ಹೇಳದೇ ಓಡಿಹೋದದ್ದೇಕೆ?



ಕಳ್ಳನಂತೆ ಓಡಿಹೋದ
ಬಿಟ್ಟು ಓಡಿಹೋದ ಕಟ್ಟಿಕೊಂಡ ನನ್ನನು
ಒಂದು ಮಾತು ಹೇಳಲಾಗದೆ ಹೋದದ್ದೇಕೆ?
ನಾನು ಅವನಿಗೆ ತಕ್ಕವಳಲ್ಲವೇ?
ಲೋಕದಲ್ಲಿ ನನ್ನಂತಹವರು ಅನುಭವಿಸೋ ಕಷ್ಟಗಳು...
ಗಂಡಬಿಟ್ಟವಳೆಂದು ಹೀಗೆಳೆಯುವ ಪರಿ
ಸಾಕು ಸಾಕು ಉತ್ತರ ಕೊಡದೇ ಹೋದೆ
ನಾನು ನಿನ್ನ ಕ್ಷಮಿಸಲ್ಲ.

ರಾಜಕುಮಾರ ಅವನು
ಅವನ ಮನದನ್ನೆ ನಾನು
ಅಗಾಧ ರಾಜ್ಯ,ಕೋಶ,ಅಷ್ಟೈಶ್ವರ್ಯಗಳು
ಬಂಧು-ಬಳಗ,ಎರಡು ಮುದ್ದಾದ ಮಕ್ಕಳು
ಕೊರತೆ ಎಂಬುದು ಇರಲಿಲ್ಲ ಅವನಿಗೆ
ಸಾವು ಕಂಡ
ನೋವು ಕಂಡ
ಎದುರಿಸದೇ ನಲುಗಿದ
ಆ ರಾತ್ರಿ ಪಕ್ಕದಲ್ಲೇ ಮಲಗಿದ್ದೆ ನಾನು
ನೂರು ಕನಸುಗಳ ಕಂದಿದ್ದೆ ನವ ತರುಣಿಯಾಗಿ
ಕನಸು ನುಚ್ಚುನೂರಾಗುವುದೆಂದು ಎಣಿಸಿರಲಿಲ್ಲ
ಮೊದಲೇ ಗೊತ್ತಿದ್ದರೆ ನನ್ನ ಸೆರಗಿಗೆ ನಿನ್ನ ಕಟ್ಟಿಕೊಂಡುಬಿಡುತ್ತಿದ್ದೆ
ಹೇಳದೇ ಓಡಿಹೋದದ್ದೇಕೆ?
ಹೇಳು ಇನ್ನಾದರೂ....

ಶ್ರೀಮಂತಿಕೆ,ಸಕಲ ವೈಭೋಗಗಳೆಲ್ಲವೂ ಈ ಅರಮನೆಯಲ್ಲಿದೆ
ನನ್ನ ಜೊತೆ ಇರಬೇಕಾದ ನೀನೇ ಇಲ್ಲವಲ್ಲ!
ಸಕಲೈಶ್ವರ್ಯಗಳು ಕಸದಂತೆ ತೊರುತ್ತಿದೆ ನನಗೆ ನೀನಿಲ್ಲದೆ
ಯೌವ್ವನವಿದೆ ಈ ದೇಹಕ್ಕೆ
ಬಯಕೆಗಳಿವೆ ಯೌವ್ವನಕ್ಕೆ
ತೀರಿಸೋ ಅರಸನೇ ನೀನೇ ಇಲ್ಲ
ಯುದ್ಧದಲ್ಲಿ ಓಡಿಹೋಗೋ ರಣಹೇಡಿಯಂತೆ
ಸಂಸಾರದ ಸುಖ-ದುಃಖಗಳಿಗೆ ಎದೆಗೊಡದೆ ಓಡಿಹೋದೆಯಲ್ಲ
ನಾನು ನಿನ್ನ ಜೊತೆಯಿದ್ದೆ ಎಂಬುದನ್ನು ಏಕೆ ಮರೆತೆ?

ಅರಮನೆಯ ವೈಭೋಗಗಳಲ್ಲಿ ನನ್ನ ಬಿಟ್ಟುಹೋದೆ ಎಂಬ ಸಮಾಧಾನವೇ ನಿನಗೆ
ಅರಮನೆಯ ವೈಭೋಗಗಳಲ್ಲಿಯೊ ಏಕಾಂಗಿಯಾಗಿ ನಲುಗಿರುವೆ
ನಿನ್ನ ದೌರ್ಜನ್ಯಕ್ಕೆ ಸಾಕ್ಷಿಯಾಗಿ ನಿಂತಿರುವೆ
ಶತ-ಶತಮಾನಗಳೂ ಕಳೆದರೂ ದೌರ್ಜನ್ಯ,ಶೋಷಣೆ ತಪ್ಪಿಲ್ಲ
ಹೆಂಡತಿಯನ್ನು ಕಾಡಿಗೆ ಕಳುಹಿಸಿದರೂ....
ಹೆಂಡತಿಯನ್ನು ಅರಮನೆಯಲ್ಲಿ ಬಿಟ್ಟು ಓಡಿಹೋದರೂ.....
ಶೋಷಣೆ ಶೋಷಣೆಯೇ..........................................

No comments:

Post a Comment

ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...