ಆದರ್ಶದ ಸಂಕೋಲೆ



ಅಳುತ್ತಲ್ಲೇ ನಿಂತಿದ್ದೆ,
ಅವನು ಹೋಗುವುದ ನೋಡುತ್ತಾ.
ಕಣ್ಣಲ್ಲಿ ನೀರು;
ಹೃದಯದಲ್ಲಿ ರಕ್ತ ಕಣ್ಣೀರು;
ಅಣ್ಣ-ಅತ್ತಿಗೆಯ ಹಿಂದೆ ಹೆಜ್ಜೆ ಹಾಕುತ್ತಾ
ಆದರ್ಶದ ಬೆನ್ನೇರಿ ನೆಡೆಯುತ್ತಿದ್ದ;
ಅರಮನೆಯ ಮಹಾಜನತೆ ಅವರ ಹಿಂದೆ,
ದುಃಖದ ಕಡಲು ಹರಿವಂತೆ;
ನನ್ನ ಮನದಲ್ಲೂ ಅವನಿಗಾಗಿ ಹರಿಯುತ್ತಿತ್ತು
ಕಣ್ಣೀರು ಕಡಲಾಗಿ ಯಾರಿಗೂ ಕಾಣದೇ;
ಬೇಡ,ಬೇಡ ಒಂಟಿಯಾಗಿ ಹೋಗಬೇಡ,
ನನ್ನ ಕೂಗು, ಆರ್ತನಾದ ಅವನಿಗೆ ಕೇಳಿಸಲೇಯಿಲ್ಲ;
”ಅಣ್ಣ" ನೆಂಬ ಆದರ್ಶಕ್ಕೆ ಕೊರಳ ಅರ್ಪಿಸಿದ್ದ;
ನನ್ನ ಪ್ರೀತಿ,ಪ್ರೇಮ,ಕಾಮ,ಭೋಗಗಳು ಅವನಿಗೆ ಬೇಕಿರಲಿಲ್ಲ;
ಹೊರಡುವ ಮುನ್ನದಿನದ ರಾತ್ರಿ,
ಕಾಡಿ,ಬೇಡಿ ಹೃದಯದಲ್ಲಿ ತುಂಬಿಕೊಂಡರೂ
ಅದು ಅವನಿಗೆ ಬಲವಂತದ ಮಾಘಸ್ನಾನ;
ಏನೇ ಆದರೂ ಅವನು ತನ್ನ ನಿರ್ಧಾರದಿಂದ ಹಿಂಜರಿಯಲಿಲ್ಲ;
ಅವನ ಅಣ್ಣನ ಪ್ರೀತಿ ಗಟ್ಟಿಯಾಗಿತ್ತು;
ಆದರೆ ನನ್ನ-ಅವನ ಪ್ರೀತಿ ಬಿರುಕುಬಿಟ್ಟಿತ್ತು;
ಅವನೋ ನಾರುಮಡಿಯನುಟ್ಟು ಅಣ್ಣನ ಹಿಂದೆ ಹೋದ;
ನಾನೂ ಅಷ್ಟೆ ನಾರುಮಡಿಯನುಟ್ಟು ಇಲ್ಲೇ ಉಳಿದೆ,
ಅತ್ತೆಯ ಸೇವೆಗೈಯುತ್ತಾ;
ಅರಮನೆಯೇ ಕಾಡಾಗಿತ್ತು ನನಗೆ ಅವನಿಲ್ಲದೇ;
ಮವದಲ್ಲಿ ಅವನ್ ಮೇಲೆ ದ್ವೇಷ ಬೀಡು ಬಿಡುತ್ತಿತ್ತು;
ನನಗೆ ಅವನಿಲ್ಲ;
ಅವನಿಗೆ ನಾನಿಲ್ಲ;
ಇದ್ದೂ ಇಲ್ಲದಂತಾಗುವ ಸರದಿ ನಮ್ಮಿಬ್ಬರದೂ;
ಆದರ್ಶಕ್ಕೆ ನಾವಿಬ್ಬರೂ ಬಲಿಪಶುಗಳಾದೆವು;
ಆದರ್ಶದ ಹೊನ್ನಶೂಲಕ್ಕೆ ನಮ್ಮ ದಾಂಪತ್ಯ ಚೂರು ಚೂರಾಗಿತ್ತು.

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...