.

 

ಅಧ್ಯಯನ, ಆರೋಗ್ಯ, ಕನಸುಗಳ ದಾರಿ,

ಸಮಯವನ್ನು ಜಾಣ್ಮೆಯಿಂದ ಬಳಸು.

 

ಕೊನೆಯ ಹೊತ್ತಿನಲ್ಲಿ ನೆನಪಿಸಿಕೋ,

ಮಾಡಿದ ಅರ್ಥಪೂರ್ಣ ಕಾರ್ಯವ.

 

ಮರುಗದಿರು ಕೊನೆಯಲ್ಲಿ,

ವ್ಯರ್ಥಮಾಡಿದೆ ಎಂದು.

ಗುರು

ಜೀವನದ ಪ್ರತಿ ಹೆಜ್ಜೆಯಲಿ ಪಾಠವಿದೆ,

ಜೀವನದ ಪ್ರತಿ ಮುಖದಲಿ ಸಂದೇಶವಿದೆ.

ಗೆಲುವು ಕಂಡವರು ಸ್ಫೂರ್ತಿಯ ದೀಪ,

ನ್ಯೂನತೆ ಹೊಂದಿರುವವರು ಎಚ್ಚರಿಕೆ.

 

ಸಂತೋಷ ಹಂಚಿದವರು ಹರ್ಷದ ದಾರಿ,

ದುಃಖ ಅನುಭವಿಸಿದವರು ಕೃತಜ್ಞತೆಯ ಪಾಠ.

ದಯೆಯ ಹೃದಯದವರು ಕರುಣೆಯ ಗೀತೆ,

ಕೊಂಕು  ಮಾತುಗಳನಾಡುವವರು ಸಹನೆಯ ಪಾಠ.

 

ಜೀವನವೇ ಒಂದು ದೊಡ್ಡ ಪಾಠಶಾಲೆ,

ಪ್ರತಿ ಜೀವಿಯೂ ಗುರುವು ಇಲ್ಲಿ.

ಕಲಿಯುವ ಒಳಮನಸ್ಸು ಕಣ್ತೆರೆದರೆ,

ಪ್ರತಿ ಕ್ಷಣವೂ ಮನ್ನೋಲ್ಲಾಸ, ಜೀವನ ಪಾಠ.

Thursday, January 15, 2026

ಮೂಲ ಪ್ರಶ್ನೆ

ಮನಸೇ, ನಿಲ್ಲು ಕ್ಷಣ,

ಪ್ರಶ್ನೆ ಕೇಳಿಕೋ ನಿನ್ನೊಳಗೆ

ಏನು ಮುಖ್ಯ? ಏಕೆ ಮುಖ್ಯ?

ಅದೇ ದಾರಿ ಬೆಳಕಾಗುವುದು.

 

ಅನಗತ್ಯದ ಗೊಂದಲ ತೊರೆ,

ಸತ್ಯದ ಅರ್ಥ ಹಿಡಿದುಕೋ,

ಸಾಧನೆಯ ಹೂವು ಅರಳಲಿ,

ಆತ್ಮಜ್ಞಾನದ ದೀಪ ಬೆಳಗಲಿ.

 

ಅಧ್ಯಯನದ ಸಾಗರದಲ್ಲಿ,

ಅಲೆಗಳೆಷ್ಟು ಎದ್ದರೂ,

ಮೂಲ ಹರಿಗೋಲ ಹಿಡಿ ಸಾಕು,

ಗುರಿಯ ನೀ ತಪ್ಪದೆ ಸೇರುವೆ.

 

ಗುರಿ ನಿಗದಿ ಮಾಡುವಾಗ,

ಕಾರಣ ಕೇಳು ಹೃದಯವ,

ಬಲವಾದ ಕಾರಣವಿರೆ,

ಪ್ರಯತ್ನದ ಫಲ ನಿನ್ನದೇ.

 

ಜೀವನದ ಪ್ರತಿಯೊಂದು ಹೆಜ್ಜೆ,

ಪ್ರಶ್ನೆಯೇ ಮಾರ್ಗದರ್ಶಿ,

ಏನು ಮುಖ್ಯ? ಏಕೆ ಮುಖ್ಯ?

ಅದೇ ನಿನ್ನ ನಿಜದ ದಾರಿದೀಪ.

Wednesday, January 14, 2026

ಗುರಿಯ ದಾರಿ

ಚಿಕ್ಕ ಚಿಂತನೆಯ ಬೀಜ ಬಿತ್ತು

ಅವಕಾಶಗಳ ಅರಣ್ಯ ಬೆಳೆವುದು.  

