Sunday, June 29, 2025

ಆಯ್ಕೆಯ ನೆರಳು

 

ಆಯ್ಕೆಯೇ ಬದುಕಿನಲಿ ತರುವುದು ವ್ಯತ್ಯಾಸ,

ಜೀವನದ ಹಾದಿಯಾಗುವುದು ಅದೊಂದು ರೂಪಕ.

ಗೊಂದಲ, ಕವಲು ದಾರಿಯಲ್ಲಿರುವುದು ಆಯ್ಕೆ,

ನಾವು ಏನೋ!, ಆಯ್ಕೆಯೇ ನಮ್ಮ ಬದುಕ ಶಿಲ್ಪಿ.

 

ಕೆಟ್ಟ ನೆನಪುಗಳು ಸಮುದ್ರದ ಅಲೆಗಳಂತೆ,

ಮತ್ತೆ, ಮತ್ತೆ ಮನಕ್ಕೆ ಅಪ್ಪಳಿಸುವುದು.

ನಿಂತ ನೀರಾಗುವ ಬಯಕೆಯೋ!, ಆಲಸ್ಯವೋ!,

ಅಡೆ -ತಡೆಗಳ ಮೀರಿ ಕಡಲ ಸೇರುವ ತವಕವೋ?.

 

ಆಯ್ಕೆ ನಿನ್ನದೇ!, ದೂರುವುದು ಬೇರೊಬ್ಬರನ್ನು,

ಪರಿಸ್ಥಿತಿಯೋ!,ಪ್ರಸಂಗವೋ!, ಆಯ್ಕೆ ಮಾಡಿದವನು ನೀನೇ.

ವಿವೇಚಿಸದೆ,ಆಲೋಚಿಸದೆ ಕ್ಷಣದ ಸುಖಕ್ಕೆ,

ಅಯ್ಜೆ ಮಾಡಿದವನು ನೀನೇ, ನಿನ್ನ ಆಯ್ಕೆಯಂತೆ ನೀನು.

 

ನಿರಾಸೆಯೋ!, ಸಂತಸವೋ!, ನಿನ್ನ ಆಯ್ಕೆಯ ಫಲ,

ಅನುಭವಿಸುವವರು ನಾವೇ, ಕರ್ಮದಂತೆ ಫಲ.

ಅರಿವಿನ ಬೆಳಕಿನಂತೆ ಕಾಣುವುದು ದಾರಿ,

ವಿವೇಚಿಸಿ ಆಯ್ಕೆ ಮಾಡಿಕೊಳ್ಳುವುದೇ ರಹದಾರಿ.

Saturday, June 28, 2025

TIEI ಗೀತೆ

 ಜೈ ಹೋ, ಜೈ ಹೋ, TIEI ಗೆ ಜೈ ಹೋ,

ಜಪಾನ್-ಭಾರತ ಮೈತ್ರಿಗೆ ಜೈ ಹೋ,

ಟೊಯೋಟಾ-ಕಿರ್ಲೋಸ್ಕರ್ ಸ್ನೇಹಕ್ಕೆ ಜೈ ಹೋ.।।

 

ಕರುನಾಡ ಬನ್ನೇರುಘಟ್ಟ ಜಿಗಣಿ ಗ್ರಾಮದಿ ನೆಲೆಸಿಹೆವು,

ಜವಳಿ ಯಂತ್ರಗಳ ಉತ್ಪಾದನೆ, ಕನ್ನಡಿಗರ ಕಣ್ಮಣಿಯಾದೆವು,

ಜವಳಿಯಂತ್ರಗಳ ವ್ಯವಹಾರ ಭಾರತಾಧ್ಯಂತ ಬೆಳೆಯಿತು,

ಹೊಸ ಇಂಜಿನ್ ಉತ್ಪಾದನಾ ಘಟಕವು ಉದಿಸಿತು.।।

 

ನೆಲ,ಜಲ, ಕಾನೂನಿಗೆಂದಿಗೂ ಗೌರವ ಕೊಡುವೆವು,

ಸಂಸ್ಕೃತಿ, ಪರಂಪರೆ, ಅಭಿವೃದ್ಧಿಗೆ ಫಣತೊಟ್ಟಿರುವೆವು,

ನ್ಯಾಯ, ನೀತಿ, ಬದ್ಧತೆ, ತತ್ವಗಳನೆಂದೂ ಬಿಡೆವು,

ನವೀನ ತಂತ್ರಜ್ಞಾನದ ಉತ್ಪನ್ನಗಳ ನೀಡುವೆವು.।।

 

ಹೃದಯ ಮುಟ್ಟಿ ಹೇಳುವೆವು ಸಹೋದ್ಯೋಗಿಗಳೇ ಮೊದಲು,

ಸಮಸ್ಯೆಗಳ ಪರಿಹಾರಕ್ಕೆ ಗುಣಮಟ್ಟವೃತ್ತವೇ ಅಸ್ತ್ರವು,

ಸುರಕ್ಷತೆ, ಗುಣಮಟ್ಟಕ್ಕೆ ಎಂದಿಗೂ ಮೊದಲ ಪ್ರಾಶಸ್ತ್ಯವು,

ಸ್ವಚ್ಛತೆ, ಪ್ರೌಢತೆ,ಬದ್ದತೆಯೇ ಉತ್ಪಾದನೆಯ ಆಧಾರವು.।।

 

ನಾವೆಲ್ಲರೂ ಒಂದು ತಂಡ, ಒಂದೇ ಕುಟುಂಬ,

ಹೆಮ್ಮೆಯ TIEI ಪಾಲಿಸುವುದು ವಸುದೈವ ಕುಟುಂಬ,

ಜಗದ ಅತ್ಯತ್ತಮ ಇಂಜಿನ್ ಉತ್ಪಾದಕ ಪಟ್ಟವ ಗಾಳಿಸುವೆವು,

ಗ್ರಾಹಕರ ಅತ್ಯತ್ತಮ ಆಯ್ಕೆಯ ಸಂಸ್ಥೆ ನಾವೇ ಆಗುವೆವು||

Saturday, June 21, 2025

ಸ್ವಾರ್ಥ ಸಾಧನೆ

 ಕೆರೆಗಳೆಲ್ಲಿ! ಗುಡ್ಡಗಳೆಲ್ಲಿ!

ಇಲ್ಲಿ ಎಲ್ಲವೂ ಬೆತ್ತಲಾಗಿವೆ| 

ಯಾರದೋ ಹೊಟ್ಟೆಯ ಹಸಿವಿಗೆ 

ನಿತ್ಯ ಬಲಿಪಶುಗಳಾಗಿವೆ|| 


ಮರಗಿಡಗಳೆಲ್ಲಿ! ಪ್ರಾಣಿ -ಪಕ್ಷಿಗಳೆಲ್ಲಿ!

ಕಾಣದೂರಿಗೆ ವಲಸೆ ಹೋಗಿವೆ| 

ನಮ್ಮಯ ಸ್ವಾರ್ಥ ಸಾಧನೆಗೆ 

ತಮ್ಮಯ ಬಲಿಗೊಟ್ಟಿವೆ|| 

Friday, June 20, 2025

"ಭಗ್ನ ಕನಸುಗಳಿಂದ ಬೆಳೆದ ಬೆಳಕು"

 

ಸತ್ತ ಕನಸುಗಳಿಗೆ ವರುಷ ಸಂದಿವೆ;

ಮತ್ತೆ ಇದೆ ದಿನ ಪ್ರತಿ ವರುಷವೂ ಪ್ರತ್ಯಕ್ಷವಾಗುವುದು;

ಗಹಗಹಿಸಿ ನಗುವುದು ' ಮೈಗಳ್ಳ ನೀನು' ನನಸಾಗಿಸಿ ನೋಡು;

ನಿದ್ದೆ ಕೆಡಿಸಿ, ನನ್ನ ಅವಲೋಕಿಸುವಂತೆ ಮಾಡುವುದು;

ಸುತ್ತಲೂ ರಕ್ಕಸರೇ ತುಂಬಿರಲು, ತೆವಳಬೇಕು ಇಲ್ಲಿ;

ಜೋರಸಗಿ ಉಸಿರಾಡುವುದೂ ಅಪರಾಧವಿಲ್ಲಿ;

ನೆನಪಿಲ್ಲ ನನಗೆ ಜೋರಾಗಿ ಕೆಮ್ಮಿದ್ದು ಯಾವಾಗ ಎಂದು;

ಎಲ್ಲವೂ ಮರೆತಿದ್ದೇನೆ, ಉಸಿರಾಡುವುದೊಂದನ್ನು ಬಿಟ್ಟು;

ಆಹಾರ, ನಿದ್ದೆ, ಮೈಥುನಗಳ ಸುಖ ಅನುಭವಿಸದೇ ವಿರಾಗಿಯಾಗಿಹೆ;

ಮುಂದುವರಿದ ಭಾಗವಾಗಿ ಭಾವನೆಗಳ ಕಳೆದುಕೊಂಡು

ಉಸಿರಾಡುತ್ತಿದ್ದೇನೆ ಜೀವಂತ ಶವವಾಗಿ, ಮತ್ತೆ ಕಾಯುತ್ತಿದ್ದೇನೆ

ಉಸಿರು ಯಾವಾಗ ನಿಲ್ಲುವುದೋ ಎಂದು - ಭಯವಿಲ್ಲ ಸಾಯಲು;

ನೋವು ಅನುಭವಿಸುತ್ತಿದ್ದೇನೆ ಯಾವ ಕಾರಣವೂ ತಿಳಿಯದೆ

ಉದ್ದೇಶವೇನೋ ಇಹುದು, ಅರ್ಥತಿಳಿಯದೆ ತೊಳಲಾಡುತ್ತಿದ್ದೇನೆ;

ಮತ್ತೆ ಹೊಡೆತ ಸಹಿಸುವ ಶಕ್ತಿಯನ್ನಾದರೂ ನೀಡೆಂದು ಬೇಡುವೆ;

ಇವೆಲ್ಲಕ್ಕೂ ಕೊನೆ ಇದೆಯೇ? ಪ್ರಶ್ನೆ ಇದೆ ಮನದಲ್ಲಿ ಉತ್ತರವಿಲ್ಲದೆ!

ಬರಲಿ ಬಿಡು ಇನ್ನೆಷ್ಟು ನೋವುಗಳು, ಸಹಿಸುವ ಶಕ್ತಿ ನನಗಿದೆ;

ಅನುಭವಿಸಿ ಪಕ್ವವಾಗುವ ತಾಳ್ಮೆಯಿದೆ; ಇಂದಲ್ಲ ನಾಳೆ ಗೆಲುವು ನನ್ನದೇ!;

ಬಾ ನೋವೇ ಬಾ ನನ್ನಾವರಿಸು , ನನ್ನ ಅನುಭವಿಸಿ ಸುಖಿಸು;

ಮುಂದೆ ಇಂತಹ ಸುಯೋಗ ನಿನಗೆ ಸಿಗದು, ಬೇರೊಬ್ಬರನ್ನು

ಈಗಲೇ ಹುಡುಕಿಕೋ, ನಾಳೆ ನಿನಗೆ ಉಳಿಗಾಲವಿಲ್ಲ ತಿಳಿ;

ಭಗ್ನವಾದ ಕನಸುಗಳ ಹೆಕ್ಕಿ ತೆಗೆದು ಮತ್ತೆ ಕಟ್ಟುವೆ ಹೊಸತೊಂದು;

ಒಮ್ಮೆ ನಕ್ಕು ಹೋಗಿಬಿಡು ಮತ್ತೆ ಬಾರದೆ;

ಅವಳೇ ಶಕ್ತಿ, ಅವಳೇ ಪ್ರಪಂಚ

 ಧೈರ್ಯದ ನಡೆ,  ಪ್ರಶಾಂತ ಧ್ವನಿ. ಕನಸೇ ಕಂಗಳು, ಅಭಯವೇ ರಕ್ಷಣೆ. ಬಿರುಗಾಳಿಯೂ ಅವಳೇ, ಬೆಂಕಿಯ ಕೆನ್ನಾಲಿಗೆಯೂ ಅವಳೇ. ಶಾಂತ ಸಮುದ್ರವೂ ಅವಳೇ, ಕರುಣೆಯ ಕಡಲೂ ಅವಳೇ. ನಮ್ಮ...