ಹೊಸ ವರುಷದ ಆಶಾಕಿರಣ


ಹೊಸ ವರ್ಷ ಇಣುಕಿದೆ, ಆಶಾಕಿರಣ ಹೊಮ್ಮಿಸಿದೆ;
ಎಲ್ಲರ ಮನದಲ್ಲೂ ನೂರೆಂಟು ಅಲೋಚನೆಗಳ ಗರಿಗೆದರಿದೆ;
ಹೊಸವರ್ಷದ ಗೊತ್ತುವಳಿ ಸಿದ್ಧಪಡಿಸುವವರು ಹಲವರು;
ಹಾಡು,ಕುಣಿತ,ಕುಡಿತಕ್ಕೆ ತಯಾರಾಗುವವರು ಹಲವರು;
ಲಾಭ-ನಷ್ಟ,ಗಳಿಕೆ,ಹೂಡಿಕೆಗಳ ಬಗ್ಗೆ ಯೋಚಿಸುವವರು ಹಲವರು;
ಏರುತ್ತಿರುವ ಬೆಲೆಗಳ,ಹೆಚ್ಚುತ್ತಿರುವ ಸಾಮಾಜಿಕ ಅಶಾಂತಿ
ತಲೆಕೆಡಿಸಿಕೊಳ್ಳುವವರು ಹಲವರು;
TRP ಬಗ್ಗೆ ಯೋಚಿಸುವ ದೃಶ್ಯ ಮಾಧ್ಯಮ;
circulation ಬಗ್ಗೆ ಕಂಗಾಲಾಗುವ ಪತ್ರಿಕಾ ಮಾಧ್ಯಮ;
ಚುನಾವಣೆಯ ಮೇಲೆ ಕಣ್ಣಿಟ್ಟಿರುವ ರಾಜಕಾರಣಿಗಳು;
ಪ್ರಶಸ್ತಿಗಳ ಮೇಲೆ ವ್ಯಾಮೋಹಗೊಂಡಿರುವ ಸಾಹಿತಿಗಳು;
ಸದಾ ಸಮಾಜದ ಸಾಮರಸ್ಯ,ಸ್ವಾಸ್ಥ್ಯ ಕೆಡಿಸಲು ಹೊಂಚುಹಾಕುತ್ತಿರುವ ಬುದ್ಧಿಜೀವಿಗಳು;
ಹೊಟ್ಟೆಗೆ,ಬಟ್ಟೆಗೆ,ಸೂರಿಗೆ, ಒದ್ದಾಡುವ ಸಾಮಾನ್ಯಜನರಿಗೆ..
ಹೊಸ ವರುಷ ಆಶಾಕಿರಣವಾಗಲಿ;
ಹೊಸ ವರುಷ ಹರುಷ ತರಲಿ.....

ಹದಗೆಟ್ಟ ದಿನ


ನನ್ನ ಭಾವನೆಗಳ ಮೇಲೆ ನನಗೆ ಹಿಡಿತವಿಲ್ಲವಾದರೆ
ಎಂದೆಂದಿಗೂ ನಾನು ಸಂತೋಷಿಯಾಗಲಾರೆ;
ನನ್ನ ಕಾರಿಗೆ ಏಟು ಬಿದ್ದು ಗೆರೆಗಳು ಮೂಡಿದರೆ
ನನ್ನ ಇಡೀ ದಿನ ಹಾಳಾಗುತ್ತದೆ
ಹಾಗೂ ಕೋಪದ ಮಾತುಗಳು ಮನೆಯೆಲ್ಲಾ ತುಂಬಿರುತ್ತದೆ;
ಕೆಲಸದಲ್ಲಿ ಗೋಜಲು;
ಉಳಿಸಿಕೊಳ್ಳಲಾರದ ನಂಬಿಕೆಗಳು;
ಉಳಿಸಿಕೊಳ್ಳಲಾರದ ಸಂಬಂಧಗಳು;
ಅಂದುಕೊಂಡಿದ್ದಕ್ಕಿಂತ ಕಡಿಮೆಯಾದ ಫಲಿತಾಂಶ;
ಸುಕ್ಕುಗಟ್ಟಿದ ಕೊರಳಪಟ್ಟಿ,ಬಟ್ಟೆಗಳು;
ನನ್ನ ಭಾವನೆಗಳಿಗೆ ನಾನೇ ಬಲಿಪಶುವಾದರೆ
ಎಂದೆಂದಿಗೂ ನಾನು ಸಂತೋಷಿಯಾಗಲಾರೆ;
ಆಗುವೆ ನನ್ನದೇ ಬಯಕೆಗಳ ಗುಲಾಮ;
ಅತಿಯಾಗಿ ಹೆಚ್ಚಿದ ನಿರೀಕ್ಷೆಗಳ ಖೈದಿ;

ಪ್ರೇರಣೆ: 'A Spoilt Day'-Achieve Success and happiness by A.P.Pereira

ಸಂತೋಷಿಗಳು


ಮನುಷ್ಯರ ಸಂತೋಷಕ್ಕೆ ಮೂಲ ಕಾರಣ ಹುಡುಕುತ್ತಿದ್ದೆ
ಆ ಸಂತೋಷಕ್ಕೆ ಮೂಲ ಕಾರಣ
ಹಣ,ಸಂಪತ್ತು,ಐಶ್ವರ್ಯ,ಸೋಮಾರಿತನ,ಲಾಭಗಳಿಕೆ,
ಸಂತೋಷಕೂಟಗಳು ಅಥವಾ ರೋಮಾಂಚನ
ಇವಾವುವೂ ಆಗಿರಲಿಲ್ಲ;

ಸಂತೋಷದಿಂದ ಇರುವ ಜನರಲ್ಲಿ ನಾನು ಕಂಡೆ
ಸುರಕ್ಷತೆ,ಆತ್ಮೀಯತೆ,ಸರಳತೆ,ನೆಮ್ಮದಿ,ಶಾಂತಿ,
ಸಣ್ಣ ಸಣ್ಣ ವಿಷಯ ಅಥವಾ ವಸ್ತುಗಳಲ್ಲಿ ಸಂತೋಷ;

ಸಂತೋಷದಿಂದ ಇರುವ ಜನರ ಕಂಡು
ನಾನು ಅಶ್ಚರ್ಯಚಕಿತನಾಗಿದ್ದೇನೆ
ಮೂರ್ಖ ಆಸೆಗಳು ಅವರಲ್ಲಿ ಇಲ್ಲದಿರುವುದ ಅರಿತು;

ಸಂತೋಷದಿಂದ ಇರುವ ಜನರಲ್ಲಿ
ನಾನು ಎಂದೂ ಕಾಣಲಿಲ್ಲ
ಅಶಾಂತಿ,ಅವಿಶ್ರಾಂತ ಮನಸ್ಸು, ಹುಚ್ಚು ಹುಡುಕಾಟ,ಸ್ವಾರ್ಥ,
ಎಲ್ಲಕ್ಕಿಂತ ಮಿಗಿಲಾಗಿ ಅವರಲ್ಲಿ ಒಳ್ಳೆಯ ಹಾಸ್ಯಪ್ರಜ್ಜೆ ಇದೆ.

ಪ್ರೇರಣೆ: 'The Happy People'-Achieve Success and happiness by A.P.Pereira



ಹೊಸವರ್ಷದ ಹೊಸ್ತಿಲಲ್ಲಿ...


ವರ್ಷದ ಕೊನೆಯ ಪುಟವನ್ನು ತೆರೆದಿದ್ದೇನೆ
ಕಣ್ಣ ಮುಂದಿದೆ ಹೊಸವರ್ಷದ ಬೆಳಕು
ಯೋಚಿಸುತ್ತಾ ಕುಳಿತೆ ಹಳೆಯ ನೆನಪುಗಳ ಪುಟ ತೆರೆದು
ಒಂದೊಂದೇ ಪುಟ ತೆರೆದು ಇಣುಕಿದೆ
ಸಂತೋಷದ ಗಳಿಗೆಗಳಿಗೆ ಗಾಳ ಹಾಕುತ್ತಾ....
ಒಂದೇ ಒಂದು ಪುಟವೂ ದೊರೆಯಲಿಲ್ಲ,
ಪುಟವಿರಲಿ ಜೀವನ ಕಾವ್ಯದ ಒಂದು ಸಾಲಿನಲ್ಲೂ
ಸಿಗದು ಸುಖ-ನೆಮ್ಮದಿಯ ಪದಗಳು
ಎಲ್ಲವೂ ನೋವಿನ ಗೆರೆಗಳೇ!
ಶೋಕಗೀತೆಯ ಸಾಲುಗಳೇ!
ಸ್ವಾರ್ಥ,ದುರಾಸೆ,ತಾತ್ಸಾರ,ಮತ್ಸರ
ಮಾಸಗಳ,ಋತುಗಳ ದಾಟಿ ಬಂದಿದ್ದೇನೆ
ಹೊಸ ಉತ್ಸಾಹದಿ,ಹೊಸ ಆಕಾಂಕ್ಷೆಯಿಂದ
ಎಲ್ಲವನ್ನೂ ಮೂಲೆಗೆ ತಳ್ಳಿದ್ದೇನೆ
ಸೋಲುಗಳಿಂದ ಪಾಠ ಕಲಿತಿದ್ದೇನೆ
ಹೊಸ ಭರವಸೆಯಿಂದ ಸ್ವಾಗತಿಸಲು ನಿಂತಿದ್ದೇನೆ
ವರ್ಷದ ಕೊನೆಯ ಪುಟದಲ್ಲಿ
ಹೊಸವರ್ಷದ ಹೊಸ್ತಿಲಲ್ಲಿ..... 

ಹಸ್ತ ಚಾಚು ಸೋದರತೆಯ


ಈ ದಿನಗಳಲ್ಲಿ ಮನುಷ್ಯರು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುತ್ತಾರೆ,
ಗ್ರಾಫ್,ನಕ್ಷೆ,ಯೋಜನೆ,ಬಣ್ಣದ ಮಾತುಗಳೊಡನೆ
ಈ ಪ್ರಪಂಚವನ್ನು ಚೆನ್ನಾಗಿ ಮಾಡಲು
ಇವೆಲ್ಲವೂ ಅಪ್ರಯೋಜಕ ಕನಸುಗಳೇ?

ಈ ಪ್ರಪಂಚವನ್ನು ಚೆನ್ನಾಗಿ ಮಾಡಬೇಕಾದರೆ
ಹೀಗೆ ಮಾಡಬೇಕು.... ಹೇಗೆಂದರೆ
ನಿನ್ನ ಪಕ್ಕದಲ್ಲಿರುವವನೆಡೆಗೆ
ಹೆಜ್ಜೆ ಇಡು, ಹಸ್ತ ಚಾಚು ಸೋದರತೆಯ.



ಪ್ರೇರಣೆ:-Achieve success and happiness by A.P Pereira.

ಒಮ್ಮೆಯಾದರೂ ನಗು


ಒಮ್ಮೆಯಾದರೂ ನಗು,
ಹೃದಯ ಹಗುರವಾಗುವುದು ನಕ್ಕಾಗ;
ಒಮ್ಮೆಯಾದರೂ ನಗು,
ನಡೆವ ದಾರಿ ಬೆಳಕಿನೆಡೆಗೆ ಹೊರಳುವುದು;
ಜೀವನ ಕನ್ನಡಿಯ ಹಾಗೆ, ನಾವು ನಕ್ಕರೆ
ನಗುವು ಹೊರಹಿಮ್ಮುವುದು ನಮ್ಮನ್ನು ಹಾರೈಸಲು;
ನಾವು ಯಾವಾಗಲೂ ಶೋಕಿಸುತ್ತಿದ್ದರೆ
ಶೋಕವೇ ನಮ್ಮನ್ನು ಆವರಿಸುತ್ತದೆ.

ಪ್ರೇರಣೆ: 'Smile a while'-Achieve success and happiness by A.P Pereira.

ಜಾಗೃತನಾಗಿರು......


ನಿನ್ನ ಯೋಚನೆಗಳ ಬಗ್ಗೆ ಜಾಗೃತನಾಗಿರು,
ಯೋಚನೆಗಳೇ ನಿನ್ನ ಪದಗಳಾಗುತ್ತವೆ;

ನಿನ್ನ ಪದಗಳ ಬಗ್ಗೆ ಜಾಗೃತನಾಗಿರು,
ಪದಗಳೆ ನಿನ್ನ ನಡೆಯಾಗುತ್ತದೆ;

ನಿನ್ನ ನಡೆಯ ಬಗ್ಗೆ ಜಾಗೃತನಾಗಿರು,
ನಡೆಯೇ ನಿನ್ನ ಹವ್ಯಾಸವಾಗುತ್ತದೆ;

ನಿನ್ನ ಹವ್ಯಾಸಗಳ ಬಗ್ಗೆ ಜಾಗೃತನಾಗಿರು,
ಹವ್ಯಾಸಗಳೇ ನಿನ್ನ ಗುಣವಾಗುತ್ತದೆ;

ನಿನ್ನ ಗುಣಗಳ ಬಗ್ಗೆ ಜಾಗೃತನಾಗಿರು,
ಗುಣಗಳೇ ನಿನ್ನ ಗುರಿಯಾಗುತ್ತದೆ.


ಪ್ರೇರಣೆ: 'Be careful'-Achieve success and happiness by A.P Pereira.

ಮಳೆಯಲ್ಲಿ ಕೇಕೆ


ಹೇಗೆ ಕೆಲವು ಜನರಿರುತ್ತಾರೆಂದರೆ
ಸೂರ್ಯನನ್ನು ನೋಡುತ್ತಾ ಕುಳಿತ ಸೊರಗಿದ ಸೇಬುಗಳಂತೆ ಕಾಣುವರು
ಮತ್ತೆ ಕೆಲವರು ಮಳೆಯಲ್ಲಿ ಶಿಲ್ಲೆ ಹಾಕುತ್ತಾ ಕೇಕೆ ಹಾಕಿ ಕುಣಿವರು

ಹೇಗೆ ಕೆಲವು ಜನರಿರುತ್ತಾರೆಂದರೆ
ಕಣ್ಣು-ಬಾಯಿ ತೆರೆದೊಡನೆಯೇ ಅವರಿಗೆ ಕಾಣುವುದು ಬೇರೆಯವರ ತಪ್ಪುಗಳೇ?
ಏಕೆಂದರೆ ಅವರಿಗೆ ಈ ಜೀವನದ ಅರ್ಥ ತಿಳಿದಿಲ್ಲ, ಈ ವಸ್ತುಗಳ ಅರ್ಥ ಗೊತ್ತಿಲ್ಲ!

ಅವರಿಗೆ ದೇವರ ಸಹಾಯ ಬೇಕು
ಒಳಗಿನ ಶಕ್ತಿಯಾಗಿ ಅಲ್ಲ, ಅಥವಾ ದೂರದಲ್ಲೆಲ್ಲೋ ಇರುವವನಂತೆ ಅಲ್ಲ
ಬೇಕಾಗಿದೆ ಆತ್ಮೀಯ ಗೆಳೆಯನಾಗಿ, ಕೈ ಹಿಡಿದು ನಡೆಸುವ ತಂದೆಯಾಗಿ.

ದೇವರೊಂದಿಗಿನ ಆತ್ಮೀಯತೆ, ಪ್ರೀತಿ
ಜನರು ಹೊರ ಜಗತ್ತನ್ನು ಒಳಗಣ್ಣಿನಿಂದ ನೋಡುತ್ತಾರೆ
ಮತ್ತು ತಮ್ಮ ಎಂದಿನ ಬೆಳಗನ್ನು ಹೊಸ ಹೃದಯದಿಂದ ಆರಂಭಿಸುತ್ತಾರೆ.

ಪ್ರೇರಣೆ: 'Whistling in the rain' - Achieve success and happiness by A.P Pereira.

ಅವನ ಉಡುಗೊರೆ- ಇಂದು


ನಾನು ’ನಿನ್ನೆ’ಯೇ ಮನೆಯ ಬಾಗಿಲನ್ನು ಮುಚ್ಚಿದ್ದೇನೆ
ಹಾಗು ಅದರ ಕೀಗಳನ್ನು ದೂರಕ್ಕೆ ಎಸೆದಿದ್ದೇನೆ;
’ನಾಳೆ’ಎನ್ನುವುದು ಎಂದೂ ನನ್ನಲ್ಲಿ ಭಯ ತರಲಾರದು
ಏಕೆಂದರೆ ನನಗೆ ’ಇಂದು’ಎಂಬ ಉಡುಗೊರೆ ದೊರೆತಿದೆ.

ಪ್ರೇರಣೆ: Vivian Laramore.

ನಾವು ಸರಿಯಾಗೋಣ


ಸ್ವಲ್ಪವೇ ಸಮಯ, ಸಾಧಿಸಬೇಕಾದದ್ದು ಬಹಳಷ್ಟು,
ಸರಿಮಾಡಬೇಕಿದೆ ಈ ಪ್ರಪಂಚವನ್ನು
ಮೊದಲು ನಾವು ಸರಿಯಾಗೋಣ
ಆಗ ಯಶಸ್ಸು ನಮ್ಮನು ಹುಡುಕಿಕೊಂಡು ಬರುವುದು
ಹೆದರಬೇಡ ಕೆಲಸ ಮಾಡಲು ಅಥವಾ ಕಷ್ಟಗಳ ಎದುರಿಸಲು
ಹುಡುಕಬೇಡ ಪ್ರೀತಿ-ವಿಶ್ವಾಸ, ನಗುವನ್ನು
ನಾವು ಸರಿಯಿದ್ದರೆ ನಮಗೆ ಬೇಕಾದುದು ಎಲ್ಲಾ ಕಡೆಯೂ ಸಿಗುವುದು.....

ಪ್ರೇರಣೆ: Achieve success & Happiness By A.P.Pereira.

ಯಶಸ್ಸಿನ ಗುಟ್ಟೇನು?




’ಒತ್ತು" ಹೇಳಿತು ಗುಂಡಿ (ಬಟನ್).
’ಸೀಸ ಆಗಲೇ ಬೇಡ’ ಹೇಳಿತು ಪೆನ್ಸಿಲ್.
’ನೋವುಗಳನ್ನು ತಡೆದು ಕೋ" ಹೇಳಿತು ಕಿಟಕಿ.
’ಯಾವಾಗಲೂ ತಣ್ಣಗಿರು’ ಹೇಳಿತು ಮಂಜುಗಡ್ಡೆ.
’ಸಿದ್ಧವಾಗಿರು’ ಹೇಳಿತು ಕ್ಯಾಲೆಂಡರ್.
’ಎಂದಿಗೂ ನಿನ್ನ ತಲೆ ಕಳೆದುಕೊಳ್ಳಬೇಡ’ ಹೇಳಿತು ಪಿಪಾಯಿ.
’ಎಲ್ಲವನ್ನೂ ಬೆಳಗು’ ಹೇಳಿತು ಬೆಂಕಿ.
’ನಡೆಯುವ ವ್ಯಾಪಾರ ಮಾಡು’ ಹೇಳಿತು ಸುತ್ತಿಗೆ.
’ಮೊನಚಾಗಿರು ನಿನ್ನ ವ್ಯವಹಾರದಲ್ಲಿ’ ಹೇಳಿತು ಚಾಕು.
’ಒಳ್ಳೆಯದನ್ನು ಕಂಡುಹಿಡಿ ಮತ್ತು ಅದಕ್ಕೆ ಅಂಟಿ ಕೋ ’ ಹೇಳಿತು  ಅಂಟು.


ಪ್ರೇರಣೆ: 'Achieve Success & Happiness' By A.P Pereira.

ತಾಯಿಯ ಆತಂಕ


ಬಿಟ್ಟಿರಲಾರದೆ ಕಳುಹುತ್ತಿದ್ದೇನೆ
ಮನದ ಭಾರದ ಹೃದಯದಿಂದ
ಅಲ್ಲಿ ನಿನ್ನ ಹೇಗೆ ನೋಡಿಕೊಳ್ಳುವರೋ ಆತಂಕ!
ಮನದ ತುಂಬಾ ಭಯ ಕಾಡಿದೆ...

ಎಂದೂ ಒಂದು ಕ್ಷಣವೂ ಬಿಟ್ಟಿರದ ನೀನು
ಅದು ಹೇಗೆ ನನ್ನ ಬಿಟ್ಟಿರುವೆ?
ಒಂದು ಕ್ಷಣ ಯೋಚಿಸಿದರೇ
ಎದೆ ಝಲ್ಲೆನ್ನೆವುದು ನೋವ ಸಹಿಸದೇ...

ಆತಂಕ ಒಂದು ಕಡೆ,ಸಂತೋಷ ಇನ್ನೊಂದು ಕಡೆ
ನನ್ನ ಕಂದ ಹೊರ ಪ್ರಪಂಚಕ್ಕೆ,ಹೊಸತನಕ್ಕೆ
ಅಡಿ ಇಡುತ್ತಿದ್ದಾನ್ನೆನ್ನುವ ಸಂತೋಷ ಒಂದು ಕಡೆ,
ಈ ದುರುಳ ಪ್ರಪಂಚವನ್ನು ಹೇಗೆ ಎದುರಿಸುವನೋ ಎಂಬ ಆತಂಕ ಮತ್ತೊಂದೆಡೆ!

ಮೊದಲ ಹೆಜ್ಜೆ ಮನೆಯಿಂದ ಹೊರಗೆ ಇಡು ಕಂದ ಬಲವಾಗಿ
ಆತ್ಮಸೈರ್ಯದಿಂದ, ನಂಬಿಕೆಯಿಂದ,ಅರಿವಿನ ಹೊಸ ಲೋಕಕ್ಕೆ
ನನ್ನ ಪ್ರೀತಿಯ ಧಾರೆಯನ್ನೆಲ್ಲಾ ಹರಿಸಿದ್ದೇನೆ,ಶ್ರಮಿಸಿದ್ದೇನೆ,
ಈ ಪ್ರಪಂಚವನ್ನು ನೀನು ಎದುರಿಸಿ ಜಯಶಾಲಿಯಾಗುವ ಭರವಸೆಯಿಂದ.

ತಾತ್ಸಾರ


ಏಕೆ ಹೀಗೆ ಅರ್ಥವಾಗುವುದಿಲ್ಲ
ನಿನ್ನ ಆಟದ ಪರಿಯೆಲ್ಲಾ
ಇಲ್ಲವೆನ್ನಲಾಗದೆ ಎಲ್ಲವನ್ನೂ ಅನುಭವಿಸಲೇ
ಇಲ್ಲಿ ಬಂದಿಹೆವು ಕಾರಣ ಇಲ್ಲದಿಲ್ಲ
ಎಲ್ಲರಿಂದಲೂ ತಾತ್ಸಾರ ಕಾರಣ ತಿಳಿದಿಲ್ಲ
ಎಲ್ಲವೂ ಕಂಡಮೇಲೆ ವ್ಯಾಮೋಹವಿಲ್ಲ
ಜೀವನವೇ ಹೀಗೆ ನಿನ್ನ ಆಟದ ಲೀಲೆ
ನೋವು ಆಗಲಿ
ಮನಸು ಗಟ್ಟಿಗೊಳ್ಳಲಿ
ಅನುಭವ ಪಾಠ ಕಲಿಸಲಿ.....

ಜೀವನ ಆಟ


ಬಾ ನಾವು ಆಟ ಆಡೋಣ
ಸಮುದ್ರದ ಮರಳಲ್ಲಿ ಚಿಕ್ಕಮಕ್ಕಳಂತೆ
ಆಡೋಣ ಬಾ,ಮೈ ಮರೆತು ಆಡೋಣ ಬಾ||

ಮರಳಲ್ಲಿ ನಮ್ಮದೇ ಚಿಕ್ಕ ಮನೆ ಕಟ್ಟೋಣ
ಸಮುದ್ರದ ಅಲೆಗಳು ಅದನ್ನು ಕೆಡವುವಂತೆ ಕಟ್ಟೋಣ
ಕಟ್ಟುತ್ತಾ,ಕೆಡವುತ್ತಾ, ನೋವು ನಲಿವುಗಳ ಪಡೆಯೋಣ||

ದಾರಿ ಹೋಕರು,ನಮ್ಮಂತೆ ಬಂದವರು
ಏಕಾಂಗಿಗಳು,ಜೋಡಿಹಕ್ಕಿಗಳು,ಪ್ರಾಯದವರು
ವಿರಹಿಗಳು,ಜೀವನ ಸಂಧ್ಯೆಯಲ್ಲಿರುವರು ಎಲ್ಲರೂ ಇಲ್ಲಿ ಅತಿಥಿಗಳೇ!||

ಜೀವನವೆಂಬ ಆಟದಲ್ಲಿ ಸೋತು-ಗೆದ್ದೆವು
ಮುಗ್ಧ ಮನಸ್ಸಿನಿಂದ ಎಲ್ಲವನ್ನೂ ಅನುಭವಿಸಿದೆವು ಚಿಕ್ಕ ಮಕ್ಕಳಂತೆ
ಶೋಧಿಸಿ,ಭೋದಿಸಿ,ಭೇದಿಸಿ ಎಲ್ಲವನ್ನೂ ಅರಿತೆವು, ಮನನದಾದದ್ದು ಸಾಸಿವೆಯಷ್ಟೇ!||

ಬಾ ಮರಳ ಮನೆಯ ಕಟ್ಟೋಣ
ಅಲೆಗೆ ಸಿಕ್ಕಿ ನೆಲಸಮವಾಗುವುದ ಕಂಡು ನಗೋಣ
ಮತ್ತೆ ಕಟ್ಟೋಣ, ಮತ್ತೆ ನಗೋಣ
ಸಾಗುತಿರಲಿ ಕೆಡವುತ ಕಟ್ಟುವುದು 
ಕೊನೆಗೆ ಸತ್ಯವೇ ಉಳಿಯಲಿ 
ಅಸತ್ಯವು ಅಳಿಯಲಿ ।।


ನನ್ನ ಭರವಸೆ

  ಪ್ರತಿದಿನ ಒಂದೊಂದು ಹೆಜ್ಜೆ ಅಭಿವೃದ್ಧಿಯ ಕಡೆಗೆ, ಹಿಂದಿಡಲಾರೆ ಮುಂದಿಟ್ಟ ಹೆಜ್ಜೆ ನನ್ನ ಕೆಲಸ ನನಗೆ, ಹೆಮ್ಮೆಯಿದೆ ಎನಗೆ , ನನ್ನ ಕೆಲಸದಲೆಂದ...