ಬರೆದ ಗುರಿ ಬೆಳಕಾಗುವುದು, 

ಕತ್ತಲಲ್ಲಿ ದಾರಿ ದೀಪವಾಗುವುದು.  

 

ಆಸೆಯ ನಕ್ಷತ್ರದಂತೆ ಗುರಿ ಹೊಳೆವುದು,  

ಬಯಕೆಯ ಹೆಜ್ಜೆಗಳಿಗೆ ದಾರಿ ತೋರಿವುದು.  

ಹಂಬಲದ ಕಾರಣ ಹೃದಯ ಉಳಿಸುವುದು,  

ಯಾವಕಾಲವಾದರೂ ಮನದಲ್ಲೇ ಉಳಿವುದು.  

 

ಯೋಜನೆ ನದಿಯಂತೆ ಹರಿಯಲಿ, 

ಮನಸ್ಸು ಬಾಗಿ ಆನಂದಿಸಲಿ. 

ಇಂದೇ ಆರಂಭಿಸಿದ ಕೆಲಸ, 

ನಾಳೆಯ ನನಸು ಹುಣ್ಣಿಮೆಯಂತೆ. 

 

ಕನಸುಗಾರ, ಅನ್ವೇಷಿ, 

ಭವಿಷ್ಯ ಗುರಿಗಳಲ್ಲಿ ನೆಲೆಸಿದೆ. 

ಬರೆ, ರೂಪಿಸು, ಜೀವ ತುಂಬು, 

ಹೂವಿನಂತೆ ಅರಳಿ, ಗುರಿ ತಲುಪು. 

Monday, January 12, 2026

ಕೃತಜ್ಞತೆ

ಕೃತಜ್ಞತೆ ಹೃದಯದ ಬೆಳಕು,

ಅಸಮಾಧಾನ ಕರಗಿಸುವ ಬಿಸಿ.

ದೂರುಗಳ ನೆರಳಲ್ಲಿ ನಿಂತರೂ,

ಧನ್ಯತೆಯ ನಗು ದಾರಿ ತೋರುವ ದೀವಿಗೆ.

 

ಜ್ಞಾನ, ಸ್ನೇಹ, ಆರೋಗ್ಯ, ಅವಕಾಶ

ಜೀವನದ ಅಮೂಲ್ಯ ಉಡುಗೊರೆ.

ಸಣ್ಣ ಸಂತೋಷದ ಕಿರಣ,

ಮನದೊಳಗೆ ಕಾಣದ ಅಗ್ನಿಪರ್ವತ.

 

ಸವಾಲಾದರೆ ಅದು ಪಾಠ,

ಕಷ್ಟ ಬಂದರೆ ಅದು ಶಕ್ತಿ.

ಕೃತಜ್ಞತೆಯ ಮನಸೇ ಹೇಳು:

“ಬದುಕೇ ಸೌಂದರ್ಯ, ನಾನು ಸಂಪೂರ್ಣ.”

Thursday, January 8, 2026

ಖಚಿತತೆ

ಖಚಿತವಾಗಿ ಏನು ತಿಳಿದಿದ್ದೀಯೆ?

ಸೂರ್ಯೋದಯವೇ? ನಿನ್ನ ಉಸಿರೇ?

ಮನಸ್ಸಿನ ಕನಸುಗಳೇ?, ನೋವುಗಳೇ?,

ಎಲ್ಲವೂ ಊಹೆಗಳ ನೆರಳಲ್ಲಿ ನಿಂತಿವೆ.

 

ನಂಬಿಕೆಗಳುಮನಸ್ಸಿನ ಕಟ್ಟಡ,

ಕೆಲವು ಬಲವಾದವು,

ಕೆಲವು ಮರಳಿನ ಮನೆ,

ಅವುಗಳೇ ನಮ್ಮ ದಾರಿ.

 

ಪ್ರಕೃತಿ ತತ್ವ ಹೇಳುತ್ತದೆ:

ಸರಳವಾದುದು ಸಾಮಾನ್ಯ ಸತ್ಯ.

ಅತಿಯಾದ ಊಹೆಗಳು

ನಮ್ಮ ಹೆಜ್ಜೆಗಳ ತಪ್ಪಿಸುವುವು.

 

ಗೆಳೆಯಾ!, ನಂಬಿಕೆಗಳ ಪ್ರಶ್ನಿಸಿಕೋ!,

ಪರಿಶೀಲಿಸು, ಸಹಾಯಕ್ಕಿಲ್ಲದವ ಬಿಡು,

ಶಕ್ತಿದಾಯಕವುಗಳನ್ನು ಉಳಿಸಿಕೋ!,

ಅವುಗಳೇ ಬೆಳವಣಿಗೆಯ ಬೀಜ.

 

ಖಚಿತತೆಮೃಗಜಾಲ,

ಪ್ರಶ್ನಿಸುವ ಮನಸ್ಸಿರಲಿ,

ಸರಳ ನಂಬಿಕೆಯೇ ಬೆಳಕು,

ಜೀವನ ದಾರಿದೀಪವದು.

Wednesday, January 7, 2026

ಸಂಜೆಯ ಆಕಾಶದ ನುಡಿಗಳು

ಸೂರ್ಯನು ರೆಕ್ಕೆ ಮುಚ್ಚಿ,

ನೀಲಿ  ಬಣ್ಣದ ಮೌನ ಹರಡಿ,

ಮರೆತ ಕನಸುಗಳ ಮೋಡಗಳು,

ಸಂಜೆಯ ಮಡಿಲಲ್ಲಿ ತೇಲುವುವು.

 

ನಕ್ಷತ್ರಗಳ ಕೆಳಗೆ ನದಿ ರಾಗ ಹೊಮ್ಮುತ್ತಾ,

ಅಲೆಮಾರಿ ಮನಗಳ ಪ್ರತಿಬಿಂಬವಾಗಿ,

ಪ್ರತಿ ಅಲೆ ಕಥೆ ಹೊತ್ತು ಸಾಗುತ್ತಾ,

ಪ್ರತಿ ಮಿನುಗು ನಾಳೆಯ ಭರವಸೆ ನೀಡುತ್ತಾ.

 

ನೆರಳುಬೆಳಕಿನ ನಡುವೆ ಅಂತರಾತ್ಮ,

ಬದುಕುವ ಕಲೆಯ ಕಲಿತು,

ನಿಶ್ಶಬ್ದ ವಿರಾಮಗಳಲ್ಲಿ ಸ್ಪಷ್ಟತೆ ಕಂಡು,

ರಾತ್ರಿಯ ಲಯದಲ್ಲಿ ಧೈರ್ಯವನ್ನು ಕಂಡುಕೊಳ್ಳುತ್ತಾ.

 

ಗೀಚಿ, ಬರೆ, ಅಕ್ಷರಗಳಲ್ಲಿ ಹುಡುಕು,

ಶಾಯಿಯಿಂದ ಮನದ ದೀಪ ಬೆಳಗಲಿ,

ಏಕಾಂತದ ಲಿಪಿಯಲ್ಲಿ,

ಸಮಸ್ಯೆ ತನ್ನ ಪ್ರಭಾತವ ಕಾಣಲಿ.

Tuesday, January 6, 2026

ಏಳು ದಿನಗಳ ಕನ್ನಡಿ

ಏಳು ದಿನಗಳ ಹಾದಿ,

ಹಗಲು-ರಾತ್ರಿ ಹೆಜ್ಜೆಯ ನಾಡಿ,

ಕಾಲದ ಹೊಳೆ ಹರಿದು ಹೋದರೂ,

ಮನದ ಕನ್ನಡಿ ನಿಂತು ನೋಡಲಿ.

 

ತಪ್ಪುಗಳ ತಂತಿ ಮೀಟಿದಾಗ,

ಪಾಠಗಳ ರಾಗವು ಹೊಮ್ಮಲಿ,

ಯಶಸ್ಸಿನ ಬೆಳಕು ಹರಿಯುವಾಗ,

ಹೊಸ ಕನಸುಗಳ ಬೀಜ ಬಿತ್ತಲಿ.

 

ಪ್ರತಿ ಭಾನುವಾರದ ಮೌನ ಕ್ಷಣ,

ಮನದ ಮಾತು ಕೇಳುವ ಸಮಯ,

ಹಿಂದಿನ ತಪ್ಪು ಹೆಜ್ಜೆಗಳ ಎಣಿಸಿ,

ಮುಂದಿನ ಸರಿ ದಾರಿಯ ಕಟ್ಟುವ.

 

ಏಳು ದಿನಗಳ ಪ್ರಯತ್ನ ಪರಿಶೀಲನೆ,

ಜೀವನದ ಗೀತೆಗೆ ಲಯಬದ್ಧ ತಾಳ,

ಸಣ್ಣ ವಿರಾಮ, ದೊಡ್ಡ ಬೆಳವಣಿಗೆ,

ಮನದೊಳಗೆ ಮೂಡುವುದು ನವ ಚೈತನ್ಯ.

Saturday, January 3, 2026

ವಂದಿಸುವೆವು ತಾಯೆ!

ವಂದಿಸುವೆವು ತಾಯೇ, ಅನವರತ

ವಂದಿಸುವೆವು ತಾಯೇ!

 

ಪ್ರಾಣ ನೀಡಿದವಳು ನೀನು,

ತ್ರಾಣ ನೀಡುವವಳು ನೀನು,

ರಕ್ಷಿಸಿ ಸಲಹುವವಳು ನೀನು,

ಮಾನ, ಸಮ್ಮಾನವು ನೀನು.

 

ಬೆಳದಿಂಗಳು ನೀನೇ,

ಸುಪ್ರಭಾತದ ಕಿರಣವು ನೀನೇ,

ಹೂಗಳೂ ನೀನೇ,

ಭ್ರಮರವೂ ನೀನೇ.

 

ತರುಲತೆಗಳೂ  ನೀನೇ,

ತುರು ಕರುಗಳೂ ನೀನೇ,

ಹಕ್ಕಿಗಳ ಕಲರವವೂ ನೀನೇ,

ತಂಗಾಳಿಯ ಮಧುರತೆಯೂ ನೀನೇ.

 

ನಗುಮೊಗದವಳು ನೀನು,

ಮಧುರ ಮಾತಿನವಳು ನೀನು,

ಸುಖದಾತೆಯೂ ನೀನು,

ವರದಾತೆಯೂ ನೀನು.

 

ಸಹಸ್ರ ಕೋಟಿಗಳ ದನಿಯು ನೀನು,

ಸಹಸ್ರ ಕರಶಸ್ತ್ರ ಚಲನೆಯು ನೀನು,

ಸಶಕ್ತ, ಸಬಲಳು ನೀನು,

ಅಬಲೆಯರ ರಕ್ಷಕಳು ನೀನು.

 

ಶಕ್ತಿಶಾಲಿಯೂ ನೀನು,

ಅಭಯದಾಯಿನಿಯೂ ನೀನು,

ಅರಿಗಳ ಸಂಹಾರಕಳು ನೀನು,

ಶರಣಾದವರ ಕರುಣೆಯು ನೀನು.

 

ನೀನೇ ವಿದ್ಯೆ,

ನೀನೇ ಧರ್ಮ,

ನೀನೇ ಹೃದಯ,

ನೀನೇ ಆತ್ಮ, ಪ್ರಾಣವು.

 

ಬಾಹುಗಳಲ್ಲಿ ಅಡಗಿರುವ ಶಕ್ತಿ ನೀನು,

ಹೃದಯದಲ್ಲಿ ನೆಲೆಸಿರುವ ಭಕ್ತಿ ನೀನು,

ದೇಹ,ದೇಶ, ದೇವಾಲಯಗಳ ಪೂಜೆ ನೀನು,

ನಮ್ಮೆಲ್ಲರ ಆರಾಧ್ಯ ದೈವವು ನೀನು.

 

ದುರ್ಗೆಯು ನೀನೇ,

 ಲಕ್ಷ್ಮಿಯು ನೀನೇ,

ಸರಸ್ವತಿಯು ನೀನೇ,

ನಮ್ಮೆಲ್ಲರ ತಾಯಿಯು ನೀನೇ.

 

ಪರಿಶುದ್ಧಳು ನೀನು,

ಮಂಗಳಕರಳು ನೀನು,

ಸಮೃದ್ಧತೆಯು ನೀನು,

ಕರುಣೆಯ ಕಡಲು ನೀನು.

 

ಕಂದರ ಕಣಿವೆಯು ನೀನು,

ಗಿರಿ, ಪರ್ವತ ಶಿಖರವು ನೀನು,

ಹರಿಯುವ ತೊರೆ, ನದಿಯು ನೀನು,

ಹೃದಯಗಳಲ್ಲಿ ಚಿಮ್ಮುವ ಚೈತನ್ಯವು ನೀನು.

 

ವಂದಿಸಿವೆವು ತಾಯೆ! ಅನವರತ,

ಶಿರಸಾ ವಂದಿಸುವೆವು ತಾಯೆ!

Wednesday, December 31, 2025

ಶಕ್ತಿಯ ಹಾದಿ

ನೋವು ಬಂದಾಗ ಹೃದಯ ನಲುಗದಿರಲಿ,

ನೋವ ಎದುರಿಸುವ ತಿಕ್ಕಾಟದಿ ಬೆಳಕು ಕಾಣಲಿ.

ಹರಿವ ಕಣ್ಣೀರ ಹನಿಯಲಿ ಸುಖದ ಬೀಜ ಬಿತ್ತೋಣ,

ಶಿಸ್ತಿನ ನೋವ ಹಾದಿಯ ಬಳಸಿ ಜೀವನ ಬೆಳೆಯೋಣ.

 

ನೋವು  ಬರಲಿ ಎದುರಿಸೋಣ ಹಠ, ಧೈರ್ಯದಿ,

ನೋವ ಮರೆಮಾಡುವುದು ಬೇಡ , ಬರಲಿ ಬಿಡಿ.

ಇರುವ ನೋವು ಮನದ ಶಾಂತಿಯ ಕದಡುವುದು,

ಅನುಭವಿಸಿ, ಎದುರಿಸಿ ಹೃದಯದಿ ಬಲ ನೀಡುವುದು.

 

ಬೆಳಗಿನ ದಿನಚರಿ ಹವ್ಯಾಸ, ಅಭ್ಯಾಸ ಶಕ್ತಿ ತುಂಬುವುದು,

ಸಂಜೆಯ ಸೂರ್ಯಾಸ್ತ ಮನದಲಿ ಶಾಂತಿ ತುಂಬುವುದು,

ಸಣ್ಣ, ಸಣ್ಣ ಹೆಜ್ಜೆ ಇಡು, ದೊಡ್ಡ ಬದಲಾವಣೆಗೆ ಸಜ್ಜಾಗು,

ನಿರಂತರತೆಯ ಕಾಯ್ದುಕೋ, ಹೊಸ ಗುರಿಯೆಡೆ ಪಕ್ಕಾಗು.

 

ನೋವ ಅನುಭವಿಸಿ ದಾಟು, ನಗು ಅರಳುವುದು,

ಪಕ್ವವಾಗಿ ಹೃದಯದಿ ಹೊಸ ಕನಸು ಮೂಡುವುದು.

ತಾಳ್ಮೆ, ಶಿಸ್ತು, ಧೈರ್ಯ, ನಿರಂತರತೆಗೆ ತಲೆ ಬಾಗು,

ಅಭ್ಯಾಸ, ಹವ್ಯಾಸದಿ ಹೃದಯ ತೆರೆದು ಗೆಲುವಾಗು.

ಶಿಸ್ತಿನ ಪಿಸುಮಾತು

ಬೆಳಗಿನ ಬೆಳಕು ಮನದ ಬಾಗಿಲು ತಟ್ಟಿದಾಗ,

ಹೃದಯದೊಳಗೆ ಶಾಂತಿ ಕಿರಣ ಹರಿದಾಗ,

ಸಣ್ಣ ಸಣ್ಣ ಹೆಜ್ಜೆಗಳು ದಿನವನ್ನು ಕಟ್ಟುವುದು,

ಶಿಸ್ತಿನ ಹೂವು ಹೃದಯದಲ್ಲಿ ಅರಳುವುದು.

 

ನಿರಂತರತೆಯ ನಾದವು ಜೀವನದಲ್ಲಿ ಹೊಮ್ಮುವುದು,

ಸರಳ ದಿನಚರಿ ನೀಡುವುದು ಶಾಂತಿ, ಸಮಾಧಾನ,

ಪ್ರತಿ ಕ್ಷಣವೂ ಮನಕೆ ತುಂಬುವುದು ಆಂತರಿಕ ಶಕ್ತಿ,

ಅಭ್ಯಾಸವೇ ನಮ್ಮ ನಿಜವಾದ ಅದ್ಬುತ ಬಲ, ಶಕ್ತಿ.

ಈ ಸಮಯ

ಈ ಸಮಯ ಅತ್ಯಮೂಲ್ಯ , ಮುಂದೆಂದೂ ಬಾರದು ಗೆಳೆಯಾ .   ಸಮಯ ಹರಿಯುವ ನದಿಯಂತೆ , ಹಿಂತಿರುಗಿ ಬಾರದು ಎಂದೂ .   ಹಣ ಮತ್ತೆ ಸಂಪಾದಿಸಬಹುದು , ಸಮ